ನೈವೇದ್ಯ


Team Udayavani, Mar 17, 2019, 12:30 AM IST

hhhh.jpg

ಹೊರಗೆ ರಾಚುತ್ತಿದ್ದ ಬಿಸಿಲಿಗೆ ಪೈಪೋಟಿ ಕೊಡುವಂತೆ ಅವಳ ಒಳಗಿನ ತಳಮಳವು ಉರಿ ಹೆಚ್ಚಿಸತೊಡಗಿತ್ತು. ಉಟ್ಟಿದ್ದ ಭಾರಿ ರೇಶಿಮೆ ಸೀರೆ, ಒತ್ತಾಯಿಸಿ ಅತ್ತೆ ಹೇರಿಸಿದ್ದ ಒಡವೆ, ಹಣೆಯ ತುಂಬೆಲ್ಲ ಮುತ್ತುಗಟ್ಟಿ ಉರುಳುತ್ತಿದ್ದ ಬೆವರ ಹನಿಗಳು. ಫ್ಯಾನ್‌ ಹಾಕೋಣ ಎಂದರೆ ಗ್ಯಾಸ್‌ ಒಲೆಯಲ್ಲಿ ಹಾಲಿದೆ. ನಿನ್ನೆ ತಾನೆ ಆ ಮನೆಯನ್ನು ತುಂಬಿದ ನವವಧು ಅವಳು. ಏನು ಮಾಡಲೂ ಹಿಂಜರಿಕೆ, ಸಂಕೋಚ. ಅದರಲ್ಲೂ ಅವರದು ಪ್ರೇಮ ವಿವಾಹ ಬೇರೆ. ಹಾಗೆಂದು ಹಿರಿಯರ ಸಮ್ಮತಿಯಿಂದಲೇ ಮದುವೆ ಆಗಿದ್ದು. ಆದರೆ, ಆತನೋ ಉತ್ತರ ಭಾರತದವನಾಗಿದ್ದರೆ, ಈಕೆ ದಕ್ಷಿಣದ ಕಡೆಯವಳು. ಆದರೇನಂತೆ, ಮಗನ ಪ್ರೀತಿಯನ್ನು ಖುಶಿಯಿಂದ ಒಪ್ಪಿ$ಅವನ ಮನದನ್ನೆಯನ್ನು ತಮ್ಮ ಸೊಸೆಯನ್ನಾಗಿ ಅಪ್ಪಿ ಮನೆ ತುಂಬಿಸಿಕೊಂಡಿದ್ದರು ವರನ ಕಡೆಯವರು. 

“”ಮಗು ಸುಮನಾ, ನಮ್ಮಲ್ಲಿ ಮದುವೆಯಾದ ಮಾರನೆಯ ದಿವಸ ಹೊಸ ವಧು ಏನಾದರೂ ಒಂದು ಸಿಹಿತಿಂಡಿ ಮಾಡಿ ನಮ್ಮ ಕುಲದೇವರಾದ ನಂದಲಾಲನಿಗೆ ಭೋಗ ಒಪ್ಪಿಸಬೇಕಮ್ಮಾ. ನಿನಗೆ ತಿಳಿದಿರುವ ಯಾವುದೋ ಒಂದು ಸರಳ ತಿನಿಸು ಮಾಡಿದರೆ ಸಾಕು”. ಹಿಂದಿನ ದಿವಸ ಗೃಹಪ್ರವೇಶವಾದ ತಕ್ಷಣ, ತಮ್ಮ ಕೋಣೆಗೆ ಬಂದು ಕಾಲಿಗೆರಗಿದ್ದ ಮೊಮ್ಮಗನ ಪತ್ನಿಗೆ ಹೇಳಿದ್ದರು ಆ ಮನೆಯ ಹಿರಿಯ ವೃದ್ಧೆ ಅಂಬಾದೇವಿಯವರು. ಅವರ ಧ್ವನಿಯಲ್ಲಿ ಅಧಿಕಾರಯುತ ಆದೇಶಕ್ಕಿಂತ ಸ್ನೇಹಭರಿತ ಸೂಚನೆಯಂತಿತ್ತು. ಅಂಬಾದೇವಿ ಸುಮನಾಳ ಪತಿ ಸುಬೋಧನ ಅಜ್ಜಿ , ಅಂದರೆ ಅವಳತ್ತೆಯ ಅತ್ತೆಮ್ಮ. ಅಜ್ಜಮ್ಮರ ಆ ಮಾತು ಕೇಳಿದ್ದೇ ಅವಳ ಎದೆಯೊಮ್ಮೆ ಢವಗುಟ್ಟಿತ್ತು. ಆದರೆ, ರಾತ್ರಿ ಪತಿಯ ಪ್ರೇಮದೊಳಗೆ ಅದೆಲ್ಲ  ಮಗುಮ್ಮಾಗಿ ಮೆಲ್ಲನೆಲ್ಲೋ ಅಡಗಿ ಹೋಗಿತ್ತು. ಇಂದು ಕಣ್ತೆರೆದಾಗ, ಅಡುಗೆ ಮನೆಯಲ್ಲಿ ತಾನು ಸಿಹಿಪಾಕ ತಯಾರಿಸಬೇಕಾಗಿರುವುದು ಥಟ್ಟನೆ ನೆನಪಾಗಿದ್ದೇ ಅವಳ ಎದೆಯೊಳಗೆ ನಗಾರಿಯೇ ಬಡಿದಂತಾಗಿತ್ತು. 

ನವವಧುವಿನೊಂದಿಗೆ ಮನೆಯವರೆಲ್ಲರೂ ಸ್ನೇಹದಿಂದ ನಡೆದುಕೊಳ್ಳುತ್ತಿದ್ದರೂ, ಹೊಸ ಪರಿಸರ, ಅಪರಿಚಿತ ಮುಖಗಳು, ಆಡುವ ಭಾಷೆಯೊಳಗೂ ವಿಭಿನ್ನತೆ ತುಂಬಿದ್ದರಿಂದ ಅವಳಲ್ಲಿ ಆತಂಕ ಹೆಚ್ಚೇ ಆವರಿಸಿಕೊಂಡಿತ್ತು. ಎಳವೆಯಲ್ಲೇ ತಾಯಿಯನ್ನು ಕಳೆದುಕೊಂಡಿದ್ದವಳಿಗೆ ಆಸರೆ ಆಗಿದ್ದು ತಂದೆ ಗೋವಿಂದರಾಯರ ಸೋದರ ಸಂಬಂಧಿ ಅಚ್ಚಮ್ಮ. ಬಂಧು-ಬಳಗದಿಂದ ದೂರವಾಗಿದ್ದ ಅಚ್ಚಮ್ಮನಿಗೆ ಸುಮನಾಳೇ ಸರ್ವಸ್ವವಾಗಿದ್ದಳು. ದೊಡ್ಡ ಉದ್ಯಮಿಯಾಗಿದ್ದ ರಾಯರಿಗೋ ಮಗಳ ಮೇಲೆ ಅಪಾರ ಮಮಕಾರವಿದ್ದರೂ ಅದನ್ನು ಸಂಪೂರ್ಣ ತೋರಿಸಲು ಅವರ ವ್ಯಸ್ಥ ಕಾರ್ಯಗಳೇ ಕಟ್ಟಿಹಾಕುತ್ತಿದ್ದವು. ಆದರೂ ಬಿಡುವು ಮಾಡಿಕೊಂಡು ಪ್ರತಿ ದಿವಸ ಒಂದು ಹೊತ್ತಿನ ಊಟವನ್ನಾದರೂ ಅವಳೊಂದಿಗೇ ಮಾಡುವ, ಆ ಸಮಯದಲ್ಲಾದರೂ ಚುಟುಕಾಗಿ ಮಗಳನ್ನು ವಿಚಾರಿಸಿಕೊಳ್ಳುವುದನ್ನು ಮಾತ್ರ ಆದಷ್ಟು ತಪ್ಪಿಸುತ್ತಿರಲಿಲ್ಲ. ಇಂದೂ ಅಷ್ಟೇ, ಮದುವೆ ಗಲಾಟೆಯ ಓಡಾಟದಲ್ಲಿ ಅಚ್ಚಮ್ಮ ಅಸ್ವಸ್ಥರಾಗಿದ್ದರಿಂದ, ಮಗಳನ್ನು ಕಳುಹಿಸಿಕೊಡಲು ಇಷ್ಟು ದೂರ ತಾವೇ ಹೊರಟು ಬಂದಿದ್ದರು. ಅಳಿಯನ ಮನೆಯವರ ಸ್ನೇಹಪರತೆ ಕಂಡು ಆತಂಕಗೊಂಡಿದ್ದ ಅವರ ಮನಸಿಗೂ ನೆಮ್ಮದಿ ಉಂಟಾಗಿತ್ತು. ಬೀಗರ ಒತ್ತಾಯದಿಂದಲೇ ಮಗಳ ಕೈಯ ರುಚಿ ಮೆದ್ದು ಅಲ್ಲಿಂದ ಹೊರಡಲು ತಯಾರಾಗಿ ಕುಳಿತಿದ್ದರು.

ಇತ್ತ ಸುಮನಾಳು ಅಚ್ಚಮ್ಮನಿಂದ ಒಮ್ಮೆ ಯಾವಾಗಲೋ ಕಲಿತಿದ್ದ ಶಿರಾವನ್ನು ಮಾಡಿಟ್ಟಾಗಿತ್ತು. ಆದರೆ ಒಳಗೊಳಗೇ ಆತಂಕ. “”ಸಿಹಿ ಸರಿಯಾಗಿದೆಯೋ ಇಲ್ಲವೋ? ತೀರಾ ಸಪ್ಪೆಯಾಗಿದ್ದರೆ? ಇಲ್ಲಾ ಸಿಹಿ ಹೆಚ್ಚೇ ಹಾಕಿಬಿಟ್ಟಿದ್ದರೆ? ಛೇ, ಒಂದು ಚಮಚ ತಿಂದರೇನಾಗದಲ್ಲಾ… ಯಾರೂ ಒಳಗೆ ಬರುತ್ತಿಲ್ಲ ಈಗ… ತಾನು ರುಚಿ ನೋಡಿದರೆ ಯಾರಿಗೆ ಗೊತ್ತಾಗುವುದು?” ಎಂದವಳ ಮನಸ್ಸು ನೂರು ಸಲ ಆಕೆಯನ್ನು ದೂಕಿದ್ದರೂ ಅದೇನೋ ಅವಳಿಂದ ಹಾಗೆ ಮಾಡಲಾಗುತ್ತಿಲ್ಲ. “”ಛೇ, ಅಜ್ಜಮ್ಮನ ವಿಶ್ವಾಸಕ್ಕೆ ಧಕ್ಕೆ ತರುವುದೇ? ಪ್ರೀತಿಯಿಂದ ಬರಮಾಡಿಕೊಂಡು ಮನೆ ತುಂಬಿಸಿಕೊಂಡಿರುವವರ ಜೊತೆಗೆ ಹೊಸಬಾಳನ್ನು ಸುಳ್ಳಿನಿಂದ ಆರಂಭಿಸುವುದೇ? ಮೊದಲು ದೇವರಿಗೇ ನೈವೇದ್ಯ ಮಾಡಬೇಕು. ಆಮೇಲೆ ಎಲ್ಲರಿಗೂ ಹಂಚಬೇಕು ಎಂದು ಹಿರಿಯರು ತನಗೆ ತಾಕೀತು ಮಾಡಿರು ವಾಗ ಯಾರ ಕಣ್ತಪ್ಪಿಸಿದರೂ ಸರ್ವಾಂತರ್ಯಾಮಿಯಾಗಿರುವ ಅವನ ಮಂಗಮಾಡಬಹುದೇ? ತನಗೆ ಇದರಲ್ಲೆಲ್ಲ ನಂಬಿಕೆಯಿದೆಯೋ ಇಲ್ಲವೋ ಅದು ಬೇರೆ ಮಾತು, ಇಷ್ಟಕ್ಕೂ ಇದು ತನ್ನ ವಿಶ್ವಾಸಕ್ಕಿಂತ ತನ್ನ ಮೇಲೆ ನಂಬಿಕೆ ಇಟ್ಟವರ ವಿಶ್ವಾಸದ ಪ್ರಶ್ನೆ! ಊಹೂಂ, ತಾನು ರುಚಿ ನೋಡಬಾರದು” ಎಂದು ನಿಶ್ಚಯಿಸಿ ಶಿರಾ ಮಾಡಿದ್ದ ಬೋಗುಣಿಯನ್ನು ಮತ್ತೆಮತ್ತೆ ಬಗ್ಗಿ ನೋಡಿದಳು. ಕೇಸರಿ, ಗೋಡಂಬಿ, ದ್ರಾಕ್ಷಿ ಹಾಕಿ, ಶುದ್ಧ ಹಸುವಿನ ತುಪ್ಪದಲ್ಲಿ ರವೆಯನ್ನು ಹುರಿದು ಮಾಡಿದ್ದ ಹೊಂಬಣ್ಣದ ಶಿರಾವೇನೋ “ಹೆದರದಿರು ಹುಡುಗಿ ನಾನು ಚೆನ್ನಾಗಿಯೇ ತಯಾರಾಗಿದ್ದೇನೆ’ ಎಂಬ ಭರವಸೆಯನ್ನು , ತುಪ್ಪವನ್ನು ಹೊರಸೂಸುತ್ತ ಪಾತ್ರೆ ತುಂಬಿಕೊಂಡಿದ್ದರೂ ಅವಳೊಳಗೆ ಮಾತ್ರ ನಿಲ್ಲದ ಆತಂಕ! ಹೊರಗೊಮ್ಮೆ ಬಂದು ಎಲ್ಲರ ಕಡೆಗೆ ನಸುನಗುತ್ತಲೇ, ಕಿರುಗಣ್ಣಿನಿಂದ ಸುಬೋಧನಿದ್ದ ಕಡೆಗೆ ನೋಡಿದರೆ, ಆತನೋ ತನ್ನ ಓರಗೆಯ ಬಳಗದವರೊಂದಿಗೆ ಹಾಸ್ಯ ಮಾಡಿಕೊಂಡು ನಿರಾಳನಾಗಿ ಕುಳಿತಿದ್ದ. ಇದನ್ನು ಕಂಡಿದ್ದೇ ಅವಳೊಳಗೆ ಸಿಟ್ಟು ಭುಗಿಲ್ಲೆದ್ದಿತು. 

“”ಛೇ, ಪಿಕ್ಚರಿನಲ್ಲೆಲ್ಲ ಇಂಥ ಸಮಯದಲ್ಲಿ ಪತಿಯಾದವನು ಪ್ರೀತಿಯ ಪತ್ನಿಗೆ ಸಹಕರಿಸಲು ಗುಟ್ಟಾಗಿ ಒಳ ಬರುತ್ತಾನೆ, ಸಹಾಯ ಮಾಡುತ್ತಾನೆ. ಇಂವ ನೋಡಿದರೆ ತನ್ನ ಬಗ್ಗೆ ಚಿಂತೆಯೇ ಇಲ್ಲದಂತಿದ್ದಾನಲ್ಲಾ! ಒಮ್ಮೆ ನೆಪ ಮಾಡಿ ಒಳಗೆ ಬಂದಿದ್ದರೆ ಶಿರಾವನ್ನು ಇವನಿಗೂ ತೋರಿಸಿ ಸರಿಯಾಗಿದೆ ಅನ್ನಿಸ್ತಿದ್ಯಾ ಎಂದು ಕೇಳುತ್ತಿದ್ದೆ. ಅಂವ ಚೆನ್ನಾಗಾದಂತೆ ಕಾಣಿಸ್ತದೆ ಎಂದಿದ್ದರೂ ಸಾಕಿತ್ತು, ಎಷ್ಟೋ ಧೈರ್ಯ ಬರ್ತಿತ್ತಪ್ಪ . ಇರ್ಲಿ, ಆ ಶಿರಾ ಹುರಿದ ಸೌಟಿನಲ್ಲೇ ರಾತ್ರಿ ಅವನ ತಲೆಗೊಂದು ಕುಟ್ಟದಿದ್ದರೆ ನನ್ನ ಹೆಸರಲ್ಲ” ಎಂದುಕೊಳ್ಳುತ್ತ ಒಳಗೆ ಹೋಗಿ ಅಡುಗೆ ಕಟ್ಟೆಯನ್ನೊಮ್ಮೆ ಗುದ್ದಿ ಒಳಗಿನ ಸಿಟ್ಟನ್ನೆಲ್ಲ ಹೊರದಬ್ಬಿದಳು ಸುಮನಾ.

ಸಮಯ ಜಾರುತ್ತಿದ್ದಂತೇ ಅವಳಲ್ಲಿ ಚಡಪಡಿಕೆ ಹೆಚ್ಚಾಗತೊಡಗಿತ್ತು. ಇನ್ನೇನು ಪೂಜೆ ಆರಂಭವಾಗುತ್ತದೆ, ನೈವೇದ್ಯ ತರಲು ಹೇಳುತ್ತಾರೆ. “ಕೃಷ್ಣಾರ್ಪಣಮಸು’¤ ಎಂದಾದ ತಕ್ಷಣ ಎಲ್ಲರಿಗೂ ಹಂಚಲು ಹೇಳುತ್ತಾರೆ. “ದೇವಾ, ಈ ಮನೆಯಲ್ಲಿ ನನ್ನ ಮರ್ಯಾದಿ ಕಾಪಾಡಪ್ಪ” ಎಂದು ಮೌನವಾಗಿ ಮೊರೆಯಿಟ್ಟಳು. ಯಾರೋ ಕರೆದಂತಾಗಿ ಹೊರ ಬಂದವಳನ್ನು ಅತ್ತೆ ತಮ್ಮ ಬಳಿ ಕೈ ಹಿಡಿದು ಕೂರಿಸಿಕೊಂಡು “ನೈವೇದ್ಯಕ್ಕೆಲ್ಲ ತಯಾರಾಯಿತೇ’ ಎಂದು ಕೇಳಲು, ಮೆಲ್ಲನೆ ನಗು ಸೂಸಿ ತಲೆಯಾಡಿಸಿದಳು. ಎದುರಿಗಿದ್ದ ಸೋಫಾದಲ್ಲಿ ಕುಳಿತಿದ್ದ ಗೋವಿಂದ ರಾಯರು ಮಗಳ ಹೊಸ ಸಂಬಂಧಿಕರೊಂದಿಗೆ ಸ್ನೇಹದಿಂದ ಸಂಭಾಷಿಸುತ್ತಿದ್ದರು. ಆ ನಡುವೆಯೂ ಒಂದೆರಡು ಬಾರಿ ಅವರ ದೃಷ್ಟಿ ಮಗಳ ಕಡೆಗೂ ಹಾಯ್ದಿತ್ತು. 

ಸುಮನಾಳಿಗೋ “ಎಲ್ಲರೂ ಸಮಾಧಾನದಲ್ಲಿರುವಾಗ, ತನಗೇಕೆ ಇಷ್ಟು ತಳಮಳವೋ? ಯಾವತ್ತೂ ಹೀಗೆ ಒದ್ದಾಡಿದ್ದೇ ಇಲ್ಲವಲ್ಲ. ಇಂದೇಕೆ ಈ ಪರಿ!’ ಎಂದೆಲ್ಲ ಅನ್ನಿಸಿ ದುಃಖ ಉಕ್ಕಿಬಂದಂತಾಗಿತ್ತು. ಯಾಕೋ ಗತಿಸಿದ್ದ ಅಮ್ಮನ ನೆನಪು ಧುತ್ತನೆರಗಿ ಬರಲು, ಸಿಹಿಯನ್ನು ಬೇರೆ ಪಾತ್ರೆಗೆ ಹಾಕಿ ತರುವೆನೆಂಬ ನೆಪ ಹೇಳಿ ಅಲ್ಲಿಂದೆದ್ದು ಅಡುಗೆ ಮನೆಗೆ ಬಂದು ಬಿಟ್ಟಳು. ಸ್ಟೋರ್‌ ರೂಮಿಗೆ ತಾಗಿಕೊಂಡಿದ್ದ ಪುಟ್ಟ ಬಾಲ್ಕನಿಗೆ ಹೋಗಿ ನಿಂತವಳೇ ಕಣ್ಮುಚ್ಚಿ ನಿಶ್ಶಬ್ದವಾಗಿ ದುಃಖವನ್ನು ಹೊರಗೆ ಹರಿಯಬಿಟ್ಟಳು. ಒಳಗಿನ ದುಗುಡದ ಭಾರ ಕೊಂಚ ಕಡಿಮೆಯಾಗತೊಡಗಿತು. ಆಗಲೇ ಆಕೆಗೆ “ಸುಮಾ…’ ಎಂಬ ಪಿಸುಧ್ವನಿ ಕೇಳಿಬರಲು, ಫ‌ಕ್ಕನೆ ಕಣ್ಣೊರೆಸಿಕೊಂಡು ಮಬ್ಬುಗಣ್ಣಲ್ಲೇ ಅತ್ತಿತ್ತ ನೋಡಿದವಳಿಗೆ, ಬಾಲ್ಕನಿಯ ಸರಳುಗಳನ್ನು ಹಿಡಿದುಕೊಂಡು ಇಣುಕುತ್ತಿದ್ದ ಅಪ್ಪನ ಮುಖ ಕಂಡಿತ್ತು!

ಕಂಪೌಂಡಿನ ಪುಟ್ಟ ಕಟ್ಟೆಯ ಮೇಲೆ ತಮ್ಮ ದಢೂತಿ ದೇಹದ ಭಾರವನ್ನು ಸರಿದೂಗಿಸಿಕೊಳ್ಳಲು ಹೇಗೋ ಹೆಣಗಾಡುತ್ತ¤, ಅಷ್ಟೇನೂ ಎತ್ತರದಲ್ಲಿರದ ಬಾಲ್ಕನಿಯ ಸರಳನ್ನು ಹಿಡಿದುಕೊಂಡು ಪ್ರಯಾಸದಿಂದ ನಿಂತಿದ್ದ ಅಪ್ಪನ ಕಂಡು ಸುಮನಾ ಅಚ್ಚರಿಯಿಂದ ಬೆಚ್ಚಿಬಿದ್ದಳು.

“”ಅಯ್ಯೋ ಅಪ್ಪಾ ನೀವು ಹೀಗೆ… ಇಲ್ಲಿ! ಅಲ್ಲಾ ಏನಾಯ್ತು?” ಎಂದು ತಡವರಿಸಿದವಳ ಮಾತನ್ನು ಅರ್ಧದಲ್ಲೇ ತುಂಡರಿಸಿದ ರಾಯರು, “”ಸುಮಾ ಹೆಚ್ಚು ಸಮಯವಿಲ್ಲ. ಫೋನ್‌ ಮಾಡಲು ಒಳಗೆ ಸಿಗ್ನಲ್‌ ಸರಿ ಸಿಗ್ತಿಲ್ಲ ಎಂದು ನೆಪ ಹೇಳಿ ಹೊರಗೆ ಬಂದಿದ್ದೇನೆ. ಮೊದುÉ ನಂಗೆ ನೀ ಅದೇನು ಸಿಹಿತಿಂಡಿ ಮಾಡಿದ್ದೀಯೋ ಅದನ್ನು ಒಂದು ಚಮಚದಲ್ಲಿ ತಂದು ಕೊಡು. ಬಾಕಿ ಮಾತು ಆಮೇಲೆ. ಹೋಗು ಮೊದುÉ ಯಾರಾದ್ರೂ ಒಳ್ಗೆ ಬರೋ ಮುಂಚೆ ತಾ” ಎಂದು ಬಡಬಡಿಸುತ್ತ ಅವಸರಿಸಲು, ಹೆಚ್ಚು ಆಲೋಚನೆಗೆ ಅವಕಾಶವಿಲ್ಲದ ಆಕೆ ದಡಬಡನೆ ಒಳಗೆ ಹೋಗಿ ಒಂದು ಚಮಚ ಶಿರಾ ತಂದು ಅವರ ಬಾಯೊಳಗೆ ಇಡಲು ಅವರು ಅದರ ಪ್ರತಿಯೊಂದು ಕುಸುಮವನ್ನೂ ಚಪ್ಪರಿಸಿ ತಿನ್ನುತ್ತ, “”ಸುಮಾ, ಎಲ್ಲಾ ತುಂಬಾ ಚೆನ್ನಾಗಿದೆಯಮ್ಮಾ, ಆದರೆ ಸ್ವಲ್ಪ ಸಿಹಿ ಕಡಿಮೆಯಾಗಿದೆ ಅಷ್ಟೇ. ಎರಡೇ ಎರಡು ಚಮಚ ಸಕ್ಕರೆ ಹಾಕಿದರೆ ಸಾಕು. ಅದನ್ನು ಸೇರಿಸಿ ತಗೊಂಡಾº ಹೊರಗೆ” ಎಂದವರೇ ಅವಳ ಪ್ರತಿಕ್ರಿಯೆಗೂ ಕಾಯದೇ ಹೇಗೋ ಸಂಭಾಳಿಸಿಕೊಂಡು ಕೆಳಗಿಳಿದು ದುಡು ದುಡು ಮನೆಯೊಳಗೆ ನಡೆದುಬಿಟ್ಟರು. 

ಮುಂದಿನದೆಲ್ಲ ಸಾಂಗವಾಗಿ ನಡೆದುಹೋಗಿತ್ತು. ನೈವೇದ್ಯದ ನಂತರ ಸುಮನಾಳೇ ಬಡಿಸಿ ಕೊಟ್ಟ ಸಿಹಿ ತಿನಿಸನ್ನು ಎಲ್ಲರೂ ಖುಷಿಯಿಂದ ಮೆದ್ದು ಹೊಸ ಸೊಸೆಗೆ ಉಡುಗೊರೆಯನ್ನಿತ್ತು ಆಶೀರ್ವದಿಸಿದ್ದರು. ಎಲ್ಲರಿಗೂ ಹಂಚಿಯಾದ ಮೇಲೆ ಅತ್ತೆಯ ಆದೇಶದ ಮೇರೆಗೆ ಅಸೌಖ್ಯದಿಂದ ಕೋಣೆಯೊಳಗೇ ಇದ್ದ ಅಂಬಾದೇವಿಯವರಿಗೆ ಪುಟ್ಟ ಕಟೋರಿಯಲ್ಲಿ ಶಿರಾವನ್ನು ತುಂಬಿ ಕೊಡಲು ಬಂದಳು ನವವಧು.

“”ತಾ ಮಗು ಇತ್ತ, ಕಾಯ್ತಿದ್ದೆ ಈ ಕ್ಷಣಕ್ಕೇ ನಾನು… ಸಿಹಿ ತಿನ್ನೋಕೆ ಇವತ್ತೂಂದು ದಿವಸ ಒಪ್ಪಿಗೆ ಸಿಕ್ಕಿದೆ ಈ ಮುದುಕಿಗೆ ನೋಡು” ಎಂದು ಬೊಚ್ಚುಬಾಯಿ ತೆರೆದು ಪ್ರೀತಿಯಿಂದ ಅವಳನ್ನು ಬಳಿ ಕೂರಿಸಿಕೊಂಡರು ಅಜ್ಜಮ್ಮ. “”ಮಗೂ, ಮನೆಗೆ ಬಂದ ಹೊಸ ಮದುಮಗಳು ತನ್ನ ಕೈಯಾರೆ ಆಸ್ಥೆಯಿಂದ ಸಿಹಿ ಮಾಡಿ ನೈವೇದ್ಯ ಮಾಡಿದಾಗ, ಏನಾದ್ರೂ ಒಪ್ಪು$ತಪ್ಪು$ಆದರೂ ಆ ನಂದಲಾಲ ಸರಿ ಮಾಡ್ತಾನಂತೆ. ಅವನ ಕೃಪಾದೃಷ್ಟಿಯಿಂದಲೇ ಅವಳ ಹೊಸ ಬದುಕು ಬಂಗಾರವಾಗೋದು ಅಂತ ನನ್ನಜ್ಜಿ ನಂಗೆ ಹೇಳ್ತಿದ್ರಮ್ಮ. ಇವತ್ತೆಲ್ಲ ಸರಿ ಆಯ್ತು ತಾನೇ? ಪೂಜೆ, ನೈವೇದ್ಯವೆಲ್ಲ ಸಾಂಗವಾಗಿ ನೆರವೇರಿತಲ್ಲ?” ಎಂದು ಕೇಳಲು, ಕೊಂಚವೂ ತಡವರಿಸದೇ ವಿಶ್ವಾಸದಿಂದ ಸುಮನಾ, “ಹೌದು ಅಜ್ಜಮ್ಮಾ, ಮೊದಲ ತುತ್ತನ್ನು ನನ್ನ ದೇವರಿಗೇ ತಿನ್ನಿಸಿದ್ದೇನೆ? ಸಿಹಿ ಸರಿಯಾಗಿದೆ ಅಲ್ಲವೇ?” ಎಂದೆನ್ನಲು, ಅವರು “”ಓಹ್‌ ನೀನಿನ್ನೂ ತಿಂದಿಲ್ಲವೆ? ತಗೋ ಇದರಲ್ಲೇ ಸ್ವಲ್ಪ$ರುಚಿ ನೋಡು” ಎನ್ನುತ್ತ ಅವಳ ಬಾಯಿಗೆ ಒಂದು ಚಮಚ ಸಿಹಿಯನ್ನು ಹಾಕಲು ಮನೆಯ ದೇವರ ಕೋಣೆಯೊಳಗೆ ಸಿಂಗಾರಗೊಂಡಿದ್ದ ಅಜ್ಜಮ್ಮನ ನಂದಲಾಲನ ಮೂರ್ತಿಯ ಶಿರದಿಂದ ಹಳದಿ ಹೂವೊಂದು ಮೆಲ್ಲನುರುಳಿ ಪ್ರಸಾದವಾಯಿತು.

– ತೇಜಸ್ವಿನಿ ಹೆಗಡೆ

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.