ಕಲ್ಪನೆ + ವಾಸ್ತವ = ಹಿಕೋರಾ
Team Udayavani, Nov 24, 2017, 11:48 AM IST
ಕನ್ನಡ ಚಿತ್ರರಂಗಕ್ಕೆ ನೀನಾಸಂ ಕೊಡುಗೆ ಅಪಾರ. ಪ್ರತಿಭಾವಂತ ನಾಯಕ, ನಾಯಕಿ ಹಾಗು ಹಲವು ಕಲಾವಿದರನ್ನು ಕೊಟ್ಟ ಹೆಮ್ಮೆ ನೀನಾಸಂಗಿದೆ. ಈಗ ನೀನಾಸಂ ಪ್ರತಿಭೆಗಳೆಲ್ಲಾ ಸೇರಿ “ಹಿಕೋರಾ’ ಎಂಬ ಸಿನಿಮಾ ಶುರು ಮಾಡಿದ್ದಾರೆ. ಇತ್ತೀಚೆಗೆ ಆ ಚಿತ್ರಕ್ಕೆ ಮುಹೂರ್ತ ನೆರವೇರಿತು. ಅಂದು ಆ ಹೊಸಬರ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ದರ್ಶನ್. ದರ್ಶನ್ ಆಗಮಿಸೋಕೆ ಕಾರಣ, ಅದೇ ನೀನಾಸಂ.
ದರ್ಶನ್ ಕೂಡ ನೀನಾಸಂನಲ್ಲೇ ಕಲಿತು ಬಂದವರು. ಅದರಲ್ಲೂ ಆ ಸಮಯದಲ್ಲಿ ದರ್ಶನ್ ಅವರಿಗೆ ಅಡುಗೆ ಮಾಡಿ ಅನ್ನ ಹಾಕಿದ್ದ ರತ್ನಾ ಶ್ರೀಧರ್ ಈಗ ಮೊದಲ ಬಾರಿಗೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆ ಪ್ರೀತಿಗೆ ದರ್ಶನ್ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿ ಹೋಗುತ್ತಿದ್ದಂತೆಯೇ, ಅತ್ತ “ಹಿಕೋರಾ’ ತಂಡ ಮಾಧ್ಯಮದ ಎದುರು ಬಂದು ಕುಳಿತುಕೊಂಡಿತು.
“ಇಷ್ಟಕ್ಕೆಲ್ಲಾ ಕಾರಣ ರತ್ನಕ್ಕ …’ ಅಂತ ಮಾತಿಗಿಳಿದರು ನಿರ್ದೇಶಕ ಕೃಷ್ಣಪೂರ್ಣ ನೀನಾಸಂ. ಇವರಿಗಿದು ಮೊದಲ ಚಿತ್ರ. “ರತ್ನಕ್ಕ, ನೀನಾಸಂನ ಸಾವಿರಾರು ಪ್ರತಿಭೆಗಳಿಗೆ ಅನ್ನ ಹಾಕಿದವರು. ಅವರಿಗೆ ಸಿನಿಮಾ ರಂಗ ಗೊತ್ತಿಲ್ಲ. ಆದರೆ, ನಾನೊಂದು ಕಥೆ ಅವರಿಗೆ ಹೇಳಿದಾಗ, ಈ ರೀತಿಯ ಕಥೆಯನ್ನೇಕೆ ತಾನು ಸಿನಿಮಾ ಮಾಡಬಾರದು ಅಂತ ಅನಿಸಿ, ಚಿತ್ರ ಮಾಡಬೇಕು ಅಂತ ಮುಂದೆ ಬಂದಿದ್ದಾರೆ.
ಇದೊಂದು ಸೈಕಲಾಜಿಕಲ್ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ. ಕಲ್ಪನೆ ಮತ್ತು ವಾಸ್ತವ ಈ ಎರಡನ್ನೂ ಬೆರೆಸಿ ಒಂದು ಮಜ ಎನಿಸುವ ಚಿತ್ರ ಕೊಡುವ ಉದ್ದೇಶವಿದೆ. ಇಲ್ಲಿ ಕಥೆಯೇ ಹೀರೋ. “ಹಿಕೋರಾ’ ಅಂದರೇನು? ಅದು ಸಸ್ಪೆನ್ಸ್, ಅದು ಸಂಸ್ಕೃತ ಪದನಾ? ಅದು ಸಸ್ಪೆನ್ಸ್. ಯಾವ ರೀತಿಯಲ್ಲಿ ಕಥೆ ಸಾಗುತ್ತೆ? ಅದು ಕೂಡ ಸಸ್ಪೆನ್ಸ್. ಹಾಗಾದರೆ, ಇಲ್ಲಿ ದರ್ಶನ್ ನಟಿಸ್ತಾರಾ? ಗೊತ್ತಿಲ್ಲ ಅದೂ ಸಸ್ಪೆನ್ಸ್.
ಹೀಗೆ ಕೇಳಿದ ಪ್ರಶ್ನೆಗಳಿಗೆಲ್ಲ ಸಸ್ಪೆನ್ಸ್ ಅಂತಾನೇ ಹೇಳುತ್ತಾ ಹೋದರು ನಿರ್ದೇಶಕರು. ಇದು ನಿರ್ದೇಶಕನೊಬ್ಬನ ಬದುಕಿನ ಕಥೆ. ಸಿನಿಮಾದೊಳಗಿನ ಸಿನಿಮಾ ಅಂದುಕೊಳ್ಳಬಹುದಾದರೂ, ವಾಸ್ತವ ಸಂಗತಿಗಳು ಇಲ್ಲಿರಲಿವೆ. ಒಂದಷ್ಟು ಕೇಳಿ, ಓದಿ, ನೋಡಿದ ಘಟನೆಗಳು ಇಲ್ಲಿ ಅನಾವರಣಗೊಳ್ಳಲಿವೆ’ ಎಂದಷ್ಟೇ ಹೇಳಿದ ನಿರ್ದೇಶಕರು, ಸಿನಿಮಾದಲ್ಲಿ ನಿರ್ದೇಶಕನ ಪಾತ್ರ ಅವರೇ ಮಾಡುತ್ತಿದ್ದಾರಂತೆ.
ಯಕ್ಷಗಾನ ಹಾಗು ಭರತನಾಟ್ಯ ಪ್ರಾಕಾರಗಳೂ ಇಲ್ಲಿವೆ. ಅದು ಸಿನಿಮಾಗೆ ಪೂರಕವೂ ಹೌದು. ಶೇ.70 ರಷ್ಟು ನೀನಾಸಂ ಪ್ರತಿಭೆಗಳಿವೆ. ಬೆಂಗಳೂರು, ಸಾಗರ, ಜೋಗ್ ಫಾಲ್ಸ್ ಇತರೆಡೆ ಚಿತ್ರೀಕರಣ ನಡೆಯಲಿದೆ. ಬಹುತೇಕ ಒಂದೇ ಮನೆಯಲ್ಲಿ ನಡೆಯುವ ಕಥೆ ಇದು ಅಂದರು ನಿರ್ದೇಶಕರು. ನಿರ್ಮಾಪಕಿ ರತ್ನ ಶ್ರೀಧರ್ಗೆ ಕಥೆ ಇಷ್ಟ ಆಗಿದ್ದಕ್ಕೆ ನಿರ್ಮಾಣ ಮಾಡಲು ಮುಂದಾದರಂತೆ.
ನನ್ನ ಈ ಪ್ರಯತ್ನಕ್ಕೆ ಪತಿ ಶ್ರೀಧರ್ ಸಾಥ್ ಕೊಟ್ಟಿದ್ದಕ್ಕೆ ಚಿತ್ರ ನಿರ್ಮಾಣ ಸಾಧ್ಯವಾಗಿದೆ. ನಾನು 1993ರಿಂದ 2012 ರವರೆಗೆ ನೀನಾಸಂನಲ್ಲಿ ನಟನೆ ತರಬೇತಿ ಪಡೆಯುವ ಕಲಾವಿದರಿಗೆ ಅಡುಗೆ ಮಾಡುತ್ತಿದ್ದೆ. ಅವರಿಗಾಗಿಯೇ ಈ ಚಿತ್ರ. ನಾನೀಗ ಗಡಿಕಟ್ಟೆ ಊರಲ್ಲಿ ತೋಟ ಮಾಡಿಕೊಂಡಿದ್ದೇನೆ. ಇದು ದಿಢೀರನೆ ತೆಗೆದುಕೊಂಡ ನಿರ್ಧಾರವಲ್ಲ. ಒಂದುವರೆ ವರ್ಷದಿಂದಲೂ ಕಥೆ ಕೆತ್ತನೆಯ ಕೆಲಸವಾಗಿದೆ.
ನಮ್ಮ ಸುತ್ತಮುತ್ತಲಿನ ಘಟನೆಗಳೇ ಕಥೆಯಲ್ಲಿ ಸಾಗುತ್ತವೆ. ಮೊದಲ ಪ್ರಯತ್ನ ನಿಮ್ಮ ಸಹಕಾರ ಬೇಕು’ ಅಂದರು ನಿರ್ಮಾಪಕರು. “ಕಟಕ’ ಬಳಿಕ ಸ್ಪಂದನಾಗೆ ಸಾಕಷ್ಟು ಕಥೆ ಬಂದವಂತೆ. ಆದರೆ, ಎಲ್ಲವೂ ಒಂದೇ ರೀತಿಯ ಕಥೆ, ಪಾತ್ರವಾಗಿದ್ದರಿಂದ ಯಾವುದನ್ನೂ ಒಪ್ಪಲಿಲ್ಲವಂತೆ. “ಹಿಕೋರಾ’ ಕಥೆ, ಪಾತ್ರ ವಿಭಿನ್ನವಾಗಿದ್ದು, ನಟನೆಗೂ ಹೆಚ್ಚು ಜಾಗವಿದೆ. ರಂಗಭೂಮಿ ಕಲಾವಿದರಿಗೆ ಇಂತಹ ಪಾತ್ರಗಳೇ ಬೇಕು.
ಅದಿಲ್ಲಿ ಸಿಕ್ಕಿದೆ. ನಾನಿಲ್ಲಿ ನಿರ್ದೇಶಕರೊಬ್ಬರ ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಿದ್ದೇ ಅಂದರು ಅವರು. ಯಶ್ಶೆಟ್ಟಿ ಅವರಿಗೆ ಹೀರೋಗಿಂತ ನೆಗೆಟಿವ್ ಪಾತ್ರ ಮಾಡುವ ಆಸೆಯಂತೆ. ಆದರೆ, “ಸೂಜಿದಾರ’ ನಂತರ ಈ ಕಥೆ ಕೇಳಿದ ಮೇಲೆ ಬಿಡಲಾಗಲಿಲ್ಲವಂತೆ. ಅವರಿಲ್ಲಿ ಸಿನಿಮಾದೊಳಗಿನ ನಿರ್ದೇಶಕರ ಹೀರೋ ಆಗಿಯೇ ನಟಿಸುತ್ತಿದ್ದಾರಂತೆ. ಇನ್ನು, ಪೂರ್ಣಚಂದ್ರ ತೇಜಸ್ವಿ ಹೊಸಬಗೆಯ ಹಾಡುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಿದ್ದಾರಂತೆ.
ಛಾಯಾಗ್ರಾಹಕ ರಮೇಶ್ಬಾಬು ಅವರಿಲ್ಲಿ ಒಂದೇ ಮನೆಯಲ್ಲಿ ಹೆಚ್ಚು ಚಿತ್ರೀಕರಣ ನಡೆಯುವುದರಿಂದ ಅದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡಿದ್ದಾರಂತೆ. ಉಳಿದಂತೆ ಈ ಚಿತ್ರಕ್ಕೆ ಶ್ರೀಕಂಠಯ್ಯ ಹಾಗೂ ವಿನಾಯಕರಾಮ್ ಕಲಗಾರು ಸಹ ನಿರ್ಮಾಪಕರಾಗಿದ್ದಾರೆ. ರತ್ನಮ್ಮ ಅವರ ಮೇಲಿರುವ ಗೌರವಕ್ಕೆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದಾಗಿ ವಿನಾಯಕರಾಮ್ ಹೇಳುವ ಹೊತ್ತಿಗೆ ಮಾತುಕತೆಗೂ ಬ್ರೇಕ್ ಬಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ