ಶೈಕ್ಷಣಿಕ ರಂಗ ಭವಿಷ್ಯಕ್ಕೂ ಪೂರಕ
Team Udayavani, Nov 28, 2018, 12:58 PM IST
ಇಂದು ವಿದ್ಯಾರ್ಥಿಗಳಿಗೆ ಶಿಕ್ಷಣ ಎಂಬುವುದು ಅತೀ ಅಗತ್ಯ. ಇದರ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳು ಮನೋವಿಕಸನ ಹೊಂದುವುದರ ಜತೆಗೆ ವಿವಿಧ ಕ್ಷೇತ್ರಗಳ ಬಗ್ಗೆ ಅಭಿರುಚಿ ಹೊಂದಲು ಸಹಾಯಕವಾಗುತ್ತದೆ. ಬುದ್ಧಿಮತ್ತೆ ಜತೆಗೆ ಜ್ಞಾನಶಕ್ತಿ ಹೆಚ್ಚಿಸಲು ಇದು ಪರಿಣಾಮ ಬೀರುತ್ತದೆ. ಇದರಿಂದ ಭವಿಷ್ಯದಲ್ಲೂ ವಿದ್ಯಾರ್ಥಿಗಳಿಗೆ ಹಲವು ರೀತಿ ಉಪಯೋಗ ಸಿಗಲು ಸಾಧ್ಯವಿದೆ.
ಅದೊಂದು ಕಾಲವಿತ್ತು. ಕ್ಲಾಸ್ರೂಂ ಶಿಕ್ಷಣದಿಂದ ಗಳಿಸಿದ್ದನ್ನು ಊರು ಹೊಡೆದು, ಪರೀಕ್ಷೆ ಬರೆದು ಪಾಸಾಗುವ ಕಾಲಘಟ್ಟ. ಅಲ್ಲಿ ಕ್ರಿಯಾತ್ಮಕ ಶಿಕ್ಷಣವಾಗಲಿ, ಸೃಜನಶೀಲ ಶಿಕ್ಷಣವಾಗಲಿ, ಚಿಂತನೆಗಳನ್ನು ಬೆಳೆಸುವ, ಯೋಚನೆಗಳನ್ನು ವಿಸ್ತಾರಗೊಳಿಸುವ ಶಿಕ್ಷಣ ಮಕ್ಕಳಿಗೆ ಮರೀಚಿಕೆಯಾಗಿತ್ತು. ಬೆರಳೆಣಿಕೆಯಷ್ಟು ಮಂದಿ ಕ್ಲಾಸ್ ರೂಂ ಶಿಕ್ಷಣದಾಚೆಗೆ ಹೋಗಿ ಒಂದಷ್ಟು ಜ್ಞಾನ ಸಂಪಾದನೆ ಮಾಡಿಕೊಂಡು ಜೀವನದಲ್ಲಿ ಭದ್ರ ನೆಲೆ ಕಂಡರೆ, ಹಳ್ಳಿಗಾಡಿನ, ಗ್ರಾಮ್ಯ ಭಾಗದ ಮಕ್ಕಳಿಗೆ ಇವೆಲ್ಲ ಮರುಭೂಮಿಯ ಓಯಸಿಸ್ನಂತೆಯೇ. ಅದಕ್ಕಾಗಿಯೇ ಅದೆಷ್ಟೋ ಮಂದಿ ಶಿಕ್ಷಣ ವಂಚಿತರಾಗಿ ಅಥವಾ ಕಡಿಮೆ ಶಿಕ್ಷಣ ಪಡೆದುಕೊಂಡು ಇನ್ನೂ ಕೂಡ ಸುಶಿಕ್ಷಿತ ನೆಲೆಗಟ್ಟಿನಿಂದ ದೂರವೇ ಉಳಿದಿದ್ದಾರೆ.
ಆದರೆ ಈಗ ಹಾಗಲ್ಲ. ಕಾಲ ಬದಲಾಗಿದೆ. ಕಾಲ ಬದಲಾದಂತೆ ಶೈಕ್ಷಣಿಕ ರಂಗದಲ್ಲಿಯೂ ಒಂದಷ್ಟು ಬದಲಾವಣೆಗಳು ರೂಪು ತಳೆದಿವೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ನೋಡಿದರೆ, ಉರು ಹೊಡೆದು ಬರೆಯುವ ಪದ್ಧತಿ ಹೋಗಿ, ಪುಸ್ತಕ ನೋಡಿಕೊಂಡೇ ಬರೆಯುವ ಪುಸ್ತಕಾಧಾರಿತ ಚಿಂತನೆಗೊಡ್ಡುವ ಶಿಕ್ಷಣ ಪದ್ಧತಿ ಜಾರಿಗೊಂಡಿದೆ. ಈ ನಡುವೆ ಒಂದಷ್ಟು ಪಠ್ಯೇತರ ಚಟುವಟಿಕೆಗಳು ಕೂಡ ಮಕ್ಕಳ ಬುದ್ಧಿಮತ್ತೆ ಜತೆಗೆ ಜ್ಞಾನಶಕ್ತಿಯನ್ನೂ ಹೆಚ್ಚಿಸಲು ಹಲವು ರೀತಿಯಲ್ಲಿ ಪೂರಕವಾಗಿ ಪರಿಣಮಿಸುತ್ತಿವೆ ಎಂದರೆ ಅತಿಶಯೋಕ್ತಿಯಾಗದು.
ಪಠ್ಯದೊಂದಿಗೆ ಪಠ್ಯಪೂರಕ ಅಥವಾ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಈ ಕಾಲದ ಬಹು ಅವಶ್ಯವೂ ಆಗಿದೆ. ಏಕೆಂದರೆ ಹೇಳೀಕೇಳಿ ಇದು ಸ್ಪರ್ಧಾತ್ಮಕ ಯುಗ. ಪೂರ್ವ ಪ್ರಾಥಮಿಕ ಶಿಕ್ಷಣದಿಂದಲೇ ಪೈಪೋಟಿಯೊಂದಿಗೇ ಬೆಳೆಯುವ ಮಕ್ಕಳನ್ನು ಕೇವಲ ಕ್ಲಾಸ್ರೂಂನ ಶಿಕ್ಷಣಕ್ಕಷ್ಟೇ ಸೀಮಿತಗೊಳಿಸಿದರೆ ಭವ್ಯ ಭವಿಷ್ಯ ಮುರುಟುವುದೇ ಹೆಚ್ಚು. ಅದಕ್ಕಾಗಿ ಸ್ಪರ್ಧೆಗಾಗಿಯೇ ಮಕ್ಕಳನ್ನು ತಯಾರು ಮಾಡುವುದು ತರವಲ್ಲ ಎಂಬ ವಾದಗಳ ನಡುವೆಯೇ ಆ ಜೀವನವನ್ನು ಸಮರ್ಥವಾಗಿ ಎದುರಿಸಲು ಆ ಸ್ಪರ್ಧೆಯ ಜಗತ್ತಿನೊಳಗೆ ಮಕ್ಕಳೂ ಸದ್ದಿಲ್ಲದೆ ಸೇರಿಕೊಂಡು ಬಿಟ್ಟಿದ್ದಾರೆ. ಆದಾಗ್ಯೂ ಸ್ಪರ್ಧೆಗಳು ಧನಾತ್ಮಕವಾಗಿರಬೇಕು ಮತ್ತು ಬದುಕು ಕೊಲ್ಲದೆ, ಬದುಕನ್ನು ಅರಳಿಸುವಂತಿರಬೇಕೆಂಬುದೂ ಅಷ್ಟೇ ಸತ್ಯ.
ಕ್ರೀಡೆ
ನಗರ ಪ್ರದೇಶದ ಮಕ್ಕಳಲ್ಲಿ ದೈಹಿಕ ವ್ಯಾಯಾಮದ ಕೊರತೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಅದಕ್ಕಾಗಿ ಮಕ್ಕಳಲ್ಲಿ ಕ್ರೀಡಾಭ್ಯಾಸ ಬೆಳೆಸಿದರೆ ಅಥವಾ ಸಹ ಪಠ್ಯವಾಗಿ ಯೋಗ, ವ್ಯಾಯಾಮಗಳನ್ನು ಸೇರಿಸಿದರೆ, ಮಕ್ಕಳ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ದೃಢಗೊಳ್ಳುತ್ತದೆ.
ಕರಕುಶಲ ಜ್ಞಾನ
ಪ್ರಮುಖವಾಗಿ ಇಂದಿನ ಮಕ್ಕಳನ್ನು ಪಠ್ಯದ ಹೊರತಾಗಿ ಬಹುವಾಗಿ ಆಕರ್ಷಿಸುವ ಮತ್ತು ಒಂದಷ್ಟು ನೆಮ್ಮದಿ ನೀಡುವ ಚಟುವಟಿಕೆಗಳೆಂದರೆ ಪಠ್ಯೇತರ ಚಟುವಟಿಕೆಗಳು. ಶಾಲಾ-ಕಾಲೇಜು ಹಂತದಲ್ಲಿಯೇ ಕರಕುಶಲ ಜ್ಞಾನ ಬೆಳೆಸುವುದು ಇದರಲ್ಲಿ ಮುಖ್ಯವಾದುದು. ಉಲ್ಲಾನ್, ಹಳೆಯ ಬಟ್ಟೆಗಳನ್ನು ಬಳಸಿ ಮ್ಯಾಟ್ ತಯಾರಿಸುವುದು, ಕಾಗದದ ಹೂ ತಯಾರಿಸುವುದು, ಅಥವಾ ಕಸದಿಂದ ರಸ ಎನ್ನುವಂತೆ ಬಿಸಾಡುವ ವಸ್ತುಗಳನ್ನು ಬಳಸಿ ಸುಂದರ ಕಲಾತ್ಮಕತೆ ಅರಳಿಸುವಂತಹ ಕಲೆಗಳನ್ನು ಮಕ್ಕಳಿಗೆ ಹೇಳಿಕೊಟ್ಟರೆ, ಭವಿಷ್ಯದಲ್ಲಿ ಹಲವು ರೀತಿಯ ಉಪಯೋಗ ಕಾಣಬಹುದು.
ಸೇವಾ ತುಡಿತ
ಸ್ಕೌಟ್ಸ್, ಗೈಡ್ಸ್, ಎನ್ಸಿಸಿ, ಎನೆಸ್ಸೆಸ್ ಸೇರಿದಂತೆ ಶಾಲಾ-ಕಾಲೇಜು ಹಂತದಲ್ಲಿ ವಿವಿಧ ರಾಷ್ಟ್ರಾಭ್ಯುದಯದ ಶಿಕ್ಷಣ, ಶಿಸ್ತು ಕಲಿಕೆಯಂತಹ ಶಿಕ್ಷಣವೂ ಸಿಗುತ್ತವೆ. ಇವನ್ನೆಲ್ಲ ಸಮರ್ಥವಾಗಿ ಬಳಕೆ ಮಾಡಿಕೊಂಡು ಮುಂದಡಿಯಿಟ್ಟರೆ ವಿದ್ಯಾರ್ಥಿಗಳ ಭವಿಷ್ಯ ಬೆಳಗುವುದು ದಿಟವೇ ಆಗಿರುತ್ತದೆ. ಎನೆಸ್ಸೆಸ್, ಎನ್ಸಿಸಿ ಮುಂತಾದವುಗಳು ದೇಶೀಯತೆ, ಸಾಮಾಜಿಕ ಸೇವಾ ತುಡಿತಗಳನ್ನು ಬೆಳೆಸಲು ಕಾರಣವಾಗುತ್ತವೆ. ಇದರಲ್ಲಿ ತೊಡಗಿಸಿಕೊಳ್ಳುವ ಪ್ರತಿ ವಿದ್ಯಾರ್ಥಿಯೂ ಒಂದಲ್ಲ ಒಂದು ರೀತಿಯ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಉತ್ಸಾಹ ವಹಿಸುವುದು ಇಂದು ನಿನ್ನೆಯ ಉದಾಹರಣೆಗಳಲ್ಲ. ಎನ್ಸಿಸಿಯಿಂದಲೇ ರಾಷ್ಟ್ರ ಸೇವೆಗೆ, ಎನೆಸ್ಸೆಸ್ನಿಂದಲೇ ಸಾಮಾಜಿಕ ಸೇವೆಗೆ ಧುಮುಕಿದ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇದೆ.
ಆಸಕ್ತ ಕ್ಷೇತ್ರ
ಚಿತ್ರಕಲೆ, ಡ್ಯಾನ್ಸ್, ಸಂಗೀತ ಮುಂತಾದವುಗಳನ್ನೂ ಶಾಲೆಯಲ್ಲೇ ಹೇಳಿಕೊಡುವುದರಿಂದಲೂ ಜೀವನದ ಏಳುಬೀಳುಗಳಿಗೆ ಭವಿಷ್ಯದಲ್ಲಿ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕಾಲ ಕಾಲಕ್ಕೆ ವಿದ್ಯಾರ್ಥಿಗಳಿಗೆ ಇಂತಹ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಏರ್ಪಡಿಸಿದರೆ, ಬಹುಮಾನ ಪಡೆಯುವ ಕನಸಿನಿಂದಾಗಿ ಆಸಕ್ತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಜತೆಗೆ ಪ್ರತಿಭಾ ಕಾರಂಜಿ, ಅಂತರ್ ಕಾಲೇಜು ಸ್ಪರ್ಧೆಗಳಿಗೆಲ್ಲ ಶಾಲಾ-ಕಾಲೇಜು ತಂಡ ಗಳನ್ನು ಕಳುಹಿಸಿಕೊಡುವುದೂ ಇಲ್ಲಿ ಇನ್ನೊಂದು ವಿಧಾನವಾಗಿದೆ. ಇದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು