ಆಟಿಡೊಂಜಿ ದಿನ ಈಗ ಶುರು!
Team Udayavani, Mar 7, 2019, 7:34 AM IST
ರಾಧಾಕೃಷ್ಣ ನಾಗರಾಜು ನಿರ್ಮಾಣದ ಆರ್.ಹರೀಸ್ ಕೊಣಾಜೆಕಲ್ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ‘ಆಟಿಡೊಂಜಿ ದಿನ’ ಸಿನೆಮಾ ಶೂಟಿಂಗ್ ಪ್ರಾರಂಭಿಸಿದೆ. ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮಾ.1ರಂದು ಮುಹೂರ್ತ ಕಂಡಿರುವ ಈ ಸಿನೆಮಾ ಸದ್ಯ ನಗರದ ಬೇರೆ ಬೇರೆ ಭಾಗದಲ್ಲಿ ಶೂಟಿಂಗ್ ಸ್ಟೇಜ್ನಲ್ಲಿದೆ.
ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸತೀಶ್ ಬಂದಳೆ, ಪೃಥ್ವಿ ಅಂಬರ್, ನಿರೀಕ್ಷ ಶೆಟ್ಟಿ, ದೀಪಕ್ ರೈ, ಸೂರಜ್ ಸಾಲ್ಯಾನ್, ಶ್ರದ್ಧಾ ಸಾಲ್ಯಾನ್, ಪೃಥ್ವಿರಾಜ್ ಮೂಡುಬಿದ್ರೆ ಸಿನೆಮಾದಲ್ಲಿ ಬಣ್ಣಹಚ್ಚಿದ್ದಾರೆ. ಆಕಾಶ್ ಹಾಸನ ಕಾರ್ಯಕಾರಿ ನಿರ್ಮಾಪಕ ಹಾಗೂ ಸಹನಿರ್ದೇಶನ ಮಾಡುತ್ತಿದ್ದು, ನರೇಂದ್ರ ಗೌಡ ಸಿನೆಮಾಟೋಗ್ರಫಿ, ಮೇವಿನ್ ಜೋಯಲ್ ಪಿಂಟೊ ಸಂಕಲನ ಹಾಗೂ ರಾಜೇಶ್ ಭಟ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ತುಳುನಾಡಿನ ಸಂಸ್ಕೃತಿಯ ಪ್ರಕಾರ ಆಟಿ ಅತ್ಯಂತ ಮಹತ್ವದ ತಿಂಗಳು. ಹಿಂದಿನ ದಿನದಲ್ಲಿ ಅತ್ಯಂತ ಕಷ್ಟದ ತಿಂಗಳು ಎಂದೇ ಉಲ್ಲೇಖವಾದ ದಿನಗಳು.
ಒಂದೆಡೆ ಬಿಡದೆ ಕಾಡುವ ಮಳೆಯಾದರೆ ಇನ್ನೊಂದೆಡೆ ಬಡತನ; ಈ ಸಂದರ್ಭದಲ್ಲಿ ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನೇ ಆಹಾರವಾಗಿಸಿಕೊಂಡು ಬದುಕುತ್ತಿದ್ದ ಹಿಂದಿನ ಕಾಲ. ಪ್ರಸಕ್ತ ಇಂತಹ ಪರಿಸ್ಥಿತಿ ಇಲ್ಲವಾದರೂ, ಹಿಂದಿನ ದಿನವನ್ನು ನೆನಪಿಸುವ ಕೆಲಸ ತುಳುನಾಡಿನಾದ್ಯಂತ ನಡೆಯುತ್ತಿದೆ. ಅದಕ್ಕಾಗಿ ‘ಆಟಿಡೊಂಜಿ ದಿನ’ ಎಂಬ ಆಚರಣೆಯೂ ಜಾರಿಯಲ್ಲಿದೆ. ಇದೇ ದಿನದ ವಿಶೇಷವನ್ನು ಹಾಗೂ ಇದೇ ತಿಂಗಳಿನ ನೆನಪನ್ನು ಮನನ ಮಾಡುವ ಉದ್ದೇಶದಿಂದ ‘ಆಟಿಡೊಂಜಿ ದಿನ’ ಸಿನೆಮಾ ರೆಡಿಯಾಗಲಿದೆ. ತುಳು- ಕನ್ನಡ ಸಿನೆಮಾ ಧಾರವಾಹಿಗಳಲ್ಲಿ ಸಹ ನಿರ್ದೇಶಕನಾಗಿ ದುಡಿದಿರುವ ಮೂಡುಬಿದಿರೆಯ ಆರ್. ಹರೀಶ್ ಕೊಣಾಜೆಕಲ್ ನಿರ್ದೇಶನದಲ್ಲಿ ಈ ಸಿನೆಮಾ ಸೆಟ್ಟೇರಲಿದೆ.