ಹೆಣ್ಣಿನ ಅಂತರಾಳದ ಕಥೆ
Team Udayavani, Dec 28, 2018, 6:00 AM IST
ನಟ ಸಂಚಾರಿ ವಿಜಯ್, ಶೃತಿ ಹರಿಹರನ್, ಶರಣ್ಯ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ನಾತಿಚರಾಮಿ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಈ ಹಿಂದೆ “ಹರಿವು’ ಚಿತ್ರವನ್ನು ನಿರ್ದೇಶಿಸಿದ್ದ ಮಂಸೋರೆ ಈ ಚಿತ್ರಕ್ಕೆ ಚಿತ್ರಕಥೆ, ನಿರ್ದೇಶನ ಮಾಡಿ ತೆರೆಗೆ ತರುತ್ತಿದ್ದಾರೆ.
“ನಾತಿಚರಾಮಿ’ ಚಿತ್ರದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ಕಥಾಹಂದರ, ವಿಶೇಷತೆಗಳ ಬಗ್ಗೆ ಮಾತನಾಡಿತು. ಆರಂಭದಲ್ಲಿ ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ಮಂಸೋರೆ, “ಸುಮಾರು ಒಂದು ವರ್ಷದ ಹಿಂದೆ ಅಕ್ಷರ ರೂಪದಲ್ಲಿದ್ದ ಕಥೆ, ಈಗ ದೃಶ್ಯ ರೂಪ ಪಡೆದುಕೊಂಡಿದೆ. ಇತ್ತೀಚೆಗೆ ಬರುತ್ತಿರುವ ಚಿತ್ರಗಳಿಗಿಂತ ವಿಭಿನ್ನವಾದ ಕಥಾಹಂದರ ಮತ್ತು ನಿರೂಪಣೆ ಇದ್ದ ಕಾರಣ ಮೊದಲಿಗೆ ಯಾವ ನಿರ್ಮಾಪಕರೂ, ಈ ಚಿತ್ರವನ್ನು ನಿರ್ಮಿಸಲು ಮುಂದೆ ಬರಲಿಲ್ಲ. ನಿರ್ಮಾಪಕರಿಗೆ ಈ ಚಿತ್ರದ ಕಥೆಯನ್ನು ಒಪ್ಪಿಸುವುದೇ ದೊಡ್ಡ ಸವಾಲಾಗಿತ್ತು. ಹೀಗಿರುವಾಗಲೇ, ಚಿತ್ರದ ಕಥೆಯ ಮೇಲೆ ನಂಬಿಕೆಯಿಟ್ಟು ಜಗನ್ಮೋಹನ್ ರೆಡ್ಡಿ, ಶಿವಕುಮಾರ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಲು ಮುಂದೆ ಬಂದರು. ಆನಂತರ ಸಮಾನ ಆಸಕ್ತರು ಚಿತ್ರತಂಡವನ್ನು ಸೇರಿಕೊಂಡರು. ಅಂತಿಮವಾಗಿ ಎಲ್ಲರ ಪರಿಶ್ರಮದಿಂದ “ನಾತಿಚರಾಮಿ’ ನಾವಂದುಕೊಂಡಂತೆ ರೆಡಿಯಾಗಿ ತೆರೆಗೆ ಬರುತ್ತಿದೆ’ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ನಟ ಸಂಚಾರಿ ವಿಜಯ್, “ಇಂದು ಸಮಾಜ ಎಷ್ಟೇ ಮುಂದುವರೆದಿದ್ದರೂ, ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಲೂ ಈಗಲೂ ಹಿಂದೆ-ಮುಂದೆ ನೋಡುತ್ತೇವೆ. ಇಂತಹ ಸಂದರ್ಭದಲ್ಲಿ ಹೆಣ್ಣಿನ ಅಂತರಾಳದ ಬಯಕೆ-ಭಾವನೆಗಳ ಅನಾವರಣ ಈ ಚಿತ್ರದಲ್ಲಿ ಆಗಿದೆ. ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಪ್ರಯತ್ನದ ಚಿತ್ರ. ಕನ್ನಡದಲ್ಲಿ ಇಲ್ಲಿಯವರೆಗೆ ಯಾರೂ, ಸ್ಪರ್ಶಿಸದ ವಿಷಯವನ್ನು ಈ ಚಿತ್ರ ಸ್ಪರ್ಶಿಸಿದೆ’ ಎಂದರು.
ಇನ್ನು “ನಾತಿಚರಾಮಿ’ ಚಿತ್ರದಲ್ಲಿ ನಟಿ ಶೃತಿ ಹರಿಹರನ್ ಗೌರಿ ಎನ್ನುವ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೌರಿ ಪಾತ್ರದ ಬಗ್ಗೆ ಮಾತನಾಡುವ ಶೃತಿ ಹರಿಹರನ್, “ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕಿಯರಿಗೆ ಇಂಥ ಕಥೆಗಳು, ಪಾತ್ರಗಳು ಸಿಗುವುದು ವಿರಳ. ನನಗೆ ಈ ಚಿತ್ರದಲ್ಲಿ ಅಂಥ ವಿರಳ ಪಾತ್ರ ಸಿಕ್ಕಿದೆ. ಪ್ರೇಮಿಯಾಗಿ, ವಿಧವೆಯಾಗಿ, ಕೆಲಸ ಮಾಡುವ ಹೆಣ್ಣಾಗಿ, ಸವಾಲುಗಳನ್ನು ಎದುರಿಸಿ ನಿಲ್ಲುವ ದಿಟ್ಟ ಹೆಣ್ಣಾಗಿ ಗೌರಿ ಹಲವು ರೂಪಗಳಲ್ಲಿ ಕಾಣುತ್ತಾಳೆ. ಚಿತ್ರದ ಚಿತ್ರೀಕರಣ ಮುಗಿದ ಮೇಲೂ ಗೌರಿಯ ಪಾತ್ರ ನನ್ನನ್ನು ಕಾಡುತ್ತಿದೆ. ಅಷ್ಟರ ಮಟ್ಟಿಗೆ ನಾನು ಆ ಪಾತ್ರದಲ್ಲಿ ಗೌರಿಯೊಳಗೆ ಸೇರಿ ಹೋಗಿದ್ದೆ’ ಎಂದರು.
ನಿರ್ಮಾಪಕ ಜಗನ್ಮೋಹನ್ ರೆಡ್ಡಿ ಮಾತನಾಡಿ, “ಪುಟ್ಟಣ್ಣ ಕಣಗಾಲ್ ಅವರಂಥ ನಿರ್ದೇಶಕರು ಮಾಡಬಹುದಾದ ಕಥೆಯೊಂದನ್ನು, ಅವರು ಮಾಡುವಂಥ ಚಿತ್ರವನ್ನು ನಾವು ಮಾಡಿದ್ದೇವೆ. ನೋಡುಗರಿಗೆ ಹೊಸರೀತಿಯ ಅನುಭವ ನೀಡುವುದು’ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ನಟಿ ಶರಣ್ಯ, ಚಿತ್ರದ ಕಥಾ ಲೇಖಕಿ ಸಂಧ್ಯಾರಾಣಿ. ಚಿತ್ರದ ಸಂಗೀತ ನಿರ್ದೇಶಕಿ ಬಿಂದು ಮಾಲಿನಿ, ಛಾಯಾಗ್ರಾಹಕ ಗುರು ಪ್ರಸಾದ್ ಚಿತ್ರದ ಬಗ್ಗೆ ಅನುಭವಗಳನ್ನು ತೆರೆದಿಟ್ಟರು. ಉಳಿದಂತೆ “ನಾತಿಚರಾಮಿ’ ಚಿತ್ರದಲ್ಲಿ ಬಾಲಾಜಿ ಮನೋಹರ್, ಗೋಪಾಲಕೃಷ್ಣ, ಶಾಂತಲಾ, ಪೂರ್ಣಚಂದ್ರ ಮೈಸೂರು, ವಲ್ಲಭ, ಹರ್ಷಿತ್ ಕೌಶಿಲ್, ಗ್ರೀಷ್ಮಾ ಶ್ರೀಧರ್, ಸೀತಾ ಕೋಟೆ, ಕಲಾಗಂಗೋತ್ರಿ ಮಂಜು ಮೊದಲಾದ ಕಲಾವಿದರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಸಿಂಕ್ ಸೌಂಡ್ನಲ್ಲಿಯೇ ಚಿತ್ರದ ಧ್ವನಿಗ್ರಹಣ ಮಾಡಲಾಗಿದೆ.
ಇತ್ತೀಚೆಗಷ್ಟೇ “ನಾತಿಚರಾಮಿ’ ಚಿತ್ರದ ಹಾಡುಗಳು, ಟ್ರೇಲರ್ಗಳು ಹೊರಬಂದಿದ್ದು, ಚಿತ್ರಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ “ನಾತಿಚರಾಮಿ’ ಚಿತ್ರವನ್ನು ಈ ವಾರ ಪ್ರೇಕ್ಷಕರ ಮುಂದೆ ತರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು