ಜಗತ್ತಿನ ಸುಂದರ ನಗರವಾಗಲು ಹೊರಟಿರುವ ಕಿಗಾಲಿ 


Team Udayavani, Apr 28, 2018, 6:00 AM IST

1.jpg

ಸಮೃದ್ಧ ನಗರಬೇಕೋ, ಸುಂದರ ನಗರಬೇಕೋ ಎಂಬ ಚರ್ಚೆ ಬಹಳ ಹಳೆಯದ್ದು. ಈಗ ಏನಿದ್ದರೂ ಸುಸ್ಥಿರ ನಗರದ ಬಗ್ಗೆಯೇ ಮಾತು. ಆಫ್ರಿಕಾದ ಕಿಗಾಲಿ ಅಂಥದೊಂದು ಹೆಜ್ಜೆ ಇಡಲು ಹೊರಟಿದೆ.

ಆಫ್ರಿಕಾದ ಕಿಗಾಲಿ ನಗರದ ಬಗ್ಗೆ ಕೇಳಿರಬಹುದು. ಅದು ರುವಾಂಡಾ ಪ್ರಾಂತ್ಯದ ರಾಜಧಾನಿ. ಪರ್ವತ ಪ್ರದೇಶದಲ್ಲಿರುವ ಪುಟ್ಟ ನಗರವು ಇತ್ತೀಚೆಗೆ ಹೆಚ್ಚು ಚರ್ಚೆಗೊಳಗಾಗುತ್ತಿರುವುದು ಅದರಲ್ಲಿನ ಸ್ವತ್ಛತೆ ಬಗೆಗೆ. ಒಂದು ದಶಕದ ಹಿಂದಿನಿಂದಲೇ ಕಿಗಾಲಿಯಲ್ಲಿ ಸ್ವಚ್ಛತಾ ಅಭಿಯಾನ ಆರಂಭವಾಗಿದೆ. ಇದರ ಪರಿಣಾಮವೆಂಬಂತೆ ಈಗ ಆಫ್ರಿಕಾದಲ್ಲೇ ಕಿಗಾಲಿ ಅತ್ಯಂತ ಸ್ವತ್ಛ ನಗರವೆಂದು ಖ್ಯಾತಿ ಪಡೆದಿದೆ. ಈ ವರ್ಷದ ಆರಂಭದಲ್ಲಿ ದಾವೊಸ್‌ನಲ್ಲಿ ನಡೆದ ವಿಶ್ವ ಅರ್ಥಿಕ ವೇದಿಕೆಯ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯ ಪಾರಿಸರಿಕ ಕಾರ್ಯಕ್ರಮದ ಮುಖ್ಯಸ್ಥ ಎರಿಕ್‌ ಸೊಲೆಮ್‌ ಸಹ ಈ ವಿಷಯವನ್ನು ಪ್ರಸ್ತಾಪಿಸಿದ್ದರು. “ಕಿಗಾಲಿ ಜಗತ್ತಿನಲ್ಲೇ ಅತ್ಯಂತ ಸ್ವತ್ಛ ನಗರ’ ಎಂದು ಉಲ್ಲೇಖೀಸಿದ್ದರು. ಈ ಎಲ್ಲವೂ ಕಿಗಾಲಿ ಬಗ್ಗೆ ಸಣ್ಣದೊಂದು ಕುತೂಹಲ ಕೆರಳಿಸಿದೆ.

ಕಿಗಾಲಿ ಈಗಾಗಲೇ ಹೇಳಿದಂತೆ ರುವಾಂಡಾ ಪ್ರಾಂತ್ಯದ ರಾಜಧಾನಿ. ಈ ನಗರ ರುವಾಂಡಾದ ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ರಾಜಧಾನಿ. 1962ರಲ್ಲಿ ರುವಾಂಡಾ ಸ್ವಾತಂತ್ರ್ಯಗೊಂಡ ಬಳಿಕ ಎಲ್ಲ ಚಟುವಟಿಕೆಗಳೂ ಈ ನಗರದಲ್ಲೇ ಕೇಂದ್ರೀಕೃತ. ಹಾಗಾಗಿ ದೊಡ್ಡವರು, ಪ್ರತಿಷ್ಠಿತರೆಲ್ಲಾ ಇರುವುದು ಇಲ್ಲಿಯೇ. ಕಿಗಾಲಿಯ ಶೇ.70ರಷ್ಟು ನಗರ ಪ್ರದೇಶವನ್ನು ಸ್ಥಳೀಯ ಆಡಳಿತ (ಮುನಿಸಿಪಾಲಿಟಿ) ನಿರ್ವಹಿಸುತ್ತದೆ. ಒಟ್ಟೂ ಜನಸಂಖ್ಯೆ ಸುಮಾರು 12 ಲಕ್ಷ. ಪರ್ವತ ಶ್ರೇಣಿ ಹಾಗೂ ಕಣಿವೆ ಪ್ರದೇಶಗಳಿಂದ ಕೂಡಿರುವ ನಗರದಲ್ಲಿ ಸದ್ಯಕ್ಕೆ ಬೀಸುತ್ತಿರುವುದು ಸ್ವತ್ಛತೆಯ ತಂಗಾಳಿ. ಇದರ ಮಧ್ಯೆ ಸಣ್ಣ ಸಣ್ಣ ಬಿರುಗಾಳಿಯೂ ಬೀಸಿದೆ. ಅದಕ್ಕೂ ಕಾರಣಗಳಿವೆ. 

2009ರ ಸುಮಾರಿನಲ್ಲಿ ಸ್ಥಳೀಯ ಆಡಳಿತ ನಗರವನ್ನು ಸುಂದರಗೊಳಿಸುವ ಭಾಗವಾಗಿ ಕೊಳೆಗೇರಿಗಳನ್ನು ಸ್ಥಳಾಂತರ ಗೊಳಿಸಲು ನಿರ್ಧರಿಸಿತು. ಅವುಗಳನ್ನೆಲ್ಲಾ ಬೇರೆಡೆಗೆ ಸ್ಥಳಾಂತರಿಸಿ, ಒಂದಿಷ್ಟು ಸೌಲಭ್ಯ ಕಲ್ಪಿಸಲಾಯಿತು. ಬಳಿಕ 2013ರಲ್ಲಿ ಮಾಸ್ಟರ್‌ ಪ್ಲಾನ್‌ ರೂಪಿಸಲಾಯಿತು. ಕಟ್ಟುನಿಟ್ಟಾಗಿ ಜಾರಿಗೊಳಿಸುವ ಹಂಬಲವಿತ್ತು. ಅದರಂತೆ ಕಾರ್ಯೋನ್ಮುಖವಾಯಿತು ಸ್ಥಳೀಯ ಆಡಳಿತ. ಸಮುದಾಯದ ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಪ್ರಮುಖ ಸೂತ್ರವಾಗಿಸಿಕೊಳ್ಳಲಾಯಿತು. ಒಂದು ಒಳ್ಳೆಯ ಆರೋಗ್ಯಕರ ನಗರಕ್ಕೆ ಬೇಕಾಗುವ ಎರಡೂ ಲಕ್ಷಣಗಳಿವು. ಸಮುದಾಯದ ಸಾಮಾಜಿಕ ಒಳಗೊಳ್ಳುವಿಕೆ ನಗರದ ಆಂತರಿಕ ಸೌಂದರ್ಯವನ್ನು ಹಿಗ್ಗಿಸುವಂಥದ್ದು. ಸುಸ್ಥಿರ ಅಭಿವೃದ್ಧಿ ನಗರದ ಭವಿಷ್ಯವನ್ನು ಕಾಯುವಂಥದ್ದು. ಸುಸ್ಥಿರ ಅಭಿವೃದ್ಧಿಯ ಕಲ್ಪನೆ ಇರದ ನಗರ ಎಂದಿಗೂ ಅಲ್ಪಾಯುಷಿ. 

ಎರಡೇ ಸೂತ್ರ
ಇದೇ ಎರಡು ಸೂತ್ರದಲ್ಲಿ ರೂಪಿತವಾದ ಮಾಸ್ಟರ್‌ ಪ್ಲಾನ್‌ನಲ್ಲಿ ಹೆಚ್ಚಿನ ಗಮನ ಕೊಟ್ಟದ್ದು ತ್ಯಾಜ್ಯ ನಿರ್ವಹಣೆ ಕುರಿತಾಗಿ. ಅದರೊಂದಿಗೆ ಸಂಚಾರ ದಟ್ಟಣೆಯ ನಿಯಂತ್ರಣ. ಅಲ್ಲಿಗೇ ಮುಗಿಯಲಿಲ್ಲ, ಹಸಿರು ಸಾಮಾಜಿಕ ಕಾನನ ನಿರ್ಮಾಣ. ಹೀಗೆ ಒಂದೊಂದೇ ಉಪಕ್ರಮಗಳನ್ನು ಜಾರಿಗೊಳಿಸಲಾಯಿತು. ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆಯ ಲೇಖನವೊಂದರಲ್ಲಿ ಉಲ್ಲೇಖೀಸಿದಂತೆ, ಸುಮಾರು 76 ದಶಲಕ್ಷ ಡಾಲರ್‌ಗಳನ್ನು ಚಿಕ್ಕ ರಸ್ತೆಗಳನ್ನು ಅಗಲವಾಗಿಸಲು ಬಳಸಿತು. ನಗರದ ಎಲ್ಲ ರಸ್ತೆಗಳನ್ನು ಸಾಕಷ್ಟು ವಿಸ್ತಾರಗೊಳಿಸಿತು. ಯಾವುದೇ ಕಾರಣಕ್ಕೂ ಟ್ರಾಫಿಕ್‌ ಜಾಮ್‌ ಉದ್ಭವಿಸದ ಹಾಗೆ ಎಚ್ಚರಿಕೆ ವಹಿಸಲಾಯಿತು. 

ಅನಂತರ ಸಾರ್ವಜನಿಕ ಸಾರಿಗೆ ಸೇವೆಯನ್ನು ಸುಧಾರಿಸಲು ಗಮನಹರಿಸಿತು. ಮಹಾನಗರ ಮತ್ತು ಉಪನಗರಗಳ ಮಧ್ಯೆ ಸಾರಿಗೆ ಸೇವೆಯನ್ನು ಹೆಚ್ಚಿಸಿತು. ಆ ಮೂಲಕ ಸಾರ್ವಜನಿಕರು ಹೆಚ್ಚು ಹೆಚ್ಚು ಸಾಮೂಹಿಕ ಸಾರಿಗೆ ಸೇವೆಯನ್ನು ಬಳಸುವಂತೆ ಪ್ರೇರೇಪಿಸಿತು. ಕೈಗಾರಿಕಾ ಪ್ರದೇಶವೆಂಬ ಕಿಷ್ಕಿಂಧೆಯಲ್ಲಿದ್ದ ಹಲವು ಕಾರ್ಖಾನೆಗಳನ್ನು ಹೊಸ ಆರ್ಥಿಕ ವಲಯವನ್ನು ಸ್ಥಾಪಿಸಿ ಸ್ಥಳಾಂತರಿಸಲು ಕ್ರಮ ಕೈಗೊಂಡಿತು. ಇವೆಲ್ಲದರ ಮಧ್ಯೆ ನಗರ ಪ್ರದೇಶದ ಬೀದಿ ಬದಿಯಲ್ಲಿದ್ದ ಸುಮಾರು ಎರಡು ಸಾವಿರದಷ್ಟು ಸಣ್ಣ ವ್ಯಾಪಾರಿಗಳನ್ನು ಬೇರೆಡೆಗೆ ಸ್ಥಳಾಂತರಿಸಿತು. ಈ ಸಂದರ್ಭದಲ್ಲಿ ಕೆಲವೆಡೆ ವಿರೋಧವನ್ನು ಎದುರಿಸಬೇಕಾಯಿತು. ನಮ್ಮ ಹೊಟ್ಟೆ ಮೇಲೆ ಹೊಡೆಯುವ ಅಭಿವೃದ್ಧಿ ಬೇಕಿಲ್ಲ ಎಂದೂ ಬಹಳಷ್ಟು ಜನ ಧ್ವನಿ ಎತ್ತಿದರು. ಆದರೂ ಸ್ಥಳೀಯ ಆಡಳಿತ ಮಾಸ್ಟರ್‌ ಪ್ಲಾನ್‌ ಅನುಷ್ಠಾನದಲ್ಲಿ ತೊಡಗಿದೆ.

ಜನಪ್ರಿಯವಾಗಿದ್ದು ಹೇಗೆ?
ಹೀಗೆಲ್ಲಾ ವಿರೋಧವಿದ್ದರೂ ಕಿಗಾಲಿ ಸ್ವತ್ಛ ನಗರವೆಂದು ಜನಪ್ರಿಯವಾಗಿದ್ದು ಹೇಗೆ ಎಂಬ ಪ್ರಶ್ನೆಯೂ ಉದ್ಭವಿಸಿತ್ತು. ಆದರೆ ಕಿಗಾಲಿಯನ್ನು ಜನಪ್ರಿಯತೆಯ ತುತ್ತತುದಿಗೆ ಕೊಂಡೊಯ್ದದ್ದು ಹಸಿರು ಕ್ರಮಗಳು. ಕೊಳಚೆಯಿಂದ ಬಯೋಗ್ಯಾಸ್‌ ಉತ್ಪಾದನೆಯಂಥ ಕೆಲವು ಪರಿಸರಸ್ನೇಹಿ ಕ್ರಮಗಳು. ನಗರಗಳಲ್ಲಿ ಕಸ ಸಂಗ್ರಹ ಸ್ಥಳಗಳ ನಿರ್ಮಾಣ, ಸಮರ್ಪಕ ತ್ಯಾಜ್ಯ ವಿಲೇವಾರಿ, ಸಮುದಾಯ ಉದ್ಯಾನಗಳಂಥ ಕಡೆ ಗಮನಹರಿಸಿತು. ಶೌಚಾಲಯಗಳ ನಿರ್ಮಾಣ ಹಾಗೂ ಕುಡಿಯುವ ನೀರಿನ ಪೂರೈಕೆಗೂ ಗಮನಕೊಟ್ಟಿತು. ಅಲ್ಲಿನ ಸರಕಾರವೇ ಹೇಳುವಂತೆ, ಶೇ. 90ರಷ್ಟು ಮನೆಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯವಿದೆಯಂತೆ. 2022ರೊಳಗೆ ಸುಮಾರು 300 ದಶಲಕ್ಷ ಡಾಲರ್‌ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ರೂಪಿಸಲು ಹೊರಟಿದೆ. 

ನಮ್ಮ ದೃಷ್ಟಿಯಲ್ಲಿ ಆಫ್ರಿಕಾವೆಂದ ಕೂಡಲೇ ಕಣ್ಣ ಮುಂದೆ ಬರುವುದು ಬಡತನ. ಅಂಥದ್ದರ ಮಧ್ಯೆ ಇಂಥದೊಂದು ನಗರ ರೂಪುಗೊಳ್ಳುತ್ತಿರುವುದು ಅಚ್ಚರಿಯೆಂದೇ ತೋರುತ್ತದೆ. ಆದರೆ ಅಭಿವೃದ್ಧಿಯ ನೆಪದಲ್ಲಿ ಸ್ಥಳಾಂತರದ ಕ್ರಮ ಎಳ್ಳಷ್ಟೂ ಒಳ್ಳೆಯದೆನಿಸದು. ಒಂದು ವೇಳೆ ತೀರಾ ಅನಿವಾರ್ಯ ಸ್ಥಿತಿ ಉದ್ಭವಿಸಿದಾಗಲೂ ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು. ನಮ್ಮ ಹಲವು ನಗರಗಳಲ್ಲಿ ಈ ಸಮಸ್ಯೆ ಇದೆ. ಕಾಡುಗಳ ಕಥೆ ಹೇಳುತ್ತಿಲ್ಲ. 

ನಾಡಿನಲ್ಲೇ ಸ್ಥಳಾಂತರಗೊಂಡ ಹಲವು ಕೊಳೆಗೇರಿಗಳಿಗೆ ಸರಿಯಾದ ಸೌಲಭ್ಯ ಇದುವರೆಗೂ ಸಿಕ್ಕಿಲ್ಲ. ಇಂಥ ನೂರಾರು ಉದಾಹರಣೆಗಳು ನಮ್ಮ ದೇಶದಲ್ಲಿವೆ. ಅದಕ್ಕೇ ಬಹುಶಃ ನಮ್ಮ ಸಿನಿಮಾಗಳಲ್ಲೂ ಒಂದು ಜನಪ್ರಿಯ ಮಾದರಿಯನ್ನು ತೋರಿಸುತ್ತೇವೆ. ಒಬ್ಬ ಪ್ರಭಾವಿ ಮತ್ತು ಅವನ ಚೇಲಾಗಳು ನಗರದಲ್ಲಿನ ಕೇಂದ್ರ ಪ್ರದೇಶದಲ್ಲಿರುವ ಕೊಳೆಗೇರಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಹವಣಿಸುತ್ತಾನೆ. ಜೆಸಿಬಿಯಂಥ ಯಂತ್ರಗಳನ್ನು ತರಿಸಿ ರಾತ್ರೋರಾತ್ರಿ ಎಲ್ಲ ಕುಟುಂಬಗಳನ್ನು ತೆರವುಗೊಳಿಸುತ್ತಾನೆ. ಇಲ್ಲವೇ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಇದರ ಮಧ್ಯೆ ಹೀರೋನೊಬ್ಬ ಉದ್ಭವಿಸಿ ಅವನಿಗೆ ಬುದ್ಧಿ ಕಲಿಸುವುದು ನಮ್ಮ ಸಿನಿಮಾದಲ್ಲಿ ಹೆಣೆಯಲಾಗುವ ಕಥೆ.

ನಾವು ಮರೆಯುವುದು ಇಲ್ಲೇ
ಕಿಗಾಲಿಯೂ ಸಹ ಜನರಿಂದ ಸ್ವಲ್ಪ ವಿರೋಧ ಎದುರಿಸಿದ್ದೂ ಇಲ್ಲಿಯೇ. ಮಾಸ್ಟರ್‌ ಪ್ಲಾನ್‌ ರೂಪಿಸುವಾಗ ಸಮುದಾಯದ ಒಳಗೊಳ್ಳುವಿಕೆಯೆಂಬುದನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸುವ ಬದಲು ಸ್ಥೂಲ ರಚನೆಯಾಗಿಟ್ಟುಕೊಂಡಿತು. ನಾವೂ ನಮ್ಮ ನಗರಗಳನ್ನು ಪುನರ್ರಚಿಸುವ ಸಂದರ್ಭದಲ್ಲಿ ಇಂಥದ್ದೇ ತಪ್ಪುಗಳನ್ನು ಎಸಗುತ್ತೇವೆ. ನಮಗೆ ಒಟ್ಟೂ ನಗರ ಸುಂದರವಾಗಿ ಕಾಣಬೇಕೆನಿಸುವುದೇ ಮುಖ್ಯವಾಗುತ್ತದೆ. ಅದನ್ನು ಹೊರತು ಪಡಿಸಿದಂತೆ ಬೇರೇನೂ ಬೇಕಾಗದು. ಹೊರಗಿನಿಂದ ಬರುವ ವಿದೇಶಿ ನಾಯಕರಿಗೆ ಸುಂದರ ಮತ್ತು ಅಭಿವೃದ್ಧಿಗೊಂಡ ನಗರವೆಂಬ ಹಿತಾನುಭವವನ್ನು ಕಟ್ಟಿಕೊಡಲು ಹತ್ತಿರದ ಕೊಳೆಗೇರಿಗಳನ್ನು ಸ್ಥಳಾಂತರಿಸುವಂಥ ಪ್ರಯತ್ನಗಳಂತೂ ಆಗಾಗ್ಗೆ ನಮ್ಮಲ್ಲಿ ನಡೆಯುತ್ತಲೇ ಇರುತ್ತದೆ. ಇಂಥ ಪ್ರಯೋಗಗಳಿಗೆ ಮುಂಬಯಿ ಸೇರಿದಂತೆ ಯಾವ ನಗರಗಳೂ ಹೊರತಲ್ಲ. ಸಮುದಾಯಗಳ ಒಳಗೊಳ್ಳುವಿಕೆಯೇ ನಗರ ಆಂತರ್ಯದ ಸೌಂದರ್ಯವನ್ನು ಹೆಚ್ಚಿಸಬಹುದು. ವಾಸ್ತವವಾಗಿ ನಗರದ ಹೃದಯವೆಂದರೆ ಇದೇ. ಎಲ್ಲ ಸ್ತರಗಳ ಸಮುದಾಯಗಳು ಒಟ್ಟಿಗೆ ಬಾಳುವಂಥ ಅವಕಾಶ ಹಾಗೂ ವಾತಾವರಣವಿರಬೇಕು. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ (ಇನ್‌ಕ್ಲೂಸಿವ್‌ ಗ್ರೋಥ್‌) ಎಂದರೆ ಇದೇ.

ನಮ್ಮ ಮಾಸ್ಟರ್‌ ಪ್ಲಾನ್‌ಗಳು ಇಂಥ ಅಂಶಗಳನ್ನು ಗಮನಿಸುತ್ತಲೇ ರೂಪಿತವಾಗಬೇಕು. ಅದು ಸಾಧ್ಯವಾದರೆ ಮಾತ್ರ ಹತ್ತು ಹಲವು ನಗರಗಳನ್ನು ಸುಸ್ಥಿರ ಅಭಿವೃದ್ಧಿಯ ನೆಲೆಗೆ ಕೊಂಡೊಯ್ಯಬಹುದು. ಆಗ ಮಾತ್ರ ಕಿಗಾಲಿಯಂಥ ಒಂದು ಸ್ವತ್ಛತಾ-ಸುಂದರ ನಗರಗಳು ರೂಪುಗೊಳ್ಳುವಾಗ ಕೇಳಿಬಂದ ವಿರೋಧದ ದನಿಗಳನ್ನು ತಗ್ಗಿಸಬಹುದು. ನಗರವೆಂದರೆ ಕುರೂಪದಿಂದ ಸುರೂಪಕ್ಕೆ ಬದಲಾಗುವುದೆಂದಲ್ಲ; ಮೂಲತಃ ಸುರೂಪವನ್ನೇ ಹೊಂದಿರುವುದು. ನಮ್ಮ ನಗರಗಳು ಈ ದೃಷ್ಟಿಯಲ್ಲೇ ರೂಪುಗೊಳ್ಳಲಿ ಎಂಬುದು ಸದಾಶಯವಷ್ಟೇ ಅಲ್ಲ; ಜನಾಗ್ರಹವೂ ಸಹ.

ಟಾಪ್ ನ್ಯೂಸ್

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

6-fusion

UV Fusion: ಇಂಡಿ ಪಂಪ್‌ ಮಟ..

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.