ಇಂದು ಕಾಂಗ್ರೆಸ್ಗೆ ಜಾಧವ ರಾಜೀನಾಮೆ?
Team Udayavani, Jan 24, 2019, 1:28 AM IST
ಕಲಬುರಗಿ: ಮಂತ್ರಿ ಸ್ಥಾನದಿಂದ ವಂಚಿತರಾಗಿದ್ದಕ್ಕೆ ಹಾಗೂ ಕ್ಷೇತ್ರದಲ್ಲಿ ಹೇಳಿದ ಕೆಲಸಗಳು ಆಗುತ್ತಿಲ್ಲ ಎಂದು ಮುನಿಸಿಕೊಂಡು 10 ದಿನದಿಂದ ಕ್ಷೇತ್ರದಿಂದ ದೂರ ಉಳಿದಿದ್ದ ಶಾಸಕ ಡಾ| ಉಮೇಶ ಜಾಧವ ಗುರುವಾರ (ಜ.24) ಪ್ರತ್ಯಕ್ಷರಾಗಲಿದ್ದು, ಅಂದೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ.
ಗುರುವಾರ ಕಾಳಗಿ ತಾಲೂಕು ಬೆಡಸೂರಿನಲ್ಲಿ ನಡೆಯುವ ತಮ್ಮ ತಂದೆ ಗೋಪಾಲದೇವ್ ಜಾಧವ ಅವರ 36ನೇ ಪುಣ್ಯಸ್ಮರಣೆಯಲ್ಲಿ ಜಾಧವ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.
ಗುರುವಾರ ಬೆಳಗ್ಗೆಯೇ ಮುಂಬೈ ಬಿಟ್ಟು ಕಲಬುರಗಿಯತ್ತ ಶಾಸಕರು ಹೊರಟಿದ್ದು, ಮಧ್ಯರಾತ್ರಿ ಕಲಬುರಗಿಗೆ ಬಂದು ತದನಂತರ ಚಿಂಚೋಳಿ ಕ್ಷೇತ್ರದತ್ತ ಪ್ರಯಾಣ ಬೆಳೆಸಲಿದ್ದಾರೆ. 10 ದಿನಗಳ ಕಾಲ ಮುಂಬೈನಲ್ಲಿದ್ದ ಜಾಧವ ಅವರನ್ನು ಮುಂಬೈನಲ್ಲಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಸುಮಾರು 15 ಸಾವಿರ ಜನರು ಭೇಟಿಯಾಗಿದ್ದಾರೆ. ಅವರೊಂದಿಗೆ ಮುಂದಿನ ಬೆಳವಣಿಗೆ ಕುರಿತಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.