ಸಚಿವ ಅನಂತ್ಗೆ ಮತ್ತೆ ಜೀವ ಬೆದರಿಕೆ
Team Udayavani, Feb 19, 2019, 12:30 AM IST
ಶಿರಸಿ: ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಅವರ ಮನೆಯ ಸ್ಥಿರ ದೂರವಾಣಿಗೆ ಮತ್ತೆ ಅನಾಮಧೇಯ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಚಿವರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೆ.17ರ ರಾತ್ರಿ 1:45ರ ಸುಮಾರಿಗೆ ಸಚಿವರ ಶಿರಸಿ ನಿವಾಸದ ಸ್ಥಿರ ದೂ.ಸಂ: 08384-234337ಗೆ 0022330000 ಸಂಖ್ಯೆಯಿಂದ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಅಂದು ಸಚಿವ ಹೆಗಡೆ ಹುತಾತ್ಮ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಲು ತಮಿಳುನಾಡಿಗೆ ತೆರಳಿದ್ದರು. ಮನೆಯಲ್ಲಿ ಪತ್ನಿ ರೂಪಾ ಹೆಗಡೆ ಮಾತ್ರ ಇದ್ದರು. ಈ ವೇಳೆ ಬೆದರಿಕೆ ಕರೆ ಬಂದಿದ್ದು ಹಿಂದಿಯಲ್ಲಿ “ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿಕೊಂಡಿರಿ. ಅನಂತಕುಮಾರ್ ಮುಸ್ಲಿಂರ ಬಗ್ಗೆ ಮಾತನಾಡಿದರೆ ಚೆನ್ನಾಗಿರುವುದಿಲ್ಲ. ಅವರನ್ನು ಹಾಗೂ ನಿಮ್ಮ ಇಡೀ ಕುಟುಂಬದವರನ್ನು ಬಿಡುವುದಿಲ್ಲ. ನಿಮಗೆ ಏನು ಮಾಡಬೇಕು ಎಂಬುದು ನಮಗೆ ಗೊತ್ತಿದೆ. ಅಯೋಧ್ಯೆ ಸಮೇತ ಎಲ್ಲವೂ ನಿಮಗೇ ಬೇಕೇ? ಅಯೋಧ್ಯೆಯನ್ನು ತೆಗೆದುಕೊಳ್ಳಲು ಬಿಡುವುದಿಲ್ಲ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ.
ಸಚಿವರ ಪತ್ನಿ ರೂಪಾ ಹೆಗಡೆ ಕರೆ ಸ್ವೀಕರಿಸಿದ ಬಳಿಕ ಮಾನಸಿಕವಾಗಿ ಆಘಾತಗೊಂಡಿದ್ದಾರೆ. ದೂರವಾಣಿ ಇಟ್ಟ ಬಳಿಕವೂ ಹಲವಾರು ಬಾರಿ ಕರೆ ಬಂದಿದ್ದು, ಇವರು ಸ್ವೀಕರಿಸಿಲ್ಲ ಎಂದೂ ತಿಳಿಸಲಾಗಿದ್ದು, ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.