ಬಿಜೆಪಿಗೆ ಡೈರಿಯಾಘಾತ;ವರಿಷ್ಠರಿಗೆ 1,800 ಕೋಟಿ ಕೊಟ್ಟಿದ್ದ ಬಿಎಸ್ವೈ
Team Udayavani, Mar 23, 2019, 12:30 AM IST
ಹೊಸದಿಲ್ಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಮತ್ತೂಂದು ಡೈರಿ ಬಾಂಬ್ ಸ್ಫೋಟವಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಸಿಎಂ ಆಗಿದ್ದ ವೇಳೆ ಬಿಜೆಪಿ ವರಿಷ್ಠರಿಗೆ 1,800 ಕೋಟಿ ರೂ. ಪಾವ ತಿಸಿದ್ದರು ಎಂದು ಕಾಂಗ್ರೆಸ್ ನೇರವಾಗಿ ಆರೋಪಿಸಿದೆ. ಇಷ್ಟೇ ಅಲ್ಲ, ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಆಡ್ವಾಣಿ, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಅವರಿಗೆ ಹಣ ಸಂದಾಯ ಮಾಡಿರುವ ಬಗ್ಗೆ ಸ್ವತಃ ಬಿಎಸ್ವೈ ಅವರೇ ಡೈರಿ ಬರೆದಿಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುಜೇìವಾಲ ಆಪಾದಿಸಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿ.ಎಸ್. ಯಡಿ ಯೂರಪ್ಪ, “ನೀವು ಮಾಡಿರುವ ಆರೋಪ ಸಾಬೀತು ಮಾಡಿ, ಇಲ್ಲವೇ ಮಾನನಷ್ಟ ಮೊಕದ್ದಮೆ ಎದುರಿಸಲು ಸಿದ್ಧರಾಗಿ’ ಎಂದು ಎಚ್ಚರಿಕೆ ನೀಡಿದ್ದಾರೆ. ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೂ, ಈ ಆರೋಪಗಳನ್ನು ತಳ್ಳಿಹಾಕಿದ್ದು, ಎಲ್ಲ “ನಕಲಿ ವಿವಾದ’ಗಳು ಮುಗಿದ ಅನಂತರ ಈಗ ಕಾಂಗ್ರೆಸ್ ಫೋರ್ಜರಿ ಮೊರೆ ಹೋಗಿದೆ ಎಂದು ಟೀಕಿಸಿದ್ದಾರೆ.
ಸುರ್ಜೇವಾಲ ಹೇಳಿದ್ದೇನು?
ಆಂಗ್ಲ ಪಾಕ್ಷಿಕ “ದಿ ಕಾರವಾನ್’ ಪತ್ರಿಕೆಯ ವರದಿ ಯನ್ನು ಉಲ್ಲೇಖೀಸಿ ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲ, ಸಂಬಂಧಿತ ದಾಖಲೆಗಳನ್ನೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಬಿಜೆಪಿ ಹೈಕಮಾಂಡ್ಗೆ 1,000 ಕೋಟಿ ರೂ ನೀಡಿದ್ದರು. ಅಷ್ಟೇ ಅಲ್ಲ, ಕೇಂದ್ರ ಸಚಿವರಾದ ಜೇಟ್ಲಿ, ನಿತಿನ್ ಅವರಿಗೆ ತಲಾ 150 ಕೋಟಿ ರೂ. ಪಾವತಿ ಮಾಡಿದ್ದರು. ಗಡ್ಕರಿ ಪುತ್ರಿಯ ವಿವಾಹಕ್ಕೆ ಹೆಚ್ಚುವರಿಯಾಗಿ 10 ಕೋಟಿ ರೂ. ಪಾವತಿಸಿದ್ದರು ಎಂದು ಹೇಳಿದ ಸುಜೇìವಾಲ, ದಾಖಲೆಗಳನ್ನು ಪ್ರದರ್ಶಿಸಿದ್ದಾರೆ. ರಾಜನಾಥ್ ಸಿಂಗ್ಗೆ 100 ಕೋಟಿ ರೂ. ಬಿಜೆಪಿ ನಾಯಕರಾಗಿರುವ ಆಡ್ವಾಣಿ, ಜೋಶಿಗೆ ತಲಾ 50 ಕೋಟಿ ರೂ. ಪಾವತಿ ಮಾಡಲಾಗಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿದೆ ಎಂದಿದ್ದಾರೆ.
ಈ ದಾಖಲೆಗಳು 2017ರಿಂದ ಆದಾಯ ತೆರಿಗೆ ಇಲಾಖೆಯ ವಶದಲ್ಲಿದೆಯಾದರೂ ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಪ್ರಧಾನಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ದಾಖಲೆಗಳ ಮೂಲ ಸಂಶಯಾಸ್ಪದ: ಸಿಬಿಡಿಟಿ
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿರುವ ದಾಖಲೆಗಳ ಬಗ್ಗೆ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಸ್ಪಷ್ಟನೆ ನೀಡಿದೆ. 2017ರ ಆ.2ರಂದು ಶೋಧ ಕಾರ್ಯಾಚರಣೆ ವೇಳೆ ಡೈರಿ ಪುಟಗಳ ನಕಲು ಪತ್ತೆಯಾಗಿದ್ದವು. ಅದು ಕರ್ನಾಟಕದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ಗೆ ಸೇರಿದವಾಗಿದ್ದವು. ಅವು 2009ರ ಕರ್ನಾಟಕ ವಿಧಾನಸಭೆ ಡೈರಿಯಲ್ಲಿನ ಅಂಶಗಳಾಗಿದ್ದವು. ಶೋಧ ಕಾರ್ಯಾಚರಣೆಯಲ್ಲಿ ಕೆಲವೊಂದು ಬಿಡಿ ದಾಖಲೆಗಳು ಸಿಕ್ಕಿವೆ. ಅವುಗಳಲ್ಲಿನ ಕೈಬರಹ ಮತ್ತು ಸಹಿಗಳನ್ನು ಪರಿಶೀಲಿಸಿದ ಬಳಿಕ ಅದರ ಮೂಲ ದೃಢೀಕರಿಸುವುದಕ್ಕಾಗಿ ಹೈದರಾಬಾದ್ನಲ್ಲಿರುವ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಶಾಲೆಗೆ ಕಳುಹಿಸಲಾಗಿದೆ. ಅದನ್ನು ಖಚಿತಪಡಿಸಲು ದಾಖಲೆಗಳ ಮೂಲ ಪ್ರತಿ ಅಗತ್ಯವಾಗಿದೆ. ಡಿ.ಕೆ.ಶಿವಕುಮಾರ್ ಅದರ ಮೂಲಗಳನ್ನು ನೀಡಿಲ್ಲ. ವಿಧಿ ವಿಜ್ಞಾನ ಪ್ರಯೋಗ ಶಾಲೆ ಕೂಡ ದಾಖಲೆಗಳ ಮೂಲ ಪ್ರತಿ ಇಲ್ಲದೆ, ನಕಲಿನ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದಿದೆ.
ಆರೋಪ ಅಪ್ರಸ್ತುತ,ಸುಳ್ಳಿನ ಕಂತೆ
ಬೆಂಗಳೂರು: ಭ್ರಷ್ಟಾಚಾರ ಆರೋಪವನ್ನು ತಳ್ಳಿ ಹಾಕಿರುವ ಯಡಿಯೂರಪ್ಪ, ಕಾಂಗ್ರೆಸ್ ನಾಯ ಕರು ಪ್ರಸ್ತಾವಿಸಿರುವ ವಿಷಯಗಳು ಅಪ್ರಸ್ತುತ ಮತ್ತು ಸುಳ್ಳಿನ ಕಂತೆ ಎಂದು ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ನಾಯಕರು ವೈಚಾರಿಕವಾಗಿ ದಿವಾಳಿಯಾಗಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸಾರ್ವಜನಿಕವಾಗಿ ಚರ್ಚಿಸಲು ಯಾವುದೇ ಅಭಿವೃದ್ಧಿಪರ ವಿಚಾರಗಳಿಲ್ಲ. ದಿನ ಕಳೆದಂತೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಜನಪ್ರಿಯತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹತಾಶೆಗೊಂಡು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.
ಈಗ ಪ್ರಸ್ತಾಪಿಸಿರುವ ಭ್ರಷ್ಟಾಚಾರ ಆರೋಪದ ಕುರಿತು ಈ ಹಿಂದೆಯೇ ವಿಚಾರಣೆ ನಡೆದು ಇದಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲವೂ ನಕಲಿ ಎಂಬುದು ಸಾಬೀತಾಗಿದೆ. ಹಿಂದೆಯೇ ಆದಾಯ ತೆರಿಗೆ ಇಲಾಖೆಯು ದಾಖಲೆಗಳನ್ನು ಮತ್ತು ನನ್ನ ಕೈ ಬರಹ, ಸಹಿಯನ್ನೂ ತಪಾಸಣೆಗೆ ಒಳಪಡಿಸಿದ್ದು, ಎಲ್ಲವೂ ನಕಲಿ ಎಂಬುದು ದೃಢಪಟ್ಟಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಾಸಕರಿಗೂ ಕೋಟಿ ಕೋಟಿ?
ಎಂಟು ಶಾಸಕರಿಗೆ 2008ರಲ್ಲಿ ಸರಕಾರಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಹಣ ಪಾವತಿ ಸಲಾಗಿದೆ. 7 ಶಾಸಕರಿಗೆ 20 ಕೋಟಿ, ಓರ್ವ ರಿಗೆ 10 ಕೋಟಿ ರೂ. ನೀಡಲಾಗಿತ್ತು. ಈ ಮೊತ್ತವೆಲ್ಲವನ್ನೂ ಗಾಲಿ ಜನಾರ್ದನ ರೆಡ್ಡಿಯವರೇ ನೀಡಿದ್ದರು ಮತ್ತು ಒಟ್ಟು 26 ಮಂದಿಗೆ 5 ಕೋಟಿ ರೂ.ಗಳಿಂದ 500 ಕೋಟಿ ರೂ.ಗಳ ವರೆಗೆ ಪಾವತಿ ಮಾಡಿರುವ ಬಗ್ಗೆ ಮತ್ತು ಒಟ್ಟು 2,690 ಕೋಟಿ ರೂ. ನೀಡಿಕೆ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿದೆ ಎಂದು ವರದಿಯಲ್ಲಿ ಪ್ರಸ್ತಾವಿಸಲಾಗಿದೆ.
ಲೋಕಪಾಲ ತನಿಖೆಯಾಗಲಿ
ಡೈರಿಯ ಎಲ್ಲ ಪುಟಗಳಲ್ಲೂ ಯಡಿಯೂರಪ್ಪ ಅವರೇ ಸಹಿ ಮಾಡಿದ್ದಾರೆ. ಇದು 1,800 ಕೋಟಿ ರೂ.ಗಳ ಭ್ರಷ್ಟಾಚಾರ. ಹೀಗಾಗಿ ಹೊಸದಾಗಿ ರಚನೆಯಾಗಿರುವ ಲೋಕಪಾಲದಿಂದ ತನಿಖೆಯಾಗಲಿ ಎಂದು ಸುಜೇìವಾಲ ಆಗ್ರಹಿಸಿದ್ದಾರೆ.
ಬಿಜೆಪಿ ತಿರುಗೇಟು
ಕಾಂಗ್ರೆಸ್ ಮಾಡಿರುವ ಆರೋಪಗಳನ್ನು ಬಿಜೆಪಿ ಸಾರಾಸಗಟಾಗಿ ತಿರಸ್ಕರಿಸಿದೆ. ಹಲವು ವಿಚಾರಗಳ ಬಗ್ಗೆ ಮಾಡಿರುವ ಅಂಶ ಸುಳ್ಳು ಎಂದು ಸಾಬೀತಾದ ಬಳಿಕ ಕಾಂಗ್ರೆಸ್ನಿಂದ ಮತ್ತೂಂದು ಪ್ರಯತ್ನ ನಡೆದಿದೆ. ಹಲವು ಹಗರಣಗಳಲ್ಲಿ ಆ ಪಕ್ಷದ ನಾಯಕರೇ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಲೇವಡಿ ಮಾಡಿದ್ದಾರೆ.
ಯಡಿಯೂರಪ್ಪನವರೇ ಖುದ್ದಾಗಿ ಆರೋಪಗಳನ್ನು ನಿರಾಕರಿಸಿರುವಾಗ ಕಾಂಗ್ರೆಸ್ ವಿನಾಕಾರಣ ಸುಳ್ಳು ಹೇಳುತ್ತಿದೆದಿದ್ದಾರೆ.
ಬಿಜೆಪಿಯ ಎಲ್ಲ ಚೌಕಿದಾರರೂ ಭ್ರಷ್ಟರೇ. ನಮೋ, ಅರುಣ್ ಜೇಟ್ಲಿ , ರಾಜನಾಥ್ ಸಿಂಗ್..
-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಕಾಂಗ್ರೆಸ್ನ ಪ್ರಚಾರವೆಲ್ಲ ಹಳಿ ತಪ್ಪಿದೆ. ಈಗ ನಕಲಿನ ಅಂಶವೂ ಅವರನ್ನು ಕಾಪಾಡದು. ಕಾಂಗ್ರೆಸ್ನ ಸಚಿವ ರೊಬ್ಬರು ನೀಡಿದ ದಾಖಲೆಗಳು ರಾಹುಲ್ ಗಾಂಧಿ ನಾಯಕತ್ವದ ಕೌಶಲದಂತಿದೆ.
-ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಯಾರಿಗೆ ಎಷ್ಟು ಕೋಟಿ (ಡೈರಿಯಲ್ಲಿ ಉಲ್ಲೇಖೀತ ಮಾಹಿತಿ)
ಯಾರಿಗೆಷ್ಟು ಕೋಟಿ?
(ಡೈರಿಯಲ್ಲಿ ಉಲ್ಲೇಖೀತ ಮಾಹಿತಿ)
ಯಾರು? ಮೊತ್ತ
(ಕೋಟಿ ರೂ.ಗಳಲ್ಲಿ)
ಅರುಣ್ ಜೇಟ್ಲಿ 150
ನಿತಿನ್ ಗಡ್ಕರಿ 150
ಗಡ್ಕರಿ ಪುತ್ರಿಯ 10 ಕೋಟಿ ರೂ.
ವಿವಾಹಕ್ಕೆ ಪ್ರತ್ಯೇಕ ನೀಡಿಕೆ
ರಾಜನಾಥ್ ಸಿಂಗ್ 100
ಎಲ್.ಕೆ.ಅಡ್ವಾಣಿ 50
ಎಂ.ಎಂ.ಜೋಶಿ 50
ನ್ಯಾಯಮೂರ್ತಿಗಳಿಗೆ 250
ನ್ಯಾಯವಾದಿಗಳಿಗೆ 50
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಣೆ
ವಕೀಲರಿಗೂ ತಟ್ಟಿದ ಬೇಸಿಗೆ ಬಿಸಿ: ಕಪ್ಪು ಕೋಟ್ಗೆ ವಿನಾಯಿತಿ
NDA; ಮಂಡ್ಯಕ್ಕೆ ಬಂದಿರುವ ಕುಮಾರಸ್ವಾಮಿಯನ್ನು ಸೋಲಿಸಿ ಮನೆಗೆ ಕಳಿಸಿ: ಸಿದ್ದರಾಮಯ್ಯ
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
ಮತ್ತೆ 60 ಮಂದಿಯಿಂದ ಉಮೇದುವಾರಿಕೆ; 2ನೇ ಹಂತದ ಚುನಾವಣೆಗೆ ಈವರೆಗೆ 168 ಮಂದಿ ಕಣಕ್ಕೆ