ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ತುಳು ಹಾಡು
Team Udayavani, Oct 4, 2018, 1:08 PM IST
ಉರುಂಟು ಭೂಮಿಡ್ ನಾಲ್ ದಿನತ ವೇಷ ನಮ್ಮ ಜೀವನ.. ಮರೊಟು ಇತ್ತಿನ ಪಣಿದ ಲೆಕ್ಕೊನೆ ಏಪ ಗಾಳಿಗ್ ತಾಲ್ವೆನೆ… ನರಮಾನೀ.. ನಿಕ್ಕ್ ಗೊತ್ತುಂಡಾ.. ಈ ಪೋಪಿನಾ.. ಸಾದಿ ಸರಿಯುಂಡಾ..’ ಹೀಗೊಂದು ಅಪ್ಪಟ ತುಳು ಹಾಡನ್ನು ಕನ್ನಡ ರಂಗಭೂಮಿಯ ಖ್ಯಾತ ಕಲಾವಿದೆ ಚಲನಚಿತ್ರರಂಗದ ಅಪೂರ್ವ ಕಲಾವಿದೆ, ಗಾಯಕಿ ಬಿ. ಜಯಶ್ರೀ ಹಾಡಿದರೆ ಹೇಗಿರಬಹುದು? ತನ್ನ ವಿಭಿನ್ನ ಕಂಠಸಿರಿಯ ಮೂಲಕವೇ ಮೋಡಿ ಮಾಡಿದ ಜಯಶ್ರೀ ಅವರು ಇದೇ ಹಾಡನ್ನು ‘ಜೀವನ ಯಜ್ಞ’ ಕನ್ನಡ ಸಿನೆಮಾಕ್ಕೆ ಹಾಡಿದ್ದು, ಸಾಕಷ್ಟು ಹಿಟ್ ದಾಖಲಿಸಿದೆ. ಗುಬ್ಬಿ ವೀರಣ್ಣನವರ ಮೊಮ್ಮಗಳ ಸ್ವರದಲ್ಲಿ ತುಳುವಿನ ಪೂರ್ಣ ಹಾಡು ಕೋಸ್ಟಲ್ವುಡ್ನಲ್ಲಂತೂ ಸಾಕಷ್ಟು ಬೆರಗು ಮೂಡಿಸಿದೆ.
ಅಂದಹಾಗೆ, ಮುಂದಿನ ತಿಂಗಳು ರಿಲೀಸ್ ಆಗಲಿರುವ ಶಿವು ಸರಳಬೆಟ್ಟು ನಿರ್ದೇಶನದ ಕರಾವಳಿಯ ಕಿರಣ್ ರೈ ಹಾಗೂ ರಂಜನ್ ಶೆಟ್ಟಿ ನಿರ್ಮಾಣದ ‘ಜೀವನ ಯಜ್ಞ’ ಸಿನೆಮಾದಲ್ಲಿ ಹಲವು ಸೂಪರ್ ಸಾಂಗ್ಗಳಿವೆ. ಅದರಲ್ಲಿ ಜಯಶ್ರೀ ಅವರು ಹಾಡಿದ ಮನ ಮಿಡಿಯುವ ಧಾಟಿಯ ಹಾಡು ಈಗಾಗಲೇ ಸ್ಯಾಂಡಲ್ವುಡ್ನಲ್ಲೂ ಚರ್ಚೆ ಹುಟ್ಟುಹಾಕಿದೆ. ರಮೇಶ್ ಭಟ್, ಜಯಶ್ರೀ, ಶೈನ್ ಶೆಟ್ಟಿ, ಮನೋಜ್ ಪುತ್ತೂರು, ಅನ್ವಿತಾ ಸಾಗರ್, ಆದ್ಯ ಆರಾಧನಾ ಸಹಿತ ಕೋಸ್ಟಲ್ವುಡ್ನ ಪ್ರಮುಖರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸುರೇಂದ್ರ ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರೆ, ಆ್ಯಶ್ಲೆ ಮೈಕೆಲ್ ಸಂಗೀತ ನೀಡಿದ್ದಾರೆ. ಒಂದೇ ತಿಂಗಳಿನಲ್ಲಿ ಮಂಗಳೂರಿನಲ್ಲಿಯೇ ಸಿನೆಮಾದ ಶೂಟಿಂಗ್ ನಡೆಸಲಾಗಿದೆ.