ಮೊಂಬತ್ತಿ ಉರಿಯೋಕೆ ರೆಡಿಯಾಗಿದೆ!
Team Udayavani, Nov 24, 2017, 11:47 AM IST
ಅಂತೂ ಇಂತೂ ಮೊಂಬತ್ತಿ ಉರಿಯೋಕೆ ರೆಡಿಯಾಗಿದೆ. ಹೌದು, ಶ್ರೀನಿವಾಸ್ ಕೌಶಿಕ್ ನಿರ್ದೇಶನದ ಈ ಚಿತ್ರ ಕ್ರೈಮ್ ಮತ್ತು ಥ್ರಿಲ್ಲರ್ ಕಥೆ ಹೊಂದಿದೆ. ಇಲ್ಲಿ ಮಾನಸಿಕ ಖನ್ನತೆಗೆ ಒಳಗಾದ ವ್ಯಕ್ತಿಯೊಬ್ಬ ಅಪರಾಧ ಮಾಡುತ್ತಾನೆ. ಅವನನ್ನು ತನಿಖಾಧಿಕಾರಿಗಳು ಹೇಗೆಲ್ಲಾ ಪತ್ತೆ ಹಚ್ಚುತ್ತಾರೆ ಅನ್ನೋದೇ ಚಿತ್ರದ ಕಥೆ.
ಇಲ್ಲಿ ಪೋಷಕರು ಮಕ್ಕಳಿಗೆ ಒತ್ತಾಯವಾಗಿ ಓದುವುದನ್ನು ಮಾಡಿದರೆ, ಆ ಮಕ್ಕಳ ಮೇಲೆ ಎಂತಹ ಪರಿಣಾಮಗಳು ಬೀರುತ್ತವೆ ಹಾಗು ಅವರು ಹೇಗೆ ಕೆಟ್ಟ ಹಾದಿ ಹಿಡಿಯುತ್ತಾರೆ ಎಂಬುದನ್ನು ಹೇಳಲಾಗಿದೆ. ಇನ್ನು, ಮಕ್ಕಳಿಗೆ ಸ್ವತಂತ್ರ ಕೊಟ್ಟರೆ ಜವಾಬ್ದಾರಿ ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಲು ಸಾಧ್ಯ ಎಂಬ ಸಂದೇಶವೂ ಇಲ್ಲಿದೆ.
ಬೆಂಗಳೂರು, ಮಂಗಳೂರು ಸೇರಿದಂತೆ ಇತರೆ ಕಡೆ ಚಿತ್ರೀಕರಿಸಲಾಗಿದೆ. ರವಿಕುಮಾರ್ ನಾಯಕರಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ನೀತು ಇಲ್ಲಿ ಎಸಿಪಿ ಶಿವಾನಿಯಾಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಯತಿರಾಜ್ ಇತರರು ನಟಿಸಿದ್ದಾರೆ.
ಹಾಡೊಂದಕ್ಕೆ ಬಿಗ್ಬಾಸ್ ಖ್ಯಾತಿಯ ಸಂಜನಾ ಹೆಜ್ಜೆ ಹಾಕಿದರೆ, ಆರಂಭದ ಗೀತೆ ಬರೆದು ಹಾಡುವುದರ ಜತೆಗೆ ಚಂದನ್ಶೆಟ್ಟಿ ಕುಣಿದಿದ್ದಾರೆ. ಎಂ.ಪ್ರಭಾಕರ್ ಚಿತ್ರದ ನಿರ್ಮಾಪಕರು. ಜಾನ್ಪದ ರಚಿಸಿರುವ ಮೂರು ಹಾಡುಗಳಿಗೆ ಸತೀಶ್ಬಾಬು ಸಂಗೀತ ನೀಡಿದ್ದಾರೆ. ಈ ವಾರ ಸುಮಾರು 80 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಗೆ ಬರಲಿದೆ.