ಜನ ಮೆಚ್ಚಿದ ಅಂಡರ್ವರ್ಲ್ಡ್
Team Udayavani, Mar 17, 2017, 3:50 AM IST
“ನಿಜಕ್ಕೂ ನನಗೆ ಈ ಸಿನಿಮಾ ಈ ಮಟ್ಟಕ್ಕೆ ಹೋಗುತ್ತೆ ಅಂತ ನಿರೀಕ್ಷೆ ಇರಲಿಲ್ಲ…’
ಹೀಗೆ ನಗುಮೊಗದಲ್ಲೇ ಹೇಳುತ್ತಾ ಹೋದರು ನಿರ್ದೇಶಕ ಪಿ.ಎನ್.ಸತ್ಯ. ಅವರು ಹೇಳಿಕೊಂಡಿದ್ದು “ಬೆಂಗಳೂರು ಅಂಡರ್ವರ್ಲ್ಡ್’ ಸಿನಿಮಾ ಬಗ್ಗೆ. ಚಿತ್ರ ಸಕ್ಸಸ್ ಆಗಿದೆ. ಆ ಖುಷಿ ಹಂಚಿಕೊಳ್ಳಲೆಂದೇ ಸತ್ಯ ಮತ್ತು ತಂಡ ಪತ್ರಕರ್ತರ ಮುಂದೆ ಬಂದು ಕುಳಿತಿತ್ತು. ಮೊದಲು ಮೈಕ್ ಹಿಡಿದು ಮಾತಿಗೆ ಮುಂದಾಗಿದ್ದು ಸತ್ಯ. “ಈ ಚಿತ್ರದ ಟೈಟಲ್ ಇಟ್ಟು ಶುರುಮಾಡಿದಾಗಿನಿಂದಲೂ ಎಲ್ಲೋ ಒಂದು ಕಡೆ ಸಣ್ಣ ನಂಬಿಕೆ ಇತ್ತು. ಆದರೆ, ಈಗ ಜನ ಮೆಚ್ಚಿಕೊಂಡಿರುವುದನ್ನು ಗಮನಿಸಿದರೆ, ಇದು ನನ್ನ ನಿರೀಕ್ಷೆ ಮೀರಿ ಖುಷಿಕೊಟ್ಟಿದೆ. ಮಾಮೂಲೀ ಶೈಲಿ ಬಿಟ್ಟು ಬೇರೆ ಶೇಡ್ನಲ್ಲಿ ಈ ಚಿತ್ರ ಮಾಡಿದ್ದೆ. ನನ್ನ ಮತ್ತು ನನ್ನ ತಂಡದ ಶ್ರಮಕ್ಕೆ ಫಲ ಸಿಕ್ಕಿದೆ. ಈ ಮಟ್ಟಕ್ಕೆ ಸಿನಿಮಾ ರೀಚ್ ಆಗಲು ಮಾಧ್ಯಮ ಕಾರಣ. ಒಳ್ಳೆಯ ವಿಮರ್ಶೆಗಳು ಬಂದಿದ್ದರಿಂದಲೇ ಜನ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ನನ್ನೊಬ್ಬನಿಂದ ಸಿನಿಮಾ ಯಶಸ್ಸು ಕಂಡಿಲ್ಲ. ನನ್ನ ತಂತ್ರಜ್ಞರು, ಕಲಾವಿದರು, ನಿರ್ಮಾಪಕರ ಸಹಕಾರ, ಪ್ರೋತ್ಸಾಹದಿಂದ ಈ ಯಶಸ್ಸು ಸಿಕ್ಕಿದೆ. ಆದಿತ್ಯ ಅವರಿಗೆ ಕಥೆ ಹೇಳಿದಾಗಿನಿಂದಲೂ ಬೆನ್ನೆಲುಬಾಗಿ ನಿಂತರು. ಒಳ್ಳೇ ತಂಡ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಇಂತಹ ಸಕ್ಸಸ್ ನಿರೀಕ್ಷಿಸಲು ಸಾಧ್ಯ’ ಎಂದರು ಸತ್ಯ.
ಆದಿತ್ಯ ಅವರಿಗೆ ಸಿನಿಮಾ ಮೇಲೆ ಮೊದಲೇ ನಂಬಿಕೆ ಇತ್ತಂತೆ. “ಸತ್ಯ ಅವರ ಕಾಂಬಿನೇಷನ್ನ ಮೊದಲ ಚಿತ್ರವಾದ್ದರಿಂದ, ಎಲ್ಲರೂ ಉತ್ಸಾಹದಿಂದ ಕೆಲಸ ಮಾಡಿದ್ದರು. ಸಿನಿಮಾ ನೋಡಿದವರೆಲ್ಲರೂ, ನಟನೆ, ಮೇಕಿಂಗ್, ಕಥೆ ಹಾಗೂ ಕಂಟೆಂಟ್ ಬಗ್ಗೆ ಮಾತಾಡುತ್ತಿದ್ದಾರೆ. ಈ ರೀತಿಯ ಚಿತ್ರಗಳಿಗೆ ಎಲ್ಲೆಡೆ ಪ್ರಶಂಸೆ ಸಿಕ್ಕಿದ್ದು ನೋಡಿ ಖುಷಿಯಾಗಿದೆ. ಮೆಚ್ಚುಗೆಯಲ್ಲೂ, ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಸಿನಿಮಾಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಮೊದಲು ಮಾಧ್ಯಮ ಕೊಟ್ಟ ಪ್ರೋತ್ಸಾಹದಿಂದಲೇ ಚಿತ್ರಕ್ಕೆ ಇಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದೇ ಪ್ರೋತ್ಸಾಹ ಮುಂದೆಯೂ ಇರಲಿ’ ಎಂದರು ಆದಿತ್ಯ.
ನಟಿ ಭಾವನಾಗೆ ಮೊದಲು ಸತ್ಯ ಕಥೆ ಮತ್ತು ಪಾತ್ರದ ಬಗ್ಗೆ ಹೇಳಿದಾಗ, “ಅಂತಹ ಪಾತ್ರಗಳಿಗೆ ನನ್ನನ್ನು ಕರೀತೀರಾ’ ಅಂತ ಹೇಳಿದ್ದೆ. ಆಮೇಲೆ ಐದು ನಿಮಿಷ ಕಥೆ, ಪಾತ್ರ ಬಗ್ಗೆ ವಿವರಿಸುತ್ತೇನೆ, ಆಮೇಲೆ ಇಷ್ಟವಾದರೆ ಮಾಡಿ ಅಂದರು. ಸತ್ಯ ಹೇಳಿದ ಕಥೆ, ಪಾತ್ರ ಇಷ್ಟವಾಯ್ತು. ವೇಶಾವೃತ್ತಿಯಲ್ಲಿರುವ ಹೆಣ್ಣಿಗೂ ಭಾವನೆಗಳಿರುತ್ತವೆ ಎಂಬುದನ್ನಿಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಚಿತ್ರ ಎಲ್ಲರಿಗೂ ಇಷ್ಟವಾಗಿದೆ ಅಂತ ಕೇಳಿ ಖುಷಿಯಾಗಿದೆ ಎಂದರು ಭಾವನಾ.
ನಾಯಕಿ ಪಾಯಲ್ ರಾಧಾಕೃಷ್ಣ ಅವರಿಗೆ ಮೊದಲ ಸಿನಿಮಾ ಆಗಿದ್ದರಿಂದ ಭಯ ಇತ್ತಂತೆ. ಆದರೆ, ಸತ್ಯ ನಿರ್ದೇಶನ, ಆದಿತ್ಯ ಹೀರೋ ಇದ್ದುದರಿಂದ ಒಂದು ಕಡೆ ನಿರೀಕ್ಷೆಯೂ ಇತ್ತಂತೆ. ಅದೀಗ ನಿಜವಾಗಿದೆ. ನನಗೆ ತೆರೆಯ ಮೇಲೆ ಅವಕಾಶ ಕಡಿಮೆ ಇದ್ದರೂ, ಒಳ್ಳೆಯ ಚಿತ್ರದ ಮೂಲಕ ನಾಯಕಿ ಆಗಿದ್ದೇನೆ ಎಂಬ ಖುಷಿ ಇದೆ ಎಂದರು ಪಾಯಲ್.
ವಿತರಕ ಮಲ್ಲಿಕಾರ್ಜುನ್ಗೆ ಸಿನಿಮಾ ಚೆನ್ನಾಗಿ ಹೋಗುತ್ತಿರುವ ಖುಷಿ ಒಂದು ಕಡೆಯಾದರೆ, ಮುಂದಿನ ವಾರ ಇನ್ನಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ಹಾಕುವ ಸಂತಸ ಇನ್ನೊಂದೆಡೆ. ಬಹಳಷ್ಟು ಜನ ಸಿನಿಮಾ ಕೇಳುತ್ತಿದ್ದಾರಂತೆ. ಹಂತ ಹಂತವಾಗಿ ಚಿತ್ರವನ್ನು ಎಲ್ಲೆಡೆ ಹಾಕುವುದಾಗಿ ಹೇಳಿಕೊಂಡರು ಮಲ್ಲಿಕಾರ್ಜುನ್. ರಾಜವರ್ಧನ್ಗೆ ಅವಕಾಶ ಬಂದಾಗ, ಅಂತಹ ಪಾತ್ರ ಮಾಡೋದಿಲ್ಲ ಅಂದರಂತೆ. ಆಮೇಲೆ ನಿರ್ದೇಶಕರು ಪಾತ್ರ ವಿವರಿಸಿದ ಬಳಿಕ ಒಪ್ಪಿದರಂತೆ. ಈಗ ಎಲ್ಲೇ ಹೋದರೂ, ರಾಜವರ್ಧನ್ ಅವರನ್ನು ಜನ ಗುರುತಿಸುತ್ತಿದ್ದಾರಂತೆ. ಅದು ಅವರಿಗೆ ಎಲ್ಲಿಲ್ಲದ ಖುಷಿಯಾಗಿದೆ.