ಶ್ರೀಗಳ ಅಂತಿಮ ದರ್ಶನ ಪಡೆದು ಮರಳುವಾಗ ಅಪಘಾತ ; ಓರ್ವ ಸಾವು
Team Udayavani, Jan 22, 2019, 11:55 AM IST
ಚಿಕ್ಕಮಗಳೂರು: ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನ ಪಡೆದು ವಾಪಾಸಾಗುತ್ತಿದ್ದ ಬೊಲೆರೋ ಕಾರೊಂದು ಮರಕ್ಕೆ ಢಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿ, 6 ಮಂದಿ ಗಾಯಗೊಂಡ ದುರ್ಘಟನೆ ಕಡೂರಿನ ಗದ್ಲೆಹಳ್ಳಿಯ ಬಳಿ ಮಂಗಳವಾರ ನಡೆದಿದೆ.
ಪರಮೇಶ್ವರಪ್ಪ ಎನ್ನುವ 40 ವರ್ಷದ ವ್ಯಕ್ತಿ ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಸಾವನ್ನಪ್ಪಿದ್ದು,6 ಮಂದಿ ಗಾಯಗೊಂಡಿದ್ದು ಕಡೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಇಬ್ಬರ ಸ್ಥಿತಿ ಗಂಭೀರವಾಗಿದ್ದು ಶಿವಮೊಗ್ಗದ ಮೆಗ್ಗಾನ್ಗೆ ಸ್ಥಳಾಂತರಿಸಲಾಗಿದೆ.
ಬೊಲೆರೋದಲ್ಲಿ ಬಂದಿದ್ದ 7 ಮಂದಿ ಸೋಮವಾರ ರಾತ್ರಿ ಶ್ರೀಗಳ ಲಿಂಗಶರೀರದ ಅಂತಿಮ ದರ್ಶನ ಪಡೆದು ವಾಪಾಸಾಗುತ್ತಿದ್ದರು.
ಕಡೂರು ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.