ಇಪ್ಪತ್ತು ಸ್ಥಾನ ಗೆದ್ದೇ ಗೆಲ್ತೇವೆ : ಮಾಜಿ ಪ್ರಧಾನಿ ದೇವೇಗೌಡ
Team Udayavani, Mar 21, 2019, 12:30 AM IST
ನಾನು ಚುನಾವಣೆಗೆ ನಿಲ್ಲಬಾರದು ಎಂದು ತೀರ್ಮಾನಿಸಿದ್ದೆ. ಅದನ್ನು ಸಂಸತ್ನಲ್ಲೂ ಹೇಳಿದ್ದೆ. ಆಗ, ಬಿಜೆಪಿ ಮೂಲದ ಸ್ಪೀಕರ್ ಮೇಡಂ ನೀವು ಆ ರೀತಿ ಹೇಳಬಾರದು ಎಂದಿದ್ದರು.
ರಾಷ್ಟ್ರಾದ್ಯಂತ ಲೋಕಸಭೆ ಚುನಾವಣೆ ಕಾವು ಜೋರಾಗಿಯೇ ಇದೆ. ಬಿಜೆಪಿ ಮೈತ್ರಿಕೂಟ, ಕಾಂಗ್ರೆಸ್ ನೇತೃತ್ವದ ಮಹಾಘಟ್ಬಂಧನ್ ಹಾಗೂ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಕಣಕ್ಕೆ ಇಳಿದಿವೆ. ರಾಜ್ಯದಲ್ಲಿಯೂಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಕೆಲವು ಜಿಲ್ಲೆಗಳಲ್ಲಿ ಇದು
ಎರಡೂ ಪಕ್ಷಗಳಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್
ವರಿಷ್ಠ ದೇವೇಗೌಡರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ರಾಜ್ಯದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳಲ್ಲಿ ಸಮಾಧಾನ ಇದ್ದಂತೆ ಕಾಣುತ್ತಿಲ್ಲವಲ್ಲ?
ದೊಡ್ಡ ಪ್ರಮಾಣದ ಅಸಂತೃಪ್ತಿಯೇನೂ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ. ಆದರೆ, ಅವೆಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಕೆಲಸ ಮಾಡುವಂತೆ ಎರಡೂ ಪಕ್ಷಗಳ ನಾಯಕರೂ ಸೂಚಿಸಿದ್ದೇವೆ. ಒಂದೆರಡು ಕ್ಷೇತ್ರಗಳಲ್ಲಿ ಸಮಸ್ಯೆ ಇದೆ. ಅದನ್ನು ಸರಿಪಡಿಸುತ್ತೇವೆ.
ನೀವು ಹತ್ತು ಕ್ಷೇತ್ರ ಕೇಳಿದ್ದಿರಿ, ಸಿಕ್ಕಿದ್ದು 8 ಕ್ಷೇತ್ರ ಮಾತ್ರ?
ಹತ್ತು ಕ್ಷೇತ್ರ ಕೇಳಿದ್ದೆವು. ಸಿದ್ದರಾಮಯ್ಯ ಅವರು 20-8 ಆಧಾರದಲ್ಲಿ ಹಂಚಿಕೆ ಮಾಡಿಕೊಳ್ಳೋಣ ಎಂದರು. ನಾನು
ಮರು ಮಾತಿಲ್ಲದೆ ಒಪ್ಪಿದ್ದೇನೆ. ಇದರಲ್ಲಿ ತ್ಯಾಗದ ಪ್ರಶ್ನೆಯಲ್ಲ. ಬಿಜೆಪಿ ಸೋಲಿಸುವ ಗುರಿ ತಲುಪುವುದಷ್ಟೇ ನಮಗೆ ಮುಖ್ಯ.
ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ವಿಜಯಪುರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲವಲ್ಲ?
ಅಭ್ಯರ್ಥಿಗಳು ಇದ್ದಾರೆ. ಸಮರ್ಥರ ಶೋಧ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭೆ ಸೀಟು ಗೆದ್ದ
ಉದಾಹರಣೆಯೂ ಇದೆ. ಅಲ್ಲಿ ನಮಗೆ ಶಕ್ತಿ ಖಂಡಿತ ಇದೆ. ಉಡುಪಿ-ಚಿಕ್ಕಮಗಳೂರು ಭಾಗದಲ್ಲೂ ತೀರಾ ಕಡಿಮೆ
ಇಲ್ಲ. ವಿಜಯಪುರದಲ್ಲಿ ನಮ್ಮ ಇಬ್ಬರು ಶಾಸಕರು ಇಲ್ಲವೇ. ಕಳೆದ ಬಾರಿ ಮುಸ್ಲಿಂ ಸಮುದಾಯ ನಮ್ಮ ಪಕ್ಷದ
ಕೈ ಹಿಡಿದಿದ್ದರೆ ಇನ್ನಷ್ಟು ಶಕ್ತಿ ಸಿಗುತ್ತಿತ್ತು.
ಎರಡೂ ಪಕ್ಷಗಳ ಜಂಟಿ ಪ್ರಚಾರ ವರ್ಕ್ ಔಟ್ ಆಗುತ್ತಾ?
ಖಂಡಿತ. ರಾಹುಲ್ಗಾಂಧಿಯವರು ನಾವು ಒಂದೇ ವೇದಿಕೆಗೆ ಬಂದು ಸಂದೇಶ ರವಾನಿಸಿದ ಮೇಲೆ ಅದು ತಳಮಟ್ಟದಲ್ಲಿ ವರ್ಕ್ ಔಟ್ ಆಗಲೇಬೇಕಲ್ಲವೇ.
ರಾಜ್ಯದ ಕಾಂಗ್ರೆಸ್ ನಾಯಕರು ಸಂಪೂರ್ಣ ಮನಸ್ಸಿನಿಂದ ಪ್ರಚಾರಕ್ಕೆ ಬರ್ತಾರಾ?
ನೀವ್ಯಾಕೆ ಆ ಪ್ರಶ್ನೆ ಕೇಳುತ್ತಿದ್ದೀರಿ ಎಂಬುದು ನನಗೆ ಗೊತ್ತಿದೆ.ಜೆಡಿಎಸ್ನಿಂದ ನಾನು, ಕುಮಾರಸ್ವಾಮಿ, ಎಚ್.ವಿಶ್ವ ನಾಥ್,ಕಾಂಗ್ರೆಸ್ನಿಂದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ದಿನೇಶ್
ಗುಂಡೂರಾವ್, ಜಮೀರ್ ಸಮೇತ ನಾವೆಲ್ಲರೂ ಖಂಡಿತ ವಾಗಿ ಒಟ್ಟಿಗೆ ಹೋಗ್ತೀವೆ. ನಿಮಗೆ ಆ ಅನುಮಾನವೇ ಬೇಡ.
ನೀವೇ ಮುಂದಿನ ದಿನಗಳಲ್ಲಿ ನೋಡ್ತೀರಿ.
ಮಂಡ್ಯ ಹಾಗೂ ಹಾಸನದಲ್ಲಿ ಅಪಸ್ವರ ಇದೆಯಲ್ಲಾ?
ಕುಟುಂಬ ರಾಜಕಾರಣ ಎಂಬ ಆರೋಪಕ್ಕೆ ಮತದಾರರರು ಉತ್ತರ ಕೊಡ್ತಾರೆ. ನಾನು ಆ ಬಗ್ಗೆ ಮಾತನಾಡಲ್ಲ, ಮಂಡ್ಯದಲ್ಲಿ ನಮ್ಮ ಹಳೆಯ ಸ್ನೇಹಿತರು ಸ್ವಲ್ಪ ಮುಂದೆ ಹೋಗಿಬಿಟ್ಟಿದ್ದಾರೆ. ಅದೂ ನನಗೆ ಗೊತ್ತು. ಆದರೆ, ಮೂಲ ಕಾಂಗ್ರೆಸ್ಸಿಗರು ನಮ್ಮ ಜತೆಯೇ ಇದ್ದಾರೆ. ಹಾಸನದಲ್ಲೂ ಮೂಲ ಕಾಂಗ್ರೆಸ್ಸಿಗರು ಪಕ್ಷದ ತೀರ್ಮಾನ ಒಪ್ಪಿದ್ದಾರೆ.
ಸಿದ್ದರಾಮಯ್ಯ ಅವರು ಎರಡೂ ಜಿಲ್ಲೆಗಳ ನಾಯಕರ ಜತೆ ಮಾತನಾಡಿದ್ದಾರೆ.
ನಿಮ್ಮ ಸ್ಪರ್ಧೆ ಯಾಕೆ ಇಷ್ಟು ಸಸ್ಪೆನ್ಸ್?
ಅಯ್ಯೋ ರಾಮ ಸಸ್ಪೆನ್ಸ್ ಏನಿದೆ ಸಾರ್. ನಾನು ಚುನಾವಣೆಗೆ ನಿಲ್ಲಬಾರದು ಎಂದು ತೀರ್ಮಾ ನಿಸಿದ್ದೆ. ಅದನ್ನು ಸಂಸತ್ನಲ್ಲೂ ಹೇಳಿದ್ದೆ. ಆಗ, ಬಿಜೆಪಿ ಮೂಲದ ಸ್ಪೀಕರ್ ಮೇಡಂ ಅವರೇ ನೀವು ಆ ರೀತಿ ಹೇಳಬಾರದು. ನೀವು ನಿಲ್ಲುವುದು ಬಿಡುವುದು ಜನರ ತೀರ್ಮಾನ ಎಂದಿದ್ದರು. ಸೆಂಟ್ರಲ್ ಹಾಲ್ನಲ್ಲಿಯೂ ಫರೂಕ್ ಅಬ್ದುಲ್ಲಾ ಸೇರಿ
ಹಲವು ನಾಯಕರು ನೀವು ಆ ರೀತಿ ಹೇಳಬಾರದಿತ್ತು. ರಾಷ್ಟ್ರ ರಾಜಕಾರಣಕ್ಕೆ ನಿಮ್ಮ ಮಾರ್ಗದರ್ಶನ
ಆಗತ್ಯ ಎಂದು ಹೇಳಿದರು. ಹಾಸನದಲ್ಲಿ ಪ್ರಜ್ವಲ್ ನಿಲ್ತಾನೆ ಎಂದು ಮೊದಲೇ ಹೇಳಿದ್ದೆ.
ಅಂತಿಮವಾಗಿ ನಿಮ್ಮ ಸ್ಪರ್ಧೆ ಎಲ್ಲಿ?
ತುಮಕೂರು ಕ್ಷೇತ್ರದಿಂದಲೂ ಒತ್ತಡ ಇದೆ, ಬೆಂಗಳೂರು ಉತ್ತರ ಕ್ಷೇತ್ರದಿಂದಲೂ ಒತ್ತಡ ಇದೆ. ನಾನು ಮುಖ್ಯಮಂತ್ರಿಯಾದಾಗ ತುಮಕೂರು ಜಿಲ್ಲೆ ಯಲ್ಲಿ 9 ಜನ ನಮ್ಮ ಪಕ್ಷದ ಶಾಸಕರು ಆಯ್ಕೆಯಾಗಿದ್ದರು. ಆ ಜಿಲ್ಲೆ ನಮ್ಮ ಭದ್ರಕೋಟೆ. ನನ್ನ ಸ್ಪರ್ಧೆ ಬಗ್ಗೆ 24 ಗಂಟೆಗಳಲ್ಲಿ ನಿಮಗೆ ಗೊತ್ತಾಗಬಹುದು.
ಕಾಂಗ್ರೆಸ್-ಜೆಡಿಎಸ್ ಜತೆಗೂಡಿ ಚುನಾವಣೆಗೆ ಹೋದರೆ ನಿಜಕ್ಕೂ ಲಾಭವಾಗುತ್ತಾ?
ಇಪ್ಪತ್ತು ಸ್ಥಾನ ಗೆದ್ದೇ ಗೆಲೆ¤àವೆ. ನಿಮಗ್ಯಾಕೆ ಡೌಟ್. ನನಗೂ ಐವತ್ತು ವರ್ಷಕ್ಕೂ ಹೆಚ್ಚಿನ ರಾಜಕೀಯ ಅನುಭವ ಇದೆ. ಬಿಜೆಪಿ ಶಕ್ತಿ ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟಿದೆ, ಯಾಕಿದೆ ಎಂಬುದೂ ಗೊತ್ತಿದೆ.
ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಕಳೆದ ಬಾರಿ ಜೆಡಿಎಸ್ ಸ್ಪರ್ಧೆ ಮಾಡಿದ್ದರಿಂದಲೇ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಯಿತು ಅಂತಾರಲ್ಲಾ?
ಈಗ, ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದೆಯಲ್ಲ. ನಮ್ಮ ಪಕ್ಷದ ಶಕ್ತಿಯೂ ಕಾಂಗ್ರೆಸ್ಗೆ ಆ ಎರಡೂ ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಧಾರೆ ಎರೆಯುತ್ತೇವೆ. ಅಷ್ಟೇ ಅಲ್ಲ 20 ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಕಾರ್ಯಕರ್ತರು
ಮುಖಂಡರ ಬೆಂಬಲ ಕಾಂಗ್ರೆಸ್ಗೆ ಸಿಗುವುದರಲ್ಲಿ ಯಾವುದೇ ಅನುಮಾನವೇ ಬೇಡ.
ರಾಷ್ಟ್ರ ರಾಜಕಾರಣದ ಬಗ್ಗೆ
ಮಾಧ್ಯಮಗಳ ವರದಿಗೂ, ವಾಸ್ತವಾಂಶಕ್ಕೂ ವ್ಯತ್ಯಾಸವಿದೆ. ಐದು ವರ್ಷಗಳಲ್ಲಿ ಕೃಷಿಕ ವರ್ಗ, ಜನಸಾಮಾನ್ಯರು ಕಷ್ಟ ಅನುಭವಿಸಿದ್ದಾರೆ.
ಚುನಾವಣೆ ನಂತರ ಮಹಾಘಟಬಂಧನ ಮತ್ತಷ್ಟು ಶಕ್ತಿಶಾಲಿಯಾಗಲಿದೆ. ಇದು ಮೋದಿ-ಅಮಿತ್ ಶಾಗೆ ಗೊತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಮೋಡಿ ಬಹಳ ದಿನ ನಡೆಯಲ್ಲ, ವಾಜಪೇಯಿ
ಅವರಿಗೂ, ಮೋದಿಗೂ ವ್ಯತ್ಯಾಸವಿದೆ.
ಕೇರಳ, ಪಶ್ಚಿಮ ಬಂಗಾಳ, ಆಂಧ್ರ, ತೆಲಂಗಾಣ, ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಶಕ್ತಿ ಕಡಿಮೆ, ಹಾಗೆಂದು ನಾನು ಅವರ ಬಗ್ಗೆ ಲಘುವಾಗಿ ಮಾತನಾಡಲ್ಲ
ಈಗ ದೂರವಾಗಿರುವ ಮಹಾಘಟಬಂಧನ್ ನಲ್ಲಿನ ಪಕ್ಷಗಳು ಚುನಾವಣೆ ನಂತರ ಮತ್ತೆ ಒಂದಾಗಲಿವೆ
ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ರಾಹುಲ್ ಪ್ರಧಾನಿಯಾಗಲು ನನ್ನ ಸಹಮತವಿದೆ. ಆ ಬಗ್ಗೆ ಬಿಜೆಪಿಗೆ ಚಿಂತೆ ಬೇಡ
ನೋಟು ಅಮಾನ್ಯ, ಕೃಷಿ ವಲಯದ ಸಮಸ್ಯೆಮುಂದಿಟ್ಟು ಚುನಾವಣೆಗೆ ಹೋಗುತ್ತೇವೆ. ಸಮ್ಮಿಶ್ರ ಸರ್ಕಾರದ ಒಂಭತ್ತು ತಿಂಗಳ ಸಾಧನೆ ಬಗ್ಗೆಯೂ ಹೇಳುತ್ತೇವೆ
ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ