ಬಣ್ಣ ತುಂಬೋರು ಹೊಸಬರೇ


Team Udayavani, Dec 29, 2017, 10:50 AM IST

29-9.jpg

ಈ ವರ್ಷ ಶಿವರಾಜಕುಮಾರ್‌ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾದವು. ಪುನೀತ್‌, ದರ್ಶನ್‌, ಗಣೇಶ್‌ ಅಭಿನಯದ ಎರಡು ಚಿತ್ರಗಳು ಬಂದವು. ಇನ್ನು ಸುದೀಪ್‌, ಉಪೇಂದ್ರ, ಮುರಳಿ, ಪ್ರೇಮ್‌, ಪ್ರಜ್ವಲ್‌, ದಿಗಂತ್‌, ಶ್ರೀನಗರ ಕಿಟ್ಟಿ, “ದುನಿಯಾ’ ವಿಜಯ್‌ ಅವರ ತಲಾ ಒಂದೊಂದು ಸಿನಿಮಾಗಳು ಬಿಡುಗಡೆಯಾದವು. ಸ್ಟಾರ್‌ಗಳು, ಜನಪ್ರಿಯ ಹೀರೋಗಳು, ನೆಲೆಯೂರಿರುವವರು, ಒಂದೆರೆಡು ಚಿತ್ರಗಳಲ್ಲಿ ನಟಿಸಿದವರು, ಸ್ವಲ್ಪ ಗುರುತಿಸಿಕೊಂಡವರು… ಇವರೆಲ್ಲಾ ನಟಿಸಿದ ಚಿತ್ರಗಳನ್ನು ಲೆಕ್ಕ ಹಾಕಿದರೆ 50 ಚಿತ್ರಗಳು ಸಿಗಬಹುದು. ಈ ವರ್ಷ ಬಿಡುಗಡೆಯಾದ 180 ಪ್ಲಸ್‌ ಕನ್ನಡ ಚಿತ್ರಗಳಲ್ಲಿ ಈ 50 ಮೈನಸ್‌ ಮಾಡಿದರೆ, ಮಿಕ್ಕ ಚಿತ್ರಗಳಲ್ಲಿ ನಟಿಸಿದ್ದು ಯಾರು?

ಈ ವರ್ಷ ಶ್ರುತಿ ಹರಿಹರನ್‌, ರಚಿತಾ ರಾಮ್‌, ಸಾನ್ವಿ ಶ್ರೀವಾತ್ಸವ್‌, ಹರಿಪ್ರಿಯಾ, ಕಾವ್ಯ ಶೆಟ್ಟಿ, ರಾಗಿಣಿ, ಅಮೂಲ್ಯ, ಕೃತಿ ಖರಬಂದ, ಸಂಯುಕ್ತ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಪ್ರಣೀತಾ, ನಿಧಿ ಸುಬ್ಬಯ್ಯ ಮುಂತಾದವರೆಲ್ಲಾ ಒಂದು, ಎರಡು ಸಿನಿಮಾಗಳನ್ನು ಮಾಡಿದರು. ಕಳೆದ ವರ್ಷದಲ್ಲಿ ಜನಪ್ರಿಯತೆಗೆ ಬಂದ ಶ್ರದ್ಧಾ ಶ್ರೀನಾಥ್‌, ರಶ್ಮಿಕಾ ಮಂದಣ್ಣ ಎರಡೆರೆಡು ಚಿತ್ರಗಳನ್ನು ಮಾಡಿದರು. ಇವರೆಲ್ಲಾ ನಟಿಸಿದ ಚಿತ್ರಗಳ ಸಂಖ್ಯೆಯನ್ನು ಹೇಗೆ ಲೆಕ್ಕ ಹಾಕಿದರು, ಒಂದೈವತ್ತು ಸಿಗಬಹುದು. ಈ ವರ್ಷ ಬಿಡು ಗಡೆಯಾದ 180 ಪ್ಲಸ್‌ ಕನ್ನಡ ಚಿತ್ರಗಳಲ್ಲಿ ಈ 50 ಮೈನಸ್‌ ಮಾಡಿದರೆ, ಮಿಕ್ಕ ಚಿತ್ರಗಳಲ್ಲಿ ನಾಯಕಿಯಾಗಿ ದ್ದವರು ಯಾರು?

ಯೋಗರಾಜ್‌ ಭಟ್‌ ಅಕೌಂಟಿನಲ್ಲಿ ಈ ವರ್ಷ “ಮುಗುಳು ನಗೆ’ ಬಿಡುಗಡೆಯಾಯಿತು. ಚೈತನ್ಯ, ನಂದಕಿಶೋರ್‌, ಮಹೇಶ್‌ ಬಾಬು, ಕೆ.ಮಾದೇಶ್‌, ಎಸ್‌. ಮಹೇಂದರ್‌, ಎಸ್‌. ನಾರಾಯಣ್‌, ಪಿ.ಸಿ. ಶೇಖರ್‌, ಹರ್ಷ, ಸಂತೋಷ್‌ ಆನಂದರಾಮ್‌, ಚೇತನ್‌ ಕುಮಾರ್‌ ಇವರ ನಿರ್ದೇಶನದ ತಲಾ ಒಂದೊಂದು ಚಿತ್ರ ಬಿಡುಗಡೆಯಾದವು. “ದುನಿಯಾ’ ಸೂರಿ, ಆರ್‌. ಚಂದ್ರು ಅವರೆಲ್ಲಾ ವರ್ಷ ಪೂರ್ತಿ ಚಿತ್ರ ಮಾಡಿದರಾದರೂ ಚಿತ್ರ ಬಿಡುಗಡೆಯಾಗಲಿಲ್ಲ. ಈ ಎಲ್ಲಾ ಲೆಕ್ಕ ತೆಗೆದುಕೊಂಡರೆ, 50 ಚಿತ್ರಗಳು ಸಿಗಬಹುದು. ಈ ವರ್ಷ ಬಿಡುಗಡೆಯಾದ 180 ಪ್ಲಸ್‌ ಕನ್ನಡ ಚಿತ್ರಗಳಲ್ಲಿ ಈ 50 ಮೈನಸ್‌ ಮಾಡಿದರೆ, ಮಿಕ್ಕ ಚಿತ್ರಗಳನ್ನು ನಿರ್ದೇಶಿಸಿದ್ದು ಯಾರು?

ಈ ಎಲ್ಲಾ ಪ್ರಶ್ನೆಗಳಿಗೆ ಇರುವ ಒಂದೇ ಒಂದು ಉತ್ತರ ಎಂದರೆ ಅದು ಹೊಸಬರು. 2017ನೇ ವರ್ಷವು ಕನ್ನಡ ಚಿತ್ರರಂಗಕ್ಕೆ ಹೇಗೆ ಸಂಖ್ಯೆಯ ದೃಷ್ಟಿಯಲ್ಲಿ ದಾಖಲೆಯ ವರ್ಷವೋ, ಇನ್ನೊಂದು ವಿಷಯದಲ್ಲೂ ಬಹಳ ಮಹತ್ವದ ವರ್ಷ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೊಂದೇ ವರ್ಷ ಅತೀ ಹೆಚ್ಚು ಹೊಸ ನಾಯಕರು, ನಿರ್ದೇಶಕರು, ನಾಯಕಿಯರು ಮತ್ತು ತಂತ್ರಜ್ಞರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವರ್ಷ ಏನಿಲ್ಲವೆಂದರೂ ಸುಮಾರು ನೂರು ಹೀರೋಗಳು, ನಿರ್ದೇಶಕರು, ನಾಯಕಿಯರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು ಪದಾರ್ಪಣೆ ಮಾಡಿದ್ದು, ಇದರಿಂದ ಕನ್ನಡ ಚಿತ್ರರಂಗ ಇನ್ನಷ್ಟು ದೊಡ್ಡದಾಗಿದೆ ಎಂದರೆ ತಪ್ಪಿಲ್ಲ.

ಇಷ್ಟೊಂದು ಸಂಖ್ಯೆಯಲ್ಲಿ ಹೊಸಬರು ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ ಎನ್ನುವುದು ಖುಷಿಯ ವಿಚಾರ. ಇವರಲ್ಲಿ ಬಹಳಷ್ಟು ಜನ ಯಾರು, ಅವರ ಹಿನ್ನೆಲೆ ಏನು ಎಂಬುದು ಹೇಗೆ ಗೊತ್ತೇ ಇಲ್ಲವೋ, ಅದೇ ರೀತಿ ಅವರೆಲ್ಲಾ ಒಂದೊಂದು ಚಿತ್ರ ಮಾಡಿ ಏನಾದರು ಎಂಬುದು ಸಹ ಗೊತ್ತಾಗುವುದಿಲ್ಲ. ದಾಖಲೆಗೆ ಅಷ್ಟೆಲ್ಲಾ ಜನ ಬಂದರು, 180 ಕನ್ನಡ ಚಿತ್ರಗಳಲ್ಲಿ ಬಹುಪಾಲು ಚಿತ್ರಗಳ ಭಾಗವಾದರು ಎಂದು ಖುಷಿಪಡಬಹುದು. ಆದರೆ, ನಂತರ ಅವರೆಲ್ಲಾ ಏನಾದರು? ತಮ್ಮ ಮೊದಲ ಚಿತ್ರ ಬಿಡುಗಡೆಯಾದ ಮೇಲೆ ಅವರಲ್ಲಿ ಬಹಳಷ್ಟು ಜನ ಎಲ್ಲಿ ಮಾಯವಾದರು ಎಂದು ಹುಡುಕಿದರೆ, ನಿಖರವಾದ ಉತ್ತರ ಸಿಗುವುದು ಕಷ್ಟ.

ಈ ವರ್ಷ ಬಿಡುಗಡೆಯಾದ ಹೊಸಬರ ಚಿತ್ರಗಳ ಪಟ್ಟಿಯಲ್ಲಿ ಯಶಸ್ವಿ ಎಂಬ ಹಣೆಪಟ್ಟಿ ಹೊತ್ತ ಚಿತ್ರ ಎಂದರೆ, ಅದು “ಒಂದು ಮೊಟ್ಟೆಯ ಕಥೆ’ ಮಾತ್ರ. ಮಿಕ್ಕಂತೆ “ಬಿಬಿ 5′, “ಕರಾಲಿ’, “ಹೊಂಬಣ್ಣ’, “ಕಥಾ ಚಿತ್ರ’ ಹೀಗೆ ಬೆರಳೆಣಿಕೆಯಷ್ಟು ಚಿತ್ರಗಳನ್ನು ಹೊರತುಪಡಿಸಿ, ಮಿಕ್ಕ ಚಿತ್ರಗಳು ಠೇವಣಿ ಸಹ ಪಡೆಯದೆ ಮಾಯವಾದವು. ಎಲ್ಲಾ ಸರಿ, ಅಷ್ಟೆಲ್ಲಾ ಚಿತ್ರಗಳು ಸೋತರೂ ಹೊಸಬರು ಯಾವ ಧೈರ್ಯದ ಮೇಲೆ ಅಷ್ಟೊಂದು ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂಬುದು ಅರ್ಥವಾಗದ ವಿಷಯ. ಈ ವರ್ಷ ಬಂದ ಹೊಸಬರ ಪೈಕಿ ಸಿನಿಮಾ ಹಿನ್ನೆಲೆಯವರು, ದೊಡ್ಡ ಕುಟುಂಬದವರು, ದೊಡ್ಡ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚಿತರಾದವರ ಸಂಖ್ಯೆ ಬಹಳ ಕಡಿಮೆಯೇ. ಇವತ್ತು ಯಾವುದೇ ರೆಗ್ಯುಲರ್‌ ನಿರ್ಮಾಪಕರು ಸಹ ಹೊಸಬರ ಜೊತೆಗೆ ಚಿತ್ರ ಮಾಡುತ್ತಿಲ್ಲ. ಅದಕ್ಕೆ ಕಾರಣ, ಹೊಸಬರ ಚಿತ್ರಗಳಿಗೆ ಮಾರ್ಕೆಟ್‌ ಇಲ್ಲದಿರುವುದು. ಹೊಸಬರ ಚಿತ್ರಗಳಿಗೆ ಮೊದಲನೆಯದಾಗಿ ಪ್ರೇಕ್ಷಕರಿಲ್ಲ. ಪ್ರೇಕ್ಷಕರು ಬರುತ್ತಾರೋ ಇಲ್ಲವೋ ಎಂಬ ಕಾರಣಕ್ಕೆ ಚಿತ್ರಮಂದಿರಗಳು ಸಿಗುತ್ತಿಲ್ಲ. ಇನ್ನು ಟಿವಿ ಹಕ್ಕುಗಳು, ಆಡಿಯೋ ಹಕ್ಕುಗಳು ಎಲ್ಲವೂ ಕಷ್ಟವೇ. ಹಾಗಾಗಿ ಹೊಸಬರ ಚಿತ್ರಗಳು ಎಂದರೆ ಗಾಂಧಿನಗರದಲ್ಲಿ ಬಹಳಷ್ಟು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಗಾಬರಿ ಬೀಳುತ್ತಾರೆ.

ಇಷ್ಟಕ್ಕೂ ಯಾಕೆ ಹೊಸಬರ ಚಿತ್ರಗಳಿಗೆ ಯಾವ ಕಡೆಯಿಂದಲೂ ಪ್ರೋತ್ಸಾಹ ಸಿಗುತ್ತಿಲ್ಲ ಎಂದರೆ, ಅದಕ್ಕೆ ಕಾರಣವೂ ಇದೆ. ಅದೇನೋ ಗೊತ್ತಿಲ್ಲ, ಹೊಸಬರು ಎಂದರೆ ಅದು ದೆವ್ವದ ಚಿತ್ರಗಳೇ ಆಗಿರಬೇಕು ಎನ್ನುವಷ್ಟರ ಮಟ್ಟಿಗೆ, ಹೊಸಬರು ದೆವ್ವದ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ. ಅದಕ್ಕೆ ಕಾರಣ “6-5=2′ ಎಂದರೆ ತಪ್ಪಿಲ್ಲ. ಅದೊಂದು ಹೊಸಬರ ಚಿತ್ರ ಯಶಸ್ವಿಯಾಗಿದ್ದೇ ಆಗಿದ್ದು, ಹೊಸಬರ ದೆವ್ವದ ಚಿತ್ರಗಳ ಟ್ರೆಂಡ್‌ ನಿಂತಿಲ್ಲ. ಈ ವರ್ಷ ಹಲವು ಚಿತ್ರಗಳನ್ನು ಈ ಪಟ್ಟಿಯಲ್ಲಿ ಉದಾಹರಿಸಬಹುದು. ಒಂದೇ ತರಹ ಚಿತ್ರಗಳನ್ನು ನೋಡಿ ಸುಸ್ತಾಗಿರುವ ಪ್ರೇಕ್ಷಕರು, ಹೊಸಬರನ್ನು ಸಹಜವಾಗಿಯೇ ಪಕ್ಕಕ್ಕಿಟ್ಟಿದ್ದಾರೆ. ಪ್ರೇಕ್ಷಕರೇ ಪಕ್ಕಕ್ಕಿಟ್ಟಿರುವಾಗ, ತಮಗೇಕೆ ರಿಸ್ಕಾ ಎಂದು ಚಿತ್ರರಂಗದ ಇತರೆ ವಲಯಗಳು ಸಹ ಹೊಸಬರನ್ನು ದೂರವೇ ಇಟ್ಟಿದ್ದಾರೆ. ಹಾಗಂತ ಎಲ್ಲರೂ ದೆವ್ವದ ಚಿತ್ರಗಳೊಂದಿಗೆ ಬರುತ್ತಿದ್ದಾರೆ ಎಂದಲ್ಲ. “ಒಂದು ಮೊಟ್ಟೆಯ ಕಥೆ’, “ಹೊಂಬಣ್ಣ’, “ಅಯನ’ ತರಹದ ಒಂದಿಷ್ಟು ಭಿನ್ನ ಪ್ರಯೋಗಗಳು ಆಗಾಗ ಆಗುತ್ತಿರುತ್ತವೆ. ಆದರೆ, ಹೊಸಬರ ಚಿತ್ರಗಳನ್ನು ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಭಯ ಮತ್ತು ಗೊಂದಲ ಇರುವುದರಿಂದ, ಬಹಳಷ್ಟು ಜನ ಸಪೋರ್ಟ್‌ ಮಾಡುವುದಕ್ಕೆ ಮುಂದೆ ಬರುತ್ತಿಲ್ಲ. ದೆವ್ವಗಳಿಂದಾಗಿ ಹೊಸಬರಿಗೆ ಆರಂಭದಲ್ಲಿ ಅದೆಷ್ಟು ಅನುಕೂಲಗಳಾದವೋ, ಈಗ ಅಷ್ಟೇ ಅನಾನುಕೂಲಗಳಾಗುತ್ತಿವೆ.

ಯಾರೂ ಬರದಿದ್ದಾಗ ಹೊಸಬರಾದರೂ ಏನು ಮಾಡುತ್ತಾರೆ ಹೇಳಿ? ಒಂದಿಷ್ಟು ಜನರ ತಂಡ ಕಟ್ಟಿಕೊಂಡು, ತಾವೇ ಚಿತ್ರ ಮಾಡುವುದಕ್ಕೆ ಮುಂದಾಗುತ್ತಾರೆ. ಸಾಮಾನ್ಯವಾಗಿ ಒಂದು ಚಿತ್ರ ಎಂದರೆ, ಹೊಸಬರು, ಹಳಬರು ಎಲ್ಲರೂ ಇರುತ್ತಾರೆ. ಕಲಾವಿದರು ಹೊಸಬರಾದರೆ ತಂತ್ರಜ್ಞರು ಹಳಬರು, ತಂತ್ರಜ್ಞರು ಹೊಸಬರಾದರೆ ಕಲಾವಿದರು ಹಳಬರು, ನಾಯಕ ಹೊಸಬನಾದರೆ ನಾಯಕಿ ಹಳಬಳು, ನಿರ್ದೇಶಕ ಹೊಸಬನಾದರೆ ಛಾಯಾಗ್ರಾಹಕರು ಮತ್ತು ಸಂಗೀತ ನಿರ್ದೇಶಕರು … ಹೀಗೆ ಹೊಸಬರಿಗೆ ಸಪೋರ್ಟ್‌ ಮಾಡುವುದಕ್ಕೆಂದು ಪ್ರತಿಯೊಂದು ಚಿತ್ರದಲ್ಲೂ ಒಂದಿಷ್ಟು ಹಳಬರು ಇದ್ದೇ ಇರುತ್ತಾರೆ. ಆದರೆ, ಈ ವರ್ಷದ ಬಿಡುಗಡೆಯಾಗಿರುವ ಒಂದಿಷ್ಟು ಚಿತ್ರಗಳನ್ನು ನೋಡಿ. ಅದರಲ್ಲಿ ಎಲ್ಲರೂ ಹೊಸಬರೇ. ನಿರ್ಮಾಪಕರಿಂದ ಹಿಡಿದು ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಎಲ್ಲರೂ ಹೊಸಬರಾಗಿರುವುದಕ್ಕೆ ಕಾರಣ ಹೊಸಬರ ಮೇಲಿನ ಅಪನಂಬಿಕೆ. ಯಾವಾಗ ತಮಗೆ ಅವಕಾಶ ಸಿಗುವುದಿಲ್ಲ ಎಂದು ಹೊಸಬರಿಗೆ ಅನಿಸುತ್ತದೋ, ಆಗ ಸಹಜವಾಗಿಯೇ ಅವರು ಒಂದು ತಂಡವನ್ನು ಕಟ್ಟಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ವರ್ಷ ಏನಿಲ್ಲವೆಂದರೂ ಸುಮಾರು ಅಂತಹ 50 ತಂಡಗಳನ್ನು ಗುರುತಿಸಬಹುದು. ಎಲ್ಲರೂ ಉತ್ಸಾಹದಿಂದ ಬಂದವರೇ. ಈ ಪೈಕಿ ನಾಲ್ಕೈದು ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಯಾವುದೂ ಗಮನಸೆಳೆಯಲಿಲ್ಲ. ಇನ್ನು ದುಡ್ಡು ಮಾಡುವುದಂತೂ ದೂರದ ಮಾತು. ಹೀಗೆ ಸೋತವರು ಎಲ್ಲಿ ಹೋದರು? ಈಗೇನು ಮಾಡುತ್ತಿದ್ದಾರೆ? ಮರಳಿ ಯತ್ನವ ಮಾಡು ಎಂದು ಮತ್ತೆ ಪ್ರಯತ್ನ ಮಾಡುತ್ತಿದ್ದಾರಾ ಅಥವಾ ಚಿತ್ರರಂಗದ ಸಹವಾಸವೇ ಬೇಡ ಎಂದು ಎಲ್ಲರೂ ದೂರ ಇದ್ದು ಬಿಟ್ಟಿದ್ದಾರಾ?

ಚಿತ್ರರಂಗದಲ್ಲಿ ಭವಿಷ್ಯ ಕಟ್ಟಿಕೊಳ್ಳುವುದಕ್ಕೆ ಬಂದು ನಾಪತ್ತೆಯಾದ ನೂರಾರು ಜನ ಇರುವಾಗಲೇ, ಇನ್ನೂ ನೂರಾರು ಜನ ಮುಂದಿನ ವರ್ಷ ತೆರೆಗೆ ಅಪ್ಪಳಿಸುವುದಕ್ಕೆ ತಯಾರಾಗಿದ್ದಾರೆ. ಏನಿಲ್ಲವೆಂದರೂ 80 ಹೊಸಬರ ತಂಡಗಳು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುವುದಕ್ಕೆ ಮುಂದಿನ ವರ್ಷ ಬರುತ್ತಿವೆ. ಇದು ಸದ್ಯಕ್ಕೆ ಗೊತ್ತಿರುವ ಚಿತ್ರಗಳಷ್ಟೇ. ಇನ್ನೂ ಗೊತ್ತಿಲ್ಲದೆ ಇರುವ, ಹೆಚ್ಚು ಪ್ರಚಾರವಾಗದ ಹೊಸಬರ ಚಿತ್ರಗಳು ಅದೆಷ್ಟಿವೆಯೋ? ಏನೇ ಆದರೂ ಮುಂದಿನ ವರ್ಷವೂ ಕನ್ನಡ ಚಿತ್ರರಂಗಕ್ಕೆ ನೂರಾರು ನಾಯಕರು, ನಾಯಕಿಯರು, ನಿರ್ದೇಶಕರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು, ಸಂಕಲನಕಾರರು ಬರುವುದರಲ್ಲಿ ಆಶ್ಚರ್ಯವೇ ಇಲ್ಲ. ಅಷ್ಟೇ ಅಲ್ಲ, ಹೊಸಬರಿಂದ ಹೂಡಿಕೆಯಾಗುತ್ತಿರುವ ಮೊತ್ತವೂ 50-60 ಕೋಟಿಯವರೆಗೂ ಮುಟ್ಟುತ್ತದೆ. ದುಡ್ಡು ಬಿಡಿ, ಅದೆಷ್ಟು ಜನ ತಮ್ಮ ಭಷ್ಯವನ್ನರಿಸಿಕೊಂಡು, ಕನಸು ಕಟ್ಟಿಕೊಂಡು ಚಿತ್ರರಂಗದ ಎದುರು ನಿಂತಿದ್ದಾರೋ? ಅದರಲ್ಲಿ ಮುಂದಿನ ವರ್ಷ ಅದೆಷ್ಟು ಜನರ ಕನಸು ನನಸಾಗುತ್ತದೋ? ಅದೆಷ್ಟು ಜನರ ಅದೃಷ್ಟ ಖುಲಾಯಿಸುತ್ತದೋ? ನೋಡಬೇಕು. 

ಈ ವರ್ಷದ ಹೊಸಬರ ಚಿತ್ರಗಳು 
ಮಹಾನುಭಾವರು, ಟೋರಾ ಟೋರಾ, ಇಲ್ಲ, ಸ್ಟೈಲ್‌ ರಾಜ, ಸ್ಟೂಡೆಂಟ್ಸ್‌, ಸ್ನೇಹ ಚಕ್ರ, ಸೋಜಿಗ, ಶ್ವೇತ, ಪ್ರೀತಿ ಪ್ರೇಮ, ಪರಚಂಡಿ, ಒಂದು ಮೊಟ್ಟೆಯ ಕಥೆ, ಏನೆಂದು ಹೆಸರಿಡಲಿ, ನಮ್ಮೂರಲ್ಲಿ, ಮೋಜೋ, ಕಿರೀಟ, ಕಾವೇರಿ ತೀರದ ಚರಿತ್ರೆ, ಕಥಾ ವಿಚಿತ್ರ, ಕರಾಲಿ, ಕಾದಲ್‌, ಜಲ್ಸಾ, ಹೊಂಬಣ್ಣ, ಗ್ಯಾಪಲ್ಲೊಂದು ಸಿನಿಮಾ, ಇ1, ಢಮ್ಕಿ ಢಮಾರ್‌, ಬ್ರಾಂಡ್‌, ಅಸೂಚಭೂ, ಅರ್ಧ ತಿಕ್ಲು ಅರ್ಧ ಪುಕ್ಲು, ಅಜರಾಮರ, ಆ ಎರಡು ವರ್ಷಗಳು, ಚಿತ್ತ ಚಂಚಲ¬.

2018ರ ಹೊಸಬರ ಚಿತ್ರಗಳು 
3000, ಸದ್ದು, ಅವಾಹಯಾಮಿ, ಮಾಂಜ್ರಾ, ಅಥರ್ವ, ಮಂತ್ರಂ, ಸಹಿಷ್ಣು, ಜ್ಯೋತಿರ್ಗಮಯ, ವಿವಿಕ್ತ, ಪ್ರೇಮಂ, ಸಿಕ್ಸ್‌ ಟು ಸಿಕ್ಸ್‌, ಹಿಕೋರಾ, ಸರೋಜ, ಅರಣ್ಯಾನಿ, ಅರ್ಕಾವತ್‌, ತಿಬೋìಕಿಗಳು, ಶಂಖನಾದ, ಸಾರ್ವಜನಿಕರಲ್ಲಿ ವಿನಂತಿ, ಸರ್ವಂ ಪ್ರೇಮ್‌, ರಂಕಲ್‌ ರಾಟೆ, ಪ್ರೇಮಾಸುರ, ಪ್ರೀತಿಯ ಅಂಬಾರಿ, ಪ್ರೀತಿಯ ರಾಯಭಾರಿ, ಮಾಂತ್ರಿಕ, ಲೋ ಬಜೆಟ್‌, ಕುಲ್ಫಿ, ಕೃಷ್ಣ ಮನೋಹರಿ, ಖನನ, ಕಿನಾರೆ, ಕರಾಬ್‌ ದುನಿಯಾ, ಕಪ್ಪು ಬಿಳುಪು, ಜೊತೆಯಾಗಿ, ಜರ್ಕ್‌, ಜನ್‌ ಧನ್‌, ಐ ಡ್ಯಾಶ್‌ ಯು, ಎಸ್ಕೇಪ್‌, ಫೇಸ್‌ ಟು ಫೇಸ್‌, ಚಿನ್ನದ ಗೊಂಬೆ, ಧೂಳೀಪಟ, ಡೇವಿಡ್‌, ಚಾಕೊಲೇಟ್‌ ಬಾಯ್‌, ಬೋರಾಪುರ, ಅಟೆಂಪ್ಟ್ ಟು ಮರ್ಡರ್‌, ಆ್ಯಪಲ್‌ ಕೇಕ್‌, ಆದಿ ಪುರಾಣ, ಎ2ಎ2ಎ, ಎ+, ರುಕ್ಕು.

ಈ ವರ್ಷ ಹೀರೋ ಆದವರು
ಯಶ್‌ರಾಜ್‌ (ಹಾಯ್‌), ನಿರಂಜನ್‌ ಒಡೆಯರ್‌ (ಜಲ್ಸಾ), ರಿತ್ವಿಕ್‌ ದೇಶಪಾಂಡೆ (ರಶ್‌), ಗಿರೀಶ್‌ (ಸ್ಟೆçಲ್‌ ರಾಜ), ಅರ್ಜುನ್‌ (ಏನೆಂದು ಹೆಸರಿಡಲಿ), ಚೈತನ್ಯ (ಪ್ರೀತಿ-ಪ್ರೇಮ), ಎಂ.ಜಿ. ಶ್ರೀನಿವಾಸ್‌ (ಶ್ರೀನಿವಾಸ ಕಲ್ಯಾಣ), 1/4 ಕೆಜಿ ಪ್ರೀತಿ (ವಿಹಾನ್‌ ಗೌಡ), ತಾರಕ್‌ ಪೊನ್ನಪ್ಪ (ಅಜರಾಮರ), ಸಂತೋಷ್‌ (ಇಂಜಿನಿಯರ್), ರಾಜ (ಪೋಕಿರಿ ರಾಜ), ಸಾಹಿಲ್‌ ರಾಜ್‌ (ಕರಾಲಿ), ಪೂರ್ಣಚಂದ್ರ ಮೈಸೂರು (ಬಿಬಿ 5), ಅರ್ಜುನ್‌ ಕಿಶೋರ್‌ ಚಂದ್ರ (ಲೈಫ್ 360), ದಿವಂ ಕುಂದರ್‌ (ಚಿತ್ತ ಚಂಚಲ), ವಿಜಯ್‌ ಮಹೇಶ್‌ (ನಾನೊಬ್ನೇ ಒಳ್ಳೇವ್ನು), ಸುಬ್ಬು (ಹೊಂಬಣ್ಣ), ಶಶಿಕುಮಾರ್‌ (ಗ್ಯಾಪಲ್ಲೊಂದು ಸಿನಿಮಾ), ರೇಣುಕ್‌ ಮಾತಾಡ್‌ (ಆ ಎರಡು ವರ್ಷಗಳು), ಸಮರ್ಥ್ (ಕಿರೀಟ), ವಿಜಯ್‌ ವೆಂಕಟ್‌ (ಸ್ನೇಹಚಕ್ರ), ಎ.ಆರ್‌. ರಮೇಶ್‌ (ಇ1), ಕಿರಣ್‌ ಭಗವಾನ್‌ (ನಂ. 9 ಹಿಲ್ಟನ್‌ ಹೌಸ್‌), ಗೋಕುಲ್‌ ರಾಜ್‌ (ಮಹಾನುಭಾವರು), ಶಮಂತ್‌ ಶೆಟ್ಟಿ (ಮಂತ್ರಂ).

ಈ ವರ್ಷ ನಿರ್ದೇಶಕರಾದವರು
ರುದ್ರೇಶ್‌ (ಹಾಯ್‌), ಕಾಂತ ಕನ್ನಲ್ಲಿ (ಜಲ್ಸಾ), ಹರೀಶ್‌ (ಸ್ಟೈಲ್‌ ರಾಜ), ರವಿ ಬಸಪ್ಪನದೊಡ್ಡಿ (ಏನೆಂದು ಹೆಸರಿಡಲಿ), ಸತ್ಯ ಶೌರ್ಯ ಸಾಗರ್‌ (1/4 ಕೆಜೆ ಪ್ರೀತಿ), ಆದರ್ಶ್‌ ಈಶ್ವರಪ್ಪ (ಶುದ್ಧಿ), ಪ್ರದೀಪ್‌ ವರ್ಮ (ಉರ್ವಿ), ರವಿ ಕಾರಂಜಿ (ಅಜರಾಮರ), ಶಂಕರ್‌ (ಪೋಕರಿ ರಾಜ), ದಕ್ಷಿಣಮೂರ್ತಿ (ಕರಾಲಿ), ಅರ್ಜುನ್‌ ಕಿಶೋರ್‌ ಚಂದ್ರ (ಲೈಫ್ 360), ರಕ್ಷಿತ್‌ ತೀರ್ಥಹಳ್ಳಿ (ಹೊಂಬಣ್ಣ), ಅನೂಪ್‌ ಆ್ಯಂಟೋನಿ (ಕಥಾ ವಿಚಿತ್ರ), ರಾಜ್‌ ಬಿ ಶೆಟ್ಟಿ (ಒಂದು ಮೊಟ್ಟೆಯ ಕಥೆ), ರವೀಂದ್ರ ವಂಶಿ (ಪುಟಾಣಿ ಸಫಾರಿ), ಗಂಗಾಧರ್‌ ಸಾಲಿಮs… (ಅಯನ), ಕಾರ್ತಿಕ್‌ ವೆಂಕಟೇಶ್‌ (ದರ್ಪಣ), ಸಂದೀಪ್‌ ದಕ್‌Ò (ಬಿಕೋ), ಹರ್ಷ್‌ ಗೌಡ (ಟೋರಾ ಟೋರಾ).

ತೆರೆಕಂಡವರ ಮಾತು
ಹೊಸಬರಿಗೆ ಈ ಬಾರಿ ಗುರುತಿಸಿಕೊಳ್ಳುವ ಅವಕಾಶವಿದ್ದರೂ ಅದು ಆಗಲಿಲ್ಲ. ಏಕೆಂದರೆ ಸಿನಿಮಾ ಚೆನ್ನಾಗಿದೆ ಎಂಬ ಮಾತು ಕೇಳಿ ಬರುವಷ್ಟರಲ್ಲಿ ಹೊಸಬರ ಸಿನಿಮಾಗಳನ್ನು ಚಿತ್ರಮಂದಿರದಿಂದ ತೆಗೆಯಲಾಗುತ್ತಿತ್ತು. ಸಿನಿಮಾಗಳ ಭರಾಟೆಯಲ್ಲಿ ಯಾವಾಗ ಬಿಡುಗಡೆ ಮಾಡಬೇಕೆಂಬ ಗೊಂದಲಕ್ಕೆ ಬಿದ್ದು ಹೊಸಬರು ಪ್ಲ್ರಾನಿಂಗ್‌ ಇಲ್ಲದೇ ಸಿನಿಮಾ ಬಿಡುಗಡೆ ಮಾಡಬೇಕಾಯಿತು. 
ದಕ್ಷಿಣಾ ಮೂರ್ತಿ, “ಕರಾಲಿ’ ಚಿತ್ರ ನಿರ್ದೇಶಕ

ನಮಗೆ ಚಿತ್ರರಂಗದ ಸ್ಟಾರ್‌ಗಳಿಂದ ಸಾಕಷ್ಟು ಬೆಂಬಲ ಸಿಕ್ಕಿತು. ಆದರೆ, ವಿತರಕರಿಂದ ಸಿಗಲಿಲ್ಲ. ಸಿನಿಮಾವನ್ನು ತಲುಪಿಸ ಬೇಕಾದ ವಿತರಕರು ನಮಗೆ ಬೆಂಬಲ ವಾಗಿ ನಿಲ್ಲಲೇ ಇಲ್ಲ. ಎಲ್ಲಾ ಥಿಯೇಟರ್‌ಗೂ ಬಾಡಿಗೆ ಕಟ್ಟಿಯೇ ಬಿಡುಗಡೆ ಮಾಡ ಬೇಕಾಯಿತು. ವಿತರಕರು ಹೊಸಬರಿಗೆ ಬೆಂಬಲ ನೀಡಿದರೆ ಅವರು ಭವಿಷ್ಯ ರೂಪಿಸಿಕೊಳ್ಳಬಹುದು.
ಬಾಲಚಂದ್ರ, “ಮಹಾನುಭಾವರು’ ನಿರ್ಮಾಪಕ, ನಟ

ಪ್ರತಿ ವರ್ಷವೂ ಹೊಸಬರು ಹಾಗೆ ಮಾಡಿದರು, ಹೀಗೆ ಮಾಡಿದರು ಎಂದೆಲ್ಲಾ ಸುದ್ದಿಯಾಗುತ್ತದೆ. ನಾನು ಅದನ್ನು ನಂಬೋದಿಲ್ಲ. ಹೊಸಬರು ಎಷ್ಟು ಗೆದ್ದಿರುತ್ತಾರೋ, ಅದಕ್ಕಿಂತ ಹೆಚ್ಚಾಗಿ ಸೋತಿರುತ್ತಾರೆ. ಹೊಸ ಅಲೆ, ಪ್ರಯೋಗಾತ್ಮಕ ಎಂದೆಲ್ಲಾ ಹೇಳುತ್ತೇವೆ, ಆದರೆ ಅಂತಿಮವಾಗಿ ನಿರ್ಧಾರವಾಗೋದು ಚಿತ್ರವನ್ನು ಪ್ರೇಕ್ಷಕ ಸ್ವೀಕರಿಸಿದನಾ, ಇಲ್ವಾ ಎಂಬ ಅಂಶದ ಮೂಲಕ. ಹೊಸ ತರಹದ ಸಿನಿಮಾಗಳನ್ನು ಕೇವಲ ಹೊಸಬರೇ ಕೊಡಬೇಕು ಎಂಬ ಮಾತನ್ನು ನಾನು ಒಪ್ಪೋದಿಲ್ಲ. ಜೀವನ ಹಾಗೂ ಸಿನಿಮಾವನ್ನು ತುಂಬಾನೇ ಪ್ರೀತಿಸುವವವರು ಒಳ್ಳೆಯ ಸಿನಿಮಾ ಮಾಡಬಹುದು. ಭಾರತೀಯ ಚಿತ್ರರಂಗ ತಿರುಗಿ ನೋಡುವಂತಹ 10 ಸಿನಿಮಾಗಳು ವರ್ಷಕ್ಕೆ ಕನ್ನಡದಲ್ಲಿ ಬಂದಾಗ ಮಾತ್ರ ನಾನು ತೃಪ್ತನಾಗುತ್ತೇನೆ. 
ರಾಜ್‌ ಬಿ ಶೆಟ್ಟಿ, “ಒಂದು ಮೊಟ್ಟೆಯ ಕಥೆ’ ನಿರ್ದೇಶಕ

ನನಗೆ ಆರಂಭದಿಂದಲೂ ಬೆಂಬಲ ಸಿಕ್ಕಿತ್ತು. ಆದರೆ, ಚಿತ್ರ ಬಿಡುಗಡೆಯ ಸಮಯ ಸರಿ ಇರಲಿಲ್ಲ. ಇನ್ನು ಎಲ್ಲಾ ಹೊಸಬರಿಗೆ ಆಗುವ ಅನುಭವ ನನಗೂ ಆಯಿತು. ಸಿನಿಮಾ ಚೆನ್ನಾಗಿದೆ ಎಂಬ ಮಾತು ಕೇಳಿ ಬಂದು ಜನ ಥಿಯೇಟರ್‌ಗೆ ಬರುವಷ್ಟರಲ್ಲಿ ನಮ್ಮ ಸಿನಿಮಾದ ಪ್ರದರ್ಶನ ಕಡಿಮೆಯಾಗಿತ್ತು. ಚಿತ್ರಮಂದಿರಗಳು ಹಾಗೂ ವಿತರಕರು ಹೊಸಬರನ್ನು ಬೆಂಬಲಿಸಬೇಕಿದೆ.
ಕಾಂತ ಕನ್ನಳ್ಳಿ, “ಜಲ್ಸಾ’ ನಿರ್ದೇಶಕ

ಈ ವರ್ಷ ಒಂದಷ್ಟು ಹೊಸ ಪ್ರಯೋಗದ ಸಿನಿಮಾಗಳು ಬಂದುವು. ಜೊತೆಗೆ ಮೆಚ್ಚುಗೆ ಕೂಡಾ ವ್ಯಕ್ತವಾಯಿತು. ಆದರೆ, ಸಕ್ಸಸ್‌ರೇಟ್‌ ಮಾತ್ರ ತುಂಬಾ ಕಡಿಮೆ ಇತ್ತು. ಒಂದು ಹಂತದಲ್ಲಿ ಇಲ್ಲಿ ಹೊಸಬರಿಗೆ ಹೆಚ್ಚಿನ ಪ್ರೋತ್ಸಾಹ ಇಲ್ಲ ಎಂಬ ಭಾವನೆ ನನ್ನನ್ನು ಕಾಡಿದ್ದು ಸುಳ್ಳಲ್ಲ. ಹೊಸಬರಿಗೆ ಇಲ್ಲಿನ ಮಾರುಕಟ್ಟೆ ಹೇಗಿದೆ ಎಂಬುದನ್ನು ಸ್ಟಡಿ ಮಾಡುವಷ್ಟರಲ್ಲಿ ಸಿನಿಮಾ ಚಿತ್ರಮಂದಿರದಿಂದ ಹೋಗಿರುತ್ತದೆ.
ರಕ್ಷಿತ್‌ ತೀರ್ಥಹಳ್ಳಿ,  “ಹೊಂಬಣ್ಣ’ ನಿರ್ದೇಶಕ

 ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.