ಹೊಸ ಪ್ರಣಾಮ
Team Udayavani, Jul 20, 2018, 6:00 AM IST
“ಈ ಚಿತ್ರವನ್ನು ನಾನು ಆಯ್ಕೆ ಮಾಡಲಿಲ್ಲ. ಈ ಚಿತ್ರವೇ ನನ್ನನ್ನು ಆಯ್ಕೆ ಮಾಡಿದೆ…’
– ಹೀಗಂತ ಹೇಳಿದ್ದು ಪ್ರಣಾಮ್ ದೇವರಾಜ್. ಅವರು ಹೇಳಿದ್ದು “ಕುಮಾರಿ 21 ಎಫ್’ ಚಿತ್ರದ ಬಗ್ಗೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ, ಆಗಸ್ಟ್ 3 ರಂದು ಬಿಡುಗಡೆಯಾಗುತ್ತಿದೆ. ಆ ಬಗ್ಗೆ ಒಂದಷ್ಟು ಮಾಹಿತಿ ಕೊಡಲು ಪತ್ರಕರ್ತರ ಮುಂದೆ ಚಿತ್ರತಂಡ ಆಗಮಿಸಿತ್ತು. ಪ್ರಣಾಮ್ ದೇವರಾಜ್ಗೆ ಈ ಚಿತ್ರ ಬೇರೆ ಬೇರೆ ಕಡೆಯಿಂದ ನಾಲ್ಕು ಸಲ ಹುಡುಕಿಕೊಂಡು ಬಂದಿತ್ತಂತೆ. ಮೊದಲು ಈ ಚಿತ್ರ ಹಿಡಿದು ಬಂದವರ ಬಳಿ, ಇಲ್ಲಿ ಆ್ಯಕ್ಷನ್ ಇಲ್ಲ. ಸ್ವಲ್ಪ ಬದಲಾವಣೆ ಮಾಡುವುದಾದರೆ ಮಾಡ್ತೀನಿ ಅಂತ ಹೇಳಿದ್ದರಂತೆ ಪ್ರಣಾಮ್. ಆಗ ಬಂದಿದ್ದ ಆ ನಿರ್ದೇಶಕರು, ಓಕೆ ಅಂತ ಹೇಳಿ ಹೋದವರು ಪುನಃ ಬರಲಿಲ್ಲವಂತೆ. ಆಮೇಲೆ, ಇದೇ ಸಿನಿಮಾ ಎರಡು ಸಲ ಹುಡುಕಿ ಬಂತಂತೆ. ಆಗಲೂ ಕಾರಣಾಂತರದಿಂದ ಮುಂದುವರೆಯಲಿಲ್ಲವಂತೆ. ಕೊನೆಗೆ ಈ ಚಿತ್ರದ ಕಥೆಗಾರ ಸುಕುಮಾರ್ ಅವರು ಪ್ರಣಾಮ್ ತಂದೆ ದೇವರಾಜ್ಗೆ ಫೋನ್ ಮಾಡಿ, ಒಂದು ತಂಡ ಬರುತ್ತೆ. ಅವರ ಜೊತೆ ಮಾತಾಡಿ ಅಂದರಂತೆ. ಅವರು ಕೂಡ ಇದೇ ಚಿತ್ರ ಹಿಡಿದು ಬಂದಿದ್ದರಂತೆ. ಈ ಘಟನೆ ಹೇಳಿಕೊಂಡ ಪ್ರಣಾಮ್, “ಈ ಚಿತ್ರವನ್ನು ನಾನು ಆಯ್ಕೆ ಮಾಡಲಿಲ್ಲ. ಈ ಚಿತ್ರವೇ ನನ್ನನ್ನು ಆಯ್ಕೆ ಮಾಡಿತು’ ಅಂದರು.
ಅಂದು ಚಿತ್ರದ ಜರ್ನಿ ಬಗ್ಗೆ ಹೇಳಿದ್ದಿಷ್ಟು. “ಮೂಲ ತೆಲುಗು ಚಿತ್ರ ನೋಡಿದಾಗ, ಕನ್ನಡದಲ್ಲಿ ಹೇಗೆ ತೋರಿಸ್ತಾರೋ, ಎಂಬ ಕುತೂಹಲವಿತ್ತು. ಇಲ್ಲಿ ಹೊಸ ಮೇಕಿಂಗ್ ಇದೆ. ನಿರ್ಮಾಪಕರು ಯಾವುದೇ ಕೊರತೆ ಇಲ್ಲದಂತೆ ಚಿತ್ರ ಮಾಡಿದ್ದಾರೆ. ಮಣಿಶರ್ಮ ಅವರ ಪುತ್ರ ಸಾಗರ್ ಅವರು ಐದು ಹಾಡುಗಳನ್ನು ಚೆನ್ನಾಗಿ ಮಾಡಿದ್ದಾರೆ. ಇದೊಂದು ಮಿಡ್ಲ್ಕ್ಲಾಸ್ ಹುಡುಗನ ಲವ್ ಸ್ಟೋರಿ. ಕನ್ನಡಕ್ಕೊಂದು ಹೊಸಬಗೆಯ ಚಿತ್ರ’ ಎಂಬುದು ಪ್ರಣಾಮ್ ಮಾತು. ನಿರ್ದೇಶಕ ಶ್ರೀಮನ್ ವೇಮುಲ ಅವರಿಗೆ ಇದು ಮೊದಲ ಚಿತ್ರ. “ಒಬ್ಬ ಸಾಮಾನ್ಯ ಹುಡುಗ ಮತ್ತು ಮಾಡೆಲ್ ಹುಡುಗಿ ನಡುವಿನ ಲವ್ಸ್ಟೋರಿ ಇದೆ. ಬೋಲ್ಡ್ ಹುಡುಗಿ, ಸಂಕೋಚ ಸ್ವಭಾವದ ಹುಡುಗ ಜೊತೆಯಾದಾಗ, ಏನೆಲ್ಲಾ ಆಗುತ್ತೆ ಎಂಬುದು ಕಥೆ. ಆಮೇಲೆ ಏನೇನೋ ಆಗಿಹೋಗುತ್ತೆ’ ಮಿಕ್ಕಿದ್ದು ಸಿನಿಮಾದಲ್ಲೇ ನೋಡಬೇಕು ಎಂಬುದು ನಿರ್ದೇಶಕರ ಮಾತು.
ನಾಯಕಿ ನಿಧಿ ಕುಶಾಲಪ್ಪ ಅವರಿಗಿಲ್ಲಿ ಹಲವು ಶೇಡ್ಗಳಿರುವ ಪಾತ್ರ ಸಿಕ್ಕಿದೆಯಂತೆ. “ನಾನಿಲ್ಲಿ ಬೋಲ್ಡ್ ಹುಡುಗಿಯಾಗಿದ್ದೇನೆ. ನನಗೆ ಸಿಕ್ಕ ಪಾತ್ರದಲ್ಲಿ ಖುಷಿ ಇದೆ. ಒಂದು ರೀತಿಯ ಚಾಲೆಂಜ್ ಪಾತ್ರವದು’ ಎಂದರು ನಿಧಿ ಕುಶಾಲಪ್ಪ. “ಕುಮಾರಿ 21ಎಫ್’ ಚಿತ್ರವನ್ನು ಸಂಪತ್ ಕುಮಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮನೋಜ್ ಪುತ್ತೂರ್, ಅಕ್ಷಯ್, ರಿತೇಶ್ ನಟಿಸಿದ್ದು, ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ರಾಮಿರೆಡ್ಡಿ ಛಾಯಾಗ್ರಹಣ
ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ