ವಿವಾದಾತ್ಮಕ ಹೇಳಿಕೆ ಯಾರೇ ನೀಡಿದರು ಕಠಿಣ ಕ್ರಮ: ಎಂ. ಬಿ. ಪಾಟೀಲ್
Team Udayavani, Feb 17, 2019, 5:58 AM IST
ವಿಜಯನಗರ: ವಿಧ್ವಂಸಕ ಕೃತ್ಯ ನಡೆಸುವವರಿಗೆ ಯಾವುದೇ ಧರ್ಮವಿಲ್ಲ, ದುಷ್ಕೃತ್ಯವೇ ಅವರಿಗೆ ಧರ್ಮ. ಯಾರೇ ವಿವಾದಾತ್ಮಕ ಹೇಳಿಕೆ ನೀಡಿದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಭಗವಾನ್, ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಸಹಿತ ಯಾರೇ ವಿವಾದಾತ್ಮಕ ಮತ್ತು ಪ್ರಚೋದನಾತ್ಮಕ ಹೇಳಿಕೆ ನೀಡಿದರೂ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವಿಜಯನಗರದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸಿಆರ್ ಪಿಎಫ್ ಯೋಧರ ಮೇಲಿನ ದಾಳಿಯನ್ನು ಬೆಂಬಲಿಸಿದ ಕಾಶ್ಮೀರ ಮೂಲದ ಯುವಕನ ವಿಚಾರಣೆ ನಡೆಸಲಾಗುತ್ತದೆ ಎಂದರು.
ರೇವಾ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾಭ್ಯಾಸ ನಡೆಸುತ್ತಿರುವ ತಾಹೀರ್ ಲತೀಫ್ ಎಂಬಾತ ಪುಲ್ವಾಮಾ ದಾಳಿಯನ್ನು ಬೆಂಬಲಿಸಿ ಮತ್ತು ಉಗ್ರನ ವೀಡಿಯೋ ಸ್ಟೇಟಸ್ ಹಾಕಿಕೊಂಡಿದ್ದ. ಈ ಬಗ್ಗೆ ಬಾಗಲೂರು ಪೊಲೀಸರು ಕೇಸು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕಾಶ್ಮೀರಿ ಮೂಲದವರಾಗಿರುವ ತಾಹೀರ್ ಲತೀಫ್ ತನ್ನ ಸ್ಟೇಟಸ್ ನಲ್ಲಿ ಉಗ್ರನನ್ನು ಬೆಂಬಲಿಸಿ ‘ಈ ಧೈರ್ಯವಂತನಿಗೆ ದೊಡ್ಡ ಸೆಲ್ಯೂಟ್, ಅಲ್ಲಾಹು ನಿನ್ನ ತ್ಯಾಗವನ್ನು ಸ್ವೀಕಸರಿಸಿ ಸ್ವರ್ಗದಲ್ಲಿ ಉನ್ನತ ಸ್ಥಾನ ನೀಡಲಿದ್ದಾರೆ’ ಎಂದು ಬರೆದುಕೊಂಡಿದ್ದ.