ಥ್ರಿಲ್ಲರ್ ಮಾತು; ಚುಮುಚುಮು ಚಳಿಯಲ್ಲಿ
Team Udayavani, Oct 26, 2018, 6:00 AM IST
ಅದು ಮುಂಜಾನೆ ಮಡಿಕೇರಿಯ ಪ್ರಶಾಂತ ವಾತಾವರಣ. ಎರಡು ತಿಂಗಳ ಹಿಂದಷ್ಟೆ ಮಳೆಯ ಹೊಡೆತಕ್ಕೆ ಅಕ್ಷರಶಃ ನಲುಗಿ ಹೋಗಿದ್ದ ಕಾಫಿನಾಡು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಎಂದಿನಂತೆ ಚಳಿಗಾಲದ ತಣ್ಣನೆ ಗಾಳಿ ಕೊಡಗಿನಲ್ಲಿ ಬೀಸತೊಡಗಿದೆ. ಇಂತಹ ವಾತಾವರಣದಲ್ಲಿ ಕನ್ನಡದ ಸದಭಿರುಚಿ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಸುನೀಲ್ ಕುಮಾರ್ ದೇಸಾಯಿ ತಮ್ಮ “ಉದ್ಘರ್ಷ” ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ನಿರತರಾಗಿದ್ದರು. ಇನ್ನು ದೇಸಾಯಿ ತಮ್ಮ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣವನ್ನು ತೋರಿಸುವ ಸಲುವಾಗಿಯೇ ಬೆಂಗಳೂರಿನಿಂದ ಸಿನಿಮಾ ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿದ್ದರು. ಅಲ್ಲಿ ದೇಸಾಯಿ ಹಂಚಿಕೊಂಡ “ಉದ್ಘರ್ಷ” ಅನುಭವ ಅವರ ಮಾತುಗಳಲ್ಲೇ ..
“ಉದ್ಘರ್ಷ” ಯುನಿವರ್ಸಲ್ ಕಂಟೆಟ್, ಸಬೆjಕ್ಟ್ ಇರುವ ಸಿನಿಮಾ.”ಪ್ರಚಂಚದಲ್ಲಿ ಯಾವಾಗ ಸಿನಿಮಾ ಶುರುವಾಯಿತೊ, ಅಂದಿನಿಂದ ಇಂದಿನವರೆಗೂ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳನ್ನು ನೋಡುವ, ಖುಷಿಪಡುವ ಒಂದು ದೊಡ್ಡ ಪ್ರೇಕ್ಷಕ ವರ್ಗವೇ ಇದೆ. ಎಂಬತ್ತು ವರ್ಷದ ಹಿಂದೆ ಬಂದ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳನ್ನು ಇಂದಿಗೂ ಪ್ರೇಕ್ಷಕರು ನೋಡುತ್ತಾರೆ. ಆ ಸಿನಿಮಾಗಳಿಗೆ ಅಂಥದ್ದೊಂದು ಶಕ್ತಿ ಇದೆ.
ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳಿಗೆ ನೇಟಿವಿಟಿ, ಭಾಷೆ ಯಾವುದೂ ಅಡ್ಡಿಯಾಗುವುದಿಲ್ಲ. ಅದು ಎಲ್ಲಾ ಕಾಲಕ್ಕೂ, ಎಲ್ಲಾ ಭಾಷೆಗೂ, ಎಲ್ಲಾ ಥರದ ಪ್ರೇಕ್ಷಕರಿಗೂ ಸಲ್ಲುವ ಸಿನಿಮಾ. “ಉದ್ಘರ್ಷ”ಕೂಡ ಅಂಥದ್ದೆ ಸಿನಿಮಾ. ಇದು ಯಾವುದೋ ಒಂದು ಭಾಷೆ, ನೇಟಿವಿಟಿಗೆ ಸೀಮಿತವಾದ ಸಿನಿಮಾವಲ್ಲ. ಹಾಗಾಗಿಯೇ ಇದನ್ನ ಕನ್ನಡದ ಜೊತೆ ಜೊತೆಗೆ ತಮಿಳು, ತೆಲುಗಿನಲ್ಲೂ ಮಾಡಲು ಮುಂದಾದೆವು. ಇದನ್ನು ಯಾವುದೇ ಭಾಷೆಯಲ್ಲಿ ಮಾಡಿದ್ರು ಪ್ರೇಕ್ಷಕರು ನೋಡಿ, ಖುಷಿಪಡುತ್ತಾರೆ. ನನ್ನ ಹಿಂದಿನ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳು ಅದೇ ಕಾರಣಕ್ಕಾಗಿ ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗಿ, ಡಬ್ ಆಗಿ ಗೆದ್ದಿರುವುದು.
“ಉದ್ಘರ್ಷ” ಕೂಡ ಅದೇ ಸಾಲಿಗೆ ಸೇರುವ ಸಿನಿಮಾ. ಹೊಸ ವರ್ಷದ ಹಿಂದಿನ ರಾತ್ರಿಯಿಂದ ಶುರುವಾಗುವ ಸಿನಿಮಾದ ಕಥೆ, ಮರುದಿನ ಮುಗಿಯುತ್ತದೆ. 48 ಗಂಟೆಗಳಲ್ಲಿ ಒಂದು ಕ್ರೈಂ ಹಿಂದೆ, ಏನೇನು ಸಸ್ಪೆನ್ಸ್, ಥ್ರಿಲ್ಲರ್ ಘಟನೆಗಳೆ “ಉದ್ಘರ್ಷ” ಸಿನಿಮಾ. ಇಂದಿನ ಜನರೇಶನ್ ಇಷ್ಟವಾಗುವ ರೀತಿಯಲ್ಲಿ ಅದನ್ನು ಕಟ್ಟಿ ಕೊಡುತ್ತಿದ್ದೇವೆ’ ಎನ್ನುವುದು ದೇಸಾಯಿ ಮಾತು.
ಹೆಂಗಸರ ವಯಸ್ಸು ಮತ್ತು
ಸಿನಿಮಾ ಬಜೆಟ್ ಕೇಳಬಾರದು!
“ಸಾಮಾನ್ಯವಾಗಿ ಹೆಂಗಸರ ವಯಸ್ಸು, ಗಂಡಸರ ಸಂಬಳ ಕೇಳಬಾರದು’ ಎಂಬ ನುಡಿಗಟ್ಟನ್ನು ನೀವೆಲ್ಲ ಕೇಳಿರುತ್ತೀರಿ. ಈಗ ಆ ನುಡಿಗಟ್ಟಿಗೆ “ಸಿನಿಮಾದ ಬಜೆಟ್ ಕೂಡ ಕೇಳಬಾರದು!’ ಎಂಬ ಇನ್ನೊಂದು ಸಾಲನ್ನು ಸೇರಿಸಿದ್ದಾರೆ ದೇಸಾಯಿ! ಏಕಕಾಲಕ್ಕೆ ಕನ್ನಡ,ತಮಿಳು, ತೆಲುಗು ಭಾಷೆಗಳಲ್ಲಿ “ಉದ್ಘರ್ಷ”ಚಿತ್ರ ತಯಾರಾಗುತ್ತಿದ್ದು, ಜೊತೆಗೆ ಹಿಂದಿಗೂ ಡಬ್ ಆಗುತ್ತಿದೆ. ತೆರೆಮೇಲೆ ಕನ್ನಡಕ್ಕಿಂತ ತಮಿಳು, ತೆಲುಗು, ಹಿಂದಿ ಕಲಾವಿದರ ಬೃಹತ್ ತಾರಾಗಣವೇ ಇದೆ. ಈಗಾಗಲೇ ಕೇರಳ, ಹೈದರಾಬಾದ್, ಬೆಂಗಳೂರು, ಮಡಿಕೇರಿ ಸುತ್ತಮುತ್ತ ಸುಮಾರು 65ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆಸಲಾಗಿದೆ. ಇಷ್ಟೊಂದು ದೊಡ್ಡ ಕಲಾವಿದರು, ತಂತ್ರಜ್ಞರು, ಆಧುನಿಕ ಪರಿಕರಗಳನ್ನು ಬಳಸಿ ದೇಸಾಯಿ”ಉದ^ರ್ಷ’ವನ್ನು ಸೆರೆ ಹಿಡಿಯುತ್ತಿರುವುದರಿಂದ,ಚಿತ್ರದ ಬಜೆಟ್ ಎಷ್ಟಿರಬಹುದು..? ಎಂಬ ಕುತೂಹಲದ ಪ್ರಶ್ನೆ ಮೂಡುವುದು ಸಹಜ.
ಇದೇ ಪ್ರಶ್ನೆಯನ್ನು ಪತ್ರಕರ್ತರು ದೇಸಾಯಿ ಅವರ ಮುಂದಿಟ್ಟಾಗ ಬಂದ ಉತ್ತರ “ಹೆಣ್ಣಿನ ವಯಸ್ಸು ಕೇಳಬಾರದು.., ಹಾಗೆ ಸಿನಿಮಾದ ಬಜೆಟ್ ಕೂಡ ಕೇಳಬಾರದು!’ ಅನ್ನೋದು.
“ಯಾವುದೇ ಹೆಣ್ಣು ತನ್ನ ಸರಿಯಾದ ವಯಸ್ಸು ಹೇಳ್ಳೋದಿಲ್ಲ. ಹಾಗೆ ಯಾವುದೇ ನಿರ್ದೇಶಕ, ನಿರ್ಮಾಪಕ ಕೂಡ, ತಮ್ಮ ಸಿನಿಮಾದ ಸರಿಯಾದ ಬಜೆಟ್ ಹೇಳ್ಳೋದಿಲ್ಲ’ ಎಂಬ ಉತ್ತರ ದೇಸಾಯಿ ಅವರದ್ದು.
“ಸಿನಿಮಾದ ಸಬೆjಕ್ಟ್ ಏನು ಡಿಮ್ಯಾಂಡ್ ಮಾಡುತ್ತದೆಯೋ, ಅದೆಲ್ಲವನ್ನು ನಿರ್ಮಾಪಕರು ಒದಗಿಸಿಕೊಟ್ಟಿದ್ದಾರೆ. ಎಲ್ಲೂ.., ಯಾವುದಕ್ಕೂ ರಾಜಿಯಾಗದಂತೆ ಸಿನಿಮಾ ಮಾಡುತ್ತಿದ್ದೇವೆ. ತೆರೆಮೇಲೆ ಸಿನಿಮಾ ನೋಡಿದ್ರೆ, ಎಷ್ಟೊಂದು ಖರ್ಚು ಮಾಡಿದ್ದೇವೆ ಅನ್ನೋದು ಪ್ರೇಕ್ಷಕರಿಗೆ ಗೊತ್ತಾಗುತ್ತೆ’ ಎಂಬ ಜಾಣತನದ ಉತ್ತರ ಕೊಡುತ್ತಾರೆ ದೇಸಾಯಿ.
ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರುತ್ತೇವೆ ಸದ್ಯ “ಉದ್ಘರ್ಷ” ಚಿತ್ರದ ಕ್ಲೈಮ್ಯಾಕ್ಸ್ನಲ್ಲಿದ್ದೇವೆ. ನಾವಂದುಕೊಂಡಂತೆ ಚಿತ್ರ ಬಂದಿದೆ.ಎಷ್ಟು ಬೇಗ ಆಗುತ್ತದೆಯೊ, ಅಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಬೇಕು ಎಂಬ ಕಾತುರ ನಮಗೂ ಇದೆ. ಅದಕ್ಕಾಗಿಯೇ ಬಿಡುವಿಲ್ಲದೆ ಚಿತ್ರೀಕರಣ ಮಾಡುತ್ತಿದ್ದೇವೆ’ ಎನ್ನುತ್ತಾರೆ ದೇಸಾಯಿ. ಇನ್ನು ದೇಸಾಯಿ ಅವರ ಜೊತೆಗಿದ್ದ
ಚಿತ್ರದ ಕಲಾವಿದರಾದ ಠಾಕೂರ್ ಅನೂಪ್ ಸಿಂಗ್, ಸಾಯಿ ಧನ್ಸಿಕಾ,ಕಬೀರ್ ಸಿಂಗ್, ತಾನ್ಯಾ ಹೋಪ್ ಚಿತ್ರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರೂ, ತಮ್ಮ ಪಾತ್ರಗಳ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಡಲಿಲ್ಲ. ಇನ್ನು ನಿರ್ಮಾಪಕ ದೇವರಾಜ್. ಆರ್, ಚಿತ್ರ ನಿರ್ಮಾಣಕ್ಕೆ ಬಂದ ಬಗ್ಗೆ ಹೇಳಿಕೊಂಡರು.
– ಜಿ.ಎಸ್. ಕಾರ್ತಿಕ ಸುಧನ್