ಜಾಧವ್ ಬಿಜೆಪಿಗೆ ಬಂದರೆ ಗೆಲುವು ಖಚಿತ
Team Udayavani, Feb 18, 2019, 12:35 AM IST
ಕಲಬುರಗಿ: ಚಿಂಚೋಳಿ ಕ್ಷೇತ್ರದ ಶಾಸಕ ಡಾ| ಉಮೇಶ ಜಾಧವ್ ಬಿಜೆಪಿಗೆ ಬಂದರೆ ನೂರಕ್ಕೆ ನೂರು ಪ್ರತಿಶತ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿದರು.
ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಕಲಬುರಗಿಯಲ್ಲಿ ನಡೆದ ಪೂರ್ವಭಾವಿ ಸಭೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಡಾ| ಜಾಧವ್ ಅವರು ನೋವಿನಲ್ಲಿದ್ದುದ ರಿಂದ ಬಿಜೆಪಿಗೆ ಬರುವಂತೆ ವಿನಂತಿಸಲಾಗಿದೆ. ಬರುವ ಮಾರ್ಚ್ 1ರಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಲಬುರಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆಂಬುದು ಘೋಷಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಡಾ|ಮಲ್ಲಿಕಾರ್ಜುನ ಖರ್ಗೆ ಸ್ವಾರ್ಥ ರಾಜಕಾರಣದಿಂದ ಜಿಲ್ಲೆಯ ಜನ ಬೇಸತ್ತಿದ್ದಾರೆ. ಇದೇ ಕಾರಣಕ್ಕೆ ನಾನು ಹಾಗೂ ಬಾಬು ರಾವ್ ಚಿಂಚನ ಸೂರ ಕಾಂಗ್ರೆಸ್ ತೊರೆದೆವು.ಧರ್ಮಸಿಂಗ್ ಪುತ್ರ ಡಾ| ಅಜಯಸಿಂಗ್ ಅವರನ್ನು ಸಚಿವರನ್ನಾಗಿ ಮಾಡಲಿಲ್ಲ. ಎರಡನೇ ಸಲ ಸಂಪುಟ ವಿಸ್ತರಣೆಯಲ್ಲೂ ಕಡೆಗಣಿಸಲಾಯಿತು. ಮೋದಿ ಕಲಬುರಗಿ ಆಗಮಿಸುವ ವೇಳೆ ಮತ್ತಷ್ಟು ಕಾಂಗ್ರೆಸ್ ನಾಯಕರು ಬಿಜೆಪಿಗೆ ಬರಲಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮರೆತಿದ್ದಾರೆ ಎಂದು ಟೀಕಿಸಿದರು.