ಸಕಾರಾತ್ಮಕ ಚಿಂತನೆಗೆ ದಾರಿ ತೋರುವ ಲೈಫು ಇಷ್ಟೇನೆ?
Team Udayavani, Oct 17, 2018, 3:11 PM IST
ನಮ್ಮ ಮನಸ್ಸು ಹೊಸ ಆಲೋಚನೆಗಳಿಗೆ ತೆರೆದುಕೊಂಡಿರಬೇಕು, ನಮ್ಮ ಬದುಕು ನಮ್ಮ ಕೈಯಲ್ಲೇ ಇದೆ. ಅದನ್ನು ಹಸನುಗೊಳಿಸಬಹುದು ಅಥವಾ ಬರಡುಗೊಳಿಸಬಹುದು ಎನ್ನುವ ಯತಿರಾಜ್ ವೀರಾಂಬುದಿ ಅವರು ಬರೆದ ಕೃತಿ ‘ಲೈಫು ಇಷ್ಟೇನೆ..?’ ಇದರ ಸಾರಾಂಶ. ಬದುಕಿಗೆ ಬೇಕಾದ ಕೆಲವೊಂದು ಪಾಸಿಟಿವ್ ವಿಚಾರಗಳು ಇದರಲ್ಲಿರುವುದರಿಂದ ಓದುಗರಿಗೆ ಹೆಚ್ಚು ಪ್ರಿಯವೆನಿಸುತ್ತದೆ.
ಘಟನೆ 1
ನಮ್ಮ ಹಾಸ್ಯ ಚತುರತೆ, ವ್ಯಕ್ತಿತ್ವ, ವರ್ತನೆ, ಗುಣ ಇವುಗಳನ್ನು ಯಾರು ಇಷ್ಟ ಪಡುತ್ತಾರೋ ಅವರನ್ನು ನಾವು ಬಹುಬೇಗ ಇಷ್ಟಪಡುತ್ತೇವೆ. ಆದರೆ, ಈ ರೀತಿ ನಮ್ಮನ್ನು ಇಷ್ಟಪಡುವವರು ಯಾಕೆ ಇಷ್ಟಪಡುತ್ತಾರೆ? ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಇಂತಹ ಜನರು ನಮ್ಮ ಜತೆ ಇರುವವರೆಗೆ ಅಭದ್ರತೆಯ ಸ್ಥಿತಿ ಉಂಟಾಗುವುದೇ ಇಲ್ಲ. ನಮ್ಮನ್ನು ಯಾರಾದರೂ ಹೊಗಳಲು ಆರಂಭಿಸಿದರೆ ಅದು ಸತ್ಯವೋ, ಅಸತ್ಯವೋ ಎಂಬುವುದರ ಅರಿವೇ ನಮಗೆ ಇರುವುದಿಲ್ಲ. ಆದರೆ ಯಾರು ನಮ್ಮ ಬುದ್ಧಿವಂತಿಕೆಯನ್ನು ಮೂದಲಿಸುತ್ತಾರೋ ಅವರನ್ನು ಪ್ರೀತಿಸಿ, ಗೌರವಿಸುವುದು ಮುಖ್ಯ. ಯಾಕೆಂದರೆ ಇವರು ನಮ್ಮ ನಿಜವಾದ ಹಿತೈಷಿಗಳಾಗುತ್ತಾರೆ.
ಘಟನೆ 2
ನಿರ್ವಹಣೆ ಮತ್ತು ಬದುಕಿನ ನಿರ್ವಹಣೆಯಲ್ಲಿ ಆಲಿಸುವಿಕೆಯ ಪಾತ್ರ ಮುಖ್ಯವಾಗುತ್ತದೆ. ಇನ್ನೊಬ್ಬರು ಮಾತನಾಡುವಾಗ ಅವರ ಮಾತಿಗೆ ಬೆಲೆ ಕೊಡುವುದು ಮುಖ್ಯ. ಕೇವಲ ಮುಖವನ್ನು ನೋಡುವುದು ಮಾತ್ರವಲ್ಲ, ವಿಷಯದ ಜ್ಞಾನವನ್ನು ಅರಿತುಕೊಳ್ಳಬೇಕು. ಇನ್ನೊಬ್ಬರ ಮಾತುಗಳ ನಡುವಿನ ಮೌನವನ್ನು ನಾವು ಆಲಿಸುತ್ತೇವೆ. ಆಗ ನಮ್ಮ ಮಾತುಗಳಿಗೂ ಸ್ಪಂದಿಸುತ್ತಾರೆ. ಪ್ರಾಮಾಣಿಕವಾದ ಕೇಳುಗರಾದಾಗ ಮಾತ್ರ ಇನ್ನೊಬ್ಬರಿಗೆ ನಮ್ಮ ಮೇಲೆ ನಂಬಿಕೆ ಉುಟಾಗುತ್ತದೆ. ಆಲಿಸುವುದು ನಮ್ಮ ಬದುಕಿನ ಭಾಗವಾದರೆ ಅನೇಕ ಅನಗತ್ಯ ವಾದಗಳನ್ನು ಇಲ್ಲವಾಗಿಸಬಹುದು.
ಘಟನೆ 3
ಜೀವನದಲ್ಲಿ ಯಾರೂ, ಯಾವುದೂ ಶಾಶ್ವತವಲ್ಲ. ಅದೆಷ್ಟೋ ಬಾರಿ ನಾವು ನಂಬಿದವರೇ ನಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ. ಇದರಿಂದ ನಮ್ಮ ಯೋಜನೆಗಳು ತಲೆಕೆಳಗಾಗುತ್ತವೆ. ಇದರಿಂದ ಮಾನಸಿಕವಾಗಿ ನೊಂದಿಕೊಳ್ಳುತ್ತೇವೆ. ಈ ರೀತಿ ದುಃಖಪಟ್ಟು ಸೇಡು ತೀರಿಸಿಕೊಳ್ಳುವುದರ ಬದಲು, ದ್ರೋಹ, ವಂಚನೆ ಮಾಡಿದವರನ್ನು ನಮ್ಮ ಮನಸ್ಸಿನಿಂದ ದೂರ ತಲ್ಲಿಬಿಡೋಣ. ಯಾರನ್ನು ಉಳಿಸಿಕೊಳ್ಳಬೇಕೋ ಅವರ ಬಗ್ಗೆ ಆಲೋಚಿಸೋಣ. ಇದರಿಂದ ನಮಗೆ ಏನೂ ತೊಂದರೆಯಾಗುವುದಿಲ್ಲ.
ಶ್ರುತಿ ನೀರಾಯ