ಸತ್ಯ ಘಟನೆಗಳ ಕಾಲ್ಪನಿಕ ಕಥೆ
Team Udayavani, Jun 22, 2018, 6:00 AM IST
ಸಾಮಾನ್ಯವಾಗಿ ಹಾರರ್ ಚಿತ್ರಗಳು ಎಲ್ಲೋ ನೋಡಿದ, ಅನುಭವಿಸಿದ ಕೆಲ ನೈಜ ಘಟನೆಗಳ ಸ್ಫೂರ್ತಿಯಿಂದ
ಹುಟ್ಟಿಕೊಂಡದ್ದು ಎಂದೇ ಹೇಳಲಾಗುತ್ತದೆ. ಈಗ ಅಂಥದ್ದೇ ಒಂದು ನೈಜ ಘಟನೆ ಕುರಿತು ಒಂದು ಹಾರರ್ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಅದು “ಕೆಲವು ದಿನಗಳ ನಂತರ’.
ನಿರ್ದೇಶಕ ಶ್ರೀನಿ ಅವರಿಗೆ ಚಿತ್ರದ ಮೇಲೆ ಎಲ್ಲಿಲ್ಲದ ವಿಶ್ವಾಸ. “ಇದು 2016ರಲ್ಲಿ ನಡೆದ ಒಂದು ನೈಜ ಘಟನೆ ಸುತ್ತ ಹೆಣೆದ ಕಥೆ. ಸಮಾಜದಲ್ಲಿ ಯುವಕ-ಯುವತಿಯರು ತಾವು ಅರಿಯದೇ ಮಾಡುವ ತಪ್ಪುಗಳಿಂದ ಆಗುವ ಅನಾಹುತಗಳು ಮತ್ತು ಎಲ್ಲೆಡೆ ನಡೆಯುತ್ತಿರುವ ಎರಡು ಪ್ರಮುಖ ವಿಷಯಗಳ ಸುತ್ತ ಹೆಣೆದ ಸತ್ಯ ಘಟನೆಗಳ ಕಾಲ್ಪನಿಕ ಕಥೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಶ್ರೀನಿ.
“ಹಾರರ್ ಚಿತ್ರಗಳಿಗೆ ತಾಂತ್ರಿಕತೆ ಮುಖ್ಯವಾಗಿರಬೇಕು. ಇಲ್ಲಿ ಚಿತ್ರ ತಾಂತ್ರಿಕವಾಗಿ ಶ್ರೀಮಂತವಾಗಿದೆ. ಇದೊಂದು ಐವರು ಸಾಫ್ಟ್ವೇರ್ ಎಂಜಿನಿಯರ್ಗಳ ಸುತ್ತ ನಡೆಯುವ ಕಥೆ. ಕೆಲವರನ್ನು ಹೊರತುಪಡಿಸಿ, ಬಹುತೇಕ ಹೊಸಬರ ಚಿತ್ರವಿದು.
ಇಲ್ಲಿ ಭಯಬೀಳಿಸುವ ಅಂಶಗಳಿವೆ. ವಿಶೇಷವೆಂದರೆ, ಮೊದಲ ಬಾರಿಗೆ ಜೋಂಬಿ ಹಾಗೂ ಆರು ತಿಂಗಳ ಮಗುವನ್ನು ಗ್ರಾμಕ್ಸ್ ಮೂಲಕ 3ಡಿಯಲ್ಲಿ ರೂಪಿಸಿ, ತೋರಿಸಲಾಗಿದೆ’ ಎಂದರು ಶ್ರೀನಿ.
ಶುಭಾ ಪೂಂಜಾ ಈ ಚಿತ್ರದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾಣಿಸಿಕೊಂಡಿದ್ದಾರಂತೆ.”ಶೀರ್ಷಿಕೆಗೆ ಕಥೆಗೂ ಸಂಬಂಧವಿದೆಯಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಆದರೆ, ಚಿತ್ರ ನೋಡಿದ ಬಳಿಕ ಎಲ್ಲರೂ ಕೆಲವು ಕ್ಷಣಗಳ ಬಳಿಕ ಫೋನ್ ಮಾಡಿ, ಕಥೆಗೆ ಶೀರ್ಷಿಕೆ ಪೂರಕವಾಗಿದೆ’ ಎನ್ನುತ್ತಾರೆ ಎಂಬ ಗ್ಯಾರಂಟಿ ಕೊಡುತ್ತಾರೆ ಅವರು.
ಇನ್ನು, ಚಿತ್ರದಲ್ಲಿ ದ್ರವ್ಯ ಶೆಟ್ಟಿ ಎಂಬ ಹೊಸ ಪ್ರತಿಭೆ ನಟಿಸಿದ್ದು, ಅವರಿಗೆ ಇದು ಮೊದಲ ಚಿತ್ರವಂತೆ. ಮುತ್ತುರಾಜ್, ವಸಂತ್ಕುಮಾರ್ ಮತ್ತು ಬಿ.ಎಂ. ಚಂದ್ರಕುಮಾರ್ ಚಿತ್ರದ ನಿರ್ಮಾಣ ಮಾಡಿದ್ದಾರೆ. ಅವರಿಗೆ ಮೊದಲ ಸಲ ಒಂದೊಳ್ಳೆಯ ಅಂಶ ಇರುವ ಚಿತ್ರ ಮಾಡಿದ ಖುಷಿ. ಇನ್ನು, ಮುರಳೀಧರ್ ಮತ್ತು ನವೀನ್ಕುಮಾರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದು, ರಾಕಿ ಸೋನು ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಬೇಬಿ ಶ್ರೀ ಲಕ್ಷ್ಮೀ, ಸೋನು ಪಾಟೀಲ್, ಪವನ್, ಲೋಕೇಶ್, ಮಾರುತಿ, ರಮ್ಯ ವರ್ಷಿಣಿ ಇತರರು ನಟಿಸಿದ್ದಾರೆ.