ಸರಕಾರ ಆಡಳಿತ ಮುಕ್ತ ದೇವಸ್ಥಾನಗಳು: ತೊಗಾಡಿಯಾ ಆಗ್ರಹ
Team Udayavani, Nov 25, 2017, 8:06 AM IST
ಉಡುಪಿ: ಭಾರತದಲ್ಲಿ ಮಠ, ಮಂದಿರಗಳನ್ನು ಸರಕಾರದ ಹಿಡಿತದಿಂದ ತಪ್ಪಿಸಬೇಕಾಗಿದೆ. ಇತರ ಧರ್ಮಗಳಲ್ಲಿ ಸರ ಕಾರದ ಹಿಡಿತವನ್ನು ನಿರೀಕ್ಷಿಸುವುದು ಸಾಧ್ಯವೆ? ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸುವ ಉದ್ದೇಶಕ್ಕಾಗಿ ಧರ್ಮ ಸಂಸದ್ ಕ್ರಿಯಾ ಯೋಜನೆಯನ್ನು ರೂಪಿಸ ಬೇಕಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ಅಂತಾರಾಷ್ಟ್ರೀಯ ಅಧ್ಯಕ್ಷ ಡಾ|ಪ್ರವೀಣ್ ತೊಗಾಡಿಯಾ ಹೇಳಿದರು.
ಧರ್ಮಸಂಸದ್ ಅಧಿವೇಶನದ ಆರಂಭ ದಲ್ಲಿ ಪ್ರಸ್ತಾವನೆಗೈದ ಅವರು, ಸಮಾಜದ ಎಲ್ಲ ವ್ಯಕ್ತಿಗಳೂ ದಿವ್ಯ ಶಕ್ತಿಯನ್ನು ಹೊಂದಿದ್ದಾರೆ. ಆದ್ದರಿಂದ ಇಲ್ಲಿ ಯಾವುದೇ ರೀತಿಯ ಅಸ್ಪೃಶ್ಯತೆಗೆ ಸ್ಥಾನವಿಲ್ಲ ಎಂದರು. ವಿಹಿಂಪ ಅ.ರಾ. ಪ್ರಧಾನ ಕಾರ್ಯದರ್ಶಿ ಚಂಪತ್ರಾಯ್ ಪೇಜಾವರ ಶ್ರೀಗಳಿಗೂ, ವಿಹಿಂಪಕ್ಕೂ ಹಿಂದಿನಿಂದಲೂ ಇದ್ದ ಸಂಬಂಧ, ಸಾಮಾಜಿಕ ಹೋರಾಟದ ಗತಿಗಳನ್ನು ವಿಶ್ಲೇಷಿಸಿದರು. ಉಪಾಧ್ಯಕ್ಷ ಜೀವೇಶ್ವರ ಮಿಶ್ರಾ ಕಾರ್ಯಕ್ರಮ ನಿರ್ವಹಿಸಿದರು. ಶ್ರೀರಾಮಚಂದ್ರಾಪುರ, ಶ್ರೀಸ್ವರ್ಣವಲ್ಲೀ, ಕಟಪಾಡಿ ಶ್ರೀಆನೆಗೊಂದಿ, ಶ್ರೀವಜ್ರದೇಹಿ, ಶ್ರೀ ವಿಶ್ವಸಂತೋಷಭಾರತಿ, ಉಡುಪಿಯ ವಿವಿಧ ಮಠಾಧೀಶರು ಸಹಿತ ನಾಡಿನಾದ್ಯಂತದಿಂದ ಬಂದ ಸ್ವಾಮೀಜಿಯವರು ಪಾಲ್ಗೊಂಡಿದ್ದರು.
ಭಾಹಿಂಪ ಅಲ್ಲ, ವಿಹಿಂಪ
ಸಂಘಟನೆ ವಿಶ್ವ ಹಿಂದೂ ಪರಿಷದ್ ವಿನಾ ಭಾರತ್ ಹಿಂದೂ ಪರಿಷದ್ ಅಲ್ಲ. ನಾವು ಇಡೀ ಜಗತ್ತಿನ ಹಿಂದೂಗಳ ಸಮಸ್ಯೆಗಳ ಬಗೆಗೆ ಚಿಂತನೆ ನಡೆಸಿ ಬಗೆ ಹರಿಸಬೇಕಾಗಿದೆ. ನಮ್ಮ ಪ್ರಧಾನಿ ಅತಿಥಿಗಳಿಗೆ ಭಗವದ್ಗೀತೆಯ ಪುಸ್ತಕಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು. ಮಾಧ್ಯಮಗಳಲ್ಲಿ ಇದು ಆವೇಶದಿಂದ ಸುದ್ದಿ ಬರತೊಡಗಿತು. ವಿಶ್ವ ಗ್ರಂಥವಾಗಬೇಕಾಗಿದ್ದ ಈ ವಿಚಾರ ಕೊನೆಗೆ ಬಿದ್ದು ಹೋಯಿತು. ಆದ್ದರಿಂದ ಯಾವುದನ್ನೂ ಆವೇಶದಿಂದ ಹೇಳಬಾರದು. ರಾಮಜನ್ಮಭೂಮಿ ವಿಷಯದಲ್ಲಿಯೂ ಹಾಗೆಯೇ.
ಶ್ರೀಗೋವಿಂದದೇವ್ ಮಹಾರಾಜ್, ಪುಣೆ.
ಕುದುರೆ, ಹಂದಿ, ಗೋ ಹತ್ಯೆ
ಅಮೆರಿಕದಲ್ಲಿ ಕುದುರೆಯನ್ನು ಯಾರೂ ಪೂಜಿಸುವುದಿಲ್ಲ, ಆದರೆ ಅಲ್ಲಿ ಕುದುರೆಗಳನ್ನು ಕೊಲ್ಲುವುದು ನಿಷೇಧ. ಮುಸ್ಲಿಮರು ಹಂದಿಯನ್ನು ಪೂಜಿಸುವುದಿಲ್ಲ, ಆದರೆ ಹಂದಿ ಕೊಲ್ಲುವುದು ಅವರಿಗೆ ನಿಷೇಧ. ಭಾರತದಲ್ಲಿ ಮಾತ್ರ ಹಿಂದೂಗಳು ಗೋವುಗಳನ್ನು ಪೂಜಿಸುತ್ತಾರೆ. ಆದರೂ ಗೋಹತ್ಯೆಯನ್ನು ನಿಷೇಧಿಸುವ ಕೆಲಸ ಆಗುತ್ತಿಲ್ಲ.
ಡಾ| ತೊಗಾಡಿಯಾ