ನಗರ ಅಭಿವೃದ್ಧಿಗೊಂದು ವಿಶ್ವವಿದ್ಯಾಲಯ ಆರಂಭಿಸಿದರೆ ಹೇಗೆ?


Team Udayavani, Oct 13, 2018, 6:00 AM IST

s-1.jpg

ನಮ್ಮ ನಗರಗಳು ಬೆಳೆಯುತ್ತಿರುವ ಕ್ರಮವನ್ನು ದಿಗ್ದರ್ಶಿಸುವವರು ಬೇಕು. ಇಲ್ಲವಾದರೆ ಎಲ್ಲವೂ ಅವ್ಯವಸ್ಥೆಯ ಕೊಂಪೆಯಾಗಿಬಿಡಬಲ್ಲವು. ಈ ದಿಸೆಯಲ್ಲೇ ನಗರ ಅಭಿವೃದ್ಧಿ ಮತ್ತು ಯೋಜನೆ ಕುರಿತ ವಿಶ್ವವಿದ್ಯಾಲಯಗಳು ಇಂದಿನ ತುರ್ತು. 

ನಗರ ಅಭಿವೃದ್ಧಿ ಮತ್ತು ಯೋಜನೆ ಕುರಿತೇ ಒಂದು ವಿಶ್ವವಿದ್ಯಾಲಯ ತೆರೆದರೆ ಏನಾಗಬಹುದು? ಇಂಥದೊಂದು ಪ್ರಶ್ನೆಗೆ ಹೊಸ ತಲೆಮಾರಿನ ಯುವಜನರಿಂದ ಬಹಳ ಒಳ್ಳೆಯದಾಗಬಹುದು ಎಂಬ ಉತ್ತರ ಸಿಗಬಹುದು. ಆದರೆ ಎರಡು ತಲೆಮಾರಿನ ಹಿಂದಿನವರಿಗೆ ಇದಕ್ಕೂ ಒಂದು ವಿಶ್ವವಿದ್ಯಾಲಯ ಬೇಕೇ ಎಂದೆನಿಸಬಹುದು. ಈ ಬೇಕು ಅಥವಾ ಬೇಡಗಳ ಮಧ್ಯೆ ಆವಶ್ಯಕತೆ ಎಂಬುದೇನೂ ಬದಲಾಗುವುದಿಲ್ಲ. ಇಂದಿನ ಪರಿಸ್ಥಿತಿಯನ್ನು ಉಲ್ಲೇಖೀಸಿ ಹೇಳುವುದಾದರೆ, ನಿಜಕ್ಕೂ ನಮಗೊಂದು ಅತ್ಯುತ್ತಮ ಜಾಗತಿಕ ಗುಣಮಟ್ಟದ ವಿಶ್ವವಿದ್ಯಾಲಯವೊಂದು ನಗರ ಅಭಿವೃದ್ಧಿ ಮತ್ತು ಯೋಜನೆಗಾಗಿಯೇ ಬೇಕು. 

ಇದು ದಿನೇ ದಿನೇ ಬೆಳೆಯುತ್ತಿರುವಂಥ ಬೇಡಿಕೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸುಮಾರು 71 ವರ್ಷಗಳಲ್ಲಿ ಹಲವು ಸಣ್ಣ ಹಳ್ಳಿಗಳು ಅರೆನಗರಗಳಾಗಿವೆ. ಅರೆನಗರಗಳು ದೊಡ್ಡ ನಗರಗಳಾಗಿವೆ. ಇನ್ನೂ ಎಷ್ಟೋ ನಗರಗಳು ಮಹಾನಗರಗಳಾಗುವ ಸಂಭ್ರಮದಲ್ಲಿ ತುಳುಕಾಡುತ್ತಿವೆ. 2011ರ ಜನಗಣತಿ ಪ್ರಕಾರ ಒಂದು ಲಕ್ಷ ಜನಸಂಖ್ಯೆಗಿಂತ ಹೆಚ್ಚು ಇರುವ ನಗರಗಳನ್ನು ಲೆಕ್ಕ ಹಾಕಲಾಗಿದೆ. ಅಲ್ಲಿ ಹತ್ತು ವರ್ಷಗಳ ಅವಧಿಯಲ್ಲಿ ಆಗಿರುವ ವಲಸೆ ಅತಿ ದೊಡ್ಡ ಪ್ರಮಾಣದ್ದು. 

ಈ ವಲಸೆಯ ಪ್ರಮಾಣ ಸಣ್ಣ ಹಳ್ಳಿಗಳಿಂದ ದೊಡ್ಡ ನಗರಗಳಿಗೆ ಹೆಚ್ಚು ಆಗಿದೆ. ಹಾಗೆಂದು ಮಹಾನಗರಗಳಿಗೆ ಆಗಿಲ್ಲವೆಂದಲ್ಲ. ಅಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಕಂಡು ಬಂದಿದೆ. ಆದರೆ, ಬೆಂಗಳೂರಿನಂಥ ನಗರಗಳಿಗೆ ಆಗಿರುವ ವಲಸೆ ಪ್ರಮಾಣವನ್ನು ಮುಂಬಯಿಯಂಥ ನಗರಗಳಿಗೆ ಹೋಲಿಸಿದರೆ ಹೆಚ್ಚು. ಉದಾಹರಣೆಗೆ 2001ರಲ್ಲಿ ಮುಂಬಯಿಯಲ್ಲಿ ಇದ್ದ ಜನಸಂಖ್ಯೆ ಸುಮಾರು 1. 19 ಕೋಟಿಯ ಆಸುಪಾಸು. ಅದೇ ಪ್ರಮಾಣ 2011 ರ ಸುಮಾರಿಗೆ 1. 24 ಕೋಟಿಯನ್ನು ಮೀರಿತು. ಅದನ್ನೇ ದಿಲ್ಲಿಗೆ ಹೋಲಿಸಿದಾಗಲೂ ಅಷ್ಟೇ. 98 ಲಕ್ಷದ ಬದಲು 1.1 ಕೋಟಿಗೆ ಏರಿತು. ಆದರೆ ಬೆಂಗಳೂರನ್ನು ಲೆಕ್ಕ ಹಾಕಿ. 2001 ರಲ್ಲಿ ಇದ್ದ ಜನಸಂಖ್ಯೆ ಪ್ರಮಾಣ ಸುಮಾರು 43 ಲಕ್ಷ. ಅದೇ 2011ರಲ್ಲಿ 84 ಲಕ್ಷಕ್ಕೆ ನೆಗೆಯಿತು. ಅಂದರೆ ಹತ್ತು ವರ್ಷಗಳಲ್ಲಿ ಆದ ವಲಸೆಯ ಪ್ರಮಾಣ ಬರೋಬ್ಬರಿ ಡಬಲ್‌. ಇದು ಒಂದು ಬೆಂಗಳೂರಿನ ಕಥೆಯಲ್ಲ; ಮಹಾನಗರಗಳ ಆಸುಪಾಸಿನ ನಗರಗಳಲ್ಲಿ ವಲಸೆ ಹೆಚ್ಚಿದ್ದು ಸತ್ಯ.

ಇಂಥ ಹೊತ್ತಿನಲ್ಲಿ ಏನನ್ನು ನೆನೆಯಬೇಕು?
ಈಗಿನ ಟ್ರೆಂಡ್‌ ಎಂದರೆ ನಗರಗಳತ್ತ ವಲಸೆ ಹೋಗುವುದು. ಈ ಮಧ್ಯೆಯೂ ಈ ಟ್ರೆಂಡ್‌ನ್ನು ಸಂಪೂರ್ಣವಾಗಿ ಒಪ್ಪುವವರೂ ಇಲ್ಲ. ಕೆಲವರು, “ಹಾಗೇನೂ ಇಲ್ಲ, ಈಗ ನಗರಗಳಿಂದ ಮತ್ತೆ ಹಳ್ಳಿಯತ್ತ ಮುಖ ಮಾಡುವವರು ಹೆಚ್ಚಾಗಿದ್ದಾರೆ’ ಎಂದು ಹೇಳುವವರಿದ್ದಾರೆ. ಅದು ಇದ್ದರೂ ಇರಬಹುದು. ಆದರೆ, ನಗರಗಳತ್ತ ಹೊರಟಿರುವ ವಲಸೆಯ ಪ್ರಮಾಣಕ್ಕೆ ಹೋಲಿಸಿದಾಗ ನಗರಗಳಿಂದ ಹಳ್ಳಿಗಳತ್ತ ಹೊರಟಿರುವವರ ಸಂಖ್ಯೆ ತೀರಾ ನಗಣ್ಯವಾದುದು ಎಂದರೆ ತಪ್ಪೇನೂ ಇಲ್ಲ. ಇಡೀ ಬೆಳವಣಿಗೆಯನ್ನು ಆಶಾವಾದದ ನೆಲೆಯಲ್ಲೇ ಪರಿಗಣಿಸಬಹುದೇ ಹೊರತು ಅದನ್ನೇ ದೊಡ್ಡ ಟ್ರೆಂಡ್‌ ಎಂದು ಗುರುತಿಸುವಷ್ಟರ ಮಟ್ಟಿಗೆ ಅದು ಬೆಳೆದಿಲ್ಲ. ಇದು ಕಣ್ಣಿಗೆ ಕಾಣುವಂಥ ಸತ್ಯ.

ಸುಮಾರು 25 ನಗರಗಳಲ್ಲಿ 15 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ, ಸುಮಾರು 25 ನಗರಗಳಲ್ಲಿ 9.5 ಲಕ್ಷದಿಂದ 15 ಲಕ್ಷದವರೆಗೆ ಜನಸಂಖ್ಯೆ ಇದೆ. ಆರರಿಂದ 9 ಲಕ್ಷದವರೆಗಿನ ಜನಸಂಖ್ಯೆಯ ನಗರಗಳೂ ಸುಮಾರು 25 ಇವೆ. ಉಳಿದ 225 ನಗರಗಳಲ್ಲಿ ಒಂದು ಲಕ್ಷದಿಂದ ಆರಂಭವಾಗಿ 9 ಲಕ್ಷದವರೆಗೂ ಜನಸಂಖ್ಯೆಯಿದೆ. ಸಿಕ್ಕಿಂನ ಗ್ಯಾಂಗ್‌ಟಕ್‌ ಎನ್ನುವಂಥ ಪುಟ್ಟ ಪಟ್ಟಣದಲ್ಲಿ ಹತ್ತು ವರ್ಷಗಳಲ್ಲಿ ಮೂರರಷ್ಟು ಜನಸಂಖ್ಯೆ ಹೆಚ್ಚಳವಾಗಿದೆ. 25 ಸಾವಿರವಿದ್ದ ಪಟ್ಟಣದಲ್ಲೀಗ ಕಡಿಮೆ ಎಂದರೂ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವಾಸಿಸತೊಡಗಿದ್ದಾರೆ. ಹೀಗೆ ವಲಸೆ ಪ್ರಮಾಣ ಒಮ್ಮಿಂದೊಮ್ಮೆಲೆ ಹೆಚ್ಚಾದಾಗ ಹೆಚ್ಚಾಗಿ ಕಂಡು ಬರುವ ಸಮಸ್ಯೆಯೆಂದರೆ ವಸತಿ ಹಾಗೂ ಮೂಲಸೌಕರ್ಯ.

ಒಳಚರಂಡಿ, ಬಸ್ಸು ಇತ್ಯಾದಿಗಳನ್ನು ಬದಿಗಿಟ್ಟು ನೋಡೋಣ. ಇವುಗಳಿಗಿಂತ ಮೊದಲು ವಸತಿ ತೀರಾ ಆವಶ್ಯವಾದುದು. ವಲಸಿಗರಿಗೆ ರಾತ್ರಿ ಕಳೆಯಲು ಒಂದಿಷ್ಟು ಜಾಗವೆಂಬುದು ಬೇಕೇಬೇಕು. ಅದು ಮೊದಲದಿನದಿಂದಲೇ ಹುಟ್ಟಿಕೊಳ್ಳುವ ಬೇಡಿಕೆ. ಅದಕ್ಕೆ ಸರಿಯಾಗಿ ವ್ಯವಸ್ಥೆ ಇರದಿದ್ದಾಗಲೇ ಕೊಳೆಗೇರಿಗಳು ಹುಟ್ಟಿಕೊಳ್ಳುವುದು. ಈಗ ಕೊಳೆಗೇರಿಗಳಿಲ್ಲದ ನಗರಗಳಿಲ್ಲ. ನಮ್ಮ ಎಲ್ಲ ನಗರಗಳಲ್ಲೂ ಕೊಳೆಗೇರಿಗಳಿವೆ. ಅದರಲ್ಲೂ ಅವುಗಳು ಯಾವಾಗ ಮತಬ್ಯಾಂಕ್‌ ಆಗಿ ಪರಿವರ್ತನೆಗೊಂಡಿತೋ ಅಂದಿನಿಂದ ನಮ್ಮ ಎಲ್ಲ ರಾಜಕೀಯ ಪಕ್ಷಗಳೂ ಅವುಗಳ ಅಭಿವೃದ್ಧಿಯತ್ತ ಗಮನಹರಿಸಿದ್ದು ಕಡಿಮೆ. ಆಗಾಗ್ಗೆ ಒಂದಿಷ್ಟು ಅಭಿವೃದ್ಧಿಯ ಲೆಕ್ಕಾಚಾರ ಮಾಡಿದ್ದೇವೆಯೇ ಹೊರತು ಮತ್ತೇನೂ ಅಲ್ಲ. ಆದರೆ ಪಕ್ಷಗಳು ರಾಜಕೀಯದ ನೆಲೆಗೆ, ಮತಗಳನ್ನಾಗಿ ಪರಿವರ್ತಿಸಿಕೊಳ್ಳಲಿಕ್ಕೆ ಏನು ಬೇಕೋ ಅವೆಲ್ಲವನ್ನೂ ಮಾಡಿದೆವು. ಕೊಳಗೇರಿ ಅಭಿವೃದ್ಧಿ ಮಂಡಳಿಗಳೂ ಅಸ್ತಿತ್ವಕ್ಕೆ ಬಂದವು. ಅವುಗಳಿಗೆ ರಾಜಕಾರಣಿಗಳ, ರಾಜಕೀಯ ಪಕ್ಷಗಳ ಬೆಂಬಲ ಇರುವವರೇ ಅಧ್ಯಕ್ಷರೂ ಆಗಿದ್ದಾಯಿತು. ಆದರೆ ಅಭಿವೃದ್ಧಿಯ ಲೆಕ್ಕಾಚಾರ ಬಹಳಷ್ಟೇನೂ ಬದಲಾಗಲಿಲ್ಲ. ಈ ವಸತಿ ವ್ಯವಸ್ಥೆಯನ್ನು ಪರಿಹರಿಸಿ, ಉದ್ಯೋಗವನ್ನು ಒದಗಿಸುವುದು ಅತ್ಯಂತ ದೊಡ್ಡ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಸರಕಾರಗಳು, ಆಡಳಿತ ವ್ಯವಸ್ಥೆ ತಲೆ ಕೆಡಿಸಿಕೊಳ್ಳುವುದು ಕಡಿಮೆ.  ಆಗಲೇ ಒಂದೆಡೆ ಜನಸಂಖ್ಯೆಯ ಒತ್ತಡ (ವಲಸಿಗರ), ಆರ್ಥಿಕ ಚಟುವಟಿಕೆಗಳ ಒತ್ತಡದಿಂದ ನಗರದ ಬೆಳವಣಿಗೆ ತನ್ನಷ್ಟಕ್ಕೇ ಆರಂಭವಾಗುತ್ತದೆ. ಅದರಷ್ಟಕ್ಕೇ ಬೆಳೆಯುವ ಮಾದರಿಯನ್ನು ಕಂಡು ನಮ್ಮ ಆಡಳಿತಗಾರರು, ಸ್ಥಳೀಯ ಆಡಳಿತ ಮಂಡಳಿ (ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಇತ್ಯಾದಿ)ಗಳು ನೋಡುತ್ತಾ ನಿಂತುಬಿಡುತ್ತವೆ. ಕೆಲವು ವರ್ಷಗಳಲ್ಲಿ ನಗರವೆಂಬುದು ಬೇಕಾಬಿಟ್ಟಿ ಬೆಳೆದು ಸಮಸ್ಯೆಗಳ ತೊಟ್ಟಿಲಾಗಿಬಿಡುತ್ತದೆ. ಒಂದೆಡೆ ವಸತಿ ಸಮಸ್ಯೆ, ಮತ್ತೂಂದೆಡೆ ಟ್ರಾಫಿಕ್‌ ಜಾಮ್‌. ಮಗದೊಂದೆಡೆ ವಾಹನ ನಿಲುಗಡೆಯ ಸಮಸ್ಯೆ-ಹೀಗೆ ಒಂದೇ, ಎರಡೇ. ಹತ್ತಾರು ಸಮಸ್ಯೆಗಳಿಂದ ಆವೃತವಾದ ನಗರ ಜೀವನ ನರಕ ಜೀವನವೆನಿಸತೊಡಗುತ್ತದೆ. ನಿಧಾನವಾಗಿ ಜನರು ನಗರದಿಂದ ವಿಮುಖರಾಗತೊಡಗುತ್ತಾರೆ. 

ನಗರವನ್ನು ಪ್ರವೇಶಿಸುವುದೆಂದರೆ ದೊಡ್ಡ ತಲೆನೋವೆನಿಸತೊಡಗುತ್ತದೆ. ದಿನದ ಅರ್ಧ ಭಾಗ ಟ್ರಾಫಿಕ್‌ನಲ್ಲೇ ಕಳೆಯುವುದು ಅನಿವಾರ್ಯ ಎನಿಸಿದಾಗ ಶಾಪ ಹಾಕಿಕೊಂಡು ಬದುಕಬೇಕಾಗುತ್ತದೆ. ಒಂದೂವರೆ ಕಿ.ಮೀ ಕ್ರಮಿಸಲು ಕನಿಷ್ಠ 30 ನಿಮಿಷ ಬೇಕೆನಿಸಿದರೆ ಅಂಥ ನಗರಗಳ ಆರೋಗ್ಯ ಕುಸಿಯತೊಡಗಿದೆ ಎಂದರ್ಥ. ಇಂಥದೊಂದು ಸನ್ನಿವೇಶವನ್ನು ಇಂದು ನಮ್ಮ ಎಲ್ಲ ಮಹಾನಗರಗಳಲ್ಲೂ ಕಾಣುತ್ತೀರಿ. 

ಹೈದರಾಬಾದ್‌ನದ್ದು ಇತ್ತೀಚಿನ ಅನುಭವ. ಸುಮಾರು 20 ಕಿಮಿ ಹೊರಗಿನ ಪ್ರದೇಶದಲ್ಲಿ ಉಳಿದುಕೊಂಡಿದ್ದೆ. ಅಲ್ಲಿಂದ ಸುಮಾರು 6 ಕಿಮೀ ದೂರದ ಮತ್ತೂಂದು ಪ್ರದೇಶಕ್ಕೆ ಹೋಗಿದ್ದೆ. ಬರುವಾಗ ಬೆಳಗ್ಗೆ 8 ಗಂಟೆ ಸುಮಾರಿಗೆ ಅಲ್ಲಿಂದ ವಾಪಸು ಹೊರಟೆವು. ಬರೀ 6 ಕಿ.ಮೀ ಕ್ರಮಿಸಲು ಕಡಿಮೆ ಎಂದರೂ 50 ನಿಮಿಷ ತೆಗೆದುಕೊಂಡೆವು. ಅದೂ ಶನಿವಾರದಂದು. ಗಾಡಿಗಳು ಮುಂದಕ್ಕೆ ಚಲಿಸುವುದೇ ಇಲ್ಲ ಎಂಬುದು ಮೊದಲ ಸಮಸ್ಯೆಯಾದರೆ, ಎಲ್ಲೆಂದರಲ್ಲಿ ಪಥದ ಶಿಸ್ತಿಲ್ಲದೇ ನುಗ್ಗುವವರದ್ದು ಎರಡನೇ ಸಮಸ್ಯೆ. ಎಲ್ಲಿಂದಲಾದರೂ ವಾಹನ ದಿಢೀರನೆ ನಿಮ್ಮತ್ತ ನುಗ್ಗಿ ಬಿಡಬಹುದು ಎಂದು ಅನಿಸುವುದು ಹೈದರಾಬಾದ್‌ನ ರಸ್ತೆಗಳ ಮೇಲೆಯೇ. ಟಿವಿಯಲ್ಲಿ ಬರುವ ಜಾಹೀರಾತಿನಲ್ಲಿ ಬರುವ ಮಿ. ಹಾಥ್‌ (ದಢೂತಿ ವ್ಯಕ್ತಿಯೊಬ್ಬ ರಸ್ತೆ ಮಧ್ಯೆಯೇ ನಡೆದು ಬರುತ್ತಾ ವಾಹನಗಳಿಗೆ ಸ್ವಲ್ಪ ತಡೀರಿ ಎನ್ನುವಂತೆ ತನ್ನ ಕೈಯನ್ನು ತೋರಿಸುತ್ತಾ ಸಾಗುವವ) ನಂತೆ ಎಲ್ಲರೂ ತೋರುತ್ತಾರೆ. 

ನಮಗೇಕೆ ವಿಶ್ವವಿದ್ಯಾಲಯ ಬೇಕು?
ಇಂಥ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಳ್ಳುವಾಗ ನಮಗೆ ಯೋಜಿತ ಅಭಿವೃದ್ಧಿ ಎಂಬುದು ಬೇಕೇ ಬೇಕು. ಅದಕ್ಕೆ ಬರೀ ಸ್ಥಳೀಯ ಆಡಳಿತದ ಒಂದಿಷ್ಟು ಅಧಿಕಾರಿಗಳು ಇರುವ ನಗರ ಅಭಿವೃದ್ಧಿ ಮತ್ತು ಯೋಜನೆ ಕೋಶವೊಂದಿದ್ದರೆ ಸಾಲದು. ಒಂದು ದೊಡ್ಡ ಇಲಾಖೆಯಿದ್ದರೂ ಸಾಲದು. ಈ ಇಲಾಖೆಗಳು, ಕೋಶಗಳು ಅಭಿವೃದ್ಧಿಯ ಕುರಿತು ಅಧ್ಯಯನ ಮಾಡುವುದು ಕಡಿಮೆ. ಭವಿಷ್ಯವನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ನಮ್ಮ ನಗರಗಳನ್ನು ಕಟ್ಟುವ ಸಾಮರ್ಥಯ ಇರುವುದು ಕಡಿಮೆ. ಯಾವುದೋ ನಗರದಲ್ಲಿನ ಅನುಕ್ರಮಗಳನ್ನು ಯಥಾವತ್ತಾಗಿ ನಕಲು ಮಾಡುವ ಸಂದರ್ಭಗಳೇ ಹೆಚ್ಚು,.ಇದೇ ಕಾರಣಕ್ಕಾಗಿಯೇ ನಮ್ಮ ನಗರಗಳ ಆರೋಗ್ಯವನ್ನು ಕಾಪಾಡಲು ನಮಗೆ ನಗರ ಅಭಿವೃದ್ಧಿ ಮತ್ತು ಯೋಜನೆ ಕುರಿತ ವಿಶ್ವವಿದ್ಯಾಲಯಗಳು ತೀರಾ ಅಗತ್ಯವಿವೆ. ಈ ವಿಶ್ವವಿದ್ಯಾಲಯಗಳು ಏನು ಮಾಡಬೇಕು ಎಂಬುದೂ ದೊಡ್ಡ ಕುತೂಹಲದ ಸಂಗತಿಯೇ. ದೇಶದಲ್ಲಿ ಸ್ಮಾರ್ಟ್‌ ಸಿಟಿಗಳು ಗರಿಗೆದರಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂಥ ವಿಶ್ವವಿದ್ಯಾಲಯಗಳ ಅಗತ್ಯವಿರುವುದು ಸ್ಪಷ್ಟ. 

 ಅರವಿಂದ ನಾವಡ

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.