ರಾಜಕೀಯದಲ್ಲಿ ವೈಯಕ್ತಿಕ ಮೌಲ್ಯಗಳೇ ನಿರ್ಣಾಯಕ
Team Udayavani, Aug 1, 2018, 3:14 PM IST
ರಾಜಕೀಯದಲ್ಲಿ ಪ್ರಸ್ತುತ ಯುವಜನರ ಆಸಕ್ತಿ ಹೇಗಿದೆ?
ರಾಜಕಾರಣದ ಬಗ್ಗೆ ಯುವ ಪೀಳಿಗೆಗೆ ಸರಿಯಾದ ಮಾರ್ಗದರ್ಶನವೇ ಸಿಗುತ್ತಿಲ್ಲ. ಈಗ ಇರುವ ರಾಜಕಾರಣ ರಂಗವನ್ನು ನೋಡಿಕೊಂಡೇ ಅವರು ಬೆಳೆಯುತ್ತಿದ್ದಾರೆ. ಮಾದರಿ ರಾಜಕೀಯ ವ್ಯಕ್ತಿಗಳ ಬಗ್ಗೆ ಹೆಚ್ಚು ತಿಳಿಸಿದರೆ ಮಾತ್ರ ಅವರಲ್ಲಿ ಈ ಬಗ್ಗೆ ಆಸಕ್ತಿ ಹೆಚ್ಚಲು ಸಾಧ್ಯವಿದೆ. ಆದರೆ ಅದು ಇಂದು ಸಾಧ್ಯವಾಗುತ್ತಿಲ್ಲ.
ದೇಶದ ಆಡಳಿತದಲ್ಲಿ ಸಾಂವಿಧಾನಿಕ ಮೌಲ್ಯಗಳು ಕುಸಿಯುತ್ತಿವೆಯೇ?
ಹೌದು. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಇತ್ತೀಚೆಗೆ ಜಾತಿ, ಧರ್ಮಗಳೆಲ್ಲ ಸೇರಿಕೊಂಡು ರಾಜಕಾರಣವೆಂಬುದು ಸಾಂದರ್ಭಿಕ ಅನಿಸಿಕೊಳ್ಳುತ್ತಿದೆ. ಒಟ್ಟಾಗಿ ನಮ್ಮ ದೇಶದ ಆಡಳಿತ ವ್ಯವಸ್ಥೆ ನೋಡಿದರೆ ಆದರ್ಶ ಪ್ರಜಾಪ್ರಭುತ್ವಕ್ಕೆ ಹತ್ತಿರವಿಲ್ಲ. ಪ್ರಜಾಪ್ರಭುತ್ವದ ಮೌಲ್ಯವೂ ಕುಸಿದಿದೆ.
ಭ್ರಷ್ಟಾಚಾರರಹಿತ ಆಡಳಿತ ಕೊಡಲು ಏನು ಕ್ರಮ ಕೈಗೊಳ್ಳಬಹುದು?
ಹಣ ನೀಡಿದರೆ ನನ್ನ ಕೆಲಸ ಆಗುತ್ತೆ ಎಂದಾದರೆ ನಾನು ಅದನ್ನು ಮಾಡಲು ತಯಾರಿದ್ದೇನೆ ಎಂಬುದು ಜನಸಾಮಾನ್ಯರ ಯೋಚನೆಯಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ಮಾಡುತ್ತೇವೆ ಎಂದು ಹೇಳಿದವರಿಗೆ ಈಗಾಗಲೇ ಹಲವು ಬಾರಿ ಮತ ಹಾಕಿದ್ದೇವೆ. ಆದರೆ ಮತ್ತೆ ಮತ್ತೆ ಭ್ರಷ್ಟಾಚಾರಗಳ ಸುದ್ದಿ ನೋಡುತ್ತೇವೆ. ಹೀಗಾಗಿ ಮೊದಲು ಜನರು ಜಾಗೃತರಾಗಬೇಕು.
ರಾಜ್ಯ ರಾಜಕೀಯದಲ್ಲಾಗುತ್ತಿರುವ ಬದಲಾವಣೆಗಳು ಮುಂದಿನ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿವೆಯೇ?
ಈ ಹಿಂದೆ ಅನೇಕ ಪಕ್ಷಗಳು ಬೇರೆ ಬೇರೆಯಾಗಿದ್ದವು. ಸಾಕಷ್ಟು ಸೈದ್ಧಾಂತಿಕ, ವೈಯಕ್ತಿಕ ವ್ಯತ್ಯಾಸಗಳಿದ್ದವು. ಪ್ರಸ್ತುತ ಎಲ್ಲ ಸಿದ್ಧಾಂತಗಳನ್ನು ಬದಿಗೊತ್ತಿ ಪ್ರಾದೇಶಿಕ ಪಕ್ಷಗಳೆಲ್ಲ ಒಂದಾಗಿವೆ. ಅವೆಲ್ಲವೂ ಪ್ರಾದೇಶಿಕವಾಗಿ ಪ್ರಾಬಲ್ಯವನ್ನು ಉಳಿಸಿಕೊಂಡು ಬಂದವುಗಳಾಗಿವೆ. ರಾಷ್ಟ್ರೀಯ ಮಟ್ಟದ ಚುನಾವಣೆಯಾದರೂ ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ. ಪ್ರತೀ ಪಕ್ಷಗಳು 20 ಸೀಟುಗಳಿಸಿದರೂ, ಅದೊಂದು ಬದಲಾವಣೆಯೇ.
ಉತ್ತಮ ಆಡಳಿತಗಾರನಾಗಲು ತರಬೇತಿಯ ಅಗತ್ಯವಿದೆಯೇ? ಹೇಗೆ?
ತರಬೇತಿ ಕೊಟ್ಟು ತಯಾರು ಮಾಡುವ ರಂಗ ಇದಲ್ಲ. ಬಹುತೇಕವಾಗಿ ವೈಯಕ್ತಿಕ ಮೌಲ್ಯಗಳೇ ಅಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ರಾಜಕೀಯ ಮೌಲ್ಯಗಳ ಬಗ್ಗೆ ಹೇಳಿಕೊಡುವುದರಲ್ಲಿ ತಪ್ಪೇನಿಲ್ಲ. ಆದರೆ ಆ ಮೌಲ್ಯಗಳು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೆ ಎಂಬುದು ಮುಖ್ಯವಾಗುತ್ತದೆ.
ಸಮ್ಮಿಶ್ರ ಸರಕಾರ ರಚನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮವೇ?
ಸಮ್ಮಿಶ್ರ ಸರಕಾರವೆಂಬುದು ಅನಿವಾರ್ಯತೆ. ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡು ಸರಕಾರ ರಚಿಸಬೇಕಾದ ಸಂದರ್ಭ ಸಮ್ಮಿಶ್ರ ಸರಕಾರದ್ದಾಗಿದೆ. ಒಳ್ಳೆಯದೋ, ಕೆಟ್ಟದೋ ಎಂಬುದಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಅವಕಾಶ ಇದೆ.
ಧನ್ಯಾ ಬಾಳಕಜೆ