ಪ್ರೇಮಿಗಳ ನಡುವೆ ವಿರಸ: ಕೊಲೆಯಲ್ಲಿ ಅಂತ್ಯ
Team Udayavani, Feb 10, 2019, 7:20 AM IST
ಕುಣಿಗಲ್: ಫೆ 2 ರಂದು ತಾಲೂಕಿನ ಸಂತೇ ಮಾವತ್ತೂರು ಪರಿಸರ ಕಟ್ಟೆ ಸಮೀಪ ನಡೆದ ಯುವತಿ ಕೊಲೆಗೆ ಸಂಬಂಧಿಸಿದಂತೆ ಪ್ರಿಯಕರನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಕಮಲ ನಗರದ ಅರ್ಪಿತಾ (19) ಕೊಲೆಯಾದ ಯುವತಿ. ತಲೆ ಮೇಲೆ ಕಲ್ಲು ಎತ್ತ್ತಿ ಹಾಕಿ ಅಮಾನುಷವಾಗಿ ಕೊಲೆ ಮಾಡಿ ಪರಾರಿ ಯಾಗಿದ್ದ ಆರೋಪಿ ಬೆಂಗಳೂರಿನ ಮಂಜುನಾಥ ನಗರದ ನಿವಾಸಿ ಲೋಹಿತ ಅಲಿಯಾಸ್ ಲೋಹಿ (21) ಬಂಧಿತ.
ಫೆ 2 ರಂದು ರಾತ್ರಿ 9 ಗಂಟೆ ಸಮಯದಲ್ಲಿ ಹುಲಿಯೂರುದುರ್ಗ ಠಾಣಾ ಸರಹದ್ದು ಸಂತೇಮಾವತ್ತೂರು ಅಮೃತೂರಿಗೆ ತೆರಳುವ ಸಾರ್ವಜನಿಕ ರಸ್ತೆಯಿಂದ ಪರಿಸರ ಕಟ್ಟೆಗೆ ಹೋಗುವ ಬಂಡಿಜಾಡು ರಸ್ತೆಗೆ ಆರೋಪಿ ಲೋಹಿತ್ ಅರ್ಪಿತಾಳನ್ನು ಬೈಕ್ನಿಂದ ಬೆಂಗಳೂರಿ ನಿಂದ ಕರೆ ತಂದು ಕೊಲೆ ಮಾಡಿ ಪರಾರಿಯಾಗಿದ್ದನು.
ಈ ಸಂಬಂಧ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿ, ಎಸ್ಪಿ ಡಾ.ಕೋನವಂಶಿಕೃಷ್ಣ, ಎಎಸ್ಪಿ ಡಾ.ಶೋಭರಾಣಿ ಮಾರ್ಗದರ್ಶನದಲ್ಲಿ ಕುಣಿಗಲ್ ಡಿವೈಎಸ್ಪಿ ರಾಮಲಿಂಗೇಗೌಡ ಸಿಪಿಐ ಅಶೋಕ್ಕುಮಾರ್, ಪಿಎಸ್ಐ ಮಂಜು, ಅನಿಲ್ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡ ಬೆಂಗಳೂರು ಮಂಜುನಾಥನಗರ ಬಡಾ ವಣೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ: ಅರ್ಪಿತಾ ಬೆಂಗಳೂರಿನ ಬಟ್ಟೆ ಅಂಗಡಿ ಯಲ್ಲಿ ಕೆಲಸ ಮಾಡುತ್ತಿ ದ್ದಳು. ಈ ನಡುವೆ ಬಟ್ಟೆ ವ್ಯಾಪಾರಕ್ಕೆ ಅಂಗಡಿಗೆ ಬಂದ ಆರೋಪಿ ಲೋಹಿತನಿಗೆ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಈ ವಿಷಯ ತಿಳಿದ ಅರ್ಪಿತಾಳ ಅಕ್ಕನ ಗಂಡ ರಮೇಶ್ ಲೋಹಿತನ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಈ ಸಂಬಂಧ ಪೊಲೀಸರು ಲೋಹಿತನಿಗೆ ಬುದ್ಧಿವಾದ ಹೇಳಿ ಕಳಿಸಿದ್ದರು ಎನ್ನಲಾಗಿದೆ.
ಸ್ವಲ್ಪ ದಿನ ದೂರವಿದ್ದ ಅರ್ಪಿತಾ ಹಾಗೂ ಲೋಹಿತನು ಮತ್ತೆ ಒಂದಾಗಿ ಲೋಹಿತನು ಅರ್ಪಿತಾಳಿಗೆ ಮೊಬೈಲ್ ಕೊಡಿಸಿದ್ದ. ಲೋಹಿತ್ ಈ ಹಿಂದೆ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಈಗ ಕೆಲಸವಿಲ್ಲದೆ ಲೋಹಿತನು ಸುಮ್ಮನೆ ತಿರುಗಾಡುತ್ತಿದ್ದ. ಇದನ್ನು ಗಮನಿಸಿದ ಅರ್ಪಿತಾ ಪ್ರಿಯತಮನಿಂದ ದೂರವಾಗಿದ್ದಳು. ಆದರೆ, ಅರ್ಪಿತಾ ಬಟ್ಟೆ ಅಂಗಡಿ ಕೆಲಸ ಬಿಟ್ಟು ಎರಡು ತಿಂಗಳ ಹಿಂದಷ್ಟೇ ಗೊರ ಗುಂಟೆಪಾಳ್ಯದ ಎಚ್ಪಿ ಪೆಟ್ರೋಲ್ ಬಂಕ್ಗೆ ಕೆಲಸಕ್ಕೆ ಸೇರಿ ಕೊಂಡು, ಪಿಜಿಯಲ್ಲಿ ವಾಸವಾಗಿದ್ದಳು.
ರೌಡಿಶೀಟರ್ನಿಂದ ಹಲ್ಲೆ: ಅರ್ಪಿತಾ ತನ್ನಿಂದ ದೂರವಾಗುವಾಗುತ್ತಿರುವ ಬಗ್ಗೆ ಅನುಮಾನಗೊಂಡ ಲೋಹಿತ್ ಒಂದು ದಿನ ಬಂಕ್ ಬಳಿ ಹೋಗಿ ಆಕೆಯ ಬಳಿ ಇದ್ದ ಮೊಬೈಲ್ ಕಸಿದುಕೊಂಡು, ಪರಿಶೀಲಿಸಿದ ವೇಳೆ ಬೇರೆ ಪ್ರಿಯಕರನೊಂದಿಗೆ ಮೊಬೈಲ್ನಲ್ಲಿ ಸಂಭಾಷಣೆ, ವಾಟ್ಸ್ ಆ್ಯಪ್ ಚಾಟಿಂಗ್ ಮಾಡಿರುವುದು ಪತ್ತೆಯಾಯಿತು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಲೋಹಿತ್ ಈ ವಿಷಯವನ್ನು ಅರ್ಪಿತಾಳ ಮನೆಯವರಿಗೆ ತಿಳಿಸಿದ್ದನು ಎನ್ನಲಾಗಿದೆ. ಆದರೆ, ಈ ವಿಷಯ ತಿಳಿದ ಯುವತಿ ಅಣ್ಣ ರೌಡಿಶೀಟರ್ ಸಾಗರ್ ತನ್ನ ತಂಗಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತೀಯಾ ಎಂದು ಲೋಹಿತನ ಮೇಲೆ ಹಲ್ಲೆ ನಡೆಸಿದ್ದನು ಎನ್ನಲಾಗಿದೆ.
ತಾನೇ ಕೊಲೆ ತಂದುಕೊಂಡ ಅರ್ಪಿತಾ: ಅರ್ಪಿತಾ ಹಾಗೂ ಲೋಹಿತನ ನಡುವೆ ಮನಸ್ತಾಪದ ನಡುವೆಯೂ ಅರ್ಪಿತಾ ಫೆ.2 ರಂದು ಸಂಜೆ ಲೋಹಿತ್ಗೆ ಫೋನ್ ಮಾಡಿ ನಿನ್ನೊಂದಿಗೆ ಮುಖ್ಯ ವಾದ ವಿಷಯ ಮಾತನಾಡಬೇಕೆಂದು ಪೆಟ್ರೋಲ್ ಬಂಕ್ ಸಮೀಪದ ಪಾರ್ಕ್ಗೆ ಬರ ಮಾಡಿಕೊಂಡಿ ದ್ದಳು. ಅಲ್ಲದೇ ಲೋಹಿತ್ನಿಂದ ಮೊಬೈಲ್ ಪಡೆದುಕೊಂಡು ಬೇರೆ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಳು ಎನ್ನಲಾಗಿದ್ದು, ಇದರಿಂದ ಗಾಬರಿಯಾದ ಲೋಹಿತ್ ಅಂದು ಆಕೆಯ ಅಣ್ಣನಿಂದ ಹಲ್ಲೆ ಮಾಡಿಸಿದ್ದಾಳೆ.
ಈಗ ಬೇರೆಯವರನ್ನು ಕಳುಹಿಸಿ ನನ್ನನ್ನು ಕೊಲೆ ಮಾಡಿ ಸುತ್ತಾಳೆ ಎಂದು ಅನುಮಾನಗೊಂಡು ನನ್ನನ್ನು ಕೊಲೆ ಮಾಡಿಸುವ ಮುನ್ನ ಆಕೆಯನ್ನೇ ಕೊಲೆ ಮಾಡಬೇಕೆಂದು ನಿಶ್ಚಿಯಿಸಿಕೊಂಡು ಪುಸಲಾಯಿಸಿ ತನ್ನ ಸ್ನೇಹಿತನ ಮನೆಗೆ ಹೋಗಿ ಬರೋಣ ಎಂದು ಆಕೆಯನ್ನು ನಂಬಿಸಿ ಬೈಕ್ನಲ್ಲಿ ಕರೆ ತಂದು ಸಂತೇಮಾವತ್ತೂರು ಬಳಿ ಕೊಲೆ ಮಾಡಿದ್ದಾನೆ.