ರಸ್ತೆ ದುರಸ್ತಿ ಕಾಮಗಾರಿ ಶೀಘ್ರವಾಗಿ ನಡೆಯಲಿ
Team Udayavani, Oct 14, 2018, 1:47 PM IST
ನಾಡಿನ ಸುಪ್ರಸಿದ್ಧ ಮಂಗಳೂರು ದಸರಾ ಅ. 19ರಂದು ಮೆರವಣಿಗೆ ಮೂಲಕ ಸಂಪನ್ನಗೊಳ್ಳಲಿದೆ. ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಆರಂಭದ ದಿನದಿಂದಲೇ ಕುದ್ರೋಳಿ- ಅಳಕೆ- ಮಣ್ಣಗುಡ್ಡೆ ರಸ್ತೆಯಲ್ಲಿ ಜನ ಹಾಗೂ ವಾಹನ ಸಂಚಾರ ಹೆಚ್ಚಾಗಿದೆ.
ಇಲ್ಲಿನ ದಸರಾ ಶೋಭಾಯಾತ್ರೆಗೆ ಅತ್ಯಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವುದು ನಮ್ಮ ಸ್ಥಳೀಯಾಡಳಿತಕ್ಕೆ ಗೊತ್ತಿಲ್ಲದ ಸಂಗತಿಯೇನಲ್ಲ. ಆದರೆ ಮಹಾನಗರ ಪಾಲಿಕೆಯು ರಸ್ತೆ ದುರಸ್ತಿಯನ್ನು ನವರಾತ್ರಿಆರಂಭಗೊಂಡ ಬಳಿಕ ಮಾಡುತ್ತಿರುವುದರಿಂದ ಅಲ್ಲಲ್ಲಿ ಟ್ರಾಫಿಕ್ ಜಾಮ್, ಜನ ಸಂಚಾ ರಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ.
ದಸರಾ ಮೆರವಣಿಗೆ ನಡೆಯುವ ಮುಖ್ಯ ರಸ್ತೆಯು ಬಹುತೇಕ ಕಾಂಕ್ರೀಟೀಕರಣಗೊಂಡಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಮುಖ್ಯ ರಸ್ತೆ ಸೇರುವ ಬಹುತೇಕ ಒಳರಸ್ತೆಗಳು ಮಾತ್ರ ತೀವ್ರ ಹದಗೆಟ್ಟಿವೆ. ಭೋಜರಾವ್ ಲೇನ್, ಭಗವತಿ ನಗರದ ಮುಖ್ಯರಸ್ತೆ (ಶಾಲ್ ಆಸ್ಪತ್ರೆ ರಸ್ತೆ), ಕಂಬ್ಳಕ್ರಾಸ್ ರಸ್ತೆ ಹೊಂಡ- ಗುಂಡಿಗಳಿಂದ ಆವೃತವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ತಂದೊಡ್ಡಿದೆ. ದಸರಾ ಆರಂಭಗೊಂಡ ಬಳಿಕ ಈಗ ತೇಪೆ ಹಚ್ಚುವ ಕೆಲವೆಡೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿನ ಸಂಚಾರ ದಿಢೀರ್ ಅಸ್ತವ್ಯಸ್ತಗೊಳ್ಳುತ್ತಿದೆ. ಅಲ್ಲದೇ ಮಣ್ಣಗುಡ್ಡೆ- ಕುದ್ರೋಳಿ ಮುಖ್ಯ ರಸ್ತೆಗೆ ಸೇರುವ ಒಳ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದರಿಂದ ಸಂಚಾರಕ್ಕೆ ತೀವ್ರ ತೊಡಕುಂಟಾಗುತ್ತದೆ. ಹೀಗಾಗಿ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.
ಸತೀಶ್ ಶೆಟ್ಟಿ ,
ಕೊಡಿಯಾಲಬೈಲ್