30ರ ನಂತರ ಕರ ನಿರಾಕರಣೆ ಚಳವಳಿ
Team Udayavani, Jan 19, 2019, 1:10 AM IST
ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರರ ಕಳೆದ ವರ್ಷದ ಬಾಕಿ ಹಾಗೂ ಪ್ರಸಕ್ತ ಸಾಲಿನ ಕಬ್ಬು ಪೂರೈಕೆ ಮೊತ್ತ ಪಾವತಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜ.30ರ ನಂತರ ಕರ ನಿರಾಕರಣೆ ಚಳವಳಿ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಕಬ್ಬಿನ ಬಾಕಿ ಕುರಿತು ಹಲವಾರು ಬಾರಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಕ್ಕರೆ ಸಚಿವರು ಹಾಗೂ ಆಯುಕ್ತರು ಆಗಾಗ ಬದಲಾಗುತ್ತಿದ್ದು, ಇದರಿಂದಾಗಿ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಜ.30ರವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಂತರ ರೈತರಿಂದ ವಿದ್ಯುತ್, ಸಾರಿಗೆ, ನೀರು ಸೇರಿದಂತೆ ವಿವಿಧ ತೆರಿಗೆ ನಿರಾಕರಿಸಿ ಚಳವಳಿ ಮಾಡಲಾಗುವುದು. ಒಂದು ವೇಳೆ ಚಳವಳಿಯನ್ನು ತಡೆಗಟ್ಟಲು ಪ್ರಯತ್ನಿಸಿದರೆ ಜೈಲ್ಭರೋ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.