ಸಂಗಮದಲ್ಲಿ ಮಿಂದೆದ್ದ ಭಕ್ತ ಸಮೂಹ
Team Udayavani, Feb 19, 2019, 12:30 AM IST
ತಿ.ನರಸೀಪುರ: ದಕ್ಷಿಣ ಭಾರತದ ಪ್ರಯಾಗದ ಖ್ಯಾತಿ ಪಡೆದಿರುವ ಕಾವೇರಿ, ಕಪಿಲೆ ಹಾಗೂ ಸ್ಫಟಿಕ ಸರೋವರದ ಪುಣ್ಯಕ್ಷೇತ್ರ ತ್ರಿವೇಣಿ ಸಂಗಮದಲ್ಲಿ ಸೋಮವಾರ ಬೆಳಗ್ಗೆಯಿಂದ ರಾತ್ರಿಯ ತನಕ ಅಪಾರ ಸಂಖ್ಯೆಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು.
ಬೆಳಗ್ಗೆ 5.30ರಿಂದಲೇ ತೀರ್ಥಸ್ಥಾನ ಆರಂಭವಾಗಿತ್ತು. ಅಗಸೆöàಶ್ವರ ಹಾಗೂ ಗುಂಜಾನರಸಿಂಹ ದೇವಸ್ಥಾನದ ಮಾರ್ಗವಾಗಿ ತಿರುಮಕೂಡಲು ತ್ರಿವೇಣಿ ಸಂಗಮಕ್ಕೆ ಆಗಮಿಸಿದ ಭಕ್ತರು, ಪವಿತ್ರ ಸ್ನಾನ ಮಾಡಿ, ಶ್ರೀ ಗುಂಜಾನರ ಸಿಂಹ ಸ್ವಾಮಿ, ಅಗಸೆöàಶ್ವರ ಸ್ವಾಮಿ, ಬಿತ್ತೀಗೇಶ್ವರ, ಬಳ್ಳೇಶ್ವರ ಹಾಗೂ ಮೂಲಸ್ಥಾನೇಶ್ವರ ಸ್ವಾಮಿಯ ದರ್ಶನ ಪಡೆದರು.
ಕುಂಭ ಮೇಳ ಆರಂಭವಾದ ಎರಡನೇ ದಿನ ಕಪಿಲೆ ಮತ್ತು ಕಾವೇರಿ ನದಿ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಿದೆ. ಎರಡು ನದಿಯ ಡ್ಯಾಂಗಳಿಂದ ಅಧಿಕ ಪ್ರಮಾಣದ ನೀರು ಹೊರಬಿಡಲಾಗಿದೆ.
ಗುಂಜಾನರಸಿಂಹ ದೇವಸ್ಥಾನ ಹಾಗೂ ಅಗಸೆöàಶ್ವರ ದೇವಸ್ಥಾನ ಮಾರ್ಗವಾಗಿ ತ್ರಿವೇಣಿ ಸಂಗಮದ ಪ್ರದೇಶಕ್ಕೆ ಬಂದು ಸ್ನಾನ ಮಾಡಿ,ಯಾಗ ಮಂಟಪ, ಮರಳು ನಂದಿ ಇರುವ ಸ್ಥಳಕ್ಕೆ ಹೋಗಲು ಅನುಕೂಲ ಆಗುವಂತೆ ಮುಖ್ಯವೇದಿಕೆಯ ಮುಂಭಾಗದಲ್ಲಿ ಮಣ್ಣು ಹಾಕಿ ಏರು ಪ್ರದೇಶವಾಗಿ ಸಮತಟ್ಟು ಮಾಡಲಾಗಿತ್ತು.
ಸೋಮವಾರ ಕಪಿಲೆ ಹಾಗೂ ಕಾವೇರಿ ನೀರಿನ ಪ್ರಮಾಣ ಜಾಸ್ತಿಯಾಗಿದ್ದರಿಂದ ಮುಖ್ಯವೇದಿಕೆವರೆಗೂ ನೀರು ಬಂದಿದೆ. ಭಕ್ತರಿಗೆ ನಡೆದಾಡಲು ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ಮಧ್ಯ ಮಧ್ಯೆ ಮಣ್ಣಿನ ಚೀಲಗಳನ್ನು ಇಡಲಾಗಿದೆ.
ಒಂದೇ ಕಡೆ 12 ಜ್ಯೋತಿರ್ಲಿಂಗ ದರ್ಶನ: ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಭಕ್ತರು ಪವಿತ್ರ ಸ್ನಾನದ ಜತೆಗೆ ದೇಶದ 12 ಜ್ಯೋತಿರ್ಲಿಂಗದ ದರ್ಶನ ಒಂದೇ ಕಡೆಯಲ್ಲಿ ಪಡೆಯಬಹುದಾಗಿದೆ.
ಇದೇ ಮೊದಲ ಬಾರಿಗೆ ಯತಿಗಳ ಸಮ್ಮುಖದಲ್ಲಿ ಗಂಗಾರತಿ
ತಿ.ನರಸಿಪುರ: ಕಾಶಿಯ ವಿಶ್ವನಾಥನ ಸನ್ನಿಧಿಯಲ್ಲಿ ಗಂಗಾ ನದಿಗೆ ನಡೆಸುವ ಆರತಿಯ ಮಾದರಿಯಲ್ಲೇ ತಿರುಮಕೂಡಲ ತ್ರಿವೇಣಿ ಸಂಗಮದ ಪುಣ್ಯಕ್ಷೇತ್ರದಲ್ಲಿ ಸೋಮವಾರ ರಾತ್ರಿ ನಾಡಿನ ಪ್ರಮುಖ ಯತಿಗಳು ಹಾಗೂ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಗಂಗಾರತಿ ನಡೆಯಿತು.
11ನೇ ಮಹಾಕುಂಭಮೇಳದ ಪ್ರಮುಖ ಭಾಗವಾಗಿ ದಕ್ಷಿಣದ ಗಂಗೆಗೆ ಅದೂಟಛಿರಿ ಆರತಿ ಕಾಶಿಯಿಂದಲೇ ಬಂದಿದ್ದ ಯುವಕರ ತಂಡ ನೆರವೇರಿಸಿದೆ. ಕಳೆದ 10 ವರ್ಷಗಳಲ್ಲಿ ಇಷ್ಟು ಅದ್ಧೂರಿಯ ಗಂಗಾರತಿ ನಡೆದಿರಲಿಲ್ಲ.
ಸಂಪ್ರದಾಯದಂತೆ ಸ್ವಾಮೀಜಿಗಳು ಸೇರಿ ಗಂಗಾರತಿ ಸಂಪನ್ನಗೊಳಿಸುತ್ತಿದ್ದರು. ಅದರೆ ಈ ಬಾರಿ ವಾರಣಾಸಿಯಿಂದ ಗಂಗಾರತಿ ಮಾಡುವ 15 ಯುವಕರು ಬಂದಿದ್ದರು.
ಸರಿಯಾಗಿ 7.25ಕ್ಕೆ ಗಂಗಾರತಿ ಆರಂಭವಾಗಿದ್ದು, ನಂತರ ಸುಮಾರು ಅರ್ಧಗಂಟೆಗಳ ಕಾಲ ವಿವಿಧ ಆರತಿ ಮಾಡಿದರು. ನಂತರ ಅಲ್ಲಿಂದ ಇಬ್ಬರು ಯುವಕರು ಆರತಿಯನ್ನು ತೆಪ್ಪದ ಮೂಲಕ ತಂದು ಸ್ವಾಮೀಜಿಯರಿಗೆ ನೀಡಿದರು. ನಂತರ ಸ್ವಾಮೀಜಿಗಳು ಮುಖ್ಯಮಂತ್ರಿಗಳ ಜತೆ ಸೇರಿ ಆರತಿಯನ್ನು ಗಂಗೆಗೆ ಸಮರ್ಪಿಸಿದರು.