ಸಾಧಾರಣ ವಾತಾವರಣ ಮೋಡ ಕವಿದ ಮಾತು
Team Udayavani, Sep 14, 2018, 6:00 AM IST
ನಿರ್ದೇಶಕ ಅಂಜನಿ ಕುಮಾರ್ಗೆ ತುಂಬಾನೇ ಮಾತನಾಡಬೇಕು, ಸಿನಿಮಾ ಬಗ್ಗೆ ಹೇಳಿಕೊಳ್ಳಬೇಕೆಂಬ ಆಸೆ ಏನೋ ಇತ್ತು. ಆದರೆ, ಹೇಗೆ ಶುರು ಮಾಡಬೇಕು, ಏನು ಹೇಳಬೇಕೆಂಬ ಗೊಂದಲದಲ್ಲಿದ್ದರು. ಚಿತ್ರದ ಟೈಟಲ್ನಂತೆ ಅವರ ಮಾತಲ್ಲೂ ಮೋಡ ಕವಿದಿತ್ತು. ಅಂಜನಿ ಕುಮಾರ್ “ಮೋಡ ಕವಿದ ವಾತಾವರಣ’ ಚಿತ್ರದ ನಿರ್ದೇಶಕರು. ಈ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಮುಹೂರ್ತ ಮುನ್ನ ದಿನ ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು.
ನಿರ್ದೇಶಕ ಅಂಜನಿ ಕುಮಾರ್ಗೆ ಇದು ಎರಡನೇ ಸಿನಿಮಾ. ತಮ್ಮ ಎರಡನೇ ಸಿನಿಮಾದಲ್ಲಿ ಸ್ನೇಹ, ಪ್ರೀತಿ, ಸೆಂಟಿಮೆಂಟ್ ತೋರಿಸಲು ಮುಂದಾಗಿದ್ದಾರೆ. “ಇದು ಮೂರು ಟ್ರ್ಯಾಕ್ನಲ್ಲಿ ಸಾಗುವ ಕಥೆಯನ್ನು ಹೊಂದಿದೆ. ಸ್ನೇಹ, ಪ್ರೀತಿ ಹಾಗೂ ಮದರ್ ಸೆಂಟಿಮೆಂಟ್. ಮೂರು ಕೂಡಾ ಸಿನಿಮಾದ ಪ್ರಮುಖ ಅಂಶವಾಗಿದೆ’ ಎಂದು ಚಿತ್ರದ ಬಗ್ಗೆ ವಿವರ ಕೊಟ್ಟರು ಅಂಜನಿ ಕುಮಾರ್. ಚಿತ್ರದಲ್ಲಿ ಸೂಕ್ಷ್ಮ ಸಂದೇಶವನ್ನು ನೀಡಲಿದ್ದಾರಂತೆ. ಎಲ್ಲಾ ಓಕೆ, ಸಿನಿಮಾದಲ್ಲಿ ವಿಶೇಷವಾದ ಅಂಶ ಯಾವುದೆಂದರೆ ನಿರೂಪಣೆ ಎನ್ನುತ್ತಾರೆ ನಿರ್ದೇಶಕರು. ಮೂರು ಟ್ರ್ಯಾಕ್, ಮೂರು ಶೇಡ್ಗಳಲ್ಲಿ ಮೂಡಿಬರಲಿದೆಯಂತೆ.
ಚಿತ್ರದಲ್ಲಿ ನಿತಿನ್ ರಾಜ್ ನಾಯಕರಾಗಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕಾಗಿ ಎರಡು ತಿಂಗಳ ತರಬೇತಿ ಪಡೆದಿದ್ದಾರಂತೆ. ಕಥೆಗೆ ಪೂರಕವಾಗಿ ಇವರ ಪಾತ್ರ ಕೂಡಾ ಮೂರು ಶೇಡ್ನಲ್ಲಿ ಸಾಗಲಿದೆಯಂತೆ. ಚಿತ್ರದ ಕಥೆ, ಕ್ಲೈಮ್ಯಾಕ್ಸ್ ಅದ್ಭುತವಾಗಿದ್ದು, ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಅವರಿಗಿದೆ. ಚಿತ್ರದಲ್ಲಿ ಅರ್ಚನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರಿಗಿದು ಮೊದಲ ಚಿತ್ರ. ತಾಯಿ ಇಲ್ಲದ ತಬ್ಬಲಿಯಾಗಿ ಕಾಣಿಸಿಕೊಂಡಿದ್ದಾರಂತೆ. ಇಡೀ ಸಿನಿಮಾ ಫೀಲಿಂಗ್ನಲ್ಲೇ ಸಾಗುತ್ತದೆ ಎಂಬುದು ಅವರ ಮಾತು. ಚಿತ್ರಕ್ಕೆ ರಾಜೇಶ್ ಭಟ್ ಸಂಗೀತವಿದೆ.