ರೈಲು ನಿಲ್ಲಿಸಿ ದುರಂತ ತಪ್ಪಿಸಿದ ಯುವಕರು
Team Udayavani, Jan 13, 2019, 12:50 AM IST
ಬೆಳಗಾವಿ: ಹಳಿ ಮೇಲೆ ಮರ ಬಿದ್ದಿದ್ದರಿಂದ ಸಾವಿರಾರು ಜನರ ಪ್ರಾಣಕ್ಕೆ ಅಪಾಯ ಅರಿತ ಇಬ್ಬರು ಯುವಕರು ಚಲಿಸುವ ರೈಲಿನ ವಿರುದ್ಧ ಓಡಿ ಬಂದು ರೈಲು ನಿಲ್ಲಿಸಿ ಸಂಭವಿಸಲಿದ್ದ ಭಾರೀ ದುರಂತ ತಪ್ಪಿಸಿದ ಘಟನೆ ಖಾನಾಪುರದ ಬಳಿ ತಡವಾಗಿ ಬೆಳಕಿಗೆ ಬಂದಿದೆ.
ಖಾನಾಪುರ ಪಟ್ಟಣದ ರಿಯಾಜ್ ಹಾಗೂ ತೌಫಿಕ್ ಅವರು ಬೆಳಗಾವಿಗೆ ಹೊರಟಿದ್ದಾಗ ರೈಲಿನ ಹಳಿ ಮೇಲೆ ಮರ ಬಿದ್ದಿದ್ದನ್ನು ನೋಡಿದರು. ಅದೇ ಸಮಯದಲ್ಲಿ ಕೊಲ್ಲಾಪುರದಿಂದ ಹೈದ್ರಾಬಾದ್ಗೆ ತೆರಳುತ್ತಿದ್ದ ರೈಲು ಇತ್ತ ಬರುತ್ತಿರುವುದನ್ನೂ ಗಮನಿಸಿದರು. ಆಗ ಸಮಯ ಪ್ರಜ್ಞೆ ಮೆರೆದು ದೌಡಾಯಿಸುತ್ತಿದ್ದ ರೈಲಿನ ಎದುರಿಗೆ ಓಡಿ ಹೋಗಿ, ಲೋಕೋ ಪೈಲಟ್ನ ಗಮನ ಸೆಳೆದು, ರೈಲು ನಿಲ್ಲಿಸುವಂತೆ ಸನ್ನೆ ಮಾಡಿ ಭಾರೀ ದುರಂತ ತಪ್ಪಿಸಿದ್ದಾರೆ.
ಯುವಕರನ್ನು ದೂರದಿಂದಲೇ ನೋಡಿದ ಲೋಕೋ ಪೈಲಟ್, ರೈಲಿನ ವೇಗ ತಗ್ಗಿಸಿ ಮರ ಬಿದ್ದ ಸ್ಥಳಕ್ಕೆ ಬರುವಷ್ಟರಲ್ಲಿಯೇ ಬ್ರೇಕ್ ಹಾಕಿ ರೈಲು ನಿಲ್ಲಿಸಿದರು. ರೈಲು ಸಂಪೂರ್ಣ ನಿಯಂತ್ರಣಕ್ಕೆ ಬಂದಾಗ ಲೋಕೋ ಪೈಲಟ್ ಸೇರಿದಂತೆ ಯುವಕರು ಸೇರಿ ಹಳಿ ಮೇಲೆ ಬಿದ್ದಿದ್ದ ಮರವನ್ನು ಪಕ್ಕಕ್ಕೆ ಸರಿಸಿ, ಸುಗಮವಾಗಿ ರೈಲು ಸಂಚರಿಸುವಂತೆ ಮಾಡಿದರು. ಸಾವಿರಾರು ಜನ ಪ್ರಯಾಣಿಸುತ್ತಿದ್ದ ಈ ರೈಲಿನ ಪ್ರಯಾಣಿಕರ ಜೀವ ಉಳಿಸಿದ ಶ್ರೇಯಸ್ಸು ಈ ಯುವಕರಿಗೆ ಸಲ್ಲುತ್ತದೆ.