ಬಲುಪು ಬೆಳಕಿನಲ್ಲಿ ಒಂದಾದ್ರು ಕ್ರೇಜಿ-ಉಪ್ಪಿ
Team Udayavani, Aug 24, 2018, 6:00 AM IST
ವನವಾಸ ಮುಗಿದಿದೆ. ಹಾಗಾಗಿ ಈಗ ಸಿನಿಮಾ ಮಾಡುತ್ತಿದ್ದೇವೆ …’
– ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ಕನಕಪುರ ಶ್ರೀನಿವಾಸ್ ಅವರ ಮುಖ ನೋಡಿದರು. ಶ್ರೀನಿವಾಸ್ ಸುಮ್ಮನೆ ನಕ್ಕರು. ಹದಿನಾಲ್ಕು ವರ್ಷಗಳ ಹಿಂದೆಯೇ ರವಿಚಂದ್ರನ್ ಆರ್.ಎಸ್. ಪ್ರೊಡಕ್ಷನ್ಸ್ನಡಿ ನಟಿಸಬೇಕಿತ್ತಂತೆ. ಅದಕ್ಕೆ ಸರಿಯಾಗಿ “ಆದಿಶೇಷ’ ಎಂಬ ಸಿನಿಮಾ ಕೂಡಾ ಅನೌನ್ಸ್ ಆಗಿತ್ತು.
ಆದರೆ, ಅದು ಮುಂದುವರೆಯಲಿಲ್ಲ. ಆ ನಂತರ ಆರ್.ಎಸ್.ಪ್ರೊಡಕ್ಷನ್ನ ಅನೇಕ ಸಿನಿಮಾಗಳಿಗೆ ಕ್ಲಾಪ್ ಮಾಡಿದ್ದಾರೆ ರವಿಚಂದ್ರನ್. ಈಗ ಕನಕಪುರ ಶ್ರೀನಿವಾಸ್ ಅವರ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ಅದು “ರವಿ -ಚಂದ್ರ’. ಉಪೇಂದ್ರ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನಡೆಯಿತು. “ಒಂಥರಾ ವನವಾಸ ಮುಗಿದಂತೆ ಆಗಿದೆ. ಶ್ರೀನಿವಾಸ್ ನಿರ್ಮಾಣದ ಪ್ರತಿ ಸಿನಿಮಾಗಳಿಗೆ ನಾನು ಕ್ಲಾಪ್ ಮಾಡುತ್ತಿದ್ದೆ. “ಬರೀ ಕ್ಲಾಪ್ ಅಷ್ಟೇ ಮಾಡಿಸ್ತೀರಾ, ನಂಗೆ ಸಿನಿಮಾ ಏನಾದ್ರು ಮಾಡ್ತೀರಾ’ ಎನ್ನುತ್ತಿದ್ದೆ. ಈಗ ಆ ಕಾಲ ಕೂಡಿ ಬಂದಿದೆ. ಉಪೇಂದ್ರ ಹಾಗೂ ನನ್ನನ್ನು ಒಟ್ಟಿಗೆ ಸೇರಿಸಿದ್ದಾರೆ. ಮಲ್ಟಿಸ್ಟಾರರ್ ಸಿನಿಮಾ ಎಂದಾಗ ಅದರ ತೂಕ ಕೂಡಾ ಜಾಸ್ತಿಯಾಗುತ್ತದೆ’ ಎಂದರು ರವಿಚಂದ್ರನ್.
ಓಂ ಪ್ರಕಾಶ್ ರಾವ್ “ರವಿ-ಚಂದ್ರ’ ಸಿನಿಮಾದ ನಿರ್ದೇಶಕರು. ಈ ಹಿಂದೆ ರವಿಚಂದ್ರನ್ ಅವರಿಗೆ “ಸಾಹುಕಾರ’ಚಿತ್ರ ನಿರ್ದೇಶಿಸಿದ್ದರು ಓಂ ಪ್ರಕಾಶ್ ರಾವ್. “”ಸಾಹು ಕಾರ’ ಟೈಮಲ್ಲಿ ಓಂ ಪ್ರಕಾಶ್ ನನ್ನ ಮಾತು ಕೇಳುತ್ತಿರಲಿಲ್ಲ. ಈಗ ಕೇಳುತ್ತೇನೆ ಎಂದು ಬಂದಿದ್ದಾರೆ.ನೋಡಬೇಕು, ಏನು ಮಾಡು ತ್ತಾರೋ’ಎಂದು ರವಿಚಂದ್ರನ್ ಹೇಳಿದಾಗ, ಪಕ್ಕದಲ್ಲಿದ್ದ ಓಂ ಪ್ರಕಾಶ್ “ಅದೆಲ್ಲಾ ಸುಳ್ಳು’ ಎನ್ನುತ್ತಾ ನಕ್ಕರು.
ಈ ಚಿತ್ರದಲ್ಲಿ ಉಪೇಂದ್ರ ಹಾಗೂ ರವಿಚಂದ್ರನ್ಅಣ್ಣ-ತಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಪೇಂದ್ರ ಅವರಿಗೆ ಇಬ್ಬರು ನಾಯಕಿಯರು, ಹಾಡು ಇದ್ದರೆ, ರವಿಚಂದ್ರನ್ ಅವರಿಗೆ ನಾಯಕಿಯೂ ಇಲ್ಲ, ಹಾಡೂ ಇಲ್ಲ. “ಹೆಸರಲ್ಲಿ ನಾನಿದ್ದೇನೆ. ಆದರೆ ನನಗೆ ಹಾಡು, ನಾಯಕಿ ಯಾವುದೂ ಇಲ್ಲ. ನನ್ನನ್ನು ಎಷ್ಟು ಬಳಸಿಕೊಳ್ಳುತ್ತಾರೋ ನೋಡಬೇಕು’ ಎನ್ನುತ್ತಾ ನಕ್ಕರು ಉಪೇಂದ್ರ.
ರವಿಚಂದ್ರನ್ ಅವರ ಜೊತೆ ನಟಿಸುವ ಖುಷಿ ಉಪೇಂದ್ರ ಅವರಿಗೂ ಇದೆ. “ಒಳ್ಳೆಯ ಕಾಂಬಿನೇಶನ್. ಸಿನಿಮಾ ವಿಚಾರದಲ್ಲಿ ರವಿ ಸಾರ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅವರು ಸಿನಿಮಾವನ್ನು ಎಷ್ಟು ಪ್ರೀತಿಸುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ತುಂಬಾ ವರ್ಷಗಳ ಹಿಂದೆಯೇ ನಾವಿಬ್ಬರು ಒಟ್ಟಿಗೆ ನಟಿಸಬೇಕಿತ್ತು. ಅದು ಈಗ ಈಡೇರಿದೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಆಲ್ ಟೈಮ್ ಫೇವರೇಟ್. ಈ ಕಥೆ ಹೇಗಿದೆ ಎಂದರೆ “ನಾನು ನೀನಾ’ ಅನ್ನುವಂತಿದೆ. ಸಿನಿಮಾನೂ ತುಂಬಾ ಮಜವಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ’ ಎನ್ನುವುದು ಉಪೇಂದ್ರ ಮಾತು. ನಿರ್ದೇಶಕ ಓಂ ಪ್ರಕಾಶ್ ರಾವ್ ಹೆಚ್ಚು ಮಾತನಾಡಲಿಲ್ಲ.
“ಒಳ್ಳೆಯ ಕಥೆ ಇದು. ಕಾಮಿಡಿ ಎಂಟಟೈನರ್. ಇಬ್ಬರ ಪಾತ್ರವೂ ಪ್ರಮುಖವಾಗಿದೆ’ ಎಂದರು. ಅಂದಹಾಗೆ, ಇದು ತೆಲುಗಿನ “ಬಲುಪು’ ಚಿತ್ರದ ರೀಮೇಕ್. ಅದನ್ನು ಕನ್ನಡಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದಾರಂತೆ ಓಂ ಪ್ರಕಾಶ್ ರಾವ್. ರೀಮೇಕ್ ಎಂಬ ಪದ ಕೇಳಿದೊಡನೆ ಎಚ್ಚೆತ್ತ ನಿರ್ಮಾಪಕ ಕನಕಪುರ ಶ್ರೀನಿವಾಸ್, “ಬಲುಪು’ ಇಟ್ಟುಕೊಂಡು ನಾವು ಸ್ವಮೇಕ್ ಸಿನಿಮಾ ಮಾಡುತ್ತಿದ್ದೇನೆ. ಚಿತ್ರದಲ್ಲಿ ಸಾನ್ವಿ ಶ್ರೀವಾಸ್ತವ್ ಹಾಗೂ ನಿಮಿಕಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇಬ್ಬರು ನಾಯಕಿಯರು ಕೂಡಾ ರವಿಚಂದ್ರನ್ ಹಾಗೂ ಉಪೇಂದ್ರ ಜೊತೆ ನಟಿಸುತ್ತಿರುವ ಖುಷಿ ಹಂಚಿಕೊಂಡರೆ ಹೊರತು ಪಾತ್ರದ ಬಗ್ಗೆ ಮಾತನಾಡಲಿಲ್ಲ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ರವಿಕುಮಾರ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನವಿದೆ.
– ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ