ಆಡಿಯೋ ಟೇಪ್, ವಿಶೇಷ ತನಿಖಾ ತಂಡ ರಚಿಸಿ ಸತ್ಯ ಪತ್ತೆ ಹಚ್ಚಿ; ಸ್ಪೀಕರ್
Team Udayavani, Feb 11, 2019, 8:58 AM IST
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ವಾಕ್ಸಮರ, ಸಂಚಲನಕ್ಕೆ ಕಾರಣವಾಗಿದ್ದ ಆಪರೇಷನ್ ಕಮಲದ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಮಂಡಲದ ಕಲಾಪದಲ್ಲಿ ಗಂಭೀರ ಚರ್ಚೆಯನ್ನು ಆಲಿಸಿದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರು 15 ದಿನದೊಳಗೆ ವಿಶೇಷ ತನಿಖಾ ತಂಡ ರಚಿಸಿ ವರದಿ ನೀಡುವಂತೆ ಆದೇಶ ನೀಡಿದ್ದಾರೆ.
ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಆಡಿಯೋ ವಿಚಾರದ ಕುರಿತು ಗಂಭೀರ ಚರ್ಚೆಗೆ ಕಲಾಪ ಸಾಕ್ಷಿಯಾಯಿತು. ಬಿಜೆಪಿಯ ಮಾಧುಸ್ವಾಮಿ, ಕಾಂಗ್ರೆಸ್ ಪಕ್ಷದ ಕೃಷ್ಣಬೈರೇಗೌಡ, ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್, ಬಿಜೆಪಿಯ ಕೆಎಸ್ ಈಶ್ವರಪ್ಪ, ಸುರೇಶ್ ಕುಮಾರ್, ಶಾಸಕ ರಾಜೀವ್ ಕುಡಚಿ, ಗೋವಿಂದ ಕಾರಜೋಳ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಎಲ್ಲರ ಚರ್ಚೆಯನ್ನು ಆಲಿಸಿದ ಸ್ಪೀಕರ್ ಅವರು, ನಿಮ್ಮೆಲ್ಲರ ಗೌರವದ, ವಿಶ್ವಾಸದ ಮಾತಿಗೆ ಋಣಿಯಾಗಿದ್ದೇನೆ. ನಾನು ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಲು ಹೋಗುವುದಿಲ್ಲ. ನನ್ನ ಮೂಲ ಸ್ವಭಾವಕ್ಕೆ ವಿರುದ್ಧವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಹೀಗಾಗಿ ಇನ್ನು 15 ದಿನದೊಳಗೆ ವಿಶೇಷ ತನಿಖಾ ತಂಡದ ಮೂಲಕ ವರದಿ ನೀಡಬೇಕು ಎಂದು ಸರ್ಕಾರಕ್ಕೆ ಆದೇಶ ನೀಡಿದರು.