“ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು’
Team Udayavani, Feb 17, 2019, 12:50 AM IST
ಬೆಂಗಳೂರು: ರಾಜ್ಯದಲ್ಲಿ ವಿಶ್ವ ಪಾರಂಪರಿಕ ತಾಣಗಳಿದ್ದು, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿದ್ದ “ನಿಮ್ಮ ಸಾಹಸಗಾಥೆ ನೀವೇ ರಚಿಸಿ’ ಪ್ರವಾಸೋದ್ಯಮ ಪರಿಕಲ್ಪನೆಯ ಜಾಹೀರಾತು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಧಾಮ, ಅಭಯಾರಣ್ಯ, ಗಿರಿಧಾಮ, ಜಲಪಾತ, ಕಲಡ ಕಿನಾರೆಯಿದ್ದು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಪ್ರವಾಸಿಗರನ್ನು ಹೆಚ್ಚು, ಹೆಚ್ಚು ಸೆಳೆಯುವತ್ತ ನಮ್ಮ ಕಾರ್ಯಕ್ರಮಗಳು ಇರಬೇಕಾಗಿದೆ ಎಂದು ತಿಳಿಸಿದರು.
ರಾಜ್ಯದ ಪ್ರವಾಸಿ ತಾಣಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಹೊಸ ಪರಿಕಲ್ಪನೆ ಸ್ವಾಗತಾರ್ಹ.
ಕಿರುಚಿತ್ರ ಹಾಗೂ ಜಾಹೀರಾತುಗಳು ಅದ್ಭುತವಾಗಿ ಮೂಡಿ ಬಂದಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶ್ಲಾಘಿಸಿದರು.
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಸುಂದರ ತಾಣಗಳನ್ನು ಪರಿಚಯಿಸುವ ಪ್ರಯಾಣಕ್ಕೆ ನಾನು
ನಿಮ್ಮನ್ನು ಸ್ವಾಗತಿಸುತ್ತೇನೆ ಎಂಬ ಟ್ಯಾಗ್ಲೈನ್ ಕರ್ನಾಟಕದ ಪ್ರವಾಸ ಅವಿಸ್ಮರಣೀಯವಾಗಿಸುವುದರಲ್ಲಿ ಅನುಮಾನವೇ ಇಲ್ಲ.
ಕರ್ನಾಟಕ ಪ್ರವಾಸ ಯಾರಿಗೂ ಖಂಡಿತವಾಗಿಯೂ ನಿರಾಸೆ ಮೂಡಿಸುವುದಿಲ್ಲ ಎಂಬ ವಿಶ್ವಾಸವೂ ಇದೆ ಎಂದು ಹೇಳಿದರು.
ಇಲಾಖೆಯ ಕಾರ್ಯದರ್ಶಿ ಟಿ.ಕೆ.ಸುನೀಲ್ಕುಮಾರ್, ನಿರ್ದೇಶಕಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಶ್ಕರ್ ಮತ್ತಿತರರು ಉಪಸ್ಥಿತರಿದ್ದರು.