ಉಡುಪಿಯಲ್ಲಿ ಹಲಸು ಮೇಳದ ಘಮ ಘಮ
Team Udayavani, Jun 24, 2018, 6:00 AM IST
ಉಡುಪಿ: ಇಲ್ಲಿನ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣಕ್ಕೆ ಕಾಲಿಟ್ಟರೆ ಎಲ್ಲೆಡೆ ಹಲಸಿನ ಘಮ ಘಮ. ಬಿಡಿಸಿಟ್ಟ ಹಲಸಿನ ಸೊಳೆಗಳು, ವಿವಿಧ ಉತ್ಪನ್ನಗಳು, ಹಲವು ಜಾತಿಯ ಹಲಸಿನ ಸಸಿಗಳು ಆಕರ್ಷಿಸುತ್ತಿವೆ.
ಜಿಲ್ಲಾಡಳಿತ, ಜಿ.ಪಂ, ತೋಟಗಾರಿಕಾ ಇಲಾಖೆ ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಹಯೋಗದಲ್ಲಿ ಆಯೋಜಿಸಲಾದ 2 ದಿನಗಳ (ಜೂ.23 ಮತ್ತು 24) “ಜಿಲ್ಲಾಮಟ್ಟದ ಹಲಸು ಮೇಳ-2018′ ಹಲಸಿನ ವೈಶಿಷ್ಟéಗಳನ್ನು ಸಾದರಪಡಿಸಿವೆ.
ತುಳುನಾಡಿನ ಸಾಂಪ್ರದಾಯಿಕ ಹಲಸಿನ ಕಡುಬಿನಿಂದ ಹಿಡಿದು, ಐಸ್ಕ್ರೀಂ ವರೆಗೆ ವಿವಿಧ ರುಚಿಕರ ತಿನಿಸು, ಪೇಯಗಳು ಹಲಸಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು ಗಮನಸೆಳೆದವು.
ಹಲಸು-ಸೊಗಸು
ಹಲಸಿನ ಬೀಜದ ಚಟ್ಟಂಬಡೆ, ಹಲಸಿನ ಇಡ್ಲಿ, ಪೋಡಿ (ಸೊಳೆ ಪೋಡಿ, ರಚ್ಚೆ ಪೋಡಿ ಮತ್ತು ಗೂಂಜಿ ಪೋಡಿ), ಹಲಸಿನ ಜ್ಯೂಸ್, ಹಪ್ಪಳ, ವಿವಿಧ ರೀತಿಯ ಚಿಪ್ಸ್ಗಳು, ಹಲಸಿನ ಹೋಳಿಗೆ, ಪಾಯಸ, ಹಲಸಿನ ಕಬಾಬ್ ಮೇಳದಲ್ಲಿ ಹಲಸು ಪ್ರಿಯರ ಮನಗೆದ್ದವು. “ನಾನು ಕಳೆದ ವರ್ಷವಷ್ಟೇ ಕಂಡು ಹಿಡಿದ ಹಲಸಿನ ಹೊಸ ತಿನಿಸು ಉಂಡ್ಲಿಕಾಕ್ಕೆ ಉತ್ತಮ ಬೇಡಿಕೆ ಇದೆ’ ಎಂದರು ಮಂಗಳೂರಿನ ಸರಸ್ವತಿ ಭಟ್.
ದೇಶೀ, ವಿದೇಶಿ ತಳಿಗಳು
ರುದ್ರಾಕ್ಷಿ, ಚಂದ್ರಬಕ್ಕೆ, ಡಂಗ್ ಸೂರ್ಯ, ಜೇನು ಬಕ್ಕೆ, ಸಿಂಧೂರ, ಗಂಲೆಸ್(ಅಂಟು ರಹಿತ), ಸಮೃದ್ಧಿ, ಸಿಂಗಾಪುರ, ಸೂಪರ್ ಅರ್ಲಿ, ಎ ಟು ಝೆಡ್ ಮೊದಲಾದ ದೇಶಿ ತಳಿಗಳ ಜತೆಗೆ ಥೈಲ್ಯಾಂಡ್ ಪಿಂಕ್, ಸಿಂಗಾಪುರಿ ವಾಡಾ ಮೊದಲಾದ ವಿದೇಶಿ ತಳಿಗಳ ಸಸಿಗಳು ಕೂಡ ಲಭ್ಯವಿದ್ದವು.
ಸೀಡ್ಲೆಸ್ ಹಲಸು ಕೂಡ ಇದೆ!
ಸಾಣೂರು ಹಲಸು ಬೆಳೆಗಾರರ ಸಂಘದ ಶಂಕರ ಪ್ರಭು ಸಾಣೂರು ಅವರಿಗೆ ಹಲಸು ಬೆಳೆ, ಹಲಸಿನ ಹಣ್ಣಿನ ಉತ್ಪನ್ನ, ಹಲಸುಗಳ ವಿವಿಧ ಜಾತಿಗಳ ಬಗ್ಗೆ ಅಪಾರ ಅನುಭವ. ಹಲಸಿನೊಟ್ಟಿಗೆ 10 ವರ್ಷದಿಂದ ಅವರ ವಿಶೇಷ ಒಡನಾಟ ಹಲಸಿನ ಮೌಲ್ಯವರ್ಧನೆಗೆ ಕೊಡುಗೆ ನೀಡಿದವರಲ್ಲಿ ಅವರೂ ಕೂಡ ಓರ್ವರು. “ಬೇಕಲ ಸೀಡ್ಲೆಸ್’ ಎಂಬ ಬೀಜರಹಿತ ಹಲಸಿನ ಸಸಿ ನನ್ನ ಬಳಿ ಇದೆ ಎಂದರು ಶಂಕರ ಪ್ರಭು ಅವರು.
ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕ ಮಂದಿ ಹಲಸಿನ ಹಣ್ಣಿನ ರುಚಿ ಸವಿದು ಮನೆಗೂ ಕೊಂಡೊಯ್ದರು. ಹಲಸಿನ ಹಣ್ಣಿನ ಉತ್ಪನ್ನಗಳನ್ನು ಮಾಡುವ ವಿಧಾನವನ್ನು ಅರಿಯುವ ಪ್ರಯತ್ನವನ್ನೂ ಕೆಲವರು ನಡೆಸಿದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರೂ ಪುತ್ರಿಯೊಂದಿಗೆ ಆಗಮಿಸಿ ಹಲಸಿನ ಹಣ್ಣು ಸವಿದರು. ಗಿಡಗಳ ಖರೀದಿಗೂ ಜನತೆ ಉತ್ಸಾಹ ತೋರಿಸಿದರು.
ಹಲಸು ಐಸ್ಕ್ರೀಂಗೆ ಬೇಡಿಕೆ
ಹಲಸಿನ ಹಣ್ಣಿನ ಐಸ್ಕ್ರೀಂ ಪುತ್ತೂರಿನ ಸುಹಾನ್ ಮತ್ತು ಮಾನಸ ಅವರು ಮಳೆಯ ನಡುವೆಯೂ ಅನೇಕ ಮಂದಿಗೆ ಹಲಸಿನ ಐಸ್ಕ್ರೀಂನ ರುಚಿ ಹತ್ತಿಸುವಲ್ಲಿ ಯಶಸ್ವಿಯಾದರು. “ನಾವು ಸಣ್ಣ ಉದ್ಯಮವೊಂದನ್ನು ಮನೆಪಕ್ಕದಲ್ಲಿಯೇ ನಡೆಸುತ್ತಿದ್ದು ಮಾವು, ಪೇರಳೆ ಹಣ್ಣಿನ ಐಸ್ಕ್ರೀಂ ಕೂಡ ಮಾಡುತ್ತೇವೆ. ಉತ್ತಮ ಬೇಡಿಕೆ ಇದೆ’ ಎಂದರು ಸುಹಾನ್. ಬೆಳ್ತಂಗಡಿ ಕೈಳಾರಿನ ಗಣಪತಿ ಭಟ್ ಅವರು ಕೂಡ ಹಲಸಿನ ಐಸ್ಕ್ರೀಂನ್ನು ಮೇಳದಲ್ಲಿ ಪರಿಚಯಿಸಿದರು.
ದೊಡ್ಡ ಬಳ್ಳಾಪುರ ಹಲಸು ಕೃಷಿಕರ ಯಶೋಗಾಥೆ…
ದೊಡ್ಡಬಳ್ಳಾಪುರ ತೂಬೆಗೆರೆ ಹೋಬಳಿ ಹಲಸು ಬೆಳೆಗಾರರ ರೈತ ಸಂಘದ ಕಾರ್ಯದರ್ಶಿ ರವಿ ಕುಮಾರ್ ಅವರ ನೇತೃತ್ವದಲ್ಲಿ ಬಂದಿದ್ದ ಅಲ್ಲಿನ ರೈತರು ಚಂದ್ರಹಲಸು, ಕೆಂಪು ಮತ್ತು ಹಳದಿ ರುದ್ರಾಕ್ಷಿ ಸಹಿತ ಹಲವು ಬಗೆಯ ಹಲಸುಗಳನ್ನು ಜನರಿಗೆ ಪರಿಚಯಿಸಿದರು. “ನಮ್ಮ ಸಂಘ 2008ರಲ್ಲಿ ಕೇವಲ 4 ಲ.ರೂ. ವ್ಯವಹಾರ ಮಾಡುತ್ತಿತ್ತು. ಈಗ 28 ಲ.ರೂ. ವ್ಯವಹಾರ ನಡೆಸುತ್ತಿದೆ. ವರ್ಷಕ್ಕೆ 800 ಟನ್ನಷ್ಟು ವ್ಯವಹಾರವಾಗುತ್ತದೆ. ಆಂಧ್ರಪ್ರದೇಶಕ್ಕೆ ಹೆಚ್ಚು ರಫ್ತಾಗುತ್ತಿದೆ. ಬೆಂಗಳೂರು ನಗರದಲ್ಲೇ ಅಪಾರ ಹಲಸು ಖರ್ಚಾಗುತ್ತದೆ. ಒಂದು ಸಂಸ್ಥೆಯಂತೂ ವರ್ಷಕ್ಕೆ 13-18 ಲ.ರೂ. ಮೌಲ್ಯದ ಹಲಸನ್ನು ನಮ್ಮಿಂದ ಖರೀದಿಸಿ ಉಪಕಾರ ಮಾಡುತ್ತಿದೆ. ಹಲಸು ಬೆಳೆಗಾರರು ಲಾಭ ಪಡೆಯುತ್ತಿದ್ದಾರೆ’ ಎಂದರು ರವಿಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ