ಆತ್ಮಹತ್ಯೆ ಯತ್ನ: ಗೂಳಿಹಟ್ಟಿ ಆಸ್ಪತ್ರೆಗೆ ದಾಖಲು
Team Udayavani, Jan 8, 2019, 12:30 AM IST
ಶಿವಮೊಗ್ಗ: ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ನಗರದ ಹೊರವಲಯದಲ್ಲಿರುವ ಶಂಕರ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ರಾತ್ರಿ ಹೊಸದುರ್ಗದ ಪೊಲೀಸ್ ಠಾಣೆ ಎದುರು ಮೈಮೇಲೆ ಪೆಟ್ರೋಲ್ ಸುರಿದುಕೊಂಡ ಪರಿಣಾಮ ಇವರ ಕಿವಿ, ಕಣ್ಣು, ಬಾಯಿಗೆ ಪೆಟ್ರೋಲ್ ಹೋಗಿತ್ತು. ತಕ್ಷಣ ಇವರನ್ನು ಹೊಸದುರ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಕಣ್ಣಿನ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಭಾನುವಾರ ರಾತ್ರಿಯೇ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದು ಗೂಳಿಹಟ್ಟಿಯವರ ಕಣ್ಣುಗಳಿಗೆ ಯಾವುದೇ ತೊಂದರೆಯಾಗಿಲ್ಲ ಎನ್ನಲಾಗಿದೆ.
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಗೂಳಿಹಟ್ಟಿ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು, ಶಾಸಕರ ಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಸ್ಥಿತಿ ಏನು? ಘಟನೆಗೆ ಸಂಬಂಧಿಸಿ ಹೊಸದುರ್ಗ ಪಿಎಸ್ಐಯನ್ನು ಕೂಡಲೇ ಅಮಾನತು ಮಾಡಬೇಕು.ಘಟನೆಯಲ್ಲಿ ಬಂಧಿಸಿರುವ ಅಮಾಯಕರನ್ನು ಪೊಲೀಸರು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಕಣ್ಣಿನ ಮೇಲ್ಭಾಗಕ್ಕೆ ಪೆಟ್ರೋಲ್ ಸೋಕಿದ್ದು ಅದನ್ನು ಕ್ಲೀನ್ ಮಾಡಲಾಗಿದೆ. ಕಾರ್ನಿಯಾಗೆ ಯಾವುದೇ ಸಮಸ್ಯೆ ಇಲ್ಲ. ಔಷಧ, ಮಾತ್ರೆ ಕೊಡಲಾಗಿದೆ. ಒಂದು ದಿನ ನಿಗಾವಹಿಸಲಾಗುವುದು. ಮಂಗಳವಾರ ಡಿಸಾcರ್ಚ್ ಮಾಡಲಾಗುವುದು.
– ಡಾ| ಮಹೇಶ್, ಸೀನಿಯರ್ ಮೆಡಿಕಲ್
ಆಫೀಸರ್, ಶಂಕರ ಕಣ್ಣಿನ ಆಸ್ಪತ್ರೆ
ಪೊಲೀಸ್ ಠಾಣೆ ಮುಂಭಾಗದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಕಾನೂನು ಪ್ರಕಾರ ತಪ್ಪು.ಈ ಕಾರಣದಿಂದ ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ ಸೆಕ್ಷನ್ 309 ಅಡಿ ಪ್ರಕರಣ ದಾಖಲು ಮಾಡಲಾಗಿದೆ.
– ಡಾ| ಕೆ. ಅರುಣ್,
ಚಿತ್ರದುರ್ಗ ಎಸ್ಪಿ