ಕೆಳಮನೆಗೆ ಚುನಾವಣೆಯಾದರೆ ಮೇಲ್ಮನೆಗೇನು ಸಂಬಂಧ?
Team Udayavani, Apr 5, 2018, 6:00 AM IST
ಉಡುಪಿ: ಈಗ ನಡೆಯುತ್ತಿರುವುದು ವಿಧಾನಸಭಾ ಚುನಾವಣೆ. ಅದು ವಿಧಾನ ಮಂಡಲದ ಕೆಳಮನೆ. ಚುನಾವಣಾ ನೀತಿ ಸಂಹಿತೆ ಅನ್ವಯವಾಗುವುದು ವಿಧಾನಸಭಾ ಸದಸ್ಯರಿಗೆ. ಮೇಲ್ಮನೆಯಾಗಿರುವ ವಿಧಾನ ಪರಿಷತ್ ಸದಸ್ಯರಿಗೂ ಇದು ಹೇಗೆ ಅನ್ವಯವಾಗುತ್ತದೆ? ಹೀಗೊಂದು ಪ್ರಶ್ನೆ ಈಗ ಉದ್ಭವಿಸಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ವಿಧಾನ ಪರಿಷತ್ ಸದಸ್ಯರ ಕಚೇರಿಯನ್ನು ವಶಕ್ಕೆ ತೆಗೆದುಕೊಳ್ಳುವ ಕುರಿತು ಮತ್ತು ಅವರ ಸರಕಾರಿ ಸಿಬಂದಿಯನ್ನು ವಾಪಸು ಪಡೆದುಕೊಳ್ಳಲು ಸೂಚನೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿರುವ ಕ್ಯಾ| ಗಣೇಶ ಕಾರ್ಣಿಕ್ ಅವರಿಗೆ ಸುತ್ತೋಲೆ ನೀಡಲಾಗಿದ್ದರೆ, ಪ್ರತಾಪಚಂದ್ರ ಶೆಟ್ಟರ ಕಚೇರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಕೋಟ ಶ್ರೀನಿವಾಸ ಪೂಜಾರಿಯವರ ಸಿಬಂದಿಯನ್ನು ವಾಪಸು ಕರೆಸಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿಯವರು ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಈ ಬಗೆಗೆ ಸ್ಪಷ್ಟನೆ ಕೋರಿದ್ದಾರೆ. ವಿಧಾನ ಪರಿಷತ್ ಸದಸ್ಯರ ಸಿಬಂದಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ ವಿಧಾನ ಪರಿಷತ್ ಮುಖ್ಯ ಕಾರ್ಯದರ್ಶಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು “ವಿಧಾನ ಪರಿಷತ್ ಅವಧಿಯುದ್ದಕ್ಕೂ ಸದಸ್ಯರಾಗಿರುತ್ತಾರೆ. ಅವರಿಗೆ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ’ ಎಂದು ತಿಳಿಸಿದ್ದಾರೆ. ಇದಕ್ಕೂ ಚುನಾವಣಾ ಆಯೋಗ ಇನ್ನೊಂದೆರಡು ದಿನಗಳಲ್ಲಿ ಉತ್ತರಿಸಲಿದೆ ಎಂದು ತಿಳಿದುಬಂದಿದೆ.