ಸತ್ಯಂ ಶಿವಂ ಸುಂದರಂ
Team Udayavani, Mar 2, 2019, 12:30 AM IST
ಮಾರ್ಚ್ 4 ಶಿವರಾತ್ರಿ. ಈ ಪ್ರಯುಕ್ತ ಶಿವನ ಮೂರ್ತಿಗಳನ್ನು ನೋಡುವ ಅಭ್ಯಾಸ ಹಲವರಿಗಿರುತ್ತದೆ.
ನೀವು ಎಚ್ಎಎಲ್ ಈಶ್ವರನನ್ನು ನೋಡಿದ್ದೀರ? ಜಗತ್ತಿನ ಅತಿ ಎತ್ತರದ ಮುರುಡೇಶ್ವರದ ಈಶ್ವರನ ಮುಂದೆ ನಿಂತಿದ್ದೀರಾ? ನಿಂತಾಗ ಅಲ್ಲೊಂದು ಭಕ್ತಿಯ ಭಾವ ಪುಳಕ ಉಂಟಾಗುತ್ತದೆ. ಈ ಎಲ್ಲಾ ಮೂರ್ತಿಗಳನ್ನು ನಿರ್ಮಿಸಿದ “ಮೂರ್ತಿ’ ಒಂದಿದೆ. ಅವರೇ ನಾಡು ಹೆಮ್ಮೆ ಪಡುವ ಹಿರಿಯ ಶಿಲ್ಪಿ ಕೆ. ಶ್ರೀಧರ ಮೂರ್ತಿ. ಮೂರ್ತಿ ಕೆತ್ತನೆಯ ಹಿಂದಿನ ಮಹತ್ವದ ವಿಚಾರಗಳಿಗೆ ಅವರಿಲ್ಲಿ ಮಾತಾಗಿದ್ದಾರೆ.
ಶಿವ ಅಂದರೆ ಧ್ಯಾನಸ್ವರೂಪಿ. ಕೈಯಲ್ಲಿ ಜಪಮಣಿಯೋ, ಕಮಂಡಲವೋ ಇದ್ದು, ಮುಖದಲ್ಲಿ ಮಂದಹಾಸವಿರಬೇಕು. ಮೂರ್ತಿಯನ್ನು ನೋಡುತ್ತಿದ್ದಂತೆ ಮನಸ್ಸಲ್ಲಿ ಭಕ್ತಿಯ ಅಲೆಗಳು ಎದ್ದೇಳಬೇಕು. ಶಿವನನ್ನು ನೋಡಿದಾಗಲೆಲ್ಲಾ ಈ ರೀತಿಯ ಭಾವ ಹೇಗೆ ಉಕ್ಕುತ್ತದೆ? ಅಂಥದ್ದೊಂದು ಭಾವನೆ ಉಕ್ಕುವಂತೆ ಮಾಡುವುದು ಹೇಗೆ? ಇಂಥ ಕುತೂಹಲ ಇದ್ದೇ ಇರುತ್ತದೆ. ಇವೆಲ್ಲ ಸಾಧ್ಯವಾಗುವುದು ನಮ್ಮಲ್ಲಿ ಶಿವನು ಮನೆ ಮಾಡಿದಾಗಲೇ. ಯಾವ ದೇವರ ಕೆತ್ತನೆ ಮಾಡಲಿ, ಆ ದೇವರ ಮೂರ್ತಿ ಪೂಜೆ ಮಾಡುತ್ತೇನೆ.’
ಭಾವಕ್ಕೆ ಪೂರ್ವ ತಯಾರಿ
ಶಿವನೋ, ಆಂಜನೆಯನೋ ಅಥವಾ ಗಣಪತಿ ಯೋ ಯಾವುದೇ ಮೂರ್ತಿ/ ವಿಗ್ರಹ ತಯಾರಿಸುವ ಮೊದಲು ಅದಕ್ಕೆ ಸಂಬಂಧಿಸಿದ ಪೌರಾಣಿಕ ಮಾಹಿತಿ ಯನ್ನು ಕಲೆ ಹಾಕುತ್ತೇನೆ. ಅವನ ಅವತಾರಗಳು, ಪುರಾಣಗಳ ಬಗ್ಗೆ ಕೇಳಿಕೊಂಡು, ಓದಿಕೊಂಡು, ಕರಾರುವಾಕ್ಕಾಗಿ ತಿಳಿಯುತ್ತೇನೆ. ಅದರಲ್ಲಿರುವ ಆಕಾರದ ನಿರೂಪಣೆಯ ಆಧಾರದ ಮೇಲೆ ಒಂದು ಆಕಾರಕ್ಕೆ ಮೂರ್ತಿ ರೂಪ ಕೊಡಲಿಕ್ಕೆ ಪ್ರಯತ್ನ ಮಾಡುತ್ತೇವೆ. ಶಿವನ ಬಗ್ಗೆ ಶಿವಪುರಾಣದಲ್ಲಿ ಉಲ್ಲೇಖವಿದೆ. ಈಶ್ವರನ ಆರ್ಧವಾದ ಕಣ್ಣುಗಳು, ಮಂದಸ್ಮಿತ ತುಟಿಗಳು, ಎರಡೂ ಕಣ್ಣುಗಳು ಮೂಗಿನ ನೇರಕ್ಕೆ ಇರುವ ದೃಷ್ಟಿ… ಹೀಗೆ, ಎಲ್ಲದರ ಬಗ್ಗೆ ವಿವರಗಳು ಸಿಗುತ್ತವೆ. ಗಮನಿಸಿ ನೋಡಿ, ಧ್ಯಾನದಲ್ಲಿ ಕೂತಾಗ ದೇಹದ ಎಲ್ಲಾ ಭಾಗಗಳು ಸಡಿಲವಾಗಿ, ಉಸಿರನ್ನು ಹೊರಹಾಕಿ ದಾಗ ಹುಟ್ಟುವ ಮಂದಸ್ಮಿತವಾದ ಭಾವ ಶಿವನ ಮುಖದಲ್ಲಿರುತ್ತದೆ. ಅಂದರೆ, ಅಂಗ ರಚನೆ ಶಾಸ್ತ್ರದ ವಿವರಗಳ ನ್ನು ಈ ಶಿವನ ಶಿಲ್ಪದಲ್ಲಿ ತರಬೇಕಾಗುತ್ತದೆ.
ನಮ್ಮ ಪ್ರತಿಯೊಂದು ಶ್ಲೋಕಗಳಲ್ಲಿ ದೇವರು ಹೇಗಿರುತ್ತಾನೆ, ಯಾವ ಆಯುಧಗಳನ್ನು ಬಳಸುತ್ತಾನೆ ಅನ್ನೋ ವರ್ಣನೆಗಳು ಇವೆ. ಇದನ್ನು ಬರೆದು ಕೊಳ್ಳುತ್ತೇವೆ. ನಂತರ ನನ್ನ ಮನಸ್ಸಿನಲ್ಲಿ ಒಂದು ಚಿತ್ರ ಮೂಡುತ್ತದೆ. ಶಿವ ಅಂದರೆ ಹೀಗೇ ಇರುತ್ತಾನೆ, ಕತ್ತಲ್ಲಿ ಹಾವು ಇರಬೇಕು. ಬಲಗೈಯಲ್ಲಿ ಜಪಮಣಿ, ಢಮರುಗ ಇರಬೇಕು. ಮುಖ ಪ್ರಶಾಂತವಾಗಿರಬೇಕು ಹೀಗೆ, ಎಲ್ಲ ವಿವರಗಳನ್ನು ಇಟ್ಟುಕೊಂಡೇ ಕೆಲಸ ಶುರುಮಾಡುವುದು.
ಮುರುಡೇಶ್ವರದ ಈಶ್ವರನನ್ನೇ ತಗೊಳ್ಳಿ. ಇಲ್ಲಿ ಭೂ ಕೈಲಾಸದ ದೃಶ್ಯಾವಳಿ ಬರುತ್ತದೆ. ಪುರಾಣ ದಲ್ಲಿ ಒಂಥರ, ಸಿನಿಮಾದಲ್ಲಿ ಒಂಥರ, ಕತೆಗಳಲ್ಲಿ ಇನ್ನೊಂದು ಥರ ಇದೆ. ಈ ಎಲ್ಲವನ್ನೂ ಕಲೆ ಹಾಕಿ, ಅದಕ್ಕೆ ತಕ್ಕಂತೆ ಯೋಜನೆ ಹಾಕಿಕೊಂಡು, ರೇಖಾ ಚಿತ್ರ ಬರೆದುಕೊಂಡು,ಥ್ರೀ ಡೈಮನ್ಷನ್ನಲ್ಲಿ ವಿಗ್ರಹ ಮಾಡಿದ್ದರಿಂದ ಒಳ್ಳೆ ಕಲಾತ್ಮಕ ಸಂಯೋಜನೆಯ ಈಶ್ವರ ದೊರೆತ.
ಸಂಕಲ್ಪವೇ ದೇವರು
ಇದು ಆರಂಭದ ಎರಡನೇ ಮೆಟ್ಟಿಲು. ಮೊದಲು ಮೆಟ್ಟಿಲು ಎಂದರೆ ಸಂಕಲ್ಪ. ಪ್ರತಿ ಮೂರ್ತಿ ತಯಾರಿಕೆಗೂ ಮೊದಲು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲೇ ಮುಗಿಸಿಕೊಡಬೇಕು ಅನ್ನೋ ಮನೋ ಸಂಕಲ್ಪ ಮಾಡಿರುತ್ತೇವೆ. ಹೀಗಾಗಿ ನಮ್ಮ ಗಮನವಿಕೇಂದ್ರೀಕರಣವಾಗುವುದಿಲ್ಲ.
“ನೀವು ಎತ್ತರೆತ್ತರ ಮೂರ್ತಿಗಳನ್ನು ನಿರ್ಮಾಣ ಮಾಡುತ್ತೀರಲ್ಲಾ, ಇದು ಹೇಗೆ ಸಾಧ್ಯ?’ ಅಂತ ಸುಮಾರು ಜನ ನನ್ನನ್ನು ಕೇಳುತ್ತಿರುತ್ತಾರೆ. ಶಿವನಮೂರ್ತಿ ನಿರ್ಮಾಣ ಮಾಡಿಕೊಡಬೇಕು ಅಂತ ಕೇಳಿದಾಕ್ಷಣ ಎಲ್ಲವನ್ನೂ ರೆಡಿಮೇಡ್ ರೀತಿ ಕೊಡಲು ಸಾಧ್ಯವೇ ಇಲ್ಲ. ಏಕೆಂದರೆ, ಇದಕ್ಕೊಂದು ನಿಯಮವೇ ಇದೆ. ಮೂರ್ತಿ ನಿರ್ಮಾಣ ಮಾಡುವ ಜಾಗವನ್ನು ಎಂಜಿನಿಯರ್ ಜೊತೆ ಹೋಗಿ ಪರಿಶೀಲನೆ ನಡೆಸಬೇಕು.
ಸ್ಥಳದ ಮಣ್ಣನ್ನು ಪರೀಕ್ಷೆಗೆ ಕಳುಹಿಸಿ, ವರದಿ ಬಂದ ನಂತರ ಅದರ ಆಧಾರದ ಮೇಲೆ ಮೂರ್ತಿ ಎಷ್ಟು ಎತ್ತರ ಇರಬೇಕು, ಇಂಥ ಮೂರ್ತಿಗೆ ಅಡಿಪಾಯ ಹೇಗೆ ಹಾಕಬೇಕು, ಮಣ್ಣಿನ ಗುಣ ಲಕ್ಷಣಗಳ ಆಧಾರದ ಮೇಲೆ ಎತ್ತರ, ಆಳ, ಎಲ್ಲವನ್ನೂ ಸ್ಟ್ರಕ್ಚರ್ ಎಂಜಿನಿಯರ್ ತೀರ್ಮಾನಿಸುತ್ತಾರೆ. ಸಾಮಾನ್ಯವಾಗಿ, ಈಶ್ವರನ ಎತ್ತರದ ಐದು ಪಟ್ಟು ಸುತ್ತಳತೆಯಷ್ಟು ಜಾಗ ಬೇಕಾಗುತ್ತದೆ. ಮೂರ್ತಿ ತಯಾರಿಸುವ ಅಡಿಪಾಯಕ್ಕೆ ಕಾಲಂ, ಭೀಮ್ಗಳನ್ನು ಬಳಸುತ್ತಾರೆ. ಅದಕ್ಕೆ ಕಾಂಕ್ರಿಟ್ನಲ್ಲಿ 8-10 ಇಂಚಿನಷ್ಟು ದಪ್ಪದರಲ್ಲಿ ಶೇಪ್ ಮಾಡ್ತೀವಿ. ಆಮೇಲೆ ಫಿನಿಶಿಂಗ್.
ನಾನಾ ರೀತಿಯ ಫೌಂಡೇಷನ್ ವ್ಯಾಟ್, ರ್ಯಾಫ್ಟ್, ಫೈಲ್ ಹೀಗಿ ನಾನಾ ರೀತಿಯ ಫೌಂಡೇಶನ್ಗಳು ಇವೆ. ಮೂರ್ತಿಯ ಭಾರ, ಎತ್ತರಕ್ಕೆ ಯಾವುದು ಹೊಂದಾಣಿಕೆ ಯಾಗುತ್ತದೋ ಅದನ್ನು ಬಳಸುವುದು ಈಗ ರೂಢಿಯಲ್ಲಿರುವ ಪದ್ದತಿ. ನಂತರ ಕಾಂಕ್ರಿಟ್ನಲ್ಲಿ ಪೀಠ ಮಾಡಿ, ನುರಿತ ಶಿಲ್ಪಿಗಳು ಸೇರಿ ಮೂರ್ತಿಯ ಕೆಲಸ ಶುರುಮಾಡುವುದರಿಂದ ನಮ್ಮ ಕೆಲಸ ಶುರು. ಇಷ್ಟು ದೊಡ್ಡ ಶಿವನ ಮೂರ್ತಿಯ ನೀಲ ನಕ್ಷೆ ನಿಮ್ಮ ತಲೆಯಲ್ಲೇ ಇರುತ್ತಾ? ಇಂಥದೊಂದು ಕೌತುಕದ ಆಕಾಶದೆತ್ತರದ ಶಿವನನ್ನು ನೋಡಿದವರಿಗೆಲ್ಲಾ ಇದ್ದೇ ಇರುತ್ತದೆ ಎನ್ನಿ. ಮೂರ್ತಿಯ ಕೆಲಸ ಶುರುಮಾಡುವ ಮೊದಲು ಶಿವನ ವಿಗ್ರಹ ಹೀಗೇ ಬರಬೇಕು ಅನ್ನೋದು ನಮ್ಮ ಮನಸ್ಸಲ್ಲಿ ಅಚ್ಚೊತ್ತಿರುತ್ತದೆ.
ಅದನ್ನು ನೇರ ಪದಟಛಿತಿ ಮೂಲಕ ಮತ್ತು ಕಂಪ್ಯೂಟರ್ಗಳಲ್ಲಿ ನಕ್ಷೆ ತಯಾರು ಮಾಡುವ- ಈ ಎರಡು ವಿಧಗಳಲ್ಲಿ ತಯಾರಿಸಿಕೊಳ್ಳುತ್ತೇವೆ. ಡೈರಕ್ಟ್ ಮೆಥೆಡ್ ಅಂದರೆ, ಎಲ್ಲಿ ಮೂರ್ತಿ ನಿರ್ಮಾಣ ಮಾಡುತ್ತೇವೆಯೋ ಅದರ ಕೆಳಭಾಗದಲ್ಲಿ ಪುಟ್ಟ ಮೂರ್ತಿ ತಯಾರಿಸಿ ಕೊಳ್ಳುವುದು. ಕಂಪ್ಯೂಟರ್ನಲ್ಲಾದರೆ ಮೂರ್ತಿ ಹೇಗೆ ಬರಬೇಕು ಅನ್ನೋದರ ನೀಲ ನಕ್ಷೆ ತಯಾರು ಮಾಡಿ, ಸ್ಕೇಲ್ನಲ್ಲಿ ಎನ್ಲಾರ್ಜ್ ಮಾಡಿಕೊಂಡು, ಪ್ಲಾಸ್ಟರ್ ಆಫ್ ಪ್ಯಾರೀಸ್ ಅಥವಾ ಮಣ್ಣಿನಲ್ಲಿ ಮುಖದ ಮಾಡೆಲ್ ಮಾಡಿಕೊಂಡಿರ್ತುತೇವೆ. ಇದನ್ನು ಫೈಬರ್ ಗ್ಲಾಸ್ನಲ್ಲಿ ಅಚ್ಚು ತೆಗೀತೀವಿ. ಹೀಗೆ ಮಾಡಿದರೆ ಮೂರ್ತಿಯ ನಿಖರ ಸೌಂದರ್ಯ ಕಾಣುವ ಹಾಗೇ ತಯಾರಿಸಬಹುದು. ಡೈರೆಕ್ಟ್ ಮೆಥೆಡ್ನಲ್ಲಿ ಮಾಡಿದರೆ ಕೆಲ ಲಿಮಿಟೇಶನ್ಗಳು ಇರ್ತವೆ.
ಇದು ಬ್ಯುಸಿನೆಸ್ ಅಲ್ಲ ಶಿವನ ಮೂರ್ತಿಗಳನ್ನು ತಯಾರು ಮಾಡುವುದು ನನ್ನ ಮಟ್ಟಿಗೆ ವ್ಯವಹಾರ ಅಲ್ಲ. ಇದೊಂದು ಭಕ್ತಿಯ ಕಾಯಕ; ದೇವರ ಸೇವೆ. ಒಂದು ಮೂರ್ತಿ ತಯಾರಿಸುವ ಕೆಲಸ ಎಂದರೆ ತಿಂಗಳು, ವರ್ಷಾನುಗಟ್ಟಲೆ ಹಿಡಿಯುತ್ತದೆ. ಶುರುವಿನಿಂದ ಮುಗಿಯವವರೆಗೂ ನನ್ನೊಳಗಿನ ಈ ಭಕ್ತಿ, ಶ್ರದೆಟಛಿಯನ್ನು ಕಾಪಿಟ್ಟುಕೊಂಡಿರಬೇಕು. ಈ ಭಕ್ತಿಯನ್ನು ಕಾಪಾಡಿಕೊಳ್ಳುವುದು ಒಂದು ರೀತಿ ತಪಸ್ಸೇ. ಯಾವ ಕಾರಣಕ್ಕೂ ನಮ್ಮ ಗಮನ ಬೇರೆ ಕಡೆ ಹೋಗುವ ಹಾಗಿಲ್ಲ. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿಕೊಂಡಾಗ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸ್ತಾರಲ್ಲ ಆ ರೀತಿ.
ನಮ್ಮ ಸಂಸ್ಕೃತಿ ಹೇಳುವುದು ಅದನ್ನೇ ಅಲ್ಲವೇ? ಯಾವುದೇ ಕೆಲಸ ಇರಲಿ, ಭಕ್ತಿಯಿಂದ ಮಾಡಿದರೆ ಶ್ರೇಷ್ಠ ಕೆಲಸ ಆಗುತ್ತೆ ಅಂತ. ಅಂದರೆ, ಈ ಮೂರ್ತಿ ಸ್ಥಾಪನೆಯ ಕಾಯಕವನ್ನು ಪ್ರತಿದಿನದ ಪೂಜೆ ಯಂತೆಯೇ ಮಾಡಬೇಕು. ಅವರು ಇಷ್ಟು ದುಡ್ಡು ಕೊಡ್ತಾರೆ, ಅದಕ್ಕೆ ಇಷ್ಟು ಕೆಲಸ ಮಾಡಬೇಕು ಅಂತೆಲ್ಲ ಯೋಚನೆ ಮಾಡುವುದಿಲ್ಲ. ನಮ್ಮ ಮನಸ್ಸು, ಕಲೆ, ಯೋಚನೆಗಳನ್ನೆಲ್ಲಾ ಯಾವ ಮೂರ್ತಿಯ ಕೆಲಸ ಮಾಡುತ್ತೇವೆಯೋ ಅದಕ್ಕೆ ಅರ್ಪಿಸಿಕೊಂಡು ಮುಂದುವರಿಯ ಬೇಕಾಗುತ್ತದೆ. ಇಲ್ಲವಾದರೆ, ಮೂರ್ತಿಯನ್ನು ನೋಡಿದರೆ, ಭಕ್ತರನ್ನು ಸೆಳೆಯುವ ಚುಂಬಕ ಭಾವ ಮೂಡುವುದಿಲ್ಲ. ಇದೊಂದು ರೀತಿ ತಾಯಿ-ಮಗು ನಡುವಿನ ಭಾವನಾತ್ಮಕ ಸಂಬಂಧ ಇದ್ದಹಾಗೆ. ಮೂರ್ತಿಯ ಕೆಲಸ ಪೂರ್ಣ ಆಗುತ್ತಾ, ಆಗುತ್ತಾ ನಮ್ಮಲ್ಲೂ ಭಕ್ತಿಯ ಪರಾಕಾಷ್ಠೆ ಮುಟ್ಟುತ್ತದೆ. ಮುಖ ಮುದ್ರೆಗಳನ್ನು ತಿದ್ದುತ್ತಾ, ತೀಡುತ್ತಾ ಫೈನಲ್ಟಚ್ ಕೊಡುವಾಗಲಂತೂ ಭಕ್ತಿಯ ಸಮುದ್ರದಲ್ಲಿ ಮಿಂದೇಳುತ್ತಿರುತ್ತೇವೆ. ಹೀಗಾಗಿಯೇ, ನೀವು ಬೆಂಗಳೂರಿನ ಎಚ್ಎಎಲ್, ಮುರುಡೇಶ್ವರದ ಈಶ್ವರನ ಮುಂದೆ ನಿಂತಾಗ ಕಣ್ಣಲ್ಲಿ ನೀರು ಜಿನುಗುವುದು. ಅದು ನಮ್ಮ ಕಣ್ಣಲ್ಲೂ ಬಂದಿರುತ್ತದೆ.
ಶ್ರೀಧರ ಮೂರ್ತಿಗಳು
ಎಚ್ಎಎಲ್ ಈಶ್ವರ:
60 ಅಡಿ ಎತ್ತರ, 55 ಅಡಿ ಅಗಲ
ಕೆಲಸದ ಅವಧಿ: 6ತಿಂಗಳು,
25ಜ®ರಿಂದ ನಿರ್ಮಾಣ .
ಮುರುಡೇಶ್ವರ ಕುಳಿತ ಈಶ್ವರ
121 ಅಡಿ, 3 ವರ್ಷ,
60 ಜನ ಕೆಲಸದವರು
ಸಿಕ್ಕಿಂನ ಶಿವ: 1 ವರ್ಷ, 20ಜನ
ಹರಿದ್ವಾರದ ಈಶ್ವರ: 81 ಅಡಿ ಎತ್ತರ
ಒಂದು ವರ್ಷ, 20 ಜನ
ಶಿವಮೊಗ್ಗ ಅರಕೆರೆ ಈಶ್ವರ
35 ಅಡಿ ಎತ್ತರ
ಶಿಕಾರಿಪುರದ ಈಶ್ವರ :35 ಅಡಿ
ಬಿಜಾಪುರ: 65 ಅಡಿ
ರಾಮದುರ್ಗ: 75 ಅಡಿ
ಸಿ.ವಿ ರಾಮನ್ ನಗರ: 45 ಅಡಿ
ನಿರೂಪಣೆ : ಕಟ್ಟೆ ಗುರುರಾಜ್