ಕಂಬಳಬೆಟ್ಟು ಭಟ್ರೆನ ಮಗಲ್ ಮಾಡಿದ್ದೇನು?
Team Udayavani, Jan 17, 2019, 7:09 AM IST
ರೋನಾಲ್ಡ್ ಮಾರ್ಟಿಸ್ ನಿರ್ಮಾಣದ ಶರತ್ ಎಸ್. ಪೂಜಾರಿ ಬಗ್ಗತೋಟ ನಿರ್ದೇಶನದ ಕೋಸ್ಟಲ್ವುಡ್ನ ಬಹುನಿರೀಕ್ಷೆಯ ‘ಕಂಬಳಬೆಟ್ಟು ಭಟ್ರೆನ ಮಗಲ್’ ತುಳು ಸಿನೆಮಾವೂ ಫೆಬ್ರವರಿ ಅಂತ್ಯಕ್ಕೆ ಕರಾವಳಿಯಾದ್ಯಂತ ತೆರೆಕಾಣುವ ನಿರೀಕ್ಷೆಯಲ್ಲಿದೆ. ಬಳಿಕ ಈ ಸಿನೆಮಾ ದುಬೈ, ಬಹರೈನ್, ಕತಾರ್, ಮುಂಬಯಿ, ಪುಣೆ ಮುಂತಾದ ಕಡೆಗಳಲ್ಲಿ ರಿಲೀಸ್ ಆಗುವ ಸಿದ್ಧತೆಯಲ್ಲಿದೆ. ಹಾಡುಗಳು ಹಾಗೂ ಟೀಸರ್ನಲ್ಲೇ ಕುತೂಹಲ ಕೆರಳಿಸಿರುವ ನಾಯಕಿ ಪ್ರಧಾನವಾಗಿರುವ ಈ ಚಿತ್ರದಲ್ಲಿ ಐಶ್ವರ್ಯಾ ಆಚಾರ್ಯ ನಾಯಕಿಯಾಗಿ ನಟಿಸಿದ್ದಾರೆ. ಹಾಸ್ಯ ಕಲಾವಿದರಾದ ಪ್ರಕಾಶ್ ತುಮಿನಾಡ್, ಅರವಿಂದ ಬೋಳಾರ್ ಹಾಗೂ ಭೋಜರಾಜ ವಾಮಂಜೂರು ಮುಂತಾದವರು ಸಿನೆಮಾದಲ್ಲಿ ಅಭಿನಯಿಸಿದ್ದಾರೆ.
ಕಂಬಳಬೆಟ್ಟು ಎಂಬ ಊರಿನ ಸೂರ್ಯನಾರಾಯಣ ಭಟ್ಟರ ಮನೆಯಲ್ಲಿ ನಡೆದ ಒಂದು ಘಟನೆ ಆಧಾರಿತವಾಗಿ ಸಿದ್ಧಗೊಂಡ ಸಿನೆಮಾವಿದು. ಅವರ ಮಗಳ ಕಥೆಯೇ ಈ ಸಿನೆಮಾದ ಮೂಲಧಾತು. ಅದು ಯಾವ ರೀತಿಯ ಕಥೆ ಹಾಗೂ ಆಕೆ ಏನಾಗಿದ್ದಳು? ಯಾಕೆ ಆಕೆಗೆ ಮಹತ್ವ? ಎಂಬೆಲ್ಲ ವಿಚಾರಗಳಿಗೆ ಚಿತ್ರತಂಡ ಸದ್ಯಕ್ಕೆ ಉತ್ತರ ನೀಡುತ್ತಿಲ್ಲ. ಹೀಗಾಗಿ ಸಿನೆಮಾದ ಬಗ್ಗೆ ಕೋಸ್ಟಲ್ವುಡ್ನಲ್ಲಿ ಸಾಕಷ್ಟು ಕುತೂಹಲ ಇದ್ದೇ ಇದೆ.
ವಿಶೇಷ ಅಂದರೆ, ಕಂಬಳಬೆಟ್ಟು ಭಟ್ರೆನ ಮಗಳ್ ಸದ್ಯಕ್ಕೆ ತುಳು ಸಿನೆಮಾ. ಆದರೆ, ತುಳು ಸಿನೆಮಾ ರಿಲೀಸ್ ಆದ ಒಂದೆರಡು ತಿಂಗಳೊಳಗೆ ಕನ್ನಡ ಸಿನೆಮಾ ಕೂಡ ಸಿದ್ಧವಾಗಲಿದೆ ಎಂಬ ಕುತೂಹಲದ ಮಾಹಿತಿ ಸದ್ಯ ಲಭ್ಯವಾಗಿದೆ. ತುಳು ಹಾಗೂ ಕನ್ನಡ ಭಾಷೆಯೆರಡರಲ್ಲಿಯೂ ಸಿನೆಮಾ ಶೂಟಿಂಗ್ ಕಂಡಿದೆ. ಒಮ್ಮೆ ತುಳು ಹಾಗೂ ಮತ್ತೂಮ್ಮೆ ಕನ್ನಡದಲ್ಲಿ ಶೂಟಿಂಗ್ ನಡೆಸಲಾಗಿದೆ. ಹೀಗಾಗಿ ಎರಡೂ ಭಾಷೆಯಲ್ಲಿಯೂ ಸಿನೆಮಾ ಸಿದ್ಧವಾಗಿದ್ದು, ಭರ್ಜರಿ ಎಂಟ್ರಿಗೆ ವೇದಿಕೆ ರೆಡಿ ಮಾಡಲಾಗಿದೆ.