ಸಚಿವ ಸಂಪುಟ ಸೇರಲು ಜೆಡಿಎಸ್ನಲ್ಲಿ ಲಾಬಿ ಶುರು
Team Udayavani, Dec 14, 2018, 6:00 AM IST
ಸುವರ್ಣಸೌಧ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಡಿ.22ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಒಪ್ಪಿಗೆ ನೀಡಿದರೆ ಜೆಡಿಎಸ್ನಿಂದ ಸಂಪುಟ ಸೇರಲು ಆಕಾಂಕ್ಷಿಗಳು ಲಾಬಿ ಪ್ರಾರಂಭಿಸಿದ್ದಾರೆ. ಜೆಡಿಎಸ್ ಕೋಟಾದಡಿ ಎರಡು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬಹುದಾಗಿದ್ದು, ಬಿ.ಎಂ.ಫಾರೂಕ್ ಹಾಗೂ ಎಚ್.ಕೆ.ಕುಮಾರಸ್ವಾಮಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಇವರ ಜತೆಗೆ ಎಚ್.ವಿಶ್ವನಾಥ್, ಬಸವರಾಜ ಹೊರಟ್ಟಿ, ಶ್ರೀನಿವಾಸಗೌಡ, ಸಿರಾ ಸತ್ಯನಾರಾಯಣ, ಅನ್ನದಾನಿ ಸಹ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗಿದೆ.
ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರೆಸ್ನ ತೀರ್ಮಾನ ನೋಡಿಕೊಂಡು ದೇವೇಗೌಡರ ಜತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಮಧ್ಯೆ, ವಿಧಾನಪರಿಷತ್ನಲ್ಲಿ ಕಾಂಗ್ರೆಸ್ಗೆ ಸಭಾಪತಿ ಸ್ಥಾನ ಬಿಟ್ಟುಕೊಟ್ಟಿರು ವುದರಿಂದ ಉಪ ಸಭಾಪತಿ ಸ್ಥಾನಕ್ಕೆ ಶ್ರೀಕಂಠೇಗೌಡ, ಸರ್ಕಾರದ ಮುಖ್ಯ ಸಚೇತಕ ಹುದ್ದೆಗೆ ಟಿ.ಎ.ಶರವಣ, ಭೋಜೇಗೌಡ, ತೂಪಲ್ಲಿ ನಾರಾಯಣಸ್ವಾಮಿ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗಿರುವುದು ಪೊಲಿಟಿಕಲ್ ಸ್ಟಂಟ್. ಮುಂದಿನ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಲ ಮನ್ನಾ ಮಾಡಲು ಹೊರಟಿದ್ದಾರೆ. ಸಾಲ ಮನ್ನಾಗೆ ಸಾಕಷ್ಟು ಒತ್ತಡ ಇತ್ತು. ಕೇಂದ್ರ ಸರ್ಕಾರ ಮೊದಲೇ ಸಾಲ ಮನ್ನಾ ಮಾಡಿದ್ದರೆ ಸಾವಿರಾರು ರೈತರ ಆತ್ಮಹತ್ಯೆ ತಪ್ಪಿಸಬಹುದಿತ್ತು.
● ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ