ದೇಸಾಯಿ ಫ್ಲ್ಯಾಶ್ ಬ್ಯಾಕ್ ಕಂಬ್ಯಾಕ್
Team Udayavani, Sep 7, 2018, 6:00 AM IST
“ಕೆಲಸ ಗೊತ್ತಿದ್ದೂ ಏನೂ ಮಾಡೋಕೆ ಆಗಲಿಲ್ಲ. ನೋಡನೋಡುತ್ತಿದ್ದಂತೆಯೇ 10 ವರ್ಷ ಹೋಯ್ತು. ಏನಿಲ್ಲವೆಂದರೂ ಎಂಟತ್ತು ಸಿನಿಮಾಗಳನ್ನು ಮಾಡಬಹುದಿತ್ತು. ಎಲ್ಲಾ ವೇಸ್ಟ್ ಆಯ್ತು …’ ಅಂತ ಹೇಳಿ ವಿಷಾಧದ ನಗೆ ಬೀರಿದರು ದೇಸಾಯಿ. ಕಳೆದ 10 ವರ್ಷಗಳಲ್ಲಿ ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಚಿತ್ರ ಮಾಡಿದ್ದು ಕಡಿಮೆಯೇ. ಇನ್ನು ಬಿಡುಗಡೆಯಾದ ಚಿತ್ರಗಳು ಸಹ ಅವರಿಗೆ ಹೆಸರು ತಂದುಕೊಡಲಿಲ್ಲ. ಒಂದು ಕಡೆ ಸೋಲು, ಇನ್ನೊಂದು ಕಡೆ ನೋವು, ಮತ್ತೂಂದು ಕಡೆ ಅವಕಾಶಗಳು ಕೈತಪ್ಪುತ್ತಿರುವ ಹತಾಶೆ … ಇದೆಲ್ಲದರ ಮಧ್ಯೆಯೇ ಅವರು ಹತ್ತು ವರ್ಷಗಳನ್ನು ಕಳೆದಿದ್ದಾರೆ.
“ವಿಷಯ ಸಿಕ್ಕಾಗ ರಾಜಿ ಆಗಬಾರದು. ಹಾಗೊಮ್ಮೆ ರಾಜಿಯಾದರೆ ಚಿತ್ರಗಳು ಸತ್ತು ಹೋಗುತ್ತವೆ. ನನಗೆ ನನ್ನದೇ ಬೇರೆ ಜವಾಬ್ದಾರಿಗಳಿದ್ದವು. ಇನ್ನು ಬಂದವರು ಹೆಚ್ಚು ಸಮಯ ಕೊಡಲಿಲ್ಲ. ಸರಿಯಾಗಿ ಚಿತ್ರ ಮಾಡಿದ್ದರೆ, 10 ಚಿತ್ರಗಳನ್ನು ಮುಗಿಸಬಹುದಿತ್ತು. ಇನ್ನು ಎರಡೂ¾ರು ಚಿತ್ರಗಳನ್ನು ಮಾಡಿದರೂ ಅದು ನಾನಂದುಕೊಂಡಂತೆ ಆಗಲಿಲ್ಲ. ನನ್ನಲ್ಲಿ ಒಂದಿಷ್ಟು ವಿಚಾರ ಇತ್ತು. ಅದಕ್ಕೆ ಸರಿಯಾಗಿ ಅವಕಾಶ ಬಂದಿದ್ದರೆ, ಒಂದಿಷ್ಟು ಚಿತ್ರಗಳನ್ನು ಮಾಡಬಹುದಿತ್ತು. ಅದು ಸಾಧ್ಯವಾಗಲಿಲ್ಲ. ಒಂದು ಕಡೆ ಕಳೆದು ಹೋದ 10 ವರ್ಷಗಳು ವಾಪಸ್ಸು ಬರುವುದಿಲ್ಲ, ಇನ್ನೊಂದು ಕಡೆ ನಾನಂದುಕೊಂಡಂತಹ ವಿಚಾರಗಳನ್ನೂ ತೆರೆಯ ಮೇಲೆ ತರುವುದಕ್ಕೆ ಸಾಧ್ಯವಾಗಲಿಲ್ಲ.
ಇನ್ನು ನಾನೇನು ಮಾಡಬಹುದು. ನನಗೀಗ 63 ವರ್ಷ. ಅಬ್ಬಬ್ಟಾ ಎಂದರೆ ಇನ್ನು ಎರಡೂರು ವರ್ಷಗಳ ಕಾಲ ಸಿನಿಮಾ ಮಾಡಬಹುದು ಅಷ್ಟೇ …’ ಎಂದು ಒಂದು ಕ್ಷಣ ಮೌನವಾದರು ದೇಸಾಯಿ. ಅವರ ಮಾತು ಮುಂದುವರೆಯಿತು. “ನನಗೆ ಬೇಸರವಾಗುತ್ತಿರೋದು, ಕೆಲಸ ಗೊತ್ತಿದ್ದೂ 10 ವರ್ಷ ವೇಸ್ಟ್ ಆಯಿತಲ್ಲಾ ಎಂಬ ವಿಷಯದ ಬಗ್ಗೆ. ಯಾರಾದರೂ ಮುಂದೆ ಬಂದು ಚಿತ್ರ ಮಾಡುವುದಕ್ಕೆ ಹಣ ಹಾಕಿದ್ದರೆ, ಒಂದಿಷ್ಟು ಚಿತ್ರಗಳನ್ನು ಮಾಡಬಹುದಿತ್ತು. ನನ್ನ ಬಳಿ ಎಲ್ಲಾ ತರಹದ ಕಥೆಗಳಿದ್ದವು. ಲವ್, ಆ್ಯಕ್ಷನ್, ಭಯೋತ್ಪಾದನೆ … ಹೀಗೆ ಹಲವು ವಿಷಯಗಳಿದ್ದವು. ಅವೆಲ್ಲಾ ಇನ್ನು ಮಾಡೋಕೆ ಸಾಧ್ಯವಾ? ಆ ಸಮಯ, ಎನರ್ಜಿ ಯಾವುದೂ ವಾಪಸ್ಸು ಬರುವುದಿಲ್ಲ. ನಾನು ಇನ್ನೇನು ಮಾಡಬಹುದು? ಇರುವುದರಲ್ಲೇ ಯಾವುದೇ ಬೆಸ್ಟ್ ಅನಿಸುತ್ತದೋ ಅದನ್ನಿಟ್ಟುಕೊಂಡು, ವರ್ಷಕ್ಕೆ ಒಂದೋ, ಎರಡೋ ಸಿನಿಮಾ ಮಾಡಬಹುದು’ ಎನ್ನುತ್ತಾರೆ ದೇಸಾಯಿ.
ಮುಂದೇನೋ ಗೊತ್ತಿಲ್ಲ. ಆದರೆ, ಈಗಂತೂ ಅವರು ಬಹಳ ವಿಶ್ವಾಸದಿಂದ್ದಾರೆ. ಅದಕ್ಕೆ ಕಾರಣ ಹೊಸ ಚಿತ್ರ “ಉದ^ರ್ಷ’. “ಶೂರ್ಶಾಟ್ ಹೇಳುತ್ತೀನಿ. ಇದು ಖಂಡಿತಾ ಗೆಲ್ಲುತ್ತದೆ. ಅದಕ್ಕೆ ಕಾರಣ ಇದರಲ್ಲಿರುವ ವಿಷಯ. ಇದೊಂದು ಯೂನಿವರ್ಸಲ್ ವಿಷಯ. ಅದೇ ಕಾರಣಕ್ಕೆ ಒಂದು ಭಾಷೆಗೆ ಸೀಮಿತ ಮಾಡದೆ, ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಮಾಡುತ್ತಿದ್ದೀನಿ. ಚಿತ್ರ ಖಂಡಿತಾ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ಪ್ರೇಕ್ಷಕರಿಗೆ ಈ ಚಿತ್ರ ವಿಭಿನ್ನ ಅನುಭವ ಕೊಡುವುದಂತೂ ನಿಜ. ಅವಕಾಶವಿದ್ದಿದ್ದರೆ, ಇಂಥ 10 ಸಿನಿಮಾ ಮಾಡಬಹುದಿತ್ತು. ಎಲ್ಲಾ ಮಿಸ್ ಆಯ್ತು. ಪಾಸ್ಟ್ ಈಸ್ ಪಾಸ್ಟ್ …’ ಎಂದು ನಗೆ ಬೀರಿದರು ದೇಸಾಯಿ.
“ಉದ^ರ್ಷ’ ಚಿತ್ರವನ್ನು ಬಹುತೇಕ ಮಾಡಿ ಮುಗಿಸಿದ್ದಾರೆ ದೇಸಾಯಿ. ಈಗಾಗಲೇ ಮೂರೂ ಚಿತ್ರಗಳ ಡಬ್ಬಿಂಗ್ ಕೆಲಸ ಮುಗಿದಿದ್ದು, ಇನ್ನು ಎಂಟು ದಿನಗಳ ಚಿತ್ರೀಕರಣ ಮುಗಿದರೆ ಕುಂಬಳಕಾಯಿ. ಅಕ್ಟೋಬರ್ ಕೊನೆಯ ಹೊತ್ತಿಗೆ ಫಸ್ಟ್ ಕಾಪಿ ತೆಗೆದು, ನವೆಂಬರ್ನಲ್ಲಿ ಚಿತ್ರ ಬಿಡುಗಡೆ ಮಾಡುವುದು ದೇಸಾಯಿ ಅವರ ಯೋಚನೆ. “ನಾನು ಅಂದುಕೊಂಡಷ್ಟು ಚೆನ್ನಾಗಿ “ರೇ’ ಹೋಗಲಿಲ್ಲ. ಆ ನಂತರ “ಉದ^ರ್ಷ’ ಶುರು ಮಾಡಿದೆ. ಮಡಿಕೇರಿಯಲ್ಲಿ ಒಂದು ಹಂತದ ಚಿತ್ರೀಕರಣ ನಡೆಯಿತು. ಮತ್ತೆ ಹಣಕಾಸಿನ ಸಮಸ್ಯೆ ಎದುರಾಯಿತು. ಆ ಸಂದರ್ಭದಲ್ಲಿ ನನ್ನ ಸ್ನೇಹಿತ ದೇವರಾಜ್ ಜೊತೆಯಾದರು. ಅವರು ನನ್ನ ವಾಕಿಂಗ್ ಫ್ರೆಂಡ್. ಅದೊಂದು ದಿನ ಭೇಟಿಯಾಗಿ, “ಏನು ಮಾಡುತ್ತಿದ್ದೀರಾ’ ಅಂತ ಕೇಳಿದರು. ಆಗ ಈ ಚಿತ್ರದ ಬಗ್ಗೆ ಹೇಳಿದೆ. “ನೀವು ಸುಮ್ಮನೆ ಕೂರೋದು ನೋಡೋಕೆ ಆಗಲ್ಲ, ನಾನಿದ್ದೀನಿ, ಚಿತ್ರ ಮುಂದುವರೆಸಿ’ ಎಂದರು. ಅದೇ ರಾತ್ರಿ ದುಡ್ಡು ಕೊಟ್ಟು, “ಬೆಳಿಗ್ಗೆಯಿಂದ ಕೆಲಸ ಶುರು ಮಾಡಿ’ ಎಂದರು. ಆ ನಂತರ ಸತತವಾಗಿ ಕೆಲಸ ಮಾಡಿ, ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಬೆಂಗಳೂರು, ಹೈದರಾಬಾದ್, ಕೊಚ್ಚಿನ್, ಮಡಿಕೇರಿ ಮುಂತಾದ ಕಡೆ ಚಿತ್ರೀಕರಣ ಆಗಿದೆ. ಇನ್ನು ಎಂಟು ದಿನಗಳ ಚಿತ್ರೀಕರಣ ಮುಗಿಸಿದರೆ ಆಯ್ತು’ ಎನ್ನುತ್ತಾರೆ ದೇಸಾಯಿ.
ಈ ಬಾರಿ ದೇಸಾಯಿ, ಚಿತ್ರದ ಪೋಸ್ಟರ್ಗಳಲ್ಲಿ ಯಾರ ಮುಖವನ್ನೂ ತೋರಿಸಿಲ್ಲ. ರಕ್ತಸಿಕ್ತ ಕಾಲುಗಳು, ಚೂರಿ ಹಿಡಿದಿರುವ ಕೈ ತೋರಿಸಿಯೇ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. “ಇವತ್ತಿನ ಟ್ರೆಂಡ್ಗೆ ಈ ಕಥೆ ಹೇಳಿ ಮಾಡಿಸಿದಂತಿದೆ. ಈ ಚಿತ್ರದಲ್ಲಿ ವಿಷಯವಿದೆ, ಒಂದೊಳ್ಳೆಯ ಚಿತ್ರಕಥೆ ಇದೆ, ಅಭಿನಯ ಇದೆ. ಇದೊಂದು ಮರ್ಡರ್ ಮಿಸ್ಟ್ರಿ ಚಿತ್ರ. ಒಂದು ಭಾಷೆಗೆ ಸೀಮಿತವಾಗಬಾರದು ಅಂತ ಬೇರೆಬೇರೆ ಭಾಷೆಯ ಕಲಾವಿದರನ್ನು ಹಾಕಿಕೊಂಡು ಚಿತ್ರ ಮಾಡಿದ್ದೇನೆ. ಹೊಸ ಮುಖಗಳು ಒಂದು ಕಡೆಯಾದರೆ, ಪ್ರೇಕ್ಷಕರಿಗೆ ಇದೊಂದು ಕ್ರೈಮ್ ಥ್ರಿಲ್ಲರ್ ಎಂಬುದು ಸ್ಪಷ್ಟವಾಗಬೇಕು ಎನ್ನುವ ಕಾರಣಕ್ಕೆ ಪೋಸ್ಟರ್ಗಳಲ್ಲಿ ಯಾರ ಮುಖವನ್ನೂ ತೋರಿಸಿಲ್ಲ. ಇದೊಂದು ಕ್ರೈಮ್ ಥ್ರಿಲ್ಲರ್ ಎಂದು ಸ್ಪಷ್ಟವಾಗಿ, ಪ್ರೇಕ್ಷಕರು ಬರಬೇಕು. ಆ ನಂತರ ಅವರಿಗೆ ಮೋಸವಾಗುವುದಿಲ್ಲ. ನಾನು ಇದನ್ನು ಅತಿಯಾದ ವಿಶ್ವಾಸದಿಂದ ಹೇಳಿಕೊಳ್ಳುತ್ತಿಲ್ಲ. ಇದು ಖಂಡಿತಾ ನನ್ನ ಕಂಬ್ಯಾಕ್ ಚಿತ್ರವಾಗಲಿದೆ. ಈ ಹಿಂದೆ ನನ್ನ ಕ್ರೈಮ್ ಥ್ರಿಲ್ಲರ್ ನೋಡಿ ಜನರಿಗೆ ಅದೆಷ್ಟು ಶಾಕ್ ಆಗಿತ್ತೋ, ಈ ಬಾರಿ ಡಬ್ಬಲ್ ಶಾಕ್ ಆಗಲಿದೆ ಎಂಬ ವಿಶ್ವಾಸ ನನಗಿದೆ’ ಎಂದು ವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ ದೇಸಾಯಿ.
ಇದು ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆಯಂತೆ. “ರೆಸಾರ್ಟ್ವೊಂದರಲ್ಲಿ ನಡೆಯುವ ನ್ಯೂ ಇಯರ್ ಪಾರ್ಟಿಯ ಸಂದರ್ಭದಲ್ಲಿ ನಡೆಯುವ ಒಂದು ಕೊಲೆಯನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ. ನಂತರ ಕಥೆ ಬೇರೆಬೇರೆ ರೂಪ ಪಡೆಯುತ್ತಾ ಹೋಯಿತು. ಪ್ರತಿ 10 ನಿಮಿಷಕ್ಕೊಮ್ಮೆ ಪ್ರೇಕ್ಷಕರಿಗೆ ಶಾಕ್ ಆಗುವಂತೆ ನೋಡಿಕೊಂಡಿದ್ದೇನೆ. ಪ್ರೇಕ್ಷಕರು ಏನು ನಿರೀಕ್ಷೆ ಮಾಡಿರುತ್ತಾರೋ, ಅವೆಲ್ಲಾ ಸುಳ್ಳಾಗುತ್ತಾ ಹೋಗುತ್ತದೆ. ಮೂರು ಎಳೆಗಳು ಒಂದಕ್ಕೊಂದು ಸೇರಿಕೊಂಡು, ಕೊನೆಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತಾ ಹೋಗುತ್ತದೆ. ಕಳೆದ ಐದು ವರ್ಷಗಳಿಂದ ಹಲವು ಸಸ್ಪೆನ್ಸ್ ಚಿತ್ರಗಳು ಬಂದಿವೆ. ಆದರೆ, ಕೊನೆಗೆ ಅಲ್ಲಿಂದ ಕದ್ದಿದ್ದಾರೆ, ಇಲ್ಲಿಂದ ಕದ್ದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತವೆ. ಆ ಚಿತ್ರಗಳಾವುವೂ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ತಟ್ಟಲಿಲ್ಲ. ಇದು ನನ್ನ ಪಾಲಿಗೆ ಇನ್ನೊಂದು “ತರ್ಕ’ ಆಗುವ ಸಾಧ್ಯತೆ ಇದೆ’ ಎಂದು ಮಾತು ಮುಗಿಸುತ್ತಾರೆ ದೇಸಾಯಿ.
ಹಿಂದಿಗೆ ರೀಮೇಕ್ ಮಾಡುವ ಸಾಧ್ಯತೆ
“ಉದ್ಘರ್ಷ’ ಚಿತ್ರವನ್ನು ಕನ್ನಡವಲ್ಲದೆ ತೆಲುಗು ಮತ್ತು ತಮಿಳಿನಲ್ಲೂ ಏಕಕಾಲಕ್ಕೆ ಮಾಡುತ್ತಿದ್ದಾರೆ ದೇಸಾಯಿ. ಇನ್ನು ಹಿಂದಿಗೂ ಡಬ್ ಮಾಡಬೇಕೆಂಬ ಯೋಚನೆ ಅವರಿಗಿತ್ತಂತೆ. ಆದರೆ, ಹಿಂದಿಗೆ ಡಬ್ ಮಾಡುವುದು ಬೇಡ, ರೀಮೇಕ್ ಮಾಡಿ ಎಂದು ಪ್ರಮುಖ ಪಾತ್ರ ಮಾಡುತ್ತಿರುವ ಅನೂಪ್ ಸಿಂಗ್ ಠಾಕೂರ್ ಹೇಳುತ್ತಿದ್ದಾರಂತೆ. “ಈ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಿ, ಆ ಮೂಲಕ ತಮ್ಮನ್ನು ಲಾಂಚ್ ಮಾಡಿ ಎಂದು ಅನೂಪ್ ಕೇಳುತ್ತಿದ್ದಾರೆ. ಎಲ್ಲಾ ಕೂಡಿ ಬಂದರೆ, ಹಿಂದಿಯಲ್ಲಿ ಇದೇ ಚಿತ್ರವನ್ನು ರೀಮೇಕ್ ಮಾಡುತ್ತೀನಿ. ಅನೂಪ್ ಕಡೆಯವರೇ ಚಿತ್ರ ನಿರ್ಮಿಸಲಿದ್ದಾರೆ. ಹಿಂದಿಗೆ ಸೂಕ್ತ ಕಲಾವಿದರನ್ನಿಟ್ಟುಕೊಂಡು ರೀಮೇಕ್ ಮಾಡಬಹುದು’ ಎನ್ನುತ್ತಾರೆ ದೇಸಾಯಿ.
ಉದ್ಘರ್ಷ ಎಂದರೇನು ಗೊತ್ತಾ?
ಯಾವಾಗ “ಉದ್ಘರ್ಷ’ ಎಂಬ ಚಿತ್ರ ಮಾಡುತ್ತೀನಿ ಎಂದು ದೇಸಾಯಿ ಘೋಷಿಸಿದರೋ, ಆಗಿಂದ ಇಲ್ಲಿಯವರೆಗೂ “ಉದ್ಘರ್ಷ’ ಎಂದರೇನು ಎಂದು ಹಲವರು ಹುಳ ಬಿಟ್ಟುಕೊಂಡಿದ್ದಾರೆ. ಹಿಂದೆಲ್ಲೂ ಆ ಪದ ಕೇಳಿರುವುದಕ್ಕೆ ಸಾಧ್ಯ ಇಲ್ಲ. ಅಷ್ಟೇ ಅಲ್ಲ, ಪದಕೋಶದಲ್ಲೂ ಆ ಪದವಿಲ್ಲ. ಹಾಗಾದರೆ, “ಉದ್ಘರ್ಷ’ ಎಂದರೇನು ಎಂದರೆ, ಅದು ತಾವೇ ಹುಟ್ಟುಹಾಕಿದ ಪದ ಎನ್ನುತ್ತಾರೆ ದೇಸಾಯಿ.
“ನಿಜ ಹೇಳಬೇಕೆಂದರೆ, “ಉದ^ರ್ಷ’ ಎನ್ನುವ ಪದವೇ ಇಲ್ಲ. ಈ ಚಿತ್ರಕ್ಕೆ “ಬ್ಯಾಟಲ್ ಅಟ್ ಇಟ್ಸ್ ಪೀಕ್’ ಎಂಬ ಅಡಿಬರಹವಿದೆ. ಅದಕ್ಕೆ ಕಾರಣ ಕಥೆಯಲ್ಲಿ ಘರ್ಷಣೆ ದೊಡ್ಡ ಮಟ್ಟದಲ್ಲಿದೆ. ಈ ಅಡಿಬರಹಕ್ಕೆ ಸೂಕ್ತವಾದ ಪದ ಸಿಗುತ್ತದಾ ಎಂದು ಹುಡಕಾಟ ಮಾಡಿದಾಗ, ಯಾವ ಪದ ಸಿಗಲಿಲ್ಲ. ನಮಗೊಂದು ತೂಕವಾದ ಪದ ಬೇಕಿತ್ತು. ಘರ್ಷಣೆ ಎನ್ನುವುದು ಸೂಕ್ತವಾಗಿತ್ತು. ಅದರ ಜೊತೆಗೆ ಉದ್ ಸೇರಿಸಿದೆವು. ಉದ್ ಎಂದರೆ ಉತ್ಛ ಅಥವಾ ಮೇಲುಮಟ್ಟದ್ದು ಎಂದರ್ಥ. ಇವೆರೆಡೂ ಸೇರಿದಾಗ, “ಉದ^ರ್ಷಣೆ’ ಆಯಿತು. ನನ್ನ ಹಲವು ಚಿತ್ರಗಳ ಹೆಸರುಗಳು ಅರ್ಕಾವತ್ತಿನಲ್ಲಿ ಎಂಡ್ ಆಗಿವೆ. “ತರ್ಕ’, “ನಿಷ್ಕರ್ಷ’, “ಉತ್ಕರ್ಷ’, “ಪರ್ವ’, “ಮರ್ಮ’ … ಹೀಗೆ ಹಲವು ಹೆಸರುಗಳು ಅರ್ಕಾವತ್ತಿನಲ್ಲಿ ಎಂಡ್ ಆಗಿರುವುದರಿಂದ, ಇದೂ ಅದೇ ತರಹ ಬ್ರಾಂಡ್ ಆಗಲಿ ಎಂಬ ಕಾರಣಕ್ಕೆ “ಉದ್ಘರ್ಷಣೆ’ಯಲ್ಲಿ ಣೆ ತೆಗೆದು “ಉದ್ಘರ್ಷ’ ಎಂಬ ಪದವನ್ನ ಕಾಯಿನ್ ಮಾಡಿದ್ದೇವೆ’ ಎನ್ನುತ್ತಾರೆ ದೇಸಾಯಿ.
ಇನ್ನು ತೆಲುಗಿನಲ್ಲಿ ಮೊದಲಿಗೆ “ಉದ್ಘರ್ಷಣ’ ಎಂಬ ಹೆಸರಿಟ್ಟಿದ್ದರಂತೆ ಅವರು. “ತೆಲುಗಿನಲ್ಲಿ “ಉದ^ರ್ಷಣ’ ಎಂಬ ಹೆಸರಿಟ್ಟಿದ್ದೆ. ಆದರೆ, ತೆಲುಗಿನಲ್ಲಿ ಉದ^ರ್ಷಣ ಎಂಬ ಪದವಿದೆ. ಅದಕ್ಕೊಂದು ಅರ್ಥವೂ ಇದೆ. ಅದೊಂದು ಆರ್ಯುವೇದೀಯ ಔಷಧಿಯಂತೆ. ಹಾಗಾಗಿ ತೆಲುಗಿನಲ್ಲಿ “ಉದ್ಘರ್ಷ’ ಅಂತಲೇ ಹೆಸರಿಟ್ಟಿದ್ದೇನೆ.
ಇನ್ನು ತಮಿಳಿನಲ್ಲಿ “ಉಚ್ಛಕಟ್ಟಂ’ ಎಂಬ ಹೆಸರು ಇಡುವ ಯೋಚನೆ ಇದೆ. ಅಲ್ಲಿ ಕಟ್ಟಂ ಎಂದರೆ ಯುದ್ಧ. ಹಾಗಾಗಿ “ಉತ್ಛಕಟ್ಟಂ’ ಎಂಬ ಪದ ಸೂಕ್ತ. 38 ವರ್ಷಗಳ ಹಿಂದೆ ಶರತ್ ಬಾಬು ಅಭಿನಯದ ಅದೇ ಹೆಸರಿನ ಸಿನಿಮಾ ಬಂದಿತ್ತು. ಆ ಟೈಟಲ್ ಕೇಳಿದ್ದೇನೆ. ಸಿಕ್ಕರೆ, ಅದೇ ಹೆಸರು. ಇಲ್ಲವಾದರೆ “ಉದ^ರ್ಷ’ ಅಂತಲೇ ಹೆಸರಿಟ್ಟು, ಕೆಳಗೆ “ಉಚ್ಚಕಟ್ಟಂ’ ಎಂಬ ಟ್ಯಾಗ್ಲೈನ್ ಇಡುವ ಯೋಚನೆ ಇದೆ’ ಎನ್ನುತ್ತಾರೆ ದೇಸಾಯಿ.
ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ