ಇಂದು “ವಿಜಯ ಸಂಕಲ್ಪ ಮಹಾ ಬೈಕ್ ರ್ಯಾಲಿ
Team Udayavani, Mar 2, 2019, 12:30 AM IST
ಮಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಬಿಜೆಪಿ ನಡೆಸುತ್ತಿರುವ ವಿವಿಧ ಪ್ರಚಾರ ಅಭಿಯಾನದ ಕೊನೆಯ ಕಾರ್ಯಕ್ರಮ “ವಿಜಯ ಸಂಕಲ್ಪ ಮಹಾ ಬೈಕ್ ರ್ಯಾಲಿ ಮಾ.2ರಂದು ದೇಶಾ ದ್ಯಂತ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಮಂಡಲಗಳಲ್ಲಿ (ವಿಧಾನಸಭಾ ಕ್ಷೇತ್ರ) ಈ ರ್ಯಾಲಿ ಹಾಗೂ ಸಮಾವೇಶವನ್ನು ನಡೆಸಲಾಗುವುದು ಎಂದು ದ.ಕ. ಲೋಕಸಭಾ ಕ್ಷೇತ್ರ ಬಿಜೆಪಿ ಚುನಾವಣಾ ಉಸ್ತುವಾರಿ ಸಂಚಾಲಕ ಗೋಪಾಲಕೃಷ್ಣ ಹೇರಳೆ ಅವರು ತಿಳಿಸಿದರು.
ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ 8 ಮಂಡಲಗಳ 54 ಮಹಾಶಕ್ತಿ ಕೇಂದ್ರ, 417 ಶಕ್ತಿ ಕೇಂದ್ರ ಹಾಗೂ 1,861 ಬೂತ್ಗಳಲ್ಲಿ ಚುನಾವಣೆಗೆ ಭರದ ಸಿದ್ಧತೆಯನ್ನು ನಡೆಸಲಾಗುತ್ತಿದೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸೂಚಿಸಿದಂತೆ ಈಗಾಗಲೇ ವಿವಿಧ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರ ಸಮಾರೋಪದ ಅಂಗವಾಗಿ ಯುವ ಮೋರ್ಚಾ ನೇತೃತ್ವದಲ್ಲಿ ಮಹಾ ಬೈಕ್ ರ್ಯಾಲಿಯನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯೊಳಗೆ ಎಲ್ಲ ಮಂಡಲಗಳಲ್ಲಿ ನಿಗದಿತ ಕೇಂದ್ರಕ್ಕೆ ಬೂತ್ಗಳಿಂದ ಕಾರ್ಯಕರ್ತರು ಬೈಕ್ಗಳಲ್ಲಿ ಆಗಮಿಸಲಿದ್ದು, ಬಳಿಕ ಸಮಾವೇಶ ನಡೆಯಲಿದೆ. ಇದರಲ್ಲಿ ಸುಮಾರು ಒಂದು ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರ್ಯಾಲಿ ವೇಳೆ ಬೈಕ್ನಲ್ಲಿ ಹೆಲ್ಮೆಟ್ ಧರಿಸಿ ವಾಹನದ ಎಲ್ಲ ದಾಖಲೆಗಳನ್ನು ಹೊಂದಿರುವಂತೆ ಸೂಚಿಸಲಾಗಿದೆ ಎಂದರು.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ. ಮಂಗಳೂರು ಉತ್ತರ ಕ್ಷೇತ್ರದ ರ್ಯಾಲಿ ಸುರತ್ಕಲ್ನಲ್ಲಿ, ಮೂಡುಬಿದಿರೆಯ ಕಿನ್ನಿಗೋಳಿಯಲ್ಲಿ, ಪುತ್ತೂರಿನ ಕಲ್ಲೇಗ, ಸುಳ್ಯದ ಬಸ್ ನಿಲ್ದಾಣ, ಬಂಟ್ವಾಳದ ರಂಗೋಲಿ ಹೊಟೇಲ್ ಬಳಿ, ಉಳ್ಳಾಲದ ತೊಕ್ಕೊಟ್ಟಿನಲ್ಲಿ, ಬೆಳ್ತಂಗಡಿಯ ಉಜಿರೆಯಲ್ಲಿ ಮಹಾ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.
ಪ್ರಣಾಳಿಕೆಗೆ ಸಲಹೆ ಆಹ್ವಾನ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಣಾಳಿಕೆ ವಾಹನವನ್ನು ಹೊರಡಿಸಲಾಗಿದೆ. ಈ ವಾಹನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಅದರಲ್ಲಿರುವ ಸಲಹಾ ಪೆಟ್ಟಿಗೆಯಲ್ಲಿ ಈ ಚುನಾವಣೆಯ ವೇಳೆ ಯಾವ ರೀತಿಯ ಆಶ್ವಾಸನೆ ನೀಡಬಹುದು ಎಂಬುದನ್ನು ಸೂಚಿಸಲು ಸಾರ್ವಜನಿಕರಿಗೆ ಅವಕಾಶವಿದೆ. ನೀಡಲಾಗುವ ಸಲಹೆಗಳನ್ನು ರಾಜ್ಯಕ್ಕೆ ಕಳುಹಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ರವಿಶಂಕರ ಮಿಜಾರ್, ನಿತಿನ್ ಕುಮಾರ್, ಕಿಶೋರ್ ರೈ, ಪ್ರಭಾಮಾಲಿನಿ, ಸಂಜಯ ಪ್ರಭು, ಸಂದೇಶ್ ಶೆಟ್ಟಿ, ಜಿತೇಂದ್ರ ಕೊಟ್ಟಾರಿ ಅವರು ಉಪಸ್ಥಿತರಿದ್ದರು.
ನಳಿನ್ ಅವರೇ ಅಭ್ಯರ್ಥಿ
ದ.ಕ. ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನೇ ಅಭ್ಯರ್ಥಿಯನ್ನಾಗಿ ಜಿಲ್ಲಾ ಘಟಕ ಸೂಚಿಸಿದೆ. ಇದನ್ನು ಅಧಿಕೃತವಾಗಿ ಕೇಂದ್ರ ನಾಯಕರು ಘೋಷಿಸಬೇಕಾಗಿದೆ. ಆದರೆ ಪಕ್ಷದ ಚಿಹ್ನೆೆ°ಯನ್ನು ಬಳಸಿ ಕೊಂಡು ಅಲ್ಲಲ್ಲಿ ಕೆಲವರು ತಾನು ಅಭ್ಯರ್ಥಿ ಎಂದು ಪಕ್ಷ ವಿರೋಧಿಯಾಗಿ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಂತಹವರ ವಿರುದ್ಧ ಪಕ್ಷದ ವರಿಷ್ಠರು ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೋಪಾಲಕೃಷ್ಣ ಹೇರಳೆ ತಿಳಿಸಿದರು.