ಮೈಸೂರ್ ಡೈರೀಸ್ ನೆನಪುಗಳ ಗುಚ್ಛ
Team Udayavani, Sep 21, 2018, 6:00 AM IST
“ಮೈಸೂರು ಕಥೆ, ಮೈಸೂರು ನಿರ್ದೇಶಕ, ಮೈಸೂರಿನ ಚಿತ್ರೀಕರಣ, ಮೈಸೂರು ನಿರ್ಮಾಪಕ, ಮೈಸೂರು ಟಾಕೀಸ್ ವಿತರಣೆ ಸಂಸ್ಥೆ, ಮೈಸೂರು ಪೇಟ ತೊಡಿಸಿ ಸನ್ಮಾನ ಇತ್ಯಾದಿ…’
– ಅಲ್ಲಿ ಎಲ್ಲವೂ ಮೈಸೂರ್ ಮಯ. ಅದೆಲ್ಲದ್ದಕ್ಕೂ ಕಾರಣ, “ಮೈಸೂರ್ ಡೈರೀಸ್’ ಚಿತ್ರ. ಹೌದು, ಬಹುತೇಕ ಹೊಸಬರೇ ಸೇರಿ ಮಾಡಿದ ಚಿತ್ರವಿದು. ಒಂದೇ ವೇದಿಕೆಯಲ್ಲಿ “ಮೈಸೂರು’ ಗುಣಗಾನ ನಡೆಯೋಕೆ ಕಾರಣ ಚಿತ್ರದ ಟೀಸರ್ ಬಿಡುಗಡೆ. ಚಿತ್ರೀಕರಣ ಮುಗಿಸಿದ ಚಿತ್ರತಂಡ, ಟೀಸರ್ ರಿಲೀಸ್ ಮಾಡುವ ಮೂಲಕ ಮಾಧ್ಯಮ ಎದುರು ಮಾತುಕತೆಗೆ ಕುಳಿತಿತ್ತು.
“ಗೋಧಿ ಬಣ್ಣ ಸಾಧಾರಣ ಮೈಕಟ್ಟು’, “ಕಿರಿಕ್ ಪಾರ್ಟಿ’ ಚಿತ್ರಗಳಿಗೆ ಹಾಡು ಬರೆದು ಗುರುತಿಸಿಕೊಂಡ ಧನಂಜಯ್ ರಂಜನ್ ಈ ಚಿತ್ರದ ನಿರ್ದೇಶಕ. ಇವರಿಗಿದು ಮೊದಲ ಚಿತ್ರ. “ಪುಷ್ಪಕ ವಿಮಾನ’, “ರಾಮಾ ರಾಮ ರೇ’ ಚಿತ್ರಗಳಿಗೆ ಬರವಣಿಗೆ ಹಿಂದೆ ಇದ್ದ ಧನಂಜಯ್ ರಂಜನ್ಗೆ “ಮೈಸೂರ್ ಡೈರೀಸ್’ ಒಂದು ಕನಸು. ಆ ಕನಸಿಗೆ ಬಣ್ಣ ತುಂಬಿದ್ದು, ನಿರ್ಮಾಪಕದ್ವಯರಾದ ದೀಪಕ್ ಮತ್ತು ಚೇತನ್ ಕೃಷ್ಣ. ಆ ಬಗ್ಗೆ ಹೇಳುವ ನಿರ್ದೇಶಕ, “ಇದು ಮೈಸೂರಿನ ಭಾಗದಲ್ಲಿ ನಡೆಯೋ ಕಥೆ. ಮೈಸೂರು ಇಲ್ಲೊಂದು ಪ್ರಮುಖ ಪಾತ್ರ ವಹಿಸಿದೆ. ಪ್ರತಿಯೊಬ್ಬರಲ್ಲೂ ಒಂದೊಂದು ನೆನಪಿನ ಡೈರಿ ಇರುತ್ತೆ. ಹಳೆಯ ಮಧುರ ನೆನಪುಗಳ ಗುತ್ಛದೊಂದಿಗೆ ಈ ಚಿತ್ರ ಮಾಡಿದ್ದೇನೆ. ಗೆಳೆತನದ ಜೊತೆಗೆ ಭಾವನೆಗಳ ಮಿಶ್ರಣದ ಚಿತ್ರಣ ಇಲ್ಲಿದೆ. ಆರಂಭದಲ್ಲಿ ಈ ಕಥೆ ಹೇಳಿ, ಮೈಸೂರಲ್ಲೇ 40 ದಿನ ಚಿತ್ರೀಕರಣ ಆಗಬೇಕು ಅಂದಾಗ, ನಿರ್ಮಾಪಕ ದೀಪಕ್ 50 ದಿನ ತಗೊಳ್ಳಿ. ಒಳ್ಳೆಯ ಚಿತ್ರ ಕೊಡಿ ಅಂದರು. ಇನ್ನು, ಚಿತ್ರಕ್ಕೆ ಹಣಕಾಸಿನ ತೊಂದರೆ ಆದಾಗ, ನಮಗೆ ಸಾಥ್ ಕೊಟ್ಟಿದ್ದು ಚೇತನ್ ಕೃಷ್ಣ. ಅವರಿಲ್ಲ ಅಂದಿದ್ದರೆ, ಚಿತ್ರ ಆಗುತ್ತಿರಲಿಲ್ಲ. ಎಲ್ಲರ ಶ್ರಮದಿಂದ “ಮೈಸೂರ್ ಡೈರೀಸ್’ ಆಗಿದೆ’ ಅಂದರು ಧನಂಜಯ್ ರಂಜನ್.
ನಿರ್ಮಾಪಕ ಚೇತನ್ ಕೃಷ್ಣ ಅವರದು ಮೈಸೂರು. ದೀಪಕ್ ಈ ಚಿತ್ರ ಶುರುಮಾಡಿದ್ದರು. ಮಧ್ಯೆ ಸಮಸ್ಯೆ ಆದಾಗ, ನನ್ನ ಬಳಿ ಬಂದು ಕಥೆ ಹೇಳಿಸಿದರು. ಎಲ್ಲೋ ಒಂದು ಕಡೆ ಕಥೆ ಮೇಲೆ ನಂಬಿಕೆ ಇತ್ತು. ಕೈ ಜೋಡಿಸಿದೆ. ಇದೊಂದು ಒಳ್ಳೆಯ ಚಿತ್ರ ಆಗಲಿದೆ ಎಂಬುದು ಚೇತನ್ ಕೃಷ್ಣ ಅವರ ಮಾತು.
ನಿರ್ಮಾಪಕ ದೀಪಕ್ ಕೃಷ್ಣ “ನಿಮ್ಮೆಲ್ಲರ ಸಹಕಾರ ನಮ್ಮ ಮೇಲಿರಲಿ’ ಎಂದಷ್ಟೇ ಹೇಳಿ ಸುಮ್ಮನಾದರು. ಚಿತ್ರದಲ್ಲಿ ಪ್ರಭು ನಾಯಕರಾಗಿ ನಟಿಸಿದ್ದಾರೆ. ಅವರೊಂದಿಗೆ ಮಂಜು, ಶೇಖರ್, ಪಾವನಾ ಇತರೆ ಕಲಾವಿದರು ಅಭಿನಯಿಸಿದ್ದಾರೆ. ಎಲ್ಲರಿಗೂ ಚಿತ್ರದ ಮೇಲೆ ವಿಶ್ವಾಸವಿದೆ. ಅನೂಪ್ ಸೀಳಿನ್ ಮತ್ತು ಚರಣ್ರಾಜ್ ಜೊತೆಗೂಡಿ ಮೂರು ಹಾಗು ಎರಡು ಹಾಡುಗಳಿಗೆ ಇಬ್ಬರೂ ಸಂಗೀತ ನೀಡಿದ್ದಾರೆ. ಅನೂಪ್ ಹಿನ್ನೆಲೆ ಸಂಗೀತ ಮಾಡುತ್ತಿದ್ದಾರೆ. ಚಂದನ್ ಸಂಕಲನವಿದೆ. ಶಕ್ತಿ ಶೇಖರ್ ಚಿತ್ರದ ಛಾಯಾಗ್ರಾಹಕರು.