ಎರುಕಡಪು: ನೇತ್ರಾವತಿ ನದಿಗೆ ಬೇಕಿದೆ ಸೇತುವೆ ಭಾಗ್ಯ
Team Udayavani, Mar 13, 2017, 2:56 PM IST
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಬೆಳ್ಳೂರುಬೈಲು ಪರಿಸರದ ನಿವಾಸಿಗಳಿಗೆ ಇಲ್ಲಿನ ಎತ್ತಿನಗಂಡಿ (ಎರುಕಡಪು) ಎಂಬಲ್ಲಿ ನೇತ್ರಾವತಿ ನದಿಗೆ ಸೇತುವೆ ಇಲ್ಲದೆ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಇಲ್ಲಿನವರು ಪಡುವ ಕಷ್ಟಕ್ಕೆ ಪರಿಹಾರವೇ ಇಲ್ಲದಂತಾಗಿದೆ. ಸರಿಯಾದ ರಸ್ತೆಯ ವ್ಯವಸ್ಥೆಯೂ ಇಲ್ಲದಾಗಿದೆ.
ಸಂಪರ್ಕ ಕೊಂಡಿ
ಕಡಿರುದ್ಯಾವರ ಗ್ರಾಮ ಹಾಗೂ ಇಂದಬೆಟ್ಟು ಗ್ರಾಮಗಳನ್ನು ವಿಭಜಿಸಿ ಬೆಳ್ಳೂರುಬೆ„ಲು ಸಮೀಪ ನೇತ್ರಾವತಿ ನದಿ ಹರಿಯುತ್ತಿದ್ದು, ಎರುಕಡಪು ಎಂಬಲ್ಲಿ ಸೇತುವೆಯಾದರೆ ಈ ಎರಡು ಗ್ರಾಮಗಳಿಗೆ ಒಂದು ಸಂಪರ್ಕಕೊಂಡಿಯಾಗಲಿದೆ. ಈಗ ತಾಲೂಕು ಕೇಂದ್ರಕ್ಕೆ ಬರಬೇಕಾದರೆ ಇಂದಬೆಟ್ಟು ಮೂಲಕ ಬರಬೇಕು. ಇಲ್ಲವೇ ಕಾನರ್ಪ ಮೂಲಕ ಉಜಿರೆಗೆ ಬಂದು ಅಲ್ಲಿಂದ ಬೆಳ್ತಂಗಡಿಗೆ ಬರಬೇಕು. ಬೆಳ್ಳೂರುಬೈಲು ಪರಿಸರಕ್ಕೆ ಸಂಬಂಧಿಸಿದಂತೆ ಎತ್ತಿನಗಂಡಿ, ಕೊಯಮಜಲು, ಸಣ್ಣಬೆಟ್ಟು, ದೊಡ್ಡಬೆಟ್ಟು, ಸೀತಲಡ್ಡ, ಕುದುರು, ಹೆರಿಬೆಟ್ಟು, ಇಂಜನೋಡಿ, ಬೆ„ನಾಲಿ, ಓಡರಬೆಟ್ಟು, ಅಂತರ, ನೂಜಿ, ಮೇಲಮನೆ, ಕಟ್ಟದಬದಿ, ಹೊಸಮಾರು, ದೇವಪಾಲು ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿವೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಕೂಡ ಕಷ್ಟ. ಮಳೆಗಾಲದ ಸಂದರ್ಭದಲ್ಲಿ ರಸ್ತೆಯೂ ಸಂಪೂರ್ಣ ಕೆಸರುಮಯವಾಗಿ ವಾಹನ ಸಂಚಾರವೂ ಕಷ್ಟವಾಗುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ನದಿ ದಾಟುವುದು ಅನಿವಾರ್ಯ
ಮಳೆಗಾಲದಲ್ಲಿ ತಾಲೂಕು ಕೇಂದ್ರಕ್ಕೆ ಬರಬೇಕಾದರೆ ಸುಮಾರು 5 ಕಿ.ಮೀ. ನಡೆದುಕೊಂಡು ಸುತ್ತುಬಳಸಿ ಬರಬೇಕು. ನದಿ ದಾಟಿ ಸುಮಾರು 2 ಕಿ.ಮೀ. ದೂರ ನಡೆದರೆ ಇಂದಬೆಟ್ಟು ಮೂಲಕ ಬೆಳ್ತಂಗಡಿಗೆ ಹತ್ತಿರದ ದಾರಿ. ಆದರೆ ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯನ್ನು ದಾಟುವುದು ಸುಲಭದ ಮಾತಲ್ಲ. ಈ ಪ್ರದೇಶದ ಕೆಲವು ಕೃಷಿಕರಿಗೆ ನದಿಯಾಚೆಯೂ ಕೃಷಿ ಜಮೀನಿದ್ದು ಅಲ್ಲಿಗೆ ಹೋಗಬೇಕಾದರೆ ಮಳೆಯೇ ಬರಲಿ, ನೆರೆಯೇ ಬರಲಿ ನದಿ ದಾಟುವುದು ಅನಿವಾರ್ಯವಾಗಿದೆ.
ವಿದ್ಯಾರ್ಥಿಗಳಿಗೆ ಕಷ್ಟ
ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸುಮಾರು 5 ಕಿ. ಮೀ. ನಡೆದುಕೊಂಡು ಹೋಗಬೇಕಿದೆ. ಸೇತುವೆ, ರಸ್ತೆ ನಿರ್ಮಾಣ ವಾಗುತ್ತದೆ ಎಂದು ಈ ಹಿಂದೆ ಇಲ್ಲಿ ಸರ್ವೇ ಕೂಡ ನಡೆದಿತ್ತು. ಎರುಕಡಪು ಸೇತುವೆ ನಿರ್ಮಾಣವಾದರೆ ಇಂದಬೆಟ್ಟು – ಕಡಿರುದ್ಯಾವರ ಸಂಪರ್ಕ ಸುಲಭವಾಗಲಿದೆ. ಪರಿಸರದ ಕೃಷಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಗ್ರಾಮೀಣ ಭಾಗದ ಜನರ, ಕೃಷಿಕರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಶೀಘ್ರವಾಗಿ ಸ್ಪಂದಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.
– ಗುರು ಮುಂಡಾಜೆ