ಪಂಚತಂತ್ರಗೆ ರಾಕಿಂಗ್ ಟಜ್
Team Udayavani, Mar 22, 2019, 12:30 AM IST
“ಪಂಚತಂತ್ರ’ದ ಬಿಡುಗಡೆಗೆ ನಿರ್ದೇಶಕ ಯೋಗರಾಜ್ ಭಟ್ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಇದೇ ಮಾರ್ಚ್ 29ರಂದು ಅದ್ಧೂರಿಯಾಗಿ “ಪಂಚತಂತ್ರ’ವನ್ನು ಪ್ರೇಕ್ಷಕರ ಮುಂದೆ ತರಲು ಪ್ಲಾನ್ ಮಾಡಿಕೊಂಡಿರುವ ಭಟ್ಟರು, ಸದ್ಯ ಭರ್ಜರಿಯಾಗಿ ಚಿತ್ರದ ಪ್ರಮೋಶನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಚಿತ್ರದ ಪ್ರಮೋಶನ್ ಭಾಗವಾಗಿ ಎರಡು ದಿನಗಳ ಹಿಂದಷ್ಟೇ ಭಟ್ಟರು “ಪಂಚತಂತ್ರ’ ಟ್ರೇಲರ್ ಬಿಡುಗಡೆಗೊಳಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ “ಪಂಚತಂತ್ರ’ದ ಟ್ರೇಲರ್ನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಟ ಯಶ್, “ಯೋಗರಾಜ್ ಭಟ್ಟರು ದೊಡ್ಡ ಸಾಧಕರು. ಅವರ ಸಹವಾಸ ಅಂದ್ರೆ ಒಂಥರಾ ಶ್ರೀಗಂಧದ ಜೊತೆ ಗು¨ªಾಟ ಇದ್ದಂಗೆ ಇರುತ್ತೆ. ಯಾವಾಗಲೂ ಅವರ ಚಿತ್ರದ ಹಾಡುಗಳನ್ನ ಮೊದಲು ನಾನೇ ಕೇಳುತ್ತೇನೆ. ನನ್ನ ಅಭಿಪ್ರಾಯ ಕೇಳಿದ ನಂತರ ಕೆಲವೊಮ್ಮೆ ಹಾಡುಗಳನ್ನ ಚೇಂಜ್ ಮಾಡಿದ್ದೂ ಇದೆ. ಇನ್ನು ಬರವಣಿಗೆಯಲ್ಲಿ ಭಟ್ಟರು ತುಂಬಾನೇ ಮೇಧಾವಿ. ಅವರ ಜೊತೆಯಲ್ಲಿ ಕಾಲ ಕಳೆದ್ರೆ ಎಷ್ಟೊಂದು ವಿಷಯಗಳನ್ನು ತಿಳಿಯಬಹುದು. ಇನ್ನು ಭಟ್ಟರು ನನ್ನ ಕೆರಿಯರ್ಗೆ ಕೊಟ್ಟ ಕೊಡುಗೆ ತುಂಬಾ ದೊಡ್ಡದು. ನನ್ನ ಗೆಲುವಿನ ಪಯಣದಲ್ಲಿ ಇವರ ಪಾಲು ಸಾಕಷ್ಟಿದೆ. ನನಗೆ ಕಷ್ಟ ಬಂದಾಗ ಮೊದಲು ನೆನಪಾಗೋದೇ ಭಟ್ಟರು. ಇಂಥಾ ಮೇಧಾವಿ ಡೈರೆಕ್ಟರ್ ನನ್ನನ್ನು ಟ್ರೇಲರ್ ರಿಲೀಸ್ಗೆ ಕರೆದಿರೋದು ನನಗೆ ಋಣ ತೀರಿಸೋಕೆ ಒಂದು ಅವಕಾಶ ಕೊಟ್ಟ ಹಾಗೆ. ಅವರು ಕರೆಯೋದು ಹೆಚ್ಚಾ, ನಾನು ಬರೋದು ಹೆಚ್ಚಾ…’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಬಳಿಕ ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್, “ಯಶ್ ಒಬ್ಬ ಕನ್ನಡದ ಹಠವಾದಿ ನಟ. ಚಿತ್ರದಲ್ಲಿ ಎಷ್ಟೇ ಬ್ಯುಸಿಯಾಗಿದ್ರು, ನಾನು ಆಗಾಗ್ಗೆ ಕಳಿಸೋ ಪಂಚತಂತ್ರದ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಠಕ್ಕೆ ಯಾರಾದ್ರು ಬ್ರಾಂಡ್ ಅಂಬಾಸಿಡರ್ ಇದಾರೆ ಅಂದ್ರೆ ಅದು ಯಶ್ ಮಾತ್ರ. ಕೆಜಿಎಫ್ ಸಕ್ಸಸ್ ಹಿಂದೆ ಇರೋದು ಇದೇ ಹಠವಾದಿ’ ಎಂದು ಯಶ್ ಅವರನ್ನ ಕೊಂಡಾಡಿದರು. ಇನ್ನು ಚಿತ್ರದ ಬಗ್ಗೆ ಮಾತನಾಡಿದ ಭಟ್ಟರು, “ಹೆಸರೇ ಹೇಳುವಂತೆ ಇದು ಪಂಚತಂತ್ರದ ಸಣ್ಣ ಎಳೆಯನ್ನು ಇಟ್ಟುಕೊಂಡು ಮಾಡಿದ ಚಿತ್ರ. ಇದರಲ್ಲಿ ಎರಡು ಜನರೇಷನ್ ಕಥೆ ಇದೆ. ಇಂದಿನ ಹಿರಿಯರು, ಕಿರಿಯರು ಇಬ್ಬರ ಭಾವನೆಗಳೂ ಇವೆ. ಈಗಾಗಲೇ ಚಿತ್ರದ ಹಾಡುಗಳಿಗೆ ಭಾರೀ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರ ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಟ್ರೇಲರ್ ಬಿಡುಗಡೆ ವೇಳೆ ಚಿತ್ರದ ನಾಯಕ ವಿಹಾನ್, ನಾಯಕಿ ಸೋನಾಲ್ ಮಾಂತೇರೋ ಸೇರಿದಂತೆ ಚಿತ್ರದ ಕಲಾವಿದರು, ತಂತ್ರಜ್ಞರು ಹಾಜರಿದ್ದು ಚಿತ್ರದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.