ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ :ಹೊಟೇಲ್ನಲ್ಲಿ 2 ಕೋ.ರೂ.ಪತ್ತೆ
Team Udayavani, Mar 16, 2019, 12:30 AM IST
ಬೆಂಗಳೂರು/ಹಾವೇರಿ: ಲೋಕಸಭೆ ಚುನಾವಣೆ ಕಾವು ಹೆಚ್ಚುತ್ತಿರುವಂತೆಯೇ ನಗರದ ಹೊಟೇಲ್ವೊಂದರ ಮೇಲೆ ಐಟಿ ಇಲಾಖೆ ದಾಳಿ ನಡೆಸಿದ್ದು, 2 ಕೋಟಿ ನಗದು ವಶಪಡಿಸಿಕೊಂಡಿರುವ ಪ್ರಕರಣ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಈ ಹಣ ತಂದಿಟ್ಟಿದ್ದಾರೆ ಎಂದು ಹೇಳಲಾಗಿದ್ದು, ಈ ಕಾರಣಕ್ಕಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ. ಅಲ್ಲದೆ, ರಾಜ್ಯದಲ್ಲಿ 20 ಪರ್ಸೆಂಟ್ ಸರಕಾರವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಈ ದಾಳಿ ಬಗ್ಗೆ ಆದಾಯ ತೆರಿಗೆ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ದಾಳಿ ವೇಳೆ ಸಿಕ್ಕಿಬಿದ್ದ ವ್ಯಕ್ತಿಯು ಸಚಿವರಿಗೆ ನೀಡಲು ಹಣ ಸಂಗ್ರಹಿಸಿ ತರಲಾಗಿತ್ತು ಎಂಬ ಹೇಳಿಕೆ ನೀಡಿದ್ದಾನೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು, ಸಚಿವ ಕೃಷ್ಣಬೈರೇಗೌಡ ಅವರ ರಾಜೀ ನಾಮೆಗೆ ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಅವರ ಹಾವೇರಿಯ ನಿವಾಸದ ಮೇಲೂ ಗುರುವಾರ ರಾತ್ರಿಯಿಂದಲೇ ಐಟಿ ಅಧಿಕಾರಿ ಗಳು ದಾಳಿ ನಡೆಸಿ 25 ಲಕ್ಷ ರೂ. ಹಣ ಮತ್ತು ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಏನಾಯ್ತು?
ಅಕ್ರಮ ಹಣ ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗಾಂಧಿನಗರದ ಹೋಟೆಲೊಂದರ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಕೊಠಡಿ ಸಂಖ್ಯೆ 104, 105 , 115ರಲ್ಲಿ ಸಂಗ್ರಹಿಸಿಟ್ಟಿದ್ದ 500 ರೂ. ಮತ್ತು 2000 ರೂ. ಮುಖಬೆಲೆಯ 2 ಕೋಟಿ ರೂ. ಗಳಿಗೂ ಅಧಿಕ ಹಣವನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿ ಕೊಂಡಿ ದ್ದಾರೆ. ಹಾವೇರಿಯಲ್ಲಿ ಕಾರ್ಯ ನಿರ್ವ ಹಿಸು ತ್ತಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ಹಣ ತಂದಿಟ್ಟಿದ್ದು, ಐಟಿ ಅಧಿಕಾರಿಗಳು ಹೊಟೇಲ್ಗೆ ಬಂದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆೆ. ಹಣವನ್ನು ಜಪ್ತಿಪಡಿಸಿಕೊಂಡ ಐಟಿ ತಂಡ ಆ ಅಧಿಕಾರಿಯ ಕಾರು ಚಾಲಕನನ್ನು ವಶಕ್ಕೆ ಪಡೆದು ಹಲವು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದೆ.
ಐಟಿ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿದರೆ ನಾವು ಕ್ರಮ ಕೈಗೊಳ್ಳಬಹುದು. ಆದರೆ ಅದಕ್ಕೂ ಮೊದಲೇ ಏನೇನೋ ಕಲ್ಪನೆ ಮಾಡಿಕೊಳ್ಳುವುದು ಎಷ್ಟು ಸರಿ. ಯಡಿಯೂರಪ್ಪ ಅವರಿಗೆ ಈ ರೀತಿಯ ಚಟುವಟಿಕೆ ಮಾಡಿ ಅಭ್ಯಾಸವಾಗಿಬಿಟ್ಟಿದೆ. – ಕೃಷ್ಣ ಬೈರೇಗೌಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ
ಆಯೋಗಕ್ಕೆ ಬಿಜೆಪಿ ದೂರು
ಹಣ ಪತ್ತೆ ಪ್ರಕರಣ ಸಂಬಂಧ ಸಚಿವ ಕೃಷ್ಣ ಭೈರೇಗೌಡ ಮತ್ತು ಕಾರ್ಯನಿರ್ವಾಹಕ ಎಂಜಿ ನಿಯರ್ಗಳನ್ನು ತನಿಖೆಗೆ ಒಳಪಡಿಸಿ ಕ್ರಮ ತೆಗೆದು ಕೊಳ್ಳ ಬೇಕು ಎಂದು ಆಗ್ರಹಿಸಿ, ಬಿಜೆಪಿ ಚುನಾ ವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಚುನಾ ವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ದಾಖಲೆ ರಹಿತವಾಗಿ 50 ಸಾವಿರಕ್ಕಿಂತ ಅಧಿಕ ಹಣ ಕೊಂಡೊಯ್ಯು ವಂತಿಲ್ಲ ಎಂದು ಸೂಚಿಸಲಾಗಿದೆ. ಆದರೂ, ಸುಮಾರು 2 ಕೋಟಿ ರೂ.ಗಳು ಸಿಕ್ಕಿವೆ. ಈ ಸಂಬಂಧ ಸಚಿವರು ಹಾಗೂ ಕಾರ್ಯ ನಿರ್ವಾ ಹಕ ಎಂಜಿನಿಯರ್ ನಾರಾಯಣ ಬಿ. ಪಾಟೀಲ್ ಅವರನ್ನು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಬಿಜೆಪಿ ದೂರಿನಲ್ಲಿ ಆಗ್ರಹಿಸಿದೆ.