ಏರೆಗಾವುಯೇ ಕಿರಿಕಿರಿಯಲ್ಲಿ ಕೇಳಿ ಬರುತ್ತಿದೆ ಪಿರಿ ಪಿರಿ!
Team Udayavani, Dec 20, 2018, 12:25 PM IST
ಬದ್ಕೆರೆ ಬುಡ್ಲೆ , ದಾರೆದ ಸೀರೆ, ಬಂಗಾರ್ದ ಕುರಲ್, ಸೂಪರ್ ಮರ್ಮಯೆ ಮೊದಲಾದ ಸಿನೆಮಾಗಳನ್ನು ತುಳು ಸಿನೆಮಾರಂಗಕ್ಕೆ ನೀಡಿದ ರಾಮ್ ಶೆಟ್ಟಿ ಮುಂಬಯಿ ಅವರು ಈ ಬಾರಿ ರೋಶನ್ ವೇಗಸ್ ಮತ್ತು ರಿಯಾಜ್ ಕುಂದಾಪುರ ಅವರ ಜತೆಗೆ ವೇಗಸ್ ಫಿಲ್ಮ್ ಮುಂಬಯಿ ಬ್ಯಾನರ್ನಡಿಯಲ್ಲಿ ತಯಾರು ಮಾಡುತ್ತಿರುವ ‘ಏರೆಗಾವುಯೇ ಕಿರಿಕಿರಿ’ ಸಿನೆಮಾದಲ್ಲಿ ಕೊಂಚ ಕಿರಿ ಕಿರಿ ಆದ ಬಗ್ಗೆ ವರದಿಯಾಗಿದೆ.
ಸಿನೆಮಾದ ಮುಖ್ಯಭೂಮಿಕೆಯ ಕಲಾವಿದರು ಶೂಟಿಂಗ್ ಸಮಯದಲ್ಲಿ ಬೈದಾಡಿದ ಪ್ರಸಂಗ ನಡೆದಿದೆ ಎಂಬ ಬಗ್ಗೆ ಗುಸುಗುಸು ಕೇಳಿಬಂದಿದೆ. ತುಳು ಸಿನೆಮಾರಂಗದಲ್ಲಿ ಒಳಗೊಳಗೆ ಇದ್ದ ಬೈದಾಟ ಈ ಮೂಲಕ ಬಹಿರಂಗದ ಮಟ್ಟಕ್ಕೆ ತಲುಪಿದಂತಾಗಿದೆ ಎಂಬ ಮಾತು ಕೇಳಿಬಂದಿದೆ. ಆದರೆ, ಸಿನೆಮಾ ಮತ್ತು ಇಬ್ಬರ ಬೈದಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರದ ಖ್ಯಾತನಟರೊಬ್ಬರು ಸ್ಪಷ್ಟನೆ ನೀಡಿದ್ದಾರೆ. ಬೈದಾಟ ನಟರಿಬ್ಬರ ವೈಯಕ್ತಿಕ ವಿಚಾರವಾಗಿದ್ದು, ಸಿನೆಮಾಕ್ಕೂ ಇದಕ್ಕೂ ಸಂಬಂಧವೇ ಇಲ್ಲ ಎಂಬುದು ಅವರ ಅಭಿಪ್ರಾಯ. ಬಹುತೇಕ ಮುಕ್ತಾಯ ಹಂತದಲ್ಲಿರುವ ಚಿತ್ರ ಶೂಟಿಂಗ್ ಕುಂದಾಪುರ, ಬ್ರಹ್ಮಾವರ ಸುತ್ತ ಮುತ್ತ ನಡೆದಿದೆ. ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಮುಂಬಯಿಯ ರಾಮ್ ಶೆಟ್ಟಿ ನಿರ್ದೇಶನದಲ್ಲಿ ‘ಏರೆಗಾವುಯೇ ಕಿರಿಕಿರಿ’ ರೆಡಿಯಾಗುತ್ತಿದೆ.