ಕುಡ್ಲದಲ್ಲಿ ಜಬರ್ದಸ್ತ್ ಫೈಟ್!
Team Udayavani, Mar 21, 2019, 7:35 AM IST
ಸಾಮಾನ್ಯವಾಗಿ ತುಳು ಸಿನೆಮಾ ಅಂದಾಗ ಅಲ್ಲಿ ಕಾಮಿಡಿಯೇ ಮುಖ್ಯವಾಗಿರುತ್ತದೆ. ಅದರಲ್ಲಿಯೂ ದೇವದಾಸ್ ಕಾಪಿಕಾಡ್ ಅವರ ಸಿನೆಮಾ ಅಂದಾಗ ಕಾಮಿಡಿ ಅಗ್ರಪಂಕ್ತಿಯಲ್ಲಿರುತ್ತದೆ. ಜತೆಗೆ ಜನರಿಗೆ ಒಪ್ಪುವಂತಹ ಕತೆ ಕೂಡ ಕಾಮಿಡಿಯಲ್ಲಿ ಮಿಕ್ಸ್ ಆಗಿರುತ್ತದೆ. ವಿಶೇಷವೆಂದರೆ ಕಾಪಿಕಾಡ್ ಅವರ ಈ ಬಾರಿಯ ಸಿನೆಮಾ ಮಾತ್ರ ಇದಕ್ಕಿಂತ ಸ್ವಲ್ಪ ಭಿನ್ನ. ಇಲ್ಲಿ ಕಾಮಿಡಿ- ಕಥೆಯ ಜತೆಗೆ ಫೈಟ್ ವೆರೈಟಿಯಾಗಿ ಇದೆ ಎಂಬುದು ಸದ್ಯದ ಮಾಹಿತಿ.
‘ಜಬರ್ದಸ್ತ್ ಶಂಕರ’ ಸಿನೆಮಾ ಅಷ್ಟರಮಟ್ಟಿಗೆ ಮಾಸ್ ಸಿನೆಮಾವಾಗಿ ಮೂಡಿಬಂದಿದೆ ಎಂಬುದು ಅಭಿಪ್ರಾಯ. ಯಾಕೆಂದರೆ 28 ದಿನಗಳ ಜಬರ್ದಸ್ತ್ ಶೂಟಿಂಗ್ನಲ್ಲಿ ಬರೋಬ್ಬರಿ 11 ದಿನಗಳ ಶೂಟಿಂಗ್ ಅನ್ನು ಕೇವಲ ಫೈಟ್ ಗಾಗಿಯೇ ಮೀಸಲಿಡಲಾಗಿದೆ. ಚಿತ್ರದಲ್ಲಿ ನಾಲ್ಕು ಫೈಟ್ಗಳು ಕೋಸ್ಟಲ್ವುಡ್ ನಲ್ಲಿಯೇ ಮೊದಲ ಬಾರಿಗೆ ಅತ್ಯಂತ ಅದ್ದೂರಿಯಾಗಿ ಮೂಡಿಬಂದಿದೆ. ಒಂದು ಫೈಟ್ಗಾಗಿ ಸಿನೆಮಾದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ.
ಪುಟ್ಟಣ ಕಣಗಾಲ್ ಸ್ಟುಡಿಯೋದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆದಿತ್ತು. ಖ್ಯಾತ ಸಾಹಸ ನಿರ್ದೇಶಕ ಮಾಸ್ ಮಾದ ನಿರ್ದೇಶನದಲ್ಲಿ ಸಾಹಸ ದೃಶ್ಯಗಳನ್ನು ಪರಿಚಯಿಸಲಾಗಿದೆ. ಅದರಲ್ಲಿಯೂ ಕ್ಲೈಮ್ಯಾಕ್ಸ್ನಲ್ಲಿ ಬರುವ ಒಂದು ಫೈಟ್ಗಾಗಿ ಐದೂವರೆ ದಿನ ಶೂಟಿಂಗ್ ಮಾಡಲಾಗಿದೆ. ಇನ್ನೊಂದು ವಿಶೇಷವೆಂದರೆ ಶೂಟಿಂಗ್ ಸಮಯದಲ್ಲಿ ಮೂರು ಕೆಮರಾಗಳನ್ನು ಬಳಸಲಾಗಿದೆ. ಅಂದಹಾಗೆ ಸಿನೆಮಾದ 1 ಡ್ನೂಯೆಟ್ ಸಾಂಗ್ ಶೂಟಿಂಗ್ ಬಾಕಿ ಇದ್ದು, ಅದನ್ನು ಅದ್ದೂರಿಯಾಗಿ ಮಾಡಬೇಕು ಎಂಬುದು ಚಿತ್ರತಂಡದ ಅಭಿಪ್ರಾಯ.
10 ನುರಿತ ಡ್ಯಾನ್ಸರ್ನವರನ್ನು ಇದಕ್ಕಾಗಿ ಬಳಸಲಾಗುತ್ತದೆ. ಎರಡೂವರೆ ದಿನ ಶೂಟಿಂಗ್ನ ಯೋಚನೆಯಿದೆ. ‘ಶಿವನಾಮದ ಮೈಮೆನೇ’ ಎಂಬ ಹಾಡಿನ ಚಿತ್ರೀಕರಣಕ್ಕೆ ಮೂರು ದಿನ ತೆಗೆದುಕೊಳ್ಳಲಾಗಿದೆ. ಹೆಚ್ಚಾ ಕಡಿಮೆ 250 ಜನ ಈ ಹಾಡಿನಲ್ಲಿ ಇದ್ದರು. ಜಲನಿಧಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ ಈ ಸಿನೆಮಾವನ್ನು ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್, ರಾಜೇಶ್ ಕುಡ್ಲ ನಿರ್ಮಿಸುತ್ತಿದ್ದು, ದೇವದಾಸ್ ಕಾಪಿಕಾಡ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರದ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ತುಳುನಾಡಿನ ಸಂಸ್ಕೃತಿ, ಆಚಾರ- ವಿಚಾರ, ಸಂಪ್ರದಾಯ ಎಲ್ಲವೂ ಇಲ್ಲಿದೆ. ಸಿನೆಮಾವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಿ ಹಿಂದಿ, ತಮಿಳು, ತೆಲುಗಿಗೆ ಡಬ್ಬಿಂಗ್ ಹಕ್ಕು ಮಾರಾಟ ಮಾಡುವ ಕುರಿತು ಮಾತುಕತೆ ನಡೆದಿದೆ ಎಂದು ರಾಜೇಶ್ ಕುಡ್ಲ ತಿಳಿಸಿದ್ದಾರೆ.