ಪುರಾತನ ಸಂದೇಶ ಕುಲ್ಫಿ ರೂಪದಲ್ಲಿ
Team Udayavani, Jun 29, 2018, 6:00 AM IST
“ಕುಲ್ಫಿ’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಮುನಿಸ್ವಾಮಿ ಹಾಗೂ ಚೌಡಪ್ಪ ಎನ್ನುವವರು ಸೇರಿ ನಿರ್ಮಿಸಿದ್ದಾರೆ. ಚಿತ್ರವನ್ನು ಮಂಜು ಹಾಸನ ನಿರ್ದೇಶಿಸಿದ್ದಾರೆ. ಗಿರೀಶ್ ಗೌಡ, ಲಾರೆನ್ಸ್, ದಿಲೀಪ್ ಎಂಬ ಹೊಸ ಹುಡುಗರನ್ನು ಮತ್ತು ಸಿಲೋನ್ ಎಂಬ ಮಂಗಳೂರು ಮೂಲಕ ಹೊಸ ನಾಯಕಿಯನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ ನಿರ್ದೇಶಕರು. “ಕುಲ್ಫಿ’ ಟೈಟಲ್ ಕೆಳಗೆ “ಯಾರಾದರೂ ತಿನ್ನಬಹುದು, ಯಾರಿಗೆ ಬೇಕಾದರೂ ತಿನ್ನಿಸಬಹುದು’ ಎಂಬ ಟ್ಯಾಗ್ಲೈನ್ ಕೂಡಾ ಇದೆ.
ನಿರ್ದೇಶಕ ಮಂಜು ಅವರ ಪ್ರಕಾರ, ಈ ಚಿತ್ರದಲ್ಲೊಂದು ಸಂದೇಶವಿದ್ದು, ಇಂದಿನ ಯುವ ಜನಾಂಗಕ್ಕೆ ಈ ಸಂದೇಶ ಹೆಚ್ಚು ಸೂಕ್ತವಾಗಿದೆಯಂತೆ. ಚಿತ್ರದ ಟೈಟಲ್ ಮೂರು ಕೋತಿಗಳಿದ್ದು, ಒಬ್ಬೊಬ್ಬ ನಾಯಕ ಒಂದೊಂದು ಕೋತಿಯನ್ನು ಪ್ರತಿನಿಧಿಸಲಿದೆಯಂತೆ. “ಈ ಚಿತ್ರದ ಮೂಲಕ ಯುವ ಜನತೆ ಮಾಡುತ್ತಿರುವ ತಪ್ಪುಗಳನ್ನು ಹೇಳುವುದಕ್ಕೆ ಹೊರಟಿದ್ದೇವೆ. ಹೆಣ್ಣು, ಹೊನ್ನು, ಮಣ್ಣಿನ ಹಿಂದೆ ಹೋಗಬಾರದು, ಅದು ತಾನಾಗಿ ಒಲಿದು ಬರಬೇಕು ಎಂದು ಹೇಳುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ. ಪ್ರಸ್ತುತ ನಡೆಯುತ್ತಿರುವ ಘಟನೆಗಳಿಗೆ ಈ ಕಥೆ ಹೆಚ್ಚು ಸೂಕ್ತವಾಗಿದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ಮಂಜು. ಅಂದಹಾಗೆ, ಇದೊಂದು ಸಸ್ಪೆನ್ಸ್
-ಥ್ರಿಲ್ಲರ್ ಸಿನಿಮಾವಾಗಿದ್ದು, ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ನಿರ್ದೇಶಕರಿಗಿದೆ. ನಿರ್ಮಾಪಕ ಮುನಿಸ್ವಾಮಿಯವರಿಗೆ ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿ ಇದೆ. ಚಿತ್ರದಲ್ಲಿ ಸಿಲೋನ್ ಪ್ರಮುಖ ಪಾತ್ರ ಮಾಡಿದ್ದು, ಹೆಣ್ಣಿಗೆ ಮರ್ಯಾದೆ ಕೊಡದೇ ಇದ್ದರೆ ಏನಾಗುತ್ತದೆ ಎಂಬುದನ್ನು ತೋರಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.