“ಕೆಆರ್ಡಿಎಲ್ಗೆ ಕಾಂಗ್ರೆಸ್ ಶಾಸಕರ ನೇಮಕ ಬೇಡ’
Team Udayavani, Jan 11, 2019, 12:45 AM IST
ಬೆಂಗಳೂರು:ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಕೆಆರ್ಡಿಎಲ್ಗೆ ದೊಡ್ಡಬಳ್ಳಾಪುರ ಕಾಂಗ್ರೆಸ್ ಶಾಸಕ ವೆಂಕಟರಮಣಯ್ಯ ಅವರ ನೇಮಕಕ್ಕೆ ಸಚಿವ ಎಚ್.ಡಿ.ರೇವಣ್ಣ ಒಪ್ಪದ ಕಾರಣ ತಲೆನೋವಾಗಿ ಪರಿಣಮಿಸಿದೆ.
ಜತೆಗೆ ಹಾಸನ ಜಿಲ್ಲೆಯ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿಯವರು ಸಂಸದೀಯ ಕಾರ್ಯದರ್ಶಿಯಾಗಿ ನೇಮಿಸುವುದು ರೇವಣ್ಣ ಅವರಿಗೆ ಇಷ್ಟವಿಲ್ಲ. ಹೀಗಾಗಿ, ಎರಡೂ ನೇಮಕಾತಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಹಿ ಹಾಕಿಲ್ಲ ಎನ್ನಲಾಗಿದೆ.
ಎಚ್.ಡಿ.ರೇವಣ್ಣ ಅವರು ಯಾವುದೇ ಕಾರಣಕ್ಕೂ ತಮ್ಮ ಇಲಾಖೆ ವ್ಯಾಪ್ತಿಯ ನಿಗಮ ಮಂಡಳಿಗೆ ಕಾಂಗ್ರೆಸ ಶಾಸಕರ ನೇಮಕ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೇ ಕಾರಣಕ್ಕೆ ಕೋಪಗೊಂಡಿರುವ ಅವರು, ಕಾಂಗ್ರೆಸ್ನವರು ತೀರಾ ಹಠಕ್ಕೆ ಬಿದ್ದರೆ ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ ಎಂದು ನಿಷ್ಠುರವಾಗಿಯೇ ಹೇಳಿದ್ದಾರೆ.
ಹಾಸನ ಜಿಲ್ಲೆಯ ಜೆಡಿಎಸ್ ಶಾಸಕರ ಮೇಲೆ ಹಿಡಿತ ಹೊಂದಿರುವ ರೇವಣ್ಣ ಅವರ ಪಟ್ಟು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ, ದೇವೇಗೌಡರೇ ಸಿದ್ದರಾಮಯ್ಯ ಜತೆ ಮಾತನಾಡಿದ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಪರಿಷತ್ಗೆ ತಿಪ್ಪೇಸ್ವಾಮಿ?
ಈ ಮಧ್ಯೆ, ರಾಜ್ಯ ವಿಧಾನಪರಿಷತ್ನಲ್ಲಿ ಖಾಲಿ ಇರುವ ಒಂದು ನಾಮನಿರ್ದೇಶನ ಸ್ಥಾನಕ್ಕೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ವಿಶೇಷ ಅಧಿಕಾರಿ ತಿಪ್ಪೇಸ್ವಾಮಿ ಹೆಸರು ಕೇಳಿಬರುತ್ತಿದೆ.
ಒಂದು ನಾಮನಿರ್ದೇಶನ ಸ್ಥಾನ ಜೆಡಿಎಸ್ಗೆ ಸಿಗಲಿದ್ದು ಆ ಸ್ಥಾನಕ್ಕೆ ತಿಪ್ಪೇಸ್ವಾಮಿ ಅವರನ್ನು ನೇಮಿಸಲು ರೇವಣ್ಣ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ. ತಿಪ್ಪೇಸ್ವಾಮಿಯವರು ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ವಿಶೇಷ ಅಧಿಕಾರಿಯಾಗಿದ್ದರು. ಆದರೆ, ಪರಿಷತ್ ನಾಮನಿರ್ದೇಶನ ಸ್ಥಾನಕ್ಕೆ ಪಕ್ಷದ ವಲಯದಲ್ಲಿ ಮಧು ಬಂಗಾರಪ್ಪ, ಕೋನರೆಡ್ಡಿ, ಸುರೇಶ್ಬಾಬು, ರಮೇಶ್ಬಾಬು ಅವರ ಹೆಸರು ಕೇಳಿಬಂದಿತ್ತು.