ಪಾಕ್ಗೆ ಮಸೂದ್ ಕಳುಹಿಸಿದ್ದು ಯಾರು ? : ರಾಹುಲ್
Team Udayavani, Mar 10, 2019, 12:03 AM IST
ಹಾವೇರಿ: ಪುಲ್ವಾಮಾದಲ್ಲಿ ಭಾರತೀಯ ಯೋಧರಹತ್ಯೆಗೈದ ಜೈಶ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ಸುರಕ್ಷಿತವಾಗಿ ಪಾಕಿಸ್ತಾನಕ್ಕೆ ಬಿಟ್ಟು ಬಂದಿದ್ದೇ ಬಿಜೆಪಿ. ಹೀಗಾಗಿ ಉಗ್ರ ದಾಳಿಗೆ ಬಿಜೆಪಿಯೇ ಹೊಣೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಮುನ್ಸಿಪಲ್ ಮೈದಾನದಲ್ಲಿ ಶನಿವಾರ ನಡೆದ ಪರಿವರ್ತನಾ ರ್ಯಾಲಿಗೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪುಲ್ವಾಮಾದಲ್ಲಿ ಭಾರತೀಯ ಯೋಧರ ಹತ್ಯೆ ಮಾಡಿದ್ದು ಯಾರು, ಜೈಶ್ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಯಾರು, ಆ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನನ್ನು ಭಾರತದ ಜೈಲಿನಿಂದ ಪಾಕಿಸ್ತಾನಕ್ಕೆ ಬಿಟ್ಟು ಬಂದವರು ಯಾರು ಎಂಬುದನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಿಳಿಸಬೇಕು. ಕಂದಹಾರ್ ವಿಮಾನ ಅಪಹರಣ ಘಟನೆ ಬಗ್ಗೆ ಇಂಟರ್ನೆಟ್ನಲ್ಲಿ ನೋಡಿದರೆ ಬಿಜೆಪಿ ಸರ್ಕಾರ ಇದ್ದಾಗಲೇ ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಹಾಗೂ ಭಾರತೀಯ ಸೇನಾ ಮುಖ್ಯಸ್ಥರು ಪಾಕಿಸ್ತಾನಕ್ಕೆ ಹೋಗಿ ಮಸೂದ್ನನ್ನು ಬಿಟ್ಟು ಬಂದ ´ೋಟೋಗಳು ಕಾಣುತ್ತವೆ. ಇದನ್ನು ಮೋದಿಯವರು ಮರೆತರೇ? ಮೋದಿ ತಮ್ಮ ಭಾಷಣದಲ್ಲಿ ಇದನ್ನು ಏಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ಮೋದಿಯವರೇ, ನಾವು ನಿಮ್ಮ ಥರ ಅಲ್ಲ, ಭಯೋತ್ಪಾದನೆಗೆ ನಾವು ತಲೆಬಾಗಲ್ಲ; ಎದುರಿ ಸುತ್ತೇವೆ. ಮೋದಿ ಇನ್ನೊಮ್ಮೆ ರಾಜ್ಯಕ್ಕೆ ಬಂದಾಗ ಈ ವಿಚಾರವನ್ನು ಭಾಷಣದಲ್ಲಿ ಪ್ರಸ್ತಾಪಿಸಿ ಉಗ್ರ ಮಸೂದ್ಗೆ ರಕ್ಷಣೆ ಕೊಟ್ಟಿದ್ದು ಯಾರು ಎಂದು ತಿಳಿಸಬೇಕು. ಅತ್ತ ದೇಶದ ಭೂಪ್ರದೇಶವನ್ನು ಚೀನಾ ಆಕ್ರಮಿಸಿದರೆ ಇತ್ತ ಪ್ರಧಾನಿ ಮೋದಿ ಚೀನಾ ಅಧ್ಯಕ್ಷರ ಜತೆ ಉಯ್ನಾಲೆಯಲ್ಲಿ ಕುಳಿತು ಚರ್ಚೆ ಮಾಡುತ್ತಾರೆ. ವಿದೇಶಗಳಿಗೆ ಹೋದಲ್ಲೆಲ್ಲ ಮೋದಿ ತಲೆಬಾಗಿಸಿ ಬರುತ್ತಾರೆ ಎಂದರು.
ಮೋದಿ ಚೌಕಿದಾರ್ ಅಲ್ಲ: ದೇಶದ ಚೌಕಿದಾರ (ಕಾವಲುಗಾರ) ಎನ್ನುತ್ತಲೇ ಮೋದಿ ರಫೇಲ್ ಹಗರಣದಲ್ಲಿ 30,000 ಕೋಟಿ ರೂ. ಹಣ ಅಂಬಾನಿ ಕಿಸೆಗೆ ಹಾಕಿದರು. ದೇಶದಲ್ಲಿ ಒಮ್ಮೆಯೂ ಒಂದೂ ಯುದ್ಧ ವಿಮಾನ ತಯಾರಿಸದ ಅನಿಲ್ ಅಂಬಾನಿಗೆ ರಷ್ಯಾಕ್ಕೆ ಕರೆದುಕೊಂಡು ಹೋಗಿ ಗುತ್ತಿಗೆ ಕೊಡಿಸುತ್ತಾರೆ. ಹೋದಲ್ಲೆಲ್ಲ ಭ್ರಷ್ಟಾಚಾರದ ವಿರುದ್ದ ಹೋರಾಡುತ್ತೇನೆ ಎನ್ನುತ್ತಲೇ ಅಂಬಾನಿ, ಅದಾನಿ, ನೀರವ್ ಮೋದಿ, ಲಲಿತ್ ಮೋದಿಯಂಥವರಿಗೆ ಚೌಕಿದಾರ ಕೆಲಸ ಮಾಡಿ ಅವರು ಈ ದೇಶದ ಚೋರ್ದಾರ್ ಆಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಬಡವರ ಖಾತೆಗೆ ಕೇವಲ 3.50 ರೂ.
ಅದಾನಿ, ಅಂಬಾನಿ ಯಂಥ 10-15 ಜನರ ಖಾತೆಗೆ ಲಕ್ಷ ಕೋಟಿ ಹಣ ಹಾಕುವ ಮೋದಿಯವರು ಬಡವರ ಖಾತೆಗೆ 3.50 ರೂ. ಹಾಕುತ್ತಾರೆ. ನಾವು ಬಡವರಿಗೆ 3.50 ರೂ. ಕೊಡಲ್ಲ. ಬಡವರಿಗೆ ಕನಿಷ್ಠ ವರಮಾನ ಖಾತ್ರಿಯಾಗಿ ಪ್ರತಿ ತಿಂಗಳು ಕೊಡುತ್ತೇವೆ ಎಂದು ರಾಹುಲ್ ಹೇಳಿದರು.
ಮೋದಿಗೆ ರೈತರು ಕಾಣಿಸುತ್ತಿಲ್ಲ: ಕೆಲ ದಿನಗಳ ಹಿಂದೆ ಮೋದಿ ರಾಜ್ಯಕ್ಕೆ ಬಂದು ಕರ್ನಾಟಕ ಸರ್ಕಾರ ರೈತರಿಗೆ ಲಾಲಿಪಾಪ್ ಕೊಟ್ಟಿದೆ ಎಂದಿದ್ದಾರೆ. 11 ಸಾವಿರ ಕೋಟಿ ರೈತರ ಸಾಲಮನ್ನಾ ಮೋದಿಯವರಿಗೆ ಲಾಲಿಪಾಪ್ ಆಗಿದೆ.
ಕಾಂಗ್ರೆಸ್ ಛತ್ತೀಸಗಡ ಸೇರಿದಂತೆ 3 ರಾಜ್ಯಗಳಲ್ಲಿ ಪಕ್ಷ ಘೋಷಿಸಿದಂತೆ ಸರ್ಕಾರ ಬಂದ ಎರಡು ದಿನಗಳಲ್ಲಿ ರೈತರ ಸಾಲಮನ್ನಾ ಮಾಡಿ ತೋರಿ ಸಿದ್ದೇವೆ. ಸಾವಿರಾರು ಕೋಟಿಗಳನ್ನು ಕೆಲವೇ ಕೆಲವು ಶ್ರೀಮಂತರ ಸಾಲಮನ್ನಾ ಮಾಡುವ ಮೋದಿಗೆ ದೇಶದ ರೈತರು ಕಾಣುತ್ತಿಲ್ಲ ಎಂದರು.
ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿ ಪಕ್ಷದ ಅಭ್ಯರ್ಥಿಗಳಗೆಲುವಿ ಗೆ ಒಗ್ಗೂಡಿ ಕೆಲಸ ಮಾಡುತ್ತಾರೆ.
ನಮ್ಮದು ರೈತ ಹಾಗೂ ಬಡವರ ಪರ ಸರ್ಕಾರವಾಗಿದ್ದು, ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಲು ಸಜ್ಜಾಗಿದ್ದೇವೆ.
ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ